ಬೆಳಗೆರೆ ಕೃಷ್ಣ ಶಾಸ್ತ್ರಿ ನನಗೆ ಅಪರಿಚಿತ ಹೆಸರಾಗಿತ್ತು. ಅವರು ಬರೆದ `ಯೇಗ್ದಾಗೆಲ್ಲ ಐತೆ’ (muಕುಂದೂರು ಸ್ವಾಮಿಗಳ ಬಗ್ಗೆ) ಪುಸ್ತಕ ವರ್ಷದ ಹಿಂದೆ ಓದಿದ್ದೆ. ಓದಿ ಬಹಳ ಖುಷಿ ಪಟ್ಟಿದ್ದೆ. ಅವರ `ಮರೆಯಲಾದೀತೆ’ ಎಂಬ ಪುಸ್ತಕ ಕೊಂಡು ಓದಿದೆ. ೪೨೪ ಪುಟದ ಬೃಹತ್ ಪುಸ್ತಕ. ಓದಿ ಅಬ್ಬ ಈ ವ್ಯಕ್ತಿ ಅದ್ಭುತ ಎಂದೆನಿಸಿತು. ಈ ಪುಸ್ತಕ ಓದಿದರೆ ಅವರ ಇಡೀ ಜೀವನ ಚರಿತ್ರೆ ನಮ್ಮ ಕಣ್ಣಿನ ಮುಂದೆ ತೆರೆದ ಪುಸ್ತಕದಂತೆ ಕಾಣುತ್ತದೆ. ಓದುಗನ ಮನದೊಳಗೆ ನೇರವಾಗಿ ಇಳಿಯುತ್ತದೆ. ಹಾಗಾಗಿ ಹೆಚ್ಚು ಇಷ್ಟವಾಗುತ್ತದೆ. ಮನ ತಡೆಯಲಾರದೆ ಅವರಿಗೆ ಪತ್ರ ಬರೆದೆ. `ನಿಮ್ಮ ಪುಸ್ತಕ ಓದಿ ಸಂತೋಷವಾಗಿ ಆ ಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಈ ಪತ್ರ . ನಿಮ್ಮ ಬರವಣಿಗೆ ಸರಳ ನೇರವಾಗಿ ಮನಕ್ಕೆ ತಟ್ಟಿತು.ನೀವು ಬರೆದ ಇನ್ನೂ ೨ ಪುಸ್ತಕ ಬೇಕಾಗಿತ್ತು ಅದು ಎಲ್ಲಿ ಸಿಗುತ್ತದೆ ಎಂದು ತಿಳಿಸಲು ಸಾಧ್ಯವೆ?’ ಎಂದು ಇತ್ಯಾದಿ ಬರೆದಿದ್ದೆ. ನಂಬಿದರೆ ನಂಬಿ, ಬಿಟ್ರೆ ಬಿಡಿ ಮಾರಾಯರೆ. ಒಂದು ವಾರದಲ್ಲಿ ಕೊರಿಯರ್ನಲ್ಲಿ ಅವರಿಂದ ೩ ಪುಸ್ತಕ ಬಂತು. ತಂಗಿಗೆ ಹೃತ್ಪೂರ್ವಕವಾಗಿ ಎಂದು ಅವರ ಸಹಿಯೊಂದಿಗೆ. ರೋಮಾಂಚನಗೊಂಡೆ. ಒಂದಿಗೆ ಸಣ್ಣ ಚೀಟಿಯಲ್ಲಿ `ಈ ಪುಸ್ತಕಗಳಿಗೆ ದುಡ್ಡು ಕಳುಹಿಸಬಾರದು. ಪುಸ್ತಕ ಓದಿ ಅನಿಸಿಕೆ ಬರೆಯಿರಿ. ನಿಮ್ಮ ಊರಲ್ಲಿ ನನ್ನ ಅಳಿಯ ಇದ್ದಾನೆ. ಅವನ ಮನೆಗೆ ಬಂದಾಗ ನಿಮ್ಮಲ್ಲಿಗೆ ಬರುತ್ತೇನೆ’ ಎಂದು ಬರೆದಿದ್ದರು.
