ಮೈಸೂರಿನಿಂದ ಶತಾಬ್ಧಿ ರೈಲಿನಲ್ಲಿ ೨೫-೧-೨೦೧೩ರಂದು ಅನಂತ ಹಾಗೂ ನಾನು ಮದ್ರಾಸಿಗೆ ಅಕ್ಷರಿ ಮಹೇಶರ ಮನೆಗೆ ಹೋದೆವು. ಮನೆ ತಲಪಿದಾಗ ರಾತ್ರೆ ೧೦ ಗಂಟೆ. ಮಾರನೇದಿನ ಎಲ್ಲಿಗೆ ತಿರುಗಾಟ ಎಂಬ ವಿಷಯ ಚರ್ಚೆಗೆ ಬಂದಾಗ ತಿರುಮಲ ಬೆಟ್ಟಕ್ಕೆ ಮೆಟ್ಟಲಿನಿನಲ್ಲಿ ಹತ್ತಿ ಹೋಗುವ ಎಂದು ಅನಂತ ಸೂಚಿಸಿದಾಗ ಎಲ್ಲರೂ ಸಮ್ಮತಿಸಿದೆವು.
೨೬-೧-೨೦೧೩ರಂದು ಬೆಳಗ್ಗೆ ಹತ್ತುಗಂಟೆಗೆ ಹೊರಟೆವು. ಕೆಳಗೆ (ಅವರ ಮನೆ ೨ನೇಮಹಡಿ) ಬರುವಾಗ ಮನೆ ಬಾಡಿಗೆಗೆ ಕೊಟ್ಟ ಯಜಮಾನಿ ತಿರುಮಲಕ್ಕೆ ಹೋಗುವುದೆಂದು ತಿಳಿದು ಹುಂಡಿಗೆ ಹಾಕಲು ರೂ. ೧೦೦ ಕೊಟ್ಟರು. ನಿಮ್ಮ ಪಕ್ಕದ ಮನೆಯ ಸಂಧ್ಯಾ ಬರಬಹುದು ಅವರೂ ಮೆಟ್ಟಲು ಹತ್ತಿ ಹೋಗಬೇಕೆಂದು ಹೇಳುತ್ತಿದ್ದರು ಎಂದರು. ಅವರನ್ನು ಕೇಳಲಾಗಿ ನಿಮಗೆ ತೊಂದರೆ ಆಗದಿದ್ದರೆ ಬರುವೆ ಎಂದರು. ಅವರು ಹೊರಡಲು ಅರ್ಧ ಗಂಟೆ ಕಾದು ನಾವು ೫ ಮಂದಿ ೧೧.೩೦ಕ್ಕೆ ಮದ್ರಾಸಿನಿಂದ (೧೩೬ಕಿಮೀ.) ತಿರುಪತಿಗೆ ಸಾದಾ ಬಸ್ (ರೂ. ೧೧೦) ಹತ್ತಿದೆವು. ಸಂಜೆ ೩.೩೦ಕ್ಕೆ ತಿರುಪತಿ ತಲಪಿದೆವು. ಬಸ್ಸಿನಿಂದ ಇಳಿದಾಗಲೇ ಒಬ್ಬ ರಿಕ್ಷಾ ಚಾಲಕ ನಮ್ಮ ಬೆನ್ನು ಬಿಡಲಿಲ್ಲ. ೧೦೦ ರೂಪಾಯಿಗೆ ನಿಮ್ಮನ್ನು ಅಲೆಪಿರಿಗೆ (ಸುಮಾರು ೫ಕಿಮೀ.) ಬಿಡುವೆ ಎಂದು ದಂಬಾಲು ಬಿದ್ದ. ಸರಿ ಎಂದೊಪ್ಪಿ ನಾವು ೫ ಮಂದಿಯೂ ಅವನ ರಿಕ್ಷಾದೊಳಗೆ ತೂರಿ ಕುಳಿತೆವು.
