ಈ ಲೇಖನ ವಿಜಯಕರ್ನಾಟಕಕ್ಕಾಗಿ ಬರೆದುದು. ಪತ್ರಿಕೆಗೆ ಕಳಿಸಿ ಸುಮಾರು ೧೫ ದಿನವಾಯಿತು. ಅವರು ಹಾಕಲಿಕ್ಕಿಲ್ಲ ಎಂದು ಗೊತ್ತಿತ್ತು. ಅದನ್ನು ಇಲ್ಲಿ ಹಾಕಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ. (ತಲೆಬರಹದಲ್ಲಿ ಕೆಲವು ಆಂಗ್ಲ ಅಕ್ಷರಗಳಿವೆ. ಅದರಲ್ಲಿ ಹಾಕಿದ ಉದ್ದೇಶ mu ಎಂಬುದು ಯೂನಿಕೋಡ್ ನಲ್ಲಿ ಮಾ ಎಂದು ಬರುತ್ತದೆ. ಆಗ ಅರ್ಥವೇ ಅನರ್ಥವಾಗುತ್ತದೆ!)
ವಿಜಯಕರ್ನಾಟಕದಲ್ಲಿ ಕ್ಲೀನ್ ಸಿಟಿ ಎಂದು ಕಸದ ರಾಶಿಯ ಚಿತ್ರ ಬರುತ್ತಲೇ ಇತ್ತು. ಚಿತ್ರ ಹಾಕಿ ಏನೂ ಪ್ರಯೋಜನ ಇಲ್ಲ. ನಿಮಿಷಕ್ಕೆ ಇಂಥ ಚಿತ್ರ ಎಷ್ಟು ಬೇಕಾದರೂ ತೆಗೆಯಬಹುದು. ಎಲ್ಲ ಕಸಗಳನ್ನು ಪ್ರತೀದಿನ ಲಾರಿಯಲ್ಲಿ ತುಂಬಿ ತೆಗೆದುಕೊಂಡು ಹೋದ ಮತ್ತೆ ಐದು ನಿಮಿಷಕ್ಕೆ ವಾಪಾಸ್ ಅಲ್ಲಿ ಕಸ ಪ್ರತ್ಯಕ್ಷವಾಗುತ್ತದೆ. ಅಷ್ಟು ಹುಶಾರ್ ನಾವು ಕಸ ಹಾಕಲು. ಇದಕ್ಕೆಲ್ಲ ಮೂಲ ಕಾರಣ ಏನು? ನಮ್ಮ ಮನಸ್ಸು ಎಂದೇ ಹೇಳಬಹುದು. ನಮ್ಮ ಪ್ರತಿಯೊಬ್ಬರ ಮನಸ್ಸು ಬದಲಾಗದೆ ನಗರ ಚೊಕ್ಕವಾಗಲು ಸಾಧ್ಯವಿಲ್ಲ.
ಮೊದಲೆಲ್ಲ ಕಸದ ತೊಟ್ಟಿ ಬೀದಿಗೊಂದು ಇರುತ್ತಿತ್ತು. ಆಗ ಕಸದ ತೊಟ್ಟಿಗಿಂತ ಹೆಚ್ಚು ಹೊರಗೆಯೇ ಕಸ ಇರುತ್ತಿತ್ತು. ಕಸದ ತೊಟ್ಟಿಯೊಳಗೆ ಕಸ ಹಾಕುವಷ್ಟು ವ್ಯವಧಾನ ಇಲ್ಲ ಮನುಜನಿಗೆ. ಕಸದ ತೊಟ್ಟಿ ಇದ್ದರೆ ನಗರಕ್ಕೆ ಶೋಭಾಯಮಾನವಲ್ಲ ಎಂದು ತೊಟ್ಟಿ ತೆಗೆದರು. ಹಾಗೆಂದು ಕಸ ಹಾಕುವುದನ್ನು ಬಿಟ್ಟಿದ್ದಾರೆಯೇ? ಇಲ್ಲ. ಆ ಜಾಗದಲ್ಲಿ ತೊಟ್ಟಿ ಏಕೆ ಬೇಕು? ಅಲ್ಲೇ ಕಸ ಚೆಲ್ಲುತ್ತಾರೆ. ಕಸ ಹೀಗೆ ರಸ್ತೆಬದಿ ಹಾಕಬಾರದು ಎಂದು ಮನುಷ್ಯನಿಗೆ ಅನಿಸುವುದೇ ಇಲ್ಲ. ಸಾರ್ವಜನಿಕವಾಗಿ ಕಸ ಚೆಲ್ಲುವ ಚಾಳಿ ಹೆಚ್ಚಿನವರಿಗೆ ಇದೆ. ನಾನು ನೋಡಿದ ೨ ಘಟನೆಗಳನ್ನಷ್ಟೇ (ಇಂಥವು ಬರೆದರೆ ಪುಟಗಟ್ಟಲೆ ಆಗಬಹುದು) ಇಲ್ಲಿ ನಮೂದಿಸುತ್ತೇನೆ. ೧) ಕಿರಾಣಿ ಅಂಗಡಿಯಲ್ಲಿ ಕಂಡ ಘಟನೆ: ಅಂಗಡಿಯವನು ಬಾಗಿಲು ಹಾಕಲು ತಯಾರಿ ಮಾಡುತ್ತಿದ್ದ. ಅಂಗಡಿ ಕಸ ಗುಡಿಸಿ (ಪ್ಲಾಸ್ಟಿಕ್ ಲಕೋಟೆ, ಸಿಗರೇಟ್ ಪ್ಯಾಕ್, ಇತ್ಯಾದಿ,) ರಸ್ತೆಗೆ ತಳ್ಳಿದ. ಅವನ ಅಂಗಡಿ ಚೊಕ್ಕವಾಯಿತು. ಬಾಗಿಲೆಳೆದು ಬೀಗ ಹಾಕಿ ಹೋದ. ರಸ್ತೆಯಲ್ಲಿ ಕಸ ಗಾಳಿಗೆ ಹಾರಾಡುತ್ತಿತ್ತು. ಬೀದಿಯಲ್ಲಿ ಕಸವಿದ್ದರೆ ಅವನಿಗೇನು. ಬೀದಿಕಸ ಗುಡಿಸುಸುವ ಜವಾಬ್ದಾರಿ ನಗರಪಾಲಿಕೆಯದು ತಾನೆ. ತೆರಿಗೆ ಕೊಡುತ್ತೇವಲ್ಲ ಗುಡಿಸಲಿ ಅವರು ಎಂಬ ಮನೋಭಾವ ಹೋಗಬೇಕು. ೨) ಒಂದು ಸಭಾಂಗಣದಲ್ಲಿ ಯಕ್ಷಗಾನ ನಡೆಯುತ್ತಿತ್ತು. ನನ್ನ ಪಕ್ಕದಲ್ಲಿ ಕುಳಿತಿದ್ದ ಹತ್ತು ವರ್ಷದ ಹುಡುಗಿಯೊಬ್ಬಳು ಚಿಪ್ಸ್ ತಿನ್ನುತ್ತಿದ್ದಳು. ತಿಂದಮೇಲೆ ಆ ಲಕೋಟೆಯನ್ನು ಅಲ್ಲೇ ಕೆಳಗೆ ಹಾಕಿದಳು. ಅದನ್ನು ಕಂಡು ನಾನು ಅಲ್ಲಿ ಹಾಕಬೇಡ ಎಂದೆ. ಅವಳು ಅದನ್ನು ಹೆಕ್ಕಿ ಪಕ್ಕದಲ್ಲಿಟ್ಟುಕೊಂಡಳು. ಪರವಾಗಿಲ್ಲ. ಹೇಳಿದ್ದು ಕೇಳಿದಳಲ್ಲ ಎಂದು ಸಂತಸವಾಯಿತು. ಆ ಸಂತಸ ಹೆಚ್ಚುಕಾಲ ಉಳಿಯಲಿಲ್ಲ. `ಅತ್ತೆ, ಆ ಹುಡುಗಿ ಅದನ್ನು ಕುರ್ಚಿ ಅಡಿಗೆ ಬೀಸಾಕಿದ್ದಾಳೆ’ ಎಂದು ಸ್ವಲ್ಪ ಹೊತ್ತಿನಲ್ಲಿ ನನ್ನ ಅಣ್ಣನ ಮಗಳು ಪಿಸು ನುಡಿದಳು. ಅಬ್ಬ ಹುಡುಗಿಯೇ ಎಂದೆನಿಸಿತು. ಅಪ್ಪನಾದವನು ಪಕ್ಕದಲ್ಲೇ ಕುಳಿತಿದ್ದ. ಅವನೇನು ಮಗಳಿಗೆ ಹೇಳಲಿಲ್ಲ ಕಸ ಹಾಕಬಾರದೆಂದು. ಇಂಥ ಎಷ್ಟೋ ಪ್ರಸಂಗ ನಮ್ಮ ಕಣ್ಣೆದುರು ನಡೆಯುತ್ತಲೇ ಇರುತ್ತದೆ. ನಾವು ನೋಡಿಯೂ ಸುಮ್ಮನಿರುತ್ತೇವೆ.