ಇದಾಗಿ ೨ ತಿಂಗಳನಂತರ ಅವರ ಅಳಿಯನ ಮನೆಗೆ ಬಂದವರು ನಮ್ಮ ಮನೆ ಹುಡುಕಿಕೊಂಡು ಬಂದು ಆತ್ಮೀಯವಾಗಿ ಮಾತಾಡಿ `ನಿಮಗೇಕೆ ಆ ಪುಸ್ತಕ ಇಷ್ಟವಾಯಿತು?’ ಎಂಬ ಪ್ರಶ್ನೆ ಕೇಳಿದರು. `ಅದರಲ್ಲಿರುವ ಸರಳತೆ ಹಾಗೂ ಉತ್ಪ್ರೇಕ್ಷೆ ಇಲ್ಲದಿದ್ದರಿಂದ ಅದು ಮನಸ್ಸಿಗೆ ನಾಟುತ್ತಿತ್ತು’ ಎಂದುತ್ತರಿಸಿದೆ. ಅವರು ಒಂದು ಗಂಟೆ ಹೊತ್ತು ಕೂತು muಕುಂದೂರು ಸ್ವಾಮಿಗಳೊಂದಿಗೆ ಆದ ಅವರ ಅನುಭವವನ್ನು ಹೇಳುತ್ತ ಹೋದರು. ನಾವು ಕೇಳುತ್ತ ಹೋದೆವು. ಸಮಯ ಸರಿದದ್ದೇ ಗೊತ್ತಾಗಲಿಲ್ಲ.
ಅವರೆಷ್ಟು ಸರಳ ಸಜ್ಜನ ವ್ಯಕ್ತಿ ಆಗಿರಬಹುದು ಎಂದು ಅವರ ಬರಹದಿಂದ ಮಾತ್ರ ಹಿಂದೆ ಊಹೆ ಮಾಡಿದ್ದೆ. ಯಾರೆಂದೇ ಗೊತ್ತಿಲ್ಲದ ನನ್ನನ್ನು ನೋಡಿ ಮಾತಾಡಲು ಮನೆಗೆ ಹುಡುಕಿಕೊಂಡು ಬಂದು ಆತ್ಮೀಯವಾಗಿ ಹೂ ಹಣ್ಣು ಕೊಟ್ಟು ಮಾತಾಡಿ ಹೋದದ್ದು ನಿಜವಾಗಿಯೂ ಅವರೆಷ್ಟು ಸರಳರು ಎಂಬುದರ ಬಗ್ಗೆ ಪ್ರತ್ಯಕ್ಷ ಅನುಭವವೇ ಆಯಿತು. ಕೃಷ್ಣಶಾಸ್ತ್ರಿಗಳ ಉಡುಗೆಯೂ ಸರಳ. ಬಿಳಿಪಂಚೆ, ಜುಬ್ಬ, ತಲೆಗೆ ಒಂದು ಬಿಳಿಬಟ್ಟೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳಿಗೆ ಈಗ ಸುಮಾರು ೯೦ರ ವಯಸ್ಸು. ಈಗಲೂ ೨ ಕಿಮಿ ದೂರ ನಡೆಯುತ್ತಾರೆ. `ಅವರಿಗೆ ಸತತವಾಗಿ ೨ ಹೃದಯಾಘಾತ, ಒಂದು ಸ್ಟ್ರೋಕು, ತೆರೆದ ಹೃದಯದ ಶಸ್ತ್ರಚಿಕಿತ್ಸೆ ಎಲ್ಲವನ್ನೂ ಗೆದ್ದು ಆರೋಗ್ಯವಂತರಾಗಿ ಮನೆಗೆ ಹಿಂತಿರುಗಿದ್ದಾರೆ’ ಎಂದು ಅವರ ಅಳಿಯ ರವಿ ಬೆಳಗೆರೆ ೨೦೦೧ರಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಖಾಸಾಬಾತ್ ಅಂಕಣದಲ್ಲಿ ಬರೆದಿದ್ದರು.
