ಚಾರಣದ ಹುಚ್ಚು ನಮಗೆ ಒಮ್ಮೆ ಅಂಟಿಕೊಂಡಿತೆಂದರೆ ಅದು ನಮ್ಮನ್ನು ಎಷ್ಟು ಕೊಡವಿಕೊಂಡರೂ ಬಿಡಲೊಲ್ಲದು! ನಮಗೆ ದೊರೆತಿರುವ ೩ `ಆ’ (ಆಯುಷ್ಯ ಆರೋಗ್ಯ ಆಯ)ಗಳಲ್ಲಿ ಭಾರತದೇಶದಲ್ಲಿರುವ ಸ್ಥಳಗಳನ್ನೆಲ್ಲ ನೋಡಲು ಸಾಧ್ಯವಾಗದು. ಅಂಥದ್ದರಲ್ಲಿ ೩ ಆ ಗಳ ಬಲ ಇರುವಾಗಲೇ ಆದಷ್ಟು ಊರುಗಳನ್ನು ನೋಡಬೇಕೆಂಬ ತುಡಿತ ಮನದಲ್ಲಿ ಎದ್ದಾಗ ಸುಮ್ಮನೆ ಕುಳಿತಿರಲು ಸಾಧ್ಯವಾಗುವುದಿಲ್ಲ. ಇದುವರೆಗೆ ಇಂಥ ಕೆಲವಾರು ಸ್ಥಳಗಳನ್ನು ಯೂಥ್ ಹಾಸ್ಟೆಲ್ ಮೈಸೂರು ಗಂಗೋತ್ರಿ ಘಟಕದ ವತಿಯಿಂದ ನೋಡಲು ಸಾಧ್ಯವಾಗಿರುವುದು. ಈ ಸಂಸ್ಥೆಯ ವತಿಯಿಂದ ಪ್ರತೀ ತಿಂಗಳಿಗೆ ಕನಿಷ್ಟ ೩ ಸ್ಥಳಗಳಿಗೆ ಸೀಮಿತ ದರದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗಳೊಂದಿಗೆ ಚಾರಣ ಕಾರ್ಯ ಹಮ್ಮಿಕೊಳ್ಳುತ್ತಾರೆ. ಅಂತದ್ದರಲ್ಲಿ ತಿಂಗಳಿಗೆ ಒಂದು ಚಾರಣದಲ್ಲಾದರೂ ಭಾಗವಹಿಸಬೇಕೆಂಬುದು ನನ್ನ ಮನದಿಚ್ಛೆ.
೨೧.೯.೨೦೧೩ರಂದು ರಾತ್ರೆ ೧೦.೩೦ಗಂಟೆಗೆ ಮೈಸೂರಿನಿಂದ ನಾವು ೨೦ ಮಂದಿ( ೨೦ರಲ್ಲಿ ಹೆಂಗಸರ ಸಂಖ್ಯೆಯೇ ಮೇಲುಗೈ) ಮೆಟಡೋರಿನಲ್ಲಿ ಮೈಸೂರು, ನಂಜನಗೂಡು, ಚಾಮರಾಜನಗರ, ಸತ್ಯಮಂಗಲ ಘಾಟಿಯಲ್ಲಿ ಸಾಗಿದೆವು. ೨೨ನೇ ತಾರೀಕು ಬೆಳಗಿನ ಝಾವ ೫ ಗಂಟೆಗೆ ನಾವು ತಮಿಳುನಾಡು ರಾಜ್ಯದ ನಮಕ್ಕಲ್ ಜಿಲ್ಲೆಯ ತಿರುಚಂಗೋಡು ತಲಪಿದೆವು. ಅಲ್ಲಿ ಒಂದು ವಸತಿಗೃಹದಲ್ಲಿ ವಾಸ್ತವ್ಯವಿದ್ದು ನಿತ್ಯಕರ್ಮಾದಿ ಮುಗಿಸಿದೆವು. ಮೈಸೂರಿನಿಂದ ತಿರುಚಂಗೋಡಿಗೆ ೨೧೭ ಕಿಮೀ, ಸೇಲಂನಿಂದ ೪೬ಕಿಮೀ, ಈರೋಡಿನಿಂದ ೨೦ಕಿಮೀ, ನಮಕ್ಕಲ್ನಿಂದ ೩೬ಕಿಮೀ.
