ನಮ್ಮ ಮನೆ ಎದುರು ಒಳಚರಂಡಿ ಅಗೆದು ಪೈಪುಗಳನ್ನು ಹೊರತೆಗೆದು ಚೊಕ್ಕಗೊಳಿಸಿ ಪುನಃ ಅದೇ ಪೈಪುಗಳನ್ನು ಮರು ಜೋಡಿಸುವ ಕಾರ್ಯ ನಡೆದಾಗ ನೋಡಿದ ಘಟನೆಯನ್ನು ಇಲ್ಲಿ ವಿವರಿಸುವೆ.
ಒಂದು ಶುಕ್ರವಾರ ಬೆಳಗ್ಗೆ (ಹತ್ತು ಗಂಟೆ ಮೇಲೆಯೇ ಕೆಲಸಕ್ಕೆ ಬರುವುದು) ನಮ್ಮ ಮನೆ ಗೇಟು ಎದುರು ಅಗೆಯುವ ಕೆಲಸ. ಅದಕ್ಕೂ ಮೊದಲು ನಮ್ಮ ವಾಹನಗಳನ್ನು ರಸ್ತೆ ಬದಿ ಹೊರಗೆ ಇಟ್ಟಿದ್ದೆವು. ಸಂಜೆ ಒಳಗೆ ಮುಚ್ಚಿ ದಾರಿ ಬಿಟ್ಟು ಕೊಡುತ್ತೇವೆ ಎಂಬ ಆಶ್ವಾಸನೆ ಕೊಟ್ಟಿದ್ದರು. ಅಗೆಯುತ್ತ ಮರದ ಬೇರು ಪೈಪ್ ಮೇಲೆಯೇ ಕೂತಿತ್ತು. ಅದನ್ನು ಕಡಿದು ತೆಗೆಯಲು ಸಾಕಷ್ಟು ಬೆವರು ಹರಿಸಬೇಕಾಯಿತು. ಹಾಗಾಗಿ ಸಂಜೆಗೆ ಚರಂಡಿ ಮುಚ್ಚಲು ಅವರಿಂದ ಸಾಧ್ಯವಾಗಲಿಲ್ಲ. ನಾಳೆ ಬೆಳಗ್ಗೆ ಬಂದು ಮೊದಲು ಮಾಡಿ ಕೊಡುತ್ತೇವೆ. ಇವತ್ತೊಂದು ದಿನ ಹೇಗೋ ಸುಧಾರಿಸಿ ಎಂದು ತೆರಳಿದರು. ನಮ್ಮ ಮನೆಗೆ ಬರಲು ತೋಡಿದ ಗುಂಡಿ ಹಾರಿಯೇ ಬರುವ ಹಾಗಾಯಿತು. ವಯಸ್ಸಾದವರು ನಮ್ಮ ಮನೆ ಕಡೆ ಸುಳಿಯಲಿಲ್ಲ ೩ ದಿನ! ನಮ್ಮ ವಾಹನಗಳನ್ನು ಬೇರೆಯವರ ಮನೆ ಅಂಗಳದಲ್ಲಿ ನಿಲ್ಲಿಸಿದೆವು.
ಶನಿವಾರ ಕೆಲಸಕ್ಕೇ ಬರಲಿಲ್ಲ! ಆದಿತ್ಯವಾರ ಹೇಗೂ ರಜಾದಿನ. ಅಂತೂ ಸೋಮವಾರ ಕೆಲಸಕ್ಕೆ ಬಂದರು. ಶನಿವಾರ ಏಕೆ ಬರಲಿಲ್ಲ ಎಂದು ಕೇಳಿದ್ದಕ್ಕೆ `ನಮ್ಮ ಗುತ್ತಿಗೆದಾರರ ನೆಂಟರೊಬ್ಬರು ತೀರಿ ಹೋಗಿದ್ದರು. ಹಾಗೆ ಗುತ್ತಿಗೆದಾರರು ಬರಲಿಲ್ಲವಲ್ಲ. ಅವರು ಕೆಲಸ ನೋಡಬೇಕಲ್ಲ. ಹಾಗಾಗಿ ನಾವು ಕೆಲಸಕ್ಕೆ ಬಂದಿಲ್ಲ ಎಂಬ ಸಮಜಾಯಿಸಿ ಕೊಟ್ಟರು. ಸಂಜೆ ಪೈಪ್ ತೆಗೆದು ಅದರೊಳಗಿದ್ದ ಗಟ್ಟಿಯಾದ ಕೆಸರು ಹೆರೆದು ತೆಗೆದು ಪುನಃ ಪೈಪ್ ಜೋಡಿಸಿ ದಾರಿಗೆ ಮಣ್ಣು ತುಂಬಿದರು. ಅದೇ ರಾತ್ರಿ ಧಾರಾಕಾರವಾಗಿ ಮಳೆ ಸುರಿದು ಮಣ್ಣು ಒಂದಡಿ ಕುಸಿಯಿತು. ಮಾರನೇ ದಿನ ಅಲ್ಲಿಗೆ ಮಣ್ಣುತುಂಬಿ ಚಪ್ಪಡಿಕಲ್ಲು ಹಾಕಿ ದಾರಿಯನ್ನು ಕಾರು ಹೋಗುವಂತೆ ನೇರ್ಪುಗೊಳಿಸಿದರು. ಮತ್ತೊಂದು ದಿನವೂ ಮಳೆ ಸುರಿದು ಮಣ್ಣು ಕೊಚ್ಚಿಹೋಗಿದೆ. ಅದನ್ನು ಸರಿ ಮಾಡಿಕೊಡಿ ಅಂದರೆ ನೀವು ಕಾಫಿಗೂ ದುಡ್ಡು ಕೊಟ್ಟಿಲ ಎಂಬ ಉತ್ತರ. ಅವರೋ ಆರೇಳು ಮಂದಿ ಇದ್ದರು.