ಅಲೆಪಿರಿಯಲ್ಲಿ ತಿರುಮಲಕ್ಕೆ ಹೋಗುವ ಪ್ರವಾಸಿಗರ ಅನುಕೂಲಕ್ಕೆ ಒಂದು ಕಚೇರಿ ಇದೆ. ಅಲ್ಲಿ ನಮ್ಮ ಬ್ಯಾಗ್ ಕೊಟ್ಟರೆ ಅದನ್ನು ಉಚಿತವಾಗಿ ತಿರುಮಲಕ್ಕೆ ಕೇವಲ ೩ ಗಂಟೆಯೊಳಗೆ ತಲಪಿಸುತ್ತಾರೆ. ಬ್ಯಾಗಿಗೆ ಕಡ್ಡಾಯವಾಗಿ ಬೀಗ ಹಾಕಿರಬೇಕು. ಬೀಗ ತೆಗೆದುಕೊಂಡೋಗಲು ನಿಮಗೆ ಮರೆತರೆ ಏನೂ ತಲೆಬಿಸಿ ಇಲ್ಲ. ಅಲ್ಲಿ ಬೀಗ ಮಾರುವ ಮಂದಿ ನಿಮ್ಮ ಸುತ್ತಮುತ್ತ ತಿರುಗುತ್ತ ಇರುತ್ತಾರೆ. ಒಂದು ಬೀಗಕ್ಕೆ ಕೇವಲ ೧೫ ರೂ. ನಾವು ೩ ಬೀಗ ತೆಗೆದುಕೊಂಡೆವು. ಎಲ್ಲಾದರೂ ಒಂದು ಬೀಗದ ಕೀಲಿ ಕಳೆದು ಹೋಯಿತೆಂದು ನೀವೇನೂ ದುಗುಡ ಪಡುವ ಅಗತ್ಯವಿಲ್ಲ. ಆ ಮೂರು ಬೀಗಗಳನ್ನೂ ಯಾವುದಾದರೂ ಒಂದೇ ಕೀಲಿಕೈ ಬಳಸಿ ತೆರೆಯಬಹುದು! ಅಂಥ ಅದ್ಭುತ ಮ್ಯಾಜಿಕ್ನಿಂದ ಕೂಡಿದ ಬೀಗವದು! ಅಂತ ಸೋಜಿಗದ ಬೀಗ ಬೇಕೆಂದರೆ ಮಾತ್ರ ನೀವು ಅಲ್ಲಿಗೆ ತೆರಳುವಾಗ ಬೀಗ ತೆಗೆದುಕೊಂಡೋಗಲು ಮರೆಯಿರಿ.
ನಾವು ಅಲ್ಲಿ ನಮ್ಮ ಲಗೇಜನ್ನು ಕೌಂಟರಿನಲ್ಲಿ ಒಪ್ಪಿಸಿ ರಸೀತಿ ಪಡೆದು ಮೆಟ್ಟಲು ಏರಲು ಸಂಜೆ ೪.೧೫ಕ್ಕೆ ಪ್ರಾರಂಭಿಸಿದೆವು. ಪ್ರಾರಂಭದಲ್ಲಿ ಮಧ್ಯೆ ಒಂದು ದೇವಾಲಯದ ಎದುರು ಹೋಗಬೇಕಾಗಿರುವುದರಿಂದ ಕೆಲವು ಮೆಟ್ಟಲು ಮಾತ್ರ ಚಪ್ಪಲಿ ಅಥವಾ ಶೂ ಧರಿಸಿ ತೆರಳಬಾರದು. ಮುಂದೆ ಹೋದಂತೆ ಚಪ್ಪಲಿ ಹಾಕಬಹುದು. ಬರಿಕಾಲಿನಲ್ಲಿ ಹತ್ತಲು ಆಸೆ ಹರಕೆ ಇದ್ದರೆ ಹಾಗೆ ಹತ್ತಬಹುದು. ಚಪ್ಪಲಿ ಹಾಕಿಕೊಳ್ಳಲು ಒಂದು ಲಕೋಟೆ ಕೊಂಡೋಗಲು ಮರೆಯದಿರಿ. ಇಲ್ಲಾಂದರೆ ಒಂದು ಕವರಿಗೆ ರೂ. ೫ ಕೊಟ್ಟು ಪಡೆಯಬೇಕಾಗುತ್ತದೆ. ನಾವು ಉತ್ಸಾಹದಿಂದಲೇ ಮೆಟ್ಟಲು ಏರುತ್ತಿದ್ದೆವು. ಪ್ರಾರಂಭ ಏನೂ ಕಷ್ಟವಿಲ್ಲ. ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಮೆಟ್ಟಲು ಏರುತ್ತಿರುತ್ತಾರೆ. ದಾರಿಯಲ್ಲಿ ಅಲ್ಲಲ್ಲಿ ಚಹಾ, ಚುರುಮುರಿ, ತಂಪುಪಾನೀಯ ಅಂಗಡಿಗಳು ಎದುರಾಗುತ್ತವೆ. ಸುಸ್ತಾದರೆ ಕೂರಲು ಜಾಗವಿದೆ. ಮೆಟ್ಟಲು ಚೊಕ್ಕವಾಗಿ ಇದೆ. ಸಿಬ್ಬಂದಿಗಳು ಮೆಟ್ಟಲನ್ನು ಆಗಾಗ ಗುಡಿಸುತ್ತ ಇರುತ್ತಾರೆ. ಅಂಗಡಿಗಳಿರುವ ಜಾಗದಲ್ಲಿ ಕೆಳಗೆ ಗುಂಡಿಯಲ್ಲಿ ಪ್ಲಾಸ್ಟಿಕ್ ಲೋಟಗಳು ಕಸಗಳು ಯಥೇಚ್ಛವಾಗಿ ಕಾಣುತ್ತೇವೆ. ಮೆಟ್ಟಲುಗಳಲ್ಲಿ ಅಲ್ಲಲ್ಲಿ ಕಸ ಹಾಕಲು ದೊಡ್ಡ ದೊಡ್ಡ ಡಬ್ಬಗಳನ್ನಿಟ್ಟಿದ್ದರೂ ಕೂಡ ಪ್ರವಾಸಿಗರು ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ಎಲ್ಲೆಂದರಲ್ಲಿ ಕಸ ಹಾಕುವುದನ್ನು ಬಿಡುವುದಿಲ್ಲ.
ಸಣ್ಣ ಶಿಶುಗಳನ್ನು ಎತ್ತಿಕೊಂಡು ನಡೆಯುವವರು, ಪ್ರಾಯದ ಹೆಂಗಸರು ಉಸ್ಸಪ್ಪ ಅಂತ ಮೆಟ್ಟಲು ಏರುವವರು, ಭಾರದ ಚೀಲವನ್ನು ಹೊತ್ತು ಸಾಗುವವರು ಇದ್ದರು. ಒಬ್ಬ ಅಜ್ಜನಿಗೆ ೭೫ರಮೇಲೆ ವಯಸ್ಸಾಗಬಹುದು. ಅವರೂ ಹೆಗಲಿಗೆ ಜೋಳಿಗೆ ಹಾಕಿಕೊಂಡು ಸಹಾಯಕನ ಜೊತೆ ಮೆಟ್ಟಲು ಏರುತ್ತಿದ್ದರು. ೩೫೫೦ ಮೆಟ್ಟಲನ್ನು ಅವರು ನಿರಾಯಾಸವಾಗಿ ಹತ್ತಿದ್ದರು. ನಿಜಕ್ಕೂ ಅವರ ಸಾಮರ್ಥ್ಯ ಮೆಚ್ಚಲೇಬೇಕು. ಅಲ್ಲಿ ರಾತ್ರಿ ಹಗಲು ಯಾವ ಭಯ ಇಲ್ಲದೆ ಮೆಟ್ಟಲು ಏರಬಹುದು. ರಾತ್ರಿಗೆ ದಾರಿಗೆ ಬೆಳಕಿನ ವ್ಯವಸ್ಥೆ ಇದೆ. ದಾರಿಯಲ್ಲಿ ಸಾಗುತ್ತ ಹೋಗುವಾಗ ದಟ್ಟ ಕಾಡು ನೋಡಲು ಖುಷಿಯಾಗುತ್ತದೆ. ಹಗಲು ಹೋದರೆ ಪ್ರಕೃತಿ ಸೌಂದರ್ಯವನ್ನು ನೋಡಬಹುದು.