ಅಲ್ಲಿಂದ ಏಳು ಗಂಟೆಗೆ ಹೊರಟು ವಸತಿಗೃಹದೆದುರು ಇರುವ ದೇವಾಲಯ ನೋಡಿ ಸರವಣಭವನದಲ್ಲಿ ತಿಂಡಿ ತಿಂದು ನಾವು ಅರ್ಧನಾರೀಶ್ವರ ಬೆಟ್ಟ ಹತ್ತಲು ತಯಾರಾದೆವು. ಪ್ರಾರಂಭದಲ್ಲೇ ಗಣೇಶ ಎದುರಾಗುತ್ತಾನೆ. ಗಣೇಶನ ಉಸ್ತುವಾರಿಯನ್ನು ಒಬ್ಬ ಮಹಿಳೆ ನೋಡಿಕೊಳ್ಳುತ್ತಿರುವವಳು.
೭.೩೦ ಗಂಟೆಗೆ ಮೆಟ್ಟಲು ಹತ್ತಲು ಪ್ರಾರಂಭಿಸಿದೆವು. ಸುಮಾರು ೫೦ ಮೆಟ್ಟಲು ಹತ್ತಿದಾಗ ಬೃಹತ್ತಾದ ನಾಗನ ಮೂರ್ತಿ ಎದುರಾಗುತ್ತದೆ. ಸುಮಾರು ೬೦ ಅಡಿ ಉದ್ದವಿರುವ ೫ ಹೆಡೆಗಳಿರುವ ನಾಗನಿಗೆ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡುವ ಭಕ್ತಾದಿಗಳು ಕಂಡುಬಂದರು. ನಾವು ನಾಗನ ಚಿತ್ರ ಸೆರೆಹಿಡಿದು ಮೇಲೆ ಹತ್ತಿದೆವು.
ತಿರುಪತಿಯ ತಿರುಮಲಬೆಟ್ಟದ ಮೆಟ್ಟಲು ನೆನಪಿಗೆ ಬರುವಂತೆ ಈ ಮೆಟ್ಟಲುಗಳಿವೆ. ಸುಮಾರು ೧೨೦೦ ಮೆಟ್ಟಲು ಹತ್ತಿ ೮.೩೦ಗಂಟೆಗೆ ಬೆಟ್ಟದಮೇಲೆ ಬಂದಾಗ ಅರ್ಧನಾರೀಶ್ವರ ದೇವಾಲಯ ಕಾಣುತ್ತದೆ. ಇಲ್ಲಿಗೆ ಬರಲು ರಸ್ತೆಯ ಸೌಲಭ್ಯವೂ ಇದೆ. ಸಮುದ್ರಮಟ್ಟದಿಂದ ೧೯೦೦ ಅಡಿ ಮೇಲಿದೆ. ಮೆಟ್ಟಲಿನಲ್ಲಿ ಒಂದು ಕಡೆ ಎಣ್ಣೆ ಜಿಡ್ದಿನಿಂದ ಕಪ್ಪಾಗಿದೆ. ಬೆಂಕಿ ಹಾಕಿದರೆ ಮೆಟ್ತಲೇ ಉರಿದೀತು ಅಷ್ಟು ಎಣ್ಣೆ ಜಿಡ್ಡು.
ಮೆಟ್ಟಲಿನಲ್ಲಿ ದೊಡ್ಡ ಚೋರಟೆ ಹುಳ ಅಲ್ಲಲ್ಲಿ ಕಾಣುತ್ತಿತ್ತು.