ದೀಪಾವಳಿಗೆ ಇನ್ನು ಕೆಲವೇ ದಿನಗಳು. ಆಗ ನೋಡಬೇಕು ರಸ್ತೆಗಳನ್ನು. ಮನೆ ಮುಂದಿನ ರಸ್ತೆಗಳಲ್ಲಿ ಪಟಾಕಿ ಹಚ್ಚಿದ ಕಸಗಳ ರಾಶಿ. ಎಲ್ಲರೂ ರಸ್ತೆಯಲ್ಲೇ ಪಟಾಕಿ ಸಿಡಿಸುವುದು. ಆಗ ರಸ್ತೆಯಲ್ಲಿ ಹೋಗಲು ಹೆದರಬೇಕು. ಎಲ್ಲಿ ಮೈಮೇಲೇ ಬೀಳುತ್ತದೋ ಎಂದು ಎಚ್ಚರದಿಂದ ನಡೆಯಬೇಕಾಗುತ್ತದೆ. ನಾನು ಕಳೆದ ವರ್ಷ ಇಲ್ಲೇ ನಮ್ಮ ಮನೆಪಕ್ಕ ರಸ್ತೆಯಲ್ಲಿ ಪಟಾಕಿಗಳ ಕಸದ ಚಿತ್ರ ತೆಗೆದಿದ್ದೆ.
ಈಗ ಆಗಬೇಕಾಗಿರುವುದು ಏನು? ಮಕ್ಕಳಿಗೆ ಸ್ವಚ್ಛತೆಯ ಪಾಟ ಕಡ್ಡಾಯವಾಗಿ ಶಾಲೆಯಲ್ಲಿ ಹೇಳಿಕೊಡಬೇಕು. ತಮ್ಮ ಮನೆ ಮಾತ್ರ ಸ್ವಚ್ಛವಾಗಿದ್ದರೆ ಸಾಲದು. ಹೊರಗೆ ಕಸ ಎಸೆಯಲೇಬಾರದು ಎಂಬ ಮೂಲಪಾಟವನ್ನು ನಾವಿಂದು ಕೊಡಬೇಕಾಗಿದೆ. ಆಯಿತು ಮಕ್ಕಳಿಗೇನೋ ಶಾಲೆಯಲ್ಲಿ ಕಲಿಸಬಹುದು. ಹಾಗಾದರೆ ದೊಡ್ದವರಿಗೆ ಹೇಗೆ ಕಲಿಸುವುದು ಸ್ವಚ್ಛತೆಯ ಪಾಟವನ್ನು? ಕಸ ಹೊರಗೆ ಹಾಕಬೇಡಿ, ಕಂಡಕಂಡಲ್ಲಿ ಉಗುಳಬೇಡಿ ಎಂದು ಹೇಗೆ ಕಲಿಸುವುದು? ಬಡ್ಡುಮಂಡೆಗೆ ಹೋದೀತೆ?!