ತಿರುಪತಿಯಿಂದ ತಿರುಮಲಕ್ಕೆ ರಸ್ತೆಮೂಲಕ ೨೨ ಕಿಮೀ. ದೂರ. ಅದೇ ಮೆಟ್ಟಲು ಹತ್ತಿ ಹೋಗುವುದಾದರೆ ೧೪ಕಿಮೀ. ದೂರ. ನಮಗೆ ಮೆಟ್ಟಲು ಹತ್ತಿ ಹೋಗಲು ನಾಲ್ಕು ಗಂಟೆ ಬೇಕಾಯಿತು. ರಸ್ತೆ ಮೂಲಕ ಹೋಗಲು ೬೫ ತಿರುವುಗಳನ್ನು ದಾಟಬೇಕು. ಬರುವಾಗ ಕೇವಲ ೯ ತಿರುವುಗಳು. ಮೆಟ್ಟಲುಗಳಲ್ಲದೆ ರಸ್ತೆಮೂಲಕ ಸುಮಾರು ೨ಕಿಮೀ ದೂರ ನಡೆಯಬೇಕು. ರಸ್ತೆಬದಿ ಕಾಲುದಾರಿಯಲ್ಲಿ ನೆರಳಿಗಾಗಿ ಮೇಲ್ಛಾವಣಿ ಮಾಡಿದ್ದಾರೆ. ನಡೆದಾಡುವ ಜಾಗದಲ್ಲಿ ಬಿಸಿ ತಾಗದಿರಲೆಂದು ಬಿಳಿ ಬಣ್ಣ ಬಳಿದಿದ್ದಾರೆ. ವ್ಯವಸ್ಥೆ ಅಚ್ಚುಕಟ್ಟಾಗಿದೆ. ಚೊಕ್ಕವಾಗಿದೆ. ಅಲ್ಲಲ್ಲಿ ಹರಕೆ ಹೊತ್ತ ಜನ ಮರಕ್ಕೆ ಬಟ್ಟೆಗಂಟು, ಕಲ್ಲುಗಳನ್ನು ಒಂದರಮೇಲೆ ಒಂದು ಇಟ್ಟದ್ದು ಕಾಣುತ್ತೇವೆ. ಕಲ್ಲುಗಳನ್ನು ಹಾಗೆ ಇಟ್ಟು ಸ್ವಂತಮನೆ ಕಟ್ಟುವಂತಾಗಲಿ ಎಂದು ಹರಕೆ ಹೇಳಿಕೊಳ್ಳುವುದಂತೆ.
ಮೆಟ್ಟಲು ಏರಿ ಬರುವವರಿಗೆ ದರ್ಶನ, ವಾಸ್ತವ್ಯ, ಮುಡಿಕೊಡುವುದು ಇತ್ಯಾದಿ ಎಲ್ಲವೂ ಉಚಿತ. ಆದರೆ ಒಂದು ದಿನಕ್ಕೆ ಹನ್ನೊಂದು ಸಾವಿರದ ಇನ್ನೂರು ಟೋಕನ್ ಮಾತ್ರ ಕೊಡುವುದಂತೆ. ನಾವು ಈ ಅವಕಾಶದಿಂದ ವಂಚಿತರಾದೆವು. ಆ ದಿನದ ಟೋಕನ್ನ ಗಡು ಮಧ್ಯಾಹ್ನಕ್ಕೇ ಮುಗಿದಿತ್ತು! ತಿರುಪತಿ ತಿಮ್ಮಪ್ಪ ನಮ್ಮ ಮೇಲೆ ಕೃಪಾಕಟಾಕ್ಷ ಬೀರಲಿಲ್ಲ. ಅವನ ದರ್ಶನಭಾಗ್ಯ ಕರುಣಿಸಲಿಲ್ಲ! ಗಾಳಿಗೋಪುರದ ಬಳಿ ಜನ ಮರುದಿನದ ಟೋಕನ್ಗಾಗಿ ಕಾಯುತ್ತ ಮಲಗಿದ್ದರು! ಗಾಳಿಗೋಪುರ ಎಂಬ ಹೆಸರಿಗೆ ತಕ್ಕಂತೆಯೇ ಅಲ್ಲಿ ದಾರಾಳ ಹಿತವಾದ ಗಾಳಿ ಬೀಸುತ್ತಲೇ ಇರುತ್ತದೆ.