ದೇವಾಲಯದ ಸ್ಥಳಪುರಾಣ: ಶಿವನ ೬೪ ಅವತಾರಗಳಲ್ಲಿ ಅರ್ಧನಾರೀಶ್ವರವೂ ಒಂದು. ಎಡಭಾಗ ಪಾರ್ವತಿ ಬಲಭಾಗ ಶಿವ ಸೇರಿ ಅರ್ಧನಾರೀಶ್ವರನಾದ. ಬೆಟ್ಟದ ಕಲ್ಲು ಕೆಂಪುಬಣ್ಣದಿಂದ ಕೂಡಿದ ಕಾರಣ ಅಲ್ಲಿಗೆ ಚಂಗೋಡು ಎಂಬ ಹೆಸರು ಬರಲು ಕಾರಣ. ಆದಿಶೇಷ ಮತ್ತು ವಾಯುವಿನ ಮಧ್ಯೆ ಒಮ್ಮೆ ಶಕ್ತಿ ಬಗ್ಗೆ ಜಗಳವಾಯಿತು. ಆದಿಶೇಷ ಮೇರುಪರ್ವತ ಹಿಡಿದ. ವಾಯು ಜೋರಾಗಿ ಗಾಳಿಯನ್ನು ಮೇರು ಕಡೆಗೆ ಬೀಸಿದ. ಆಗ ಆದಿಶೇಷ ಗಾಳಿಯನ್ನು ತಿರುಂಚಗೋಡು ಕಡೆಗೆ ತಳ್ಳಿದ. ಹಾಗೆ ತಳ್ಳಿದಾಗ ಆದಿಶೇಷನ ರಕ್ತ ಚೆಲ್ಲಿತು. ಹಾಗಾಗಿ ಬಂಡೆಗಲ್ಲು ಕೆಂಬಣ್ಣವಾಯಿತು ಎಂಬ ಕಥೆಯೂ ಇದೆ.
ದೇವಾಲಯದೊಳಗೆ ಭಕ್ತಾದಿಗಳ ಸಂಖ್ಯೆ ಸೀಮಿತ ಸಂಖ್ಯೆಯಲ್ಲಿತ್ತು. ದೇವಾಲಯ ನೋಡಿ ಹೊರ ಚಾವಡಿಯಲ್ಲಿ ಕುಳಿತೆವು. ವೈದ್ಯನಾಥನ್ ಸುಶ್ರಾವ್ಯವಾಗಿ ಭಕ್ತಿಗೀತೆ ಹಾಡಿದರು.
ಅಲ್ಲಿಂದ ಮುಂದೆ ಸುಮಾರು ಒಂದು ಕಿಮೀ ಬಂಡೆಮೂಲಕವೇ ಸಾಗಿದರೆ ಮೇಲೆ ಗಣಪತಿ ಗುಡಿ ಕಾಣುತ್ತದೆ. ಬಂಡೆ ಏರಲು ಉದ್ದಕ್ಕೂ ಕಬ್ಬಿಣದ ಕೈತಾಂಗು ಹಾಕಿರುವುದರಿಂದ ಲೀಲಾಜಾಲವಾಗಿ ಬಂಡೆ ಏರಬಹುದು. ಒಂದು ಬಂಡೆ ಏರಿದ ಬಳಿಕ ಇನ್ನೊಂದು ಬಂಡೆ ಇಳಿದು ಮತ್ತೆ ಮೇಲೆ ಹತ್ತಬೇಕೆ. ಎರಡು ಬಂಡೆ ನಡುವೆ ಒಂದು ಕೊಳ.
ಅಲ್ಲಿದ್ದ ಅರ್ಚಕರು ರೂ. ೫೦ ಇತ್ತರೆ ಕುಟುಂಬಕ್ಕೂ, ನಾವು ಕೆಲಸ ಮಾಡುವವರಾದರೆ ಆ ಸಂಸ್ಥೆ ಇತ್ಯಾದಿ ಸಕಲಕ್ಕೂ ಉತ್ತರೋತ್ತರ ಅಭಿವೃದ್ಧಿಗಾಗಿ ಹಾರೈಸಿ ಅರ್ಚನೆ ಕೈಗೊಳ್ಳುತ್ತಾರೆ.
ಬೆಟ್ಟದಮೇಲಿಂದ ತಿರುಚಂಗೋಡು ಪಟ್ಟಣ ಚೆನ್ನಾಗಿ ಕಾಣುತ್ತದೆ.
ಅಲ್ಲಿಂದ ಹತ್ತೂವರೆ ಗಂಟೆಗೆ ಇಳಿಯಲು ತೊಡಗಿ ೧೧.೩೦ಗೆ ವಸತಿಗೃಹಕ್ಕೆ ಹಿಂತಿರುಗಿದೆವು. ೧೨ ಗಂಟೆಗೆ ಹೊರಟು ಸರವಣಭವನಕ್ಕೆ ಬಂದು ಚಿಗುರು ಬಾಳೆ ಎಲೆಯಲ್ಲಿ ಭರ್ಜರಿ ಊಟ ಮಾಡಿದೆವು.