ನಗರಪಾಲಿಕೆಯನ್ನು ಮಾತ್ರ ದೂರಿ ಪ್ರಯೋಜನವಿಲ್ಲ. ನಿಮಿಷ ನಿಮಿಷಕ್ಕೆ ಎಲ್ಲ ಬೀದಿಯಲ್ಲೂ ಕಸಬಿದ್ದರೆ ಅವರೇನು ಮಾಡಲು ಸಾಧ್ಯ? ಯಾವುದೇ ಬೀದಿಯಲ್ಲಿ ನಡೆದು ನೋಡಿ. ಕಸ ಇಲ್ಲದ ಬೀದಿ ಸಿಕ್ಕರೆ ನಿಮ್ಮ ಪುಣ್ಯ. ಕಸ ತೆಗೆದುಕೊಂಡು ಹೋಗುವವನಿಗೆ ಕಸ ಕೊಡುವುದಿಲ್ಲ. ಮತ್ತೆ ಎಷ್ಟೋ ಹೊತ್ತಿನಬಳಿಕ ರಸ್ತೆಬದಿ ಕಸ ಸುರಿಯುತ್ತಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ದಂಡ ವಿಧಿಸುವುದೊಂದೇ ದಾರಿಯೇ? ಯಾರು ಕಸ ಹಾಕುತ್ತಾರೆ ಎಂದು ಕಂಡುಹಿಡಿಯುವ ಬಗೆ ಹೇಗೆ? ಯಾವುದೇ ನಗರ ಸ್ವಚ್ಚ ನಗರಿ ಎಂದೆನಿಸಿಕೊಳ್ಳಲು ಬೇಕಾಗಿರುವುದು ನಮ್ಮ ಮನ ಪರಿವರ್ತನೆಯೊಂದೇ ಮಾರ್ಗ. ಪ್ರತಿಯೊಬ್ಬ ಪ್ರಜೆಯೂ `ಕಸ ಹೊರಗೆ ಹಾಕುವುದಿಲ್ಲ, ನಮ್ಮ ಮನೆಯನ್ನು ಹೇಗೆ ಚೊಕ್ಕವಾಗಿ ಇಟ್ಟುಕೊಳ್ಳುತ್ತೇವೋ ಬೀದಿಯನ್ನೂ ಅಷ್ಟೇ ಸ್ವಚ್ಚವಾಗಿ ಇಟ್ಟುಕೊಳ್ಳುತ್ತೇವೆ’ ಎಂಬ ಮನೋಭಾವ ಹೊಂದಬೇಕು. ಹಾಗಾದರೆ ಮಾತ್ರ ನಗರ ಲಕಲಕವೆನಿಸೀತು. ಎಂಬುದು ನನ್ನ ಭಾವನೆ.
ನಾವು ಸರ್ವತಂತ್ರ ಸ್ವತಂತ್ರರಲ್ಲವೇ? ನಮ್ಮ ಮನೆಯ ಹೊರಗೆ ನಮಗೆ ಇಷ್ಟ ಬಂದಲ್ಲಿ ಕಸ ಬಿಸಾಡುವುದು ನಮ್ಮ ಆಜನ್ಮಸಿದ್ಧ ಹಕ್ಕು.
ಸಾಮಾಜಿಕ ಜವಾಬ್ದಾರಿಯುತ ವರ್ತನೆಯನ್ನು ಚಿಕ್ದಿಕಂದಿನಿಂದಲೇ ನೋಡಿ ಕಲಿಯುತ್ತೇವೆ, ಓದಿ ಅಥವ ಕೇಳಿ ಅಲ್ಲ. ಈ ದೃಷ್ಟಿಯಿಂದ ಅನುಕರಣಯೋಗ್ಯ ಮಾದರಿ ಎಲ್ಲಿದೆ? ಎಷ್ಟಿದೆ?