ಆ ಕೆಲಸಗಾರರು ಮಾಡುವ ಕೆಲಸ ನೋಡಿದರೆ ಬೇಸರವಾಗುತ್ತದೆ. ಅವರು ಮಾಡುವ ಕೆಲಸಕ್ಕೆ ಕೈಗೆ ಕವಚ ಇಲ್ಲದೆ ಬರೀಗೈಯಲ್ಲಿ ಹೊಲಸು ತುಂಬಿದ ಪೈಪನ್ನು ಎತ್ತಿ ಚೊಕ್ಕಗೊಳಿಸಿ ಪುನಃ ಜೋಡಿಸಬೇಕು. ಕಾಲಿಗೇನೋ ಗಮ್ ಬೂಟನ್ನು ಕೊಟ್ಟಿದ್ದಾರೆ. ಚರಂಡಿಯಲ್ಲಿ ನೀರು ಹರಿಯುತ್ತಲೇ ಇರುವಾಗ ಈ ಕೆಲಸ ಮಾಡಬೇಕು ಅವರು. ಒಳಚರಂಡಿ ಕೆಲಸಕ್ಕೆ ಕಾರ್ಮಿಕರನ್ನು ಗುಂಡಿಗೆ ಇಳಿಸಬಾರದು ಇತ್ಯಾದಿ ಸರ್ಕಾರ ಒಂದು ಕಡೆ ಬೊಬ್ಬೆ ಹೊಡೆಯುತ್ತಲೇ ಎಚ್ಚರ ಕೊಡುತ್ತದೆ. ಆದರೆ ಇಲ್ಲಿ ರಾಜಾರೋಷವಾಗಿ ಕೈಗೆ ಕೈಗವುಸು ಕೊಡದೆಯೇ ಅವರಿಂದ ಗುತ್ತಿಗೆಯಾಧಾರದಲ್ಲಿ ಕೆಲಸ ಮಾಡಿಸುವುದು ಕಾಣುತ್ತದೆ. ಕೈ ಗವುಸು ಕೊಟ್ಟಿಲ್ಲವಾ ಎಂದು ಕಾರ್ಮಿಕರನ್ನು ಕೇಳಿದರೆ ಅವರು ಮುಖ ಮುಖ ನೋಡುತ್ತಾರೆ ಹೊರತು ಉತ್ತರ ಕೊಡುವುದಿಲ್ಲ.
ಚರಂಡಿ ತೋಡುವ ಭರದಲ್ಲಿ ಬಿಎಸ್ಎನ್ಎಲ್ ನಿಗಮದ ಕೇಬಲ್ ವಯರು ಎರಡು ಸಲ ತುಂಡಾಗಿತ್ತು. ಎರಡು ಸಲವೂ ಅದೂ ಸರಿಯಾಗಿ ಶನಿವಾರವೇ ತುಂಡಾಗಿ ನಮಗೆ ದೂರವಾಣಿಯ ಸೌಲಭ್ಯ ಇರದಂತೆ ಮಾಡಿತು. ಬಿಎಸ್ಎನ್ಎಲ್ನ ಸಿಬ್ಬಂದಿ ನಾವು ಕೊಟ್ಟ ದೂರನ್ನು ಸ್ವೀಕರಿಸಿ ಕ್ಷಿಪ್ರವಾಗಿ ರಿಪೇರಿ ಮಾಡಿಕೊಟ್ಟರು. ಕೇಬಲ್ ವಯರುಗಳನ್ನು ನೆಲದಡಿ ಅಡ್ಡಾದಿಡ್ಡಿ ಹಾಕಿದ್ದಾರೆ. ದೊಡ್ಡ ಕೊಳವೆ ಹಾಕಿ ಅದರೊಳಗೆ ವಯರು ತೂರಿಸಿದ್ದರೆ ಇಂಥ ಪ್ರಸಂಗ ಎದುರಾಗುತ್ತಿರಲಿಲ್ಲ. ನಮ್ಮ ಮನೆ ಎದುರು ಕೆಲಸ ಮಾಡುವಾಗ ಕೇಬಲ್ ವಯರು ಜಾಗ್ರತೆ. ಅದನ್ನು ಮೊದಲೇ ಬದಿಗೆ ಸರಿಸಿ ಕೆಲಸ ಮಾಡಿ ಎಂದು ಅವರಿಗೆ ಆಗಾಗ ಹೇಳುತ್ತಲಿದ್ದೆ. ಹಾಗಾಗಿ ಮತ್ತೆ ತುಂಡಾಗಲಿಲ್ಲ ವಯರು.