ಊಟವಾಗಿ ಹೊರಟು ೧೮ಕಿಮೀ ದೂರದಲ್ಲಿರುವ ಶಂಕರಗಿರಿಗೆ ಬಂದೆವು. ಶಂಕರಗಿರಿ ಒಂದು ಬೆಟ್ಟ. ಟಿಪ್ಪುಸುಲ್ತಾನನ ಕಾಲದಲ್ಲಿ ಅಲ್ಲಿ ಕೋಟೆ ಕಟ್ಟಲಾಗಿತ್ತು. ಅದನ್ನು ನೋಡುವಾಗ ಚಿತ್ರದುರ್ಗ ಕೋಟೆ ನೆನಪಿಗೆ ಬರುತ್ತದೆ. ಕೋಟೆಯ ೨ ಬಾಗಿಲು ದಾಟಿ ಮೇಲೆ ಹೋದರೆ ಒಂದು ದೇವಾಲಯ. ಬಾಗಿಲು ಹಾಕಿತ್ತು.
ಭಾನುವಾರ ದೇವಾಲಯಕ್ಕೆ ರಜ ಎಂಬ ಮಾಹಿತಿ ಅಲ್ಲಿದ್ದ ಸ್ಥಳೀಯ ಹುಡುಗರು ಕೊಟ್ಟರು. ದೇವಾಲಯದ ಎದುರು ಕೆಳಭಾಗದಲ್ಲಿ ನಂದಿವಿಗ್ರಹದ ತಲೆ ಹಾರಿ ವಿರೂಪಗೊಂಡದ್ದನ್ನು ಕಾಣುತ್ತೇವೆ. ಅದರ ಐತಿಹ್ಯ ತಿಳಿಯಲಾಗಲಿಲ್ಲ. ಬೆಟ್ಟ ಏರಿ ಇಳಿಯಲು ಕನಿಷ್ಟ ೨ ಗಂಟೆ ಬೇಕು. ಅಷ್ಟು ಸಮಯ ನಮಗಿರಲಿಲ್ಲ.
ಬಿಸಿಲ ಝಳ. ಗಿಡಮರಗಳ ನೆರಳೂ ಇಲ್ಲ, ಇತ್ಯಾದಿ ಮೂಲಭೂತ ಸಮಸ್ಯೆ ಕಾಡಿದ್ದರಿಂದ ಬೆಟ್ಟ ಏರುವ ಕಾರ್ಯವನ್ನು ಆಯೋಜಕರು ರದ್ದುಗೊಳಿಸಿದರು. ಈ ತೀರ್ಮಾನ ನಮ್ಮಂಥ ಕೆಲವರನ್ನು ಸ್ವಲ್ಪ ನಿರಾಸೆಗೊಳಿಸಿತು. ನಮ್ಮೊಡನಿದ್ದ ಅರ್ಧದಷ್ಟು ಮಂದಿಗೂ ಆ ಬೆಟ್ಟ ಏರುವ ಉತ್ಸಾಹ ಇರಲಿಲ್ಲ. ಈ ಸುದ್ದಿ ಕೇಳಿ ಅವರು ಉತ್ಸಾಹಭರಿತರಾದರು. ಕೆಲವರು ವ್ಯಾನಿನಿಂದ ಇಳಿಯಲೂ ಇಲ್ಲ! ಈ ಸ್ಥಳ ಈಗ ಬರೀ ಪ್ರೇಮಿಗಳ ಅಡ್ಡೆಯಾಗಿದೆ ಎಂಬುದಕ್ಕೆ ಸರಿಯಾಗಿ ಕೆಲವು ಜೋಡಿಗಳು ಜನರ ಅರಿವಿಲ್ಲದೆ ತಮ್ಮದೇ ಲೋಕದಲ್ಲಿ ಕುಳಿತಿದ್ದುದು ಕಂಡುಬಂತು.
ಅಲ್ಲಿ ನಾವು ನಮ್ಮತಂಡದ ಚಿತ್ರ ತೆಗೆಸಿಕೊಂಡು ಹೊರಟೆವು. ವಾಹನ ಹತ್ತಿದ್ದೊಂದೇ ಗೊತ್ತು. ನಿನ್ನೆ ರಾತ್ರಿ ನಿದ್ದೆ ಇಲ್ಲದ ಪರಿಣಾಮ ನಿದ್ದೆ, ಮಂಪರು, ಅರೆ ಎಚ್ಚರ ಎಂದು ದಾರಿ ಸವೆದದ್ದೇ ತಿಳಿಯಲಿಲ್ಲ.