ಮಾರ್ನಿಂಗ್ ವಾಕ್ ಹೋಗುವಾಗ ಕಸದ ತೊಟ್ಟೆಯೊಂದನ್ನು ಸಾಮಾನು ಇರುವ ಚೀಲದಂತೆ ಹಿಡಿದುಕೊಂಡು ಹೋಗಿ ಯಾರೂ ನೋಡುತ್ತಿಲ್ಲ ಎಂಬುದನ್ನು ಖಾತರಿ ಮಾಡಿಕೊಂಡು ಪಾರ್ಕಿನ ಬೇಲಿ ಸಂದಿಗೆ ಬಿಸಾಡುವವರನ್ನು ಸಿಂಗಾಪುರದಂಥ ಸ್ವಚ್ಛ ನಗರಿಯಲ್ಲೂ ನೋಡಿದ್ದೇನೆ.
ಹೌದು. ಸ್ವಾತಂತ್ರ್ಯಕ್ಕೂ ಸ್ವೇಚ್ಛೆಗೂ ವ್ಯತ್ತಾಸ ಎಷ್ಟೋ ಮಂದಿಗೆ ತಿಳಿದೇ ಇಲ್ಲ. ಸ್ವಾತಂತ್ರ್ಯವೆಂದರೆ ಇಷ್ಟ ಬಂದದ್ದು ಮಾಡುವುದು ಎಂದು ಅನೇಕರು ತಿಳಿದಿದ್ದಾರೆ.
ಮಾಲಕ್ಕ ಎಲ್ಲರೂ ಹೀಗೆ ಯೋಚನೆ ಮಾಡಿದ್ರೆ ಎಷ್ಟು ಒಳ್ಳೇದಲ್ವ..??!!
ಮಾಲಾವ್ರೇ…ವನಿತಳನ್ನ ನೋಡಿ ಬಂದೆ ನಿಮ್ಮ ಬ್ಲಾಗ್ ಗೆ….ಹೌದು ವ್ಯವಸ್ಥೆ ಅವಸ್ಥೆಯಾದ್ರೆ ಕಷ್ಟ…..
ನಮಗೆ ಕಸವಿಲ್ಲದೆ ಬದುಕವದು ಕಷ್ಟ. ನಮ್ಮ ಸಂಸ್ಕೃತಿಯಲ್ಲಿ ಇನ್ನಲ್ಲದಂತೆ ಬೆರೆತುಹೋಗಿದೆ.
ನಾನು ದಿನವೂ ಅಂಗಡಿ ಗುಡಿಸಿದ ಕಸ ಬೀದಿಗೆ ಎಸೆದಿರುವುದನ್ನು ಕಾಣುತ್ತೇನೆ. ಮರದಡಿಯಲ್ಲಿ ಕಾಫಿ, ಚಹಾ ಮಾರುವವರೂ ಗಿರಾಕಿಗಳು ಎಸೆಯುವ ಲೋಟಕ್ಕೆ ಸರಿಯಾದ ನೆಲೆ ಕಾಣಿಸದೆ ಪರಿಸರ ಹಾಳುಗೆಡವುತ್ತಿದ್ದಾರೆ.
ನಮ್ಮ ಬೀದಿಯಲ್ಲಿ ಒಂದೇ ಒಂದು ಕಸದ ತೊಟ್ಟಿ ಇಲ್ಲ. ಮನೆ ಮನೆಗೆ ಬಂದು ಕಸ ಕೊಂಡೊಯ್ಯುವ ಗಾಡಿಯೂ ಯಾವಾಗಲಾದರೂ ಒಮ್ಮೆ ಬರುತ್ತದೆ. ಹಾಗಾಗಿ ಖಾಲಿ ಸೈಟುಗಳು ಕಸದ ತೊಟ್ಟಿಗಳಾಗಿ ಸೊಳ್ಳೆ ಕ್ರಿಮಿಗಳನ್ನು ಪೋಷಿಸುತ್ತಿವೆ. ನಾವು ವಾರಕ್ಕೊಮ್ಮೆ ಮನೆಯ ಎಲ್ಲ ಕಸವನ್ನು ದೊಡ್ಡ garbage bag ನಲ್ಲಿ ಕಟ್ಟಿ ಕಾರಿನಲ್ಲಿ ಹೋಗಿ ನಿಲ್ಲಿಸಿದ ಕಸದ ಗಾಡಿಯೊಳಗೆ ಇಟ್ಟು ಬರುತ್ತಿದ್ದೆವು. ಈಗ ಕಸದ ಗಾಡಿ ಅಲ್ಲಿಂದ ಮಾಯವಾಗಿದೆ. ನಾವು ಮನಸ್ಸಿಲ್ಲದಿದ್ದರೂ ಪ್ರತಿದಿನ ಕಸದ ಗಾಡಿ ಹೋಗುವ ಬೀದಿ ಬದಿ ಇಟ್ಟು ಬರುವ ಪರಿಸ್ಥಿತಿ ಬಂದಿದೆ. ಆದರೂ ಮರುದಿನ ಅಲ್ಲಿ ಕಸದ ವಾಹನ ಬರುವುದೂ ಮತ್ತೆ ಕಸದ ಚೀಲ ಮಾಯವಾಗಿರುವುದು ನೋಡಿ ಖುಷಿ ಪಡುತ್ತೇನೆ.