ಹೀಗೆ ಚರಂಡಿಯ ಮಣ್ಣು ತೋಡುವಾಗ ನೀರಿನ ಪೈಪ್ ಒಂದು ಕಡೆ ಒಡೆದು ನೀರು ಸಣ್ಣಗೆ ಸೋರುತ್ತಿತ್ತು. ಮೂರು ದಿನವಾದರೂ ಅದನ್ನು ಸರಿ ಮಾಡದೆ ಇದ್ದದ್ದನ್ನು ಕಂಡು ಅದಕ್ಕೆ ಸಂಬಂಧಪಟ್ಟ ಒಂದು ಸಂಖ್ಯೆಗೆ ದೂರುವಾಣಿಸಿದೆ. `ನಿಮ್ಮ ಮನೆಗೆ ನೀರು ಸರಬರಾಜಾಗುವ ಪೈಪೇ ಅದು? ಯಾರು ಒಡೆದಿದ್ದಾರೋ ಅವರಿಗೇ ದೂರು ಕೊಡಿ’ ಎಂಬ ಉತ್ತರ ಬಂತು. ನಮ್ಮ ಮನೆಗೆ ಬರುವ ನೀರಿನ ಪೈಪ್ ಅಲ್ಲ, ಇನ್ನು ನಿಮ್ಮ ಇಷ್ಟ. ಈಗ ಮಣ್ಣು ಮುಚ್ಚುವ ಮೊದಲೇ ಆದರೆ ನಿಮ್ಮ ಕೆಲಸ ಕಡಿಮೆ. ಮಣ್ಣು ಮುಚ್ಚಿದಮೇಲೆ ಮತ್ತೆ ನೀವು ಬಂದು ಗುಂಡಿ ತೋಡಬೇಕಾದೀತು. ನಾನು ಹೇಳುವುದು ಹೇಳಿದ್ದೇನೆ ಇನ್ನು ನೀವು ಏನು ಬೇಕಾದರೂ ಮಾಡಿ ಎಂದು ಹೇಳಿ ಕೈದುಗೊಳಿಸಿದೆ. ಸ್ವಲ್ಪ ಹೊತ್ತು ಬಿಟ್ಟು ನಮ್ಮ ಮನೆ ದೂರವಾಣಿ ಕಿರುಗುಟ್ಟಿತು. ಪೈಪ್ ಒಡೆದಿದ್ದು ಎಲ್ಲಿ ಇತ್ಯಾದಿ ವಿವರ ಕೇಳಿದರು. ಅಂತೂ ಮಣ್ಣು ಮುಚ್ಚುವ ಮೊದಲೇ ಅವರು ಬಂದು ಒಡೆದ ಪೈಪ್ ಸರಿ ಮಾಡಿದರು.
ಮಾಡುವ ಕೆಲಸವನ್ನು ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡಿದರೆ ಇಂಥ ತೊಡರುಗಳು ಎದುರಾಗುವುದನ್ನು ತಪ್ಪಿಸಬಹುದು. ಬೇಕಾಬಿಟ್ಟಿ ಮಾಡಿದರೆ ಒಂದಕ್ಕೆರಡು ಖರ್ಚು ಆಗುತ್ತಲೇ ಇರುತ್ತದೆ. ಚರಂಡಿ ಮಣ್ಣು ತೋಡಿದ ಜಾಗದಲ್ಲಿ ಕಲ್ಲುಚಪ್ಪಡಿ ಹಾಕಬೇಕಷ್ಟೆ. ಅದನ್ನು ಇನ್ನು ಯಾವಾಗ ಹಾಕುತ್ತಾರೊ? ಚಪ್ಪಡಿಕಲ್ಲುಗಳು ದಾರಿಯಲ್ಲಿ ಅಲ್ಲಲ್ಲಿ ಬಿದ್ದಿವೆ. ಕೆಲವು ನೀರು ಹರಿಯುವ ಸಣ್ಣ ಚರಂಡಿಯೊಳಗೂ ಬಿದ್ದಿವೆ. ಯಾರಿಗೆ ಹೇಳೋಣ ಈ ಸಮಸ್ಯೆಗಳನ್ನು?
ನಿಮ್ಮ ಟಿಪ್ಪಣಿ ಬರೆಯಿರಿ