ಬನ್ನಾರಿ ಮಾರಿಯಮ್ಮ
ಸಂಜೆ ೪.೩೦ ಗಂಟೆಗೆ `ಬನ್ನಾರಿ ಮಾರಿಯಮ್ಮ ದೇವಾಲಯದ ಬಳಿ ಬಂದೆವು. ಚಪ್ಪಲಿ ಬಿಟ್ಟು ಇಳಿಯಲು ತಯಾರಾಗಿ’ ಎಂದು ಕಂಚಿನ ಕಂಠದಲ್ಲಿ ನಾಗೇಂದ್ರಪ್ರಸಾದ್ ಎಲ್ಲರನ್ನೂ ಎಬ್ಬಿಸಿದರು. ಮಾರಿಯಮ್ಮ ದೇವಾಲಯ ವಿಶಾಲವಾಗಿದೆ. ತಮಿಳುನಾಡಲ್ಲೆ ಇರುವ ಈ ದೇವಾಲಯದಲ್ಲಿರುವ ಕಂಬಗಳು ಬಣ್ಣಗಳಿಂದ ಅಲಂಕೃತಗೊಂಡಿರುವುದು ಕಣ್ಣಿಗೆ ಹಿತವೆನಿಸಲಿಲ್ಲ. ಅಲ್ಲಿ ಕಾಫಿ ಕುಡಿದು ಮುಂದುವರಿದೆವು. ಅಲ್ಲಿಂದ ಮೈಸೂರಿಗೆ ೧೨೫ ಕಿಮೀ.
ಸತ್ಯಮಂಗಲ ಘಾಟಿ
ಕೆಲವೇ ಮೈಲಿ ದೂರ ಸಾಗಿದಾಗ ಸತ್ಯಮಂಗಲ ಘಾಟಿ ಎದುರಾಗುತ್ತದೆ. ೨೭ ಹೇರ್ಪಿನ್ (ಹೇರ್ಪಿನ್ ಅಗಲಮಾಡಿದಂತೆ!) ತಿರುವುಗಳು ಎದುರಾಗುತ್ತವೆ. ತಿರುವು ದಾಟುತ್ತ ಸುತ್ತಮುತ್ತ ಕಾಡು ನೋಡುವುದೇ ಚಂದ. ಘಾಟಿ ದಾರಿ ಮುಗಿದು ಮುಂದೆ ಬಂದಾಗ ಕಾಡಿನಲ್ಲಿ ರಸ್ತೆಬದಿ ೩ ಆನೆಗಳು ನಿಂತಿರುವುದು ಕಂಡಿತು. ನಮ್ಮ ಚಾಲಕ ಗಾಡಿ ನಿಲ್ಲಿಸದ ಕಾರಣ ಸರಿಯಾಗಿ ನೋಡುವ ಅವಕಾಶ ಸಿಗಲಿಲ್ಲ.
ಚಾಮರಾಜನಗರದಲ್ಲಿ ಶೃಂಗಾರ ಹೋಟೇಲಿನಲ್ಲಿ ದೋಸೆ ತಿಂದೆವು. ಹೋಟೇಲ್ ಹೆಸರಿನ ಜಿಜ್ಞಾಸೆ ಕಾಡಲು ಸುರುವಾಯಿತು. ಶೃಂಗಾರ ಅಂದರೆ ನಮಗೆ ತಟ್ಟನೆ ಮನದೆದುರು ಬರುವುದು ಅಲಂಕಾರ ಎಂಬುದಾಗಿ. ಆದರೆ ಹೋಟೇಲಿಗೆ ಇಂಥ ಹೆಸರಿಟ್ಟರೆ ಅದೇನೋ ಸರಿ ಬರುವುದಿಲ್ಲ ಎಂದೇ ನನ್ನ ಭಾವನೆ. ಹೋಟೇಲಿನ ಹೆಸರು ನೋಡಿದೊಡನೆ ರುಚಿ, ಸ್ವಾದ ನೆನಪಿಗೆ ತರುವಂತಿರಬೇಕು! ಅಲ್ಲಿಂದ ಹೊರಟು ಮೈಸೂರು ತಲಪುವಾಗ ೧೦ ಗಂಟೆ. ಪ್ರವಾಸ ಏರ್ಪಡಿಸಿದ ನಾಗೇಂದ್ರಪ್ರಸಾದ್, ವೈದ್ಯನಾಥ್ ಇವರುಗಳಿಗೆ ಧನ್ಯವಾದ ಅರ್ಪಿಸಿದೆವು.
ಶಂಕರಗಿರಿವಾಸನಿಗೆ ಆದಿತ್ಯವಾರ ಉಪವಾಸವೇ ಪಾಪ. (ಆಧುನಿಕ) ಭಂಡಾರಿ ಅಂಗಡಿಗೆ ಶೃಂಗಾರ ಕೊಟ್ಟು ಆಗೊಮ್ಮೆ ಈಗೊಮ್ಮೆ ಸೀದು ಹೋಗಬಹುದಾದ ಅಡುಗೆ ನೆನಪಿಗೆ ಇದಕ್ಕೆ ‘ಅಂಗಾರ’ ನಾಮಕರಣ ಮಾಡೋಣ (ನಮ್ಮನ್ನು ಕೇಳಿದರೆ!). ಮತ್ತೆ ಭರ್ಜರಿ ಊಟ ಕೊಟ್ಟ ‘ಸರ-ಒಣ’ ಹೆಸರನ್ನು ತಂಪು ಮಾಡುವ ಯೋಚನೆ ಇಲ್ಲವೇ? ಅಲ್ಲಿನ ಬಂಡೆ, ದೃಶ್ಯ ನೋಡಿ ನಾವು ಯಾವಾಗ ಹೋಗೋದೂಂತ ಈಗಲೇ ಅಂದಾಜುಪಟ್ಟಿ ಮಾಡಬೇಕು, ಹಾಗಾಗಿ ಇಷ್ಟು ಸಾಕು 🙂
Good one
ninna lekana caranaddu tumba kushi aytu. innu bere carana iddare bare.good
luck. malathi
ಮೊನ್ನೆ ತಾನೇ ಸತ್ಯಮಂಗಲ-ತಿರುಚೆಂಗೋಡು-ನಾಮಕ್ಕಲ್ ಮಾರ್ಗವಾಗಿ ಶ್ರೀರಂಗಂಗೆ ಹೋಗುವಾಗ ದೂರದಿಂದ ಕಂಡ ಈ ಬೆಟ್ಟ, ಅದರ ಮೇಲಿನ ದೇವಸ್ಥಾನ ಮತ್ತು ಇನ್ನೂ ಎತ್ತರದ ಬಂಡೆಯ ಮೇಲಿರುವ (ಊಚ್ಚಿಪಿಳ್ಳೆಯಾರ್) ಗಣೇಶನ (ನಿಮ್ಮ ಲೇಖನದಿಂದ ತಿಳಿಯಿತು) ಗುಡಿ ಇನ್ನೂ ಮನಸಿನಲ್ಲಿ ಕಾಡುತ್ತಿದೆ. ದೂರದಿಂದಲೇ ಕಾಣುವ ಈ ಬೆಟ್ಟದ ನೋಟ ಅದೆಂತಹ ಚಂದ!! ಈ ದೇವಸ್ಥಾನಕ್ಕೆ ಒಮ್ಮೆ ಹೋಗ್ಬೇಕು, ಬೆಟ್ಟ ಹತ್ತಬೇಕೋ ವಾಹನದಲ್ಲಿ ಹೋಗ್ಬೇಕೋ ಅಂತೆಲ್ಲಾ ಯೋಚನೆ ಮಾಡ್ತಾ ಅಂತರ್ಜಾಲದಲ್ಲಿ ಹುಡುಕಿದಾಗ ನಿಮ್ಮ ಈ ಲೇಖನ ಸಿಕ್ತು. ಚೊಕ್ಕವಾದ ನಿರೂಪಣೆ ಮತ್ತು ದೂರ-ಸಮಯದ ಮಾಹಿತಿಗೆ ಧನ್ಯವಾದ.
ನಿಮ್ಗೆ ಈ ಲೇಖನದಿಂದ ಅನುಕೂಲವಾಯಿತಲ್ಲ. ಅದೇ ಸಂತೋಷ. ನಿಮ್ಮ ಈ ಪತ್ರಕ್ಕೆ ಧನ್ಯವಾದಗಳು