ರಸ್ತೆ ದಾರಿ ಮುಗಿದ ಬಳಿಕ ಸುಮಾರು ೩೦೦ಕ್ಕೂ ಹೆಚ್ಚು ಮೆಟ್ಟಲುಗಳನ್ನು ಏರಬೇಕು. ಅದು ಕಡಿದಾಗಿ ಏರುಮುಖವಾಗಿವೆ. ಆ ಮೆಟ್ಟಲುಗಳನ್ನು ನೋಡಿದ ಸಂಧ್ಯಾ `ಪೆರುಮಾಳ್ ನನ್ನನ್ನು ನೀನು ಮೇಲೆ ಹತ್ತಿಸುತ್ತಿಯಲ್ಲ?’ ಎಂದು ಬೇಡಿಕೊಂಡು ಪೆರುಮಾಳ್ ಎನ್ನುತ್ತ ಏದುಸಿರು ಬಿಡುತ್ತ ಹತ್ತು ಮೆಟ್ಟಲು ಹತ್ತಿ ವಿಶ್ರಮಿಸುತ್ತ, ಅಜ್ಜ ಹತ್ತುತ್ತಿರುವುದನ್ನು ಕಂಡು ಹುರುಪುಗೊಳ್ಳುತ್ತ ಮೇಲೆದ್ದು ಹತ್ತುತ್ತಿದ್ದರು. ಅವರ ಬೆಂಗಾವಲಿಗೆ ಹಿಂದಿನಿಂದ ಮಹೇಶ ಬರುತ್ತಿದ್ದ. ಅಂತೂ ತಲಪಿಯೇಬಿಟ್ಟೆವು ಮೇಲೆ. ಸಂಧ್ಯಾ ಅವರ ಸಂತೋಷಕ್ಕೆ ಪಾರವೇ ಇಲ್ಲ. ಸುಮಾರು ಏಳು ವರ್ಷಗಳ ಹಿಂದೆ ಮಗಳಿಗೆ ಮದುವೆ ನಿಶ್ಚಯ ಆದರೆ ಮೆಟ್ಟಲೇರಿ ಬರುವೆ ಎಂದು ಅವರು ಹರಕೆ ಹೇಳಿಕೊಂಡಿದ್ದರಂತೆ. ಮಗಳಿಗೆ ಮದುವೆಯಾಗಿ ಒಂದು ಮಗು ಕೂಡ ಆದರೂ ಅವರ ಹರಕೆ ತೀರಿಸಲು ಯಾರೂ ಸಹಾಯ ಮಾಡಿರಲಿಲ್ಲವಂತೆ. ಯಾರೂ ಅವರೊಂದಿಗೆ ಬರಲು ಒಪ್ಪಿರಲಿಲ್ಲವಂತೆ. ನಮ್ಮೊಡನೆ ಬಂದು ಅವರ ಹರಕೆ ತೀರಿಸಲು ಸಾಧ್ಯವಾಯಿತೆಂದು ಖುಷಿ ಪಟ್ಟರು. ನಮಗೂ ಸಮಾಧಾನವಾಯಿತು. ಅವರ ಚಪ್ಪಲಿ, ವ್ಯಾನಿಟಿಬ್ಯಾಗ್ ಹೊತ್ತದ್ದಕ್ಕೂ ಸಾರ್ಥಕವೆನಿಸಿತು!
ಮೆಟ್ಟಲು ಹತ್ತುವಾಗ ನಾನಾತರಹದ ಹರಕೆ ಹೊತ್ತವರು ಕಾಣಸಿಗುತ್ತಾರೆ. ಪ್ರತೀಮೆಟ್ಟಲಿಗೂ ಅರಿಸಿನ ಕುಂಕುಮ ಹಚ್ಚುತ್ತ, ದೀಪ ಹಚ್ಚಿ ಇಡುತ್ತ ಮೇಲೆ ಏರುತ್ತಿದ್ದರು. ಮತ್ತೆ ಕೆಲವರು ಮಂಡಿ ಊರುತ್ತ ಕೆಲವು ಮೆಟ್ಟಲು ಏರುವುದು ಕಂಡುಬಂತು. ಅಂತೂ ನಾವು ೮.೧೫ಕ್ಕೆ ೩೫೫೦ ಪೂರ್ಣ ಮೆಟ್ಟಲೇರಿ ತಿರುಮಲನ ಸನ್ನಿಧಾನಕ್ಕೆ ತಲಪಿದೆವು. ಅಲ್ಲಿ ಒಬ್ಬ ಗಾಂಧೀಜಿ ವೇಷ ಧರಿಸಿ ಅಲ್ಲಾಡದೆ ನಿಂತಿರುವುದನ್ನು ನೋಡಿ ಬೆರಗಾದೆವು. ಜೀವಂತ ಮನುಜ ಅಂತ ಅನಿಸುವುದೇ ಇಲ್ಲ ಹಾಗೆ ಕಲ್ಲಿನ ಶಿಲ್ಪದಂತೆ ನೀಂತಿದ್ದರು.