ನಾಯಿ, ಹಸು ಎಳೆಯದಂತೆ ಊಟದ ಕಸ ಬೇರೆ, ಪ್ಲಾಸ್ಟಿಕ್, ಗಾಜು ಬೇರೆ, ಕಾಗದ ಮತ್ತಿತರ ಬೇರೆ ಚೀಲದಲ್ಲಿ ಕಟ್ಟಿ ಎಲ್ಲವನ್ನೂ ದೊಡ್ಡ ಚೀಲದೊಳಗೆ ತುಂಬುತ್ತೇನೆ. ಆದರೂ ವಾರಕ್ಕೆ ಮೂರು, ನಾಲ್ಕು ಪ್ಲಾಸ್ಟಿಕ್ ಎಸೆದು ಪರಿಸರ ಮಾಲಿನ್ಯ ಮಾಡುತ್ತೀ ಎನ್ನುವವರಿದ್ದಾರೆ! ಬೀದಿಯಲ್ಲಿ ಹರಿದು ಹಂಚಿ ಹೋಗಿ ಕ್ರಿಮಿ ಬೆಳೆಯುವುದಕ್ಕಿಂತ ಇದು ವಾಸಿ ಎಂದುಕೊಂಡಿದ್ದೇನೆ.
ನನ್ನ ತಂದೆ ತಾಯಿ ಎಷ್ಟೋ ಸಲ ಮನೆಯ ೨೦೦ ಮೀಟರು ವ್ಯಾಪ್ತಿಯಲ್ಲಿ ಯಾರೂ ಎಸೆದ ಕಸವನ್ನು ಹೆಕ್ಕುತ್ತಾರೆ. ಅಕ್ಕ ಪಕ್ಕದ ಮನೆಯವರು (ಕಸ ಎಸೆದವರೂ ಸೇರಿ) ಸಹಕರಿಸುವುದು ಬಿಟ್ಟು ಆಶ್ಚರ್ಯದಿಂದ ನೋಡುತ್ತಿರುತ್ತಾರೆ.
ಹೌದು. ನೀವು ಹೇಳಿದಂತೆ ಜನರ ಮನಸೇ ಬದಲಾಗಬೇಕು. ಪರಿಸರ ತನ್ನದಲ್ಲ ಎಂಬ ಸಂಕುಚಿತ ಮನೋಭಾವ ಹೋಗಬೇಕು. ಸಣ್ಣದಿನಲ್ಲೇ ಮಕ್ಕಳಿಗೆ ಹೇಳಿಕೊಟ್ಟರೆ ಸರಿ. ನನ್ನ ಅತ್ತಿಗೆ ಮಗ ತಿರುಗಾಡಲು ಹೋದಾಗೆಲ್ಲ ಚಿಪ್ಸ್, ಚಾಕಲೇಟು ತಿನ್ನುತ್ತಿರುತ್ತಾನೆ. ಆದರೆ ಕಸವೆಲ್ಲವನ್ನೂ ಅತ್ತಿಗೆಯ ಬ್ಯಾಗಿಗೇ ತುರುಕುತ್ತಾನೆ. ನೀವು ಹೇಳಿದಂತೆ ಅವನಿಗೆ ಚಿಕ್ಕಂದಿನಿಂದಲೇ ಹಾಗೇ ಹೇಳಿಕೊಡಲಾಗಿದೆ.