ಬೆಳಗೆರೆಯಲ್ಲಿ ನಾರಾಯಣಪುರ ಗ್ರಾಮ, ಚಳ್ಳೆಕೆರೆ ತಾಲ್ಲೂಕು, ಚಿತ್ರದುರ್ಗ ಜಿಲ್ಲೆಯಲ್ಲಿ ಶಾಸ್ತ್ರಿಗಳು ಒಂದು ಖಾಸಗಿ ಶಾಲೆ ತೆರೆದಿದ್ದಾರೆ. ಅವರ ತಂದೆ (ಬೆಳಗೆರೆ ಚಂದ್ರಶೇಖರ ಶಾಸ್ತ್ರಿ, ಆಶುಕವಿ) ಸಾಯುವ ಮೊದಲು `ಕಿಟ್ಟಪ್ಪ, ಇಷ್ಟೆಲ್ಲ ಮಾಡಿದೆ ಅಂತೀಯ. ಈ ಸೀಮೆಯ ಮಕ್ಕಳಿಗೆ ವಿದ್ಯಾಭ್ಯಾಸವಿಲ್ಲ. ಇವರಿಗೋಸ್ಕರ ಒಂದು ಶಾಲೆ ಕಟ್ಟು. ಸುತ್ತಲ ಹಳ್ಳಿಯ ಮಕ್ಕಳು ಬಂದು ಓದಿಕೊಳ್ಳುವಂಥ ಶಾಲೆ ಕಟ್ಟು’ ಎಂದು ಹೇಳಿದ್ದರಂತೆ. ಹಾಗೆ ತಂದೆಯ ಮಾತು ನಡೆಸಿಕೊಡಲು ಅಣ್ಣನ ಹೆಸರಲ್ಲಿ ಕಟ್ಟಿರುವ ಶಾಲೆಯೇ `ಬೆಳಗೆರೆ ಸೀತಾರಾಮಶಾಸ್ತ್ರಿ ಪ್ರೌಢಶಾಲೆ.’ ಇದು ೧೯೬೭ರಲ್ಲಿ ಪ್ರಾರಂಭಗೊಂಡು ಈಗ ೧೩ ಎಕರೆ ಜಾಗದಲ್ಲಿ ಜೂನಿಯರ್ ಕಾಲೇಜಾಗಿ ಬೆಳೆದಿದೆ. ಹಳ್ಳಿಯ ಮಕ್ಕಳು ಸುಮಾರು ೫೦೦ ಮಂದಿ ಅಲ್ಲಿ ಓದುತ್ತಿದ್ದಾರೆ. ದೊಡ್ಡ ಕಟ್ಟಡ, ವಿಶಾಲ ತರಗತಿ, ಉಚಿತ ಹಾಸ್ಟೆಲ್ ಇವೆ. ಉಚಿತ ಹಾಸ್ಟೆಲಿನಲ್ಲಿ ಸುಮಾರು ೧೨೦ ಮಂದಿ ಬಡ ಮಕ್ಕಳು ಜಾತಿಮತ ಭೇದವಿಲ್ಲದೆ ಇದ್ದಾರೆ. ಅವರ ಖರ್ಚೆಲ್ಲ ಶಾಸ್ತ್ರಿಗಳೇ ನೋಡಿಕೊಳ್ಳುತ್ತಾರೆ. ಶಾಲೆಯ ಪಕ್ಕದಲ್ಲೇ ಶಾಸ್ತ್ರಿಯವರ ತೋಟ. ಅದರಿಂದ ಬರುವ ಉತ್ಪತ್ತಿ, ಅವರು ಬರೆದ ಪುಸ್ತಕಗಳಿಂದ ಬರುವ ಆದಾಯ, ಶಾಸ್ತ್ರಿಗಳ ಪರಿಚಿತರು, ಅಭಿಮಾನಿಗಳು ಕೊಡುವ ದಾನ ಇಷ್ಟರಲ್ಲೇ ಅವರು ಸಮರ್ಪಕವಾಗಿ ಹಾಸ್ಟೆಲನ್ನು ಇಷ್ಟು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸರ್ಕಾರದಿಂದ ಚಿಕ್ಕಾಸನ್ನೂ ಪಡೆದಿಲ್ಲವಂತೆ. ಯಾರೇ ದಾನಿಗಳು ಅವರ ಶಾಲೆಗೆ ದುಡ್ಡು ಕಳುಹಿಸಿದರೆ ಕೂಡಲೇ ಅವರ ಸಹಿಯೊಂದಿಗೆ ರಶೀದಿ ನಿಮ್ಮನ್ನು ತಲುಪುತ್ತದೆ. ಗತಿಸಿದ ಹಿರಿಯರ ಶ್ರಾದ್ಧದಂದು ಒಂದಷ್ಟು ಜನರನ್ನು ಕರೆದು ಬಗೆಬಗೆಯ ಭಕ್ಷ್ಯ ಬೋಜ್ಯ ತಯಾರಿಸಿ ಊಟ ಹಾಕಿದರೆ ಮನೆಯವರಷ್ಟೆ ಸಂತೋಷ ಪಡಬಹುದು. ಅಥವಾ ಮಕ್ಕಳ ಹುಟ್ಟಿದದಿನವೇ ಇರಬಹುದು. ಅದಕ್ಕೆ ಖರ್ಚಾಗುವ ಹಣವನ್ನು ಬೆಳಗೆರೆ ಕೃಷ್ಣಶಾಸ್ತ್ರಿ, ಬೆಳಗೆರೆ, ನಾರಾಯಣಪುರ ಗ್ರಾಮ ಹಾಗೂ ಅಂಚೆ, ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲ್ಲೂಕು ಎಂಬ ವಿಳಾಸಕ್ಕೆ ಕಳುಹಿಸಿದರೆ `ಹಾಸ್ಟೆಲಿನ ಮಕ್ಕಳಿಗೆ ನಿಮ್ಮ ಹಿರಿಯರ ಹೆಸರಿನಲ್ಲಿ ಅಥವಾ ನಿಮ್ಮ ಮಗುವಿನ ಹೆಸರಿನಲ್ಲಿ ಆ ದಿನ ಹಾಸ್ಟೆಲಿನ ೧೨೦ ಮಕ್ಕಳಿಗೆ ಊಟ ಹಾಕಿದ್ದೇವೆ. ಧನ್ಯವಾದಗಳು’ ಎಂಬ ಅವರ ಸಹಿ ಇದ್ದ ಕಾಗದದೊಂದಿಗೆ ರಶೀದಿಯೂ ನಿಮ್ಮನ್ನು ತಲಪುತ್ತದೆ. ಇದರ ಅನುಭವವೂ ನನಗಾಗಿದೆ. ಕಿಂಚಿತ್ ಮೊತ್ತ ನಾನಲ್ಲಿಗೆ ಕಳುಹಿಸಿದ್ದೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಒಂದು ಶಾಲೆಯಲ್ಲಿ ೩-೪ ವರ್ಷ ಇರುತ್ತಿದ್ದರು. ಮತ್ತೆ ಅವರನ್ನು ಬೇರೆ ಹಳ್ಳಿಗೆ ವರ್ಗಾಯಿಸಲಾಗುತ್ತಿತ್ತು. ವರ್ಗಾವಣೆಯಾದಲ್ಲಿಗೆಲ್ಲ ಸಂತೋಷದಿಂದ ಹೋಗಿ ಆ ಎಲ್ಲ ಶಾಲೆಗಳ ಅಭಿವೃದ್ಧಿಯನ್ನೂ ಮೌನಸಾಧಕರಾಗಿ ಮಾಡಿದ್ದರು. ಅವರು ಹೆಂಡತಿ ಮಗುವನ್ನು ಒಂದೇ ದಿನ ಕಳೆದುಕೊಂಡಿದ್ದರು. ಅದರನಂತರ ಅವರಿಗೆ ಮದುವೆಮಾಡಲು ಕುಟುಂಬದವರು ಒತ್ತಾಯಿಸಿದಾಗ ಇವರು (ಯೌವನದಲ್ಲೇ) ಹಲ್ಲನ್ನೆಲ್ಲ ಕೀಳಿಸಿ ಬಂದು `ಈ ಹಲ್ಲಿಲ್ಲದವನಿಗೆ ಯಾರು ಹೆಣ್ಣು ಕೊಡುತ್ತಾರೆ ನೋಡುವ?’ ಎಂದಿದ್ದರಂತೆ! ಈಗಲೂ ಬಾಯಿಯಲ್ಲಿ ಹಲ್ಲಿಲ್ಲದೆಯೇ ಇದ್ದಾರೆ. ನೆಂಟರು ಕೃತಕ ದಂತ ತಂದು ಕೊಟ್ಟಾಗ ಅದನ್ನು ನಿರಾಕರಿಸಿದರು. ಅವರೇ ಬೇಯಿಸಿಕೊಂಡು ಉಂಡು ಜೀವನಕ್ಕೆ ಎಷ್ಟು ಬೇಕೊ ಅಷ್ಟೆ ದುಡ್ಡು ಉಳಿಸಿ, ಉಳಿದೆಲ್ಲ ಸಂಪಾದನೆಯನ್ನೂ ಶಾಲೆ, ಹಾಸ್ಟೆಲಿಗೇ ಹಾಕುವ ಮೌನ ಕಾಯಕಜೀವಿಗಳು.
————————–
ಇಂಥ ಎಷ್ಟು ಮಂದಿ ಅನುಕರಣಯೋಗ್ಯರು ನಮ್ಮ ದೇಶದಲ್ಲಿ ಇದ್ದಾರೋ?. ಫರಿಚಯಿಸಿದಕ್ಕೆ ಧನ್ಯವಾದಗಳು.
Yes.. ಅವರ ಅವೆರಡೂ ಪುಸ್ತಕಗಳು (ಯೇಗ್ದಾಗೆಲ್ಲ ಐತೆ, ಮರೆಯಲಾದೀತೆ) ನಾನು ತುಂಬಾ ಇಷ್ಟಪಟ್ಟ ಪುಸ್ತಕಗಳು.. ನಾನು ಮನಸಿನಲ್ಲೇ ಆರಾಧಿಸುವ ವ್ಯಕ್ತಿಗಳಲ್ಲಿ ಕೃಷ್ಣಶಾಸ್ತ್ರಿಗಳೂ ಒಬ್ಬರು. ಸಲ್ಯೂಟ್!
I remembered the phrase “swakarmaNaa tvam abhyarchya siddhim vindatE maanavaaha”!, he’s exactly this phrase personified
97 ra harayadalli avariddaare,ta.su. shamaraayaru heLu vanthe avarondige iruvude ondu shikshana.
aarogya kseenisittu,eega sudhaariside.
Kaleshwara rao.n.9448944389
ಮೊನ್ನೆ ಈ ಹಿರಿಯರು ನಿಧನರಾದಾಗ ನನ್ನ ಬಳಿ ಈ ಸಂಗತಿಯನ್ನು ಹಂಚಿಕೊಂಡೆಯಲ್ಲ,ಆಗ ಮನಸ್ಸು ತುಂಬಿಬಂದಿತ್ತು