ಅಲ್ಲಿ ಸರತಿಸಾಲಿನಲ್ಲಿ ಹತ್ತು ನಿಮಿಷ ಕಾದು ಅನ್ನಪ್ರಸಾದನಿಲಯದಲ್ಲಿ ಊಟ ಮಾಡಿದೆವು. ಬಹಳ ದೊಡ್ಡ ಕಟ್ಟಡದಲ್ಲಿ ಕೆಳಗೆ ಹಾಗೂ ಮಹಡಿ ಮೇಲೆ ೪ ಕಡೆ ಮೇಜು ಕುರ್ಚಿ ಹಾಕಿ ಬಾಳೆಲೆ ಇಟ್ಟು ಪಲ್ಯ, ಸಿಹಿ, ಚಟ್ನಿ ಬಡಿಸಿ ಊಟಕ್ಕೆ ತಯಾರು ಮಾಡುತ್ತಾರೆ. ಒಂದೊಂದು ಕಡೆ ತುಂಬುತ್ತಿದ್ದಂತೆ ಇಲ್ಲಿ ಸರತಿ ಸಾಲಿನಲ್ಲಿ ನಿಂತವರನ್ನು ಒಳಬಿಡುತ್ತಾರೆ. ಹೊಟ್ಟೆಬಿರಿಯುವಷ್ಟು ಅನ್ನ ಸಾರು, ಸಾಂಬಾರು ಮಜ್ಜಿಗೆ ಬಡಿಸುತ್ತಾರೆ. ಆದರೂ ಅಲ್ಲಿರುವ ಎಲ್ಲ ಹೋಟೆಲುಗಳೂ ಜನರಿಂದ ತುಂಬಿದ್ದುವು. ಕೆಲವು ಖಾನಾವಳಿಯಲ್ಲಿ ಊಟಕ್ಕಾಗಿ ಜನ ಕಾದು ಕುಳಿತಿರುವುದು ಕಂಡು ಬಂತು. ತಿರುಮಲದಲ್ಲಿ ದಾರಿಯುದ್ದಕ್ಕೂ ಇರುವ ತಿಂಡಿತಿನಿಸು ಅಂಗಡಿಗಳ ಮುಂದೆ ಜನ ತಿನ್ನುತ್ತ ನಿಂತಿರುವುನ್ನು ಕಾಣುತ್ತೇವೆ ರಾತ್ರಿ ೧೨ ಗಂಟೆ ಆದರೂ. ಈ ದೃಶ್ಯ ನೋಡುವಾಗ ಜನ ತಿನ್ನುವುದಕ್ಕಾಗಿ ಬದುಕಿರುವುದು. ಬದುಕುವುದಕ್ಕಾಗಿ ತಿನ್ನುವುದು ಅಲ್ಲ! ಎಂದು ಮನವರಿಕೆಯಾಗುತ್ತದೆ! ಬದುಕುವುದಕ್ಕಾಗಿ ತಿನ್ನುವುದಾದರೆ ಅಂಗಡಿಗಳವರು ಮಧ್ಯರಾತ್ರಿ ರೊಟ್ಟಿ ಬಡಿಯಬೇಕಾಗಿರಲಿಲ್ಲ, ಗೋಭಿ ಮಂಚೂರಿ ಹುರಿಯಬೇಕಾದ ಪ್ರಸಂಗ ಎದುರಾಗುತ್ತಿರಲಿಲ್ಲ!
ದೇವಾಲಯದ ಎದುರು ಭಾಗದಲ್ಲಿ ನಕ್ಷತ್ರ ನೋಡುತ್ತ ಒಂದು ಗಂಟೆ ಕುಳಿತೆವು. ಹುಂಡಿಗೆ ಹಾಕಲು ಕೊಟ್ಟಿದ್ದ ಹಣವನ್ನು ಅಲ್ಲೇ ದೇವರ ದರ್ಶನಕ್ಕೆ ಹೋಗಲು ಸರತಿ ಸಾಲಿನಲ್ಲಿ ಇದ್ದವರ ಕೈಗೆ ಕೊಟ್ಟು ಬಂದೆವು. ಅವರೂ ಕನ್ನಡದವರೇ ಆದದ್ದು ಕಾಕತಾಳೀಯ. ನಮಗೆ ವೆಂಕಟೇಶನ ದರ್ಶನ ಮಾಡಲು ಆ ದಿನ ಸಾಧ್ಯವೇ ಇಲ್ಲದಷ್ಟು ಜನ ಅಲ್ಲಿ ಅದಾಗಲೇ ಕಾಯುತ್ತ ಇದ್ದರು. ರೂ ೩೦೦ರ ವಿಶೇಷ ದರ್ಶನ ಟೋಕನ್ ಕೂಡ ಖಾಲಿಯಾಗಿತ್ತು! ಮಾರನೇದಿನ ಹುಣ್ಣಿಮೆ. ಹಾಗಾಗಿ ಜನ ಹೆಚ್ಚು ಎಂದು ಯಾರೋ ನುಡಿದರು. ಮಾನಸಿಕವಾಗಿ ತಿಮ್ಮಪ್ಪನ ದರ್ಶನವಾದರೆ ಸಾಕು. ಒಳಗೆ ಹೋಗಬೇಕೆಂದೇನು ಇಲ್ಲ ಎಂದು ನಾವು ತೀರ್ಮಾನಿಸಿದೆವು! ಸಂಧ್ಯಾ ಅವರು ಮುಂದಿನಸಲ ಬಸ್ಸಲ್ಲಿ ಬಂದು ತಿಮ್ಮಪ್ಪನ ದರ್ಶನ ಭಾಗ್ಯ ಪಡೆಯುವುದಾಗಿ ಅವನಲ್ಲಿ ಅರಿಕೆ ಮಾಡಿಕೊಂಡರು. ತಥಾಸ್ತು ಅಂದಿರುತ್ತಾನೆ ತಿಮ್ಮಪ್ಪ ಎಂಬ ಭರವಸೆ ಅವರಿಗಿದೆ. ಆದರೆ ಒಂದೇ ಒಂದು ಲಾಡು ಸಿಗದೇ ಇದ್ದದ್ದು ದೊಡ್ಡ ನಷ್ಟವಾಗಿ ತೋರಿತು. ಎಲ್ಲಿ ನೋಡಿದರಲ್ಲಿ ಜನ. ಎಲ್ಲಿ ಜಾಗವಿದೆಯೋ ಅಲ್ಲಲ್ಲಿ ರಗ್, ಬೆಡ್ಶೀಟ್ ಮುಸುಕು ಹಾಕಿ ಹೊದೆದು ಜನ ಆರಾಮವಾಗಿ ಯಾವ ಯೋಚನೆಯೂ ಇಲ್ಲದೆ ನಿದ್ರಿಸಿದ್ದರು. ಆ ದಿನ ಚಳಿ ಇತ್ತು.
ನಾವು ರಾತ್ರಿ ೧೨.೩೦ಕ್ಕೆ ಟಾಟಾ ಸುಮೋದಲ್ಲಿ ಒಬ್ಬರಿಗೆ ತಲಾ ರೂ. ೧೦೦ ಕೊಟ್ಟು ತಿರುಪತಿಗೆ ಬಂದೆವು. ತಿರುಮಲ, ತಿರುಪತಿಯಲ್ಲಿ ರಾತ್ರಿ ಹಗಲು ಎಂಬ ವ್ಯತ್ಯಾಸವಿಲ್ಲ. ಅಷ್ಟು ಜನಸಂದಣಿ ಇತ್ತು. ಅದಾಗಲೇ ಮದ್ರಾಸಿಗೆ ಹೋಗುವ ೨ ಬಸ್ಸು ಜನರಿಂದ ತುಂಬಿದ್ದರಿಂದ ನಮಗೆ ಏರಲು ಸಾಧ್ಯವಾಗಲಿಲ್ಲ. ೧.೧೫ಕ್ಕೆ ಮದ್ರಾಸಿಗೆ ಹೋಗಲು ನಮಗೆ ಬಸ್ ಸಿಕ್ಕಿತು. ಬಸ್ಸಲ್ಲಿ ಅದಾಗಲೆ ಸಾಕಷ್ಟು ಜನ ತುಂಬಿದ್ದರು. ಹೇಗೋ ಅನುಸರಿಸಿ ನಾವು ಕೂತೆವು. ೪.೧೫ಕ್ಕೆ ಮದ್ರಾಸು ತಲಪಿದೆವು.
ಪ್ರವಾಸ ಕಥನ ಚನ್ನಾಗಿತ್ತು.. ನನ್ನ ಮದ್ರಾಸ್ ವಾಸದ ದಿನಗಳು ನೆನಪಾದವು.
ನವಿರಾದ ನಿರೂಪಣೆ. ಒಮ್ಮೆ ದೇವದರ್ಶನಕ್ಕಲ್ಲವಾದರೂ ಅಲ್ಲಿನ ವ್ಯವಸ್ಥೆಗಳನ್ನು ನೋಡಬೇಕೆಂಬ ಆಸೆ ಹುಟ್ಟಿಸುವಂತಿದೆ ಬರಹ.