ಅಕ್ಷರಸಹ ನಿಜ ಮಾಲಾರವರೆ , ನಮ್ಮಲ್ಲಿ ಮುಕ್ಕಾಲು , ಮೂರ್ಪಾಲು ಮಂದಿಗೆ ಸಿವಿಕ್ ಸೆನ್ಸ್ ಅನ್ನೋದೇ ಇರೋಲ್ಲ , ಇನ್ನು ಮಕ್ಕಳಿಗೆ ತಿಳುವಳಿಕೆ ಕೊಡೊ ವಿಚಾರವಂತೂ ಇಲ್ವೆ ಇಲ್ಲ .ಯಾರು ಏನ್ಬೇಕಾದ್ರೂ ಹಾಳಾಗ್ಲಿ ನನ್ನ ಜಾಗ/ನನ್ನ ಮನೆ ಸ್ವಚ್ಛವಾಗಿದ್ರೆ ಸಾಕು ಅನ್ನೋ ಸ್ವಾರ್ಥ ಮನೋಭಾವ ಜನರಲ್ಲಿ ಈಗ ತುಂಬಾ ಹೆಚ್ಚಾಗಿಬಿಟ್ಟಿದೆ. ಹೀಗೆ ರಸ್ತೆ ಬದಿಯಲ್ಲೇ ಕಸ ಎಸೆದುದ್ದರಿಂದ ನನಗೆ ತಿಳಿದವರ ಒಬ್ಬಳೇ ಮಗಳು ಮೊನ್ನೆ ಮೊನ್ನೆಯಷ್ಟೇ ತೀರಿಹೋದ ಘಟನೆ (ಕಸದ ಗುಡ್ಡವನ್ನು ಹಾದು ಹೋಗುವಾಗ ಜಾರಿ ಬಿದ್ದು ಹಿಂದೆ ಬರುತ್ತಿದ ಬಸ್ಸಿನಡಿಗೆ ಸಿಕ್ಕಿ …) ಮನದಲ್ಲಿ ಇನ್ನೂ ಹಸಿರಾಗೇ ಉಳಿದಿದೆ . ನಿಮ್ಮ ಲೇಖನ ಇನ್ನೂ ಹೆಚ್ಚಿಗೆ ಜನರನ್ನು ತಲುಪಬೇಕು, ಅಗಲಾದ್ರು ಸ್ವಲ್ಪ ಜನರಲ್ಲಿ ಜಾಗೃತಿ ಮೂಡುವುದು ಖಂಡಿತ.
ಕೊಳಕು ಸ್ವಭಾವ ಜನರಲ್ಲಿ ರಕ್ತಗತವಾಗಿದೆ . ನೀವು ಹೇಳಿದಹಾಗೆ ಶಾಲೆಗಲಿಂದಲೇ ಅದನ್ನು ಅಭ್ಯಾಸಕ್ಕೆ ತರಬೇಕು .ಕೆಲಸದ ಪ್ರವೃತ್ತಿ ನಾಶವಾಗಿರುವ್ದೆ ಇದಕ್ಕೆಲ್ಲ ಕಾರಣ
ಅನಕ್ಷರಸ್ಥರು ಅಥವಾ ಅವಿದ್ಯಾವಂತರಾದರೆ ಅರ್ಥ ಆಗುತ್ತದೆ ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಡ್ಡಿ ಬಿಸಾದುವರಲ್ಲಿ ವಿದ್ಯಾವಂತರಂತೆ ತೋರುವವರೇ ಜಾಸ್ತಿ. people who are smartly dressed and look smart are the more uncivilised rather than the illiterates.
ನಿರ್ಮಲವಾಗಲಿ
Nangoo bussinalli anEka anbhavagaLAgive. OLage kasa hAkabedi enDu hELiddakke sahaprayANikaLobbaLu ‘gottide’ ennuttA horage havaame uDuta Jaaye endu horaGE BITTIDDAlU. idu nagara rodanavE sari.