ಹಲವು ವರ್ಷಗಳ ಹಿಂದೆ ನಾಸಿಕಕ್ಕೆ ಹೋದ ಸಂದರ್ಭ – ಬಂಧುಗಳ ಒತ್ತಾಯಕ್ಕೆ ಶಿರ್ಡಿಗೆ ಹೋದೆವು. ಮಗಳು ಕೈಗೂಸು. ದೇವಸ್ಥಾನದಲ್ಲಿ ಅಗಾಧ ಜನಜಂಗುಳಿ. ಹಾಗಾಗಿ ದರ್ಶನ ಮಾಡದೇ ಮರಳಿ ಬಂದೆವು. ದೊಡ್ಡ ದೇವಸ್ಥಾನಗಳಲ್ಲಿ ಇಂದು ಜನ ಜಾತ್ರೆ. ದೇವರ ದರ್ಶನ ಬಲು ಪ್ರಯಾಸದ್ದು. ಹಾಗಾಗಿ ಇಂದಿನ ಮರಿ ದೇವಾಲಯಗಳು ಹಿರಿ ದೇವಾಲಯಗಳಾಗುವ ಮುನ್ನ ದರ್ಶನ ಮಾಡುತ್ತ ಬಂದರೆ ಹೇಗೆ?
ತಿರುಪತಿ ತಿಮ್ಮಪ್ಪನಿಗೆ ನಿಮ್ಮ ದರ್ಶನ ಭಾಗ್ಯ ಸಿಕ್ಕದಿದ್ದಕ್ಕೆ ವಿಶಾದಿಸುತ್ತೇನೆ. ನಾನು 3 ಬಾರಿ ಹೋಗಿದ್ದೇನೆ. ಒಂದು ಬಾರಿ ಮ್ಮ ವಿದ್ಯಾರ್ಥಿಗಳೊಂದಿಗೆ, ಇಡೀ ರಾತ್ತಿ ಕಾದು ಕುಳಿತು ಧರ್ಮದರ್ಶನ, ಒಂದು ಬಾರಿ ವೆಂಕಟೇಶ್ವರ ವಿಶ್ವವಿದ್ಯಾನಿಲಯದ ವಿಶೇಷ ಅತಿಥಿ ಪ್ರಾಧ್ಯಾಪಕನಾಗಿದ್ದದ್ದರಿಂದ ಯಾವ ಶುಲ್ಕವೂ ಇಲ್ಲದೇ ಬೆಟ್ವಿಟದ ಮೇಲೆ ಒಂದು ದಿನ ವಾಸ ಮತ್ತು ವಿಶೇಷ ಉಚಿತ ದರ್ಶನ, ಒಂದು ಬಾರಿ ಮೆಟ್ಟಿಲು ಹತ್ತಿ ಇಳಿದ ಪುಣ್ಯ ಮಾತ್ರ. ಅಂದ ಹಾಗೆ, ನನಗೆ ಅತಿ ಪ್ರಿಯವಾದದ್ದು ಲಾಡು. ಅದನ್ನು (ಶುಲ್ಕ ಸಹಿತವಾದದ್ದು, ಶುಲ್ಕರಹಿತವಾದದ್ದು) ಗಿಟ್ಟಿಸಿಕೊಳ್ಳದೇ ಹಿಂದಿರುಗಿಲ್ಲ. ಬೆಟ್ಟದಮೇಲೆ ಒಂದು ಕಿರು ಜಲಪಾತವೂ ಇದೆ. ಅಲ್ಲಿ ಸ್ನಾನ ಮಾಡಿ ಎಲ್ಲ ಪಾಪಗಳನ್ನೂ ಕಳೆದುಕೊಂಡಿರುವುದರಿಂದ ನನ್ನ ದರ್ಶನ ಪಡೆದರೂ ಸಾಕು. ಲೇಖನ ೆಂದಿನಂತೆ ಸರಳ ಸುಂದರವಾಗಿದೆ.
ಪ್ರಕೃತಿ ಸೌಂದರ್ಯದಲ್ಲಿ,ಸಂಧ್ಯಾ ಅವರಿಗೆ ಹರಕೆ ತೀರಿಸಿದ ಸಂತಸ ಸಿಕ್ಕಿದ ಕ್ಷಣದಲ್ಲಿ ನಿಮಗೆ ತಿರುಪತಿ ತಿಮ್ಮಪ್ಪನ ದರ್ಶನ ಆಗಿ ಹೋಗಿದೆ, ನವಿರು ನಿರೂಪಣೆ ಖುಷಿಯಾಯ್ತು