ಅಂದ ಹಾಗೆ ತೆಂಗಿನ ಮರ ಕಲ್ಪವೃಕ್ಷ ಅನ್ನುವುದು ತಪ್ಪು ಕಲ್ಪನೆ. ಭಾರತಕ್ಕೆ ಆಫ್ರಿಕಾದಿಂದ ಆಮದಾದ Adansonia digitata ಎಂಬ ಇನ್ನೊಂದು ಮರ ಇದೆ. ಇದು ಕಲ್ಪವೃಕ್ಷ. ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಮಾಡಿದರೆ ವಿಪುಲ ಮಾಹಿತಿ, ಫೋಟೋ ದೊರೆಯತ್ತದೆ.
ಕಲ್ಪವೃಕ್ಷ ಕಡಿದ ಪ್ರಸಂಗ (ನೋಡಿ http://wp.me/poV7D-ak ) ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಮೇಲಿನ ಈ ವಾಕ್ಯ ಕಳಿಸಿದವರು ಎ.ವಿ. ಗೋವಿಂದರಾಯರು.
Adansonia digitata ಮಾಹಿತಿ ಚೆನ್ನಾಗಿದೆ. ಆಫ್ರಿಕಾದಿಂದ ಬಂದ ಮರ, ಸಧ್ಯಕ್ಕೆ ನಮಗೆ ಕಾಣಲೂ ಸಿಗದೆ ಇರುವ ಕಾರಣ, ಈಗ ತೆಂಗಿಗೇ ಕಲ್ಪವೃಕ್ಷದ ದರ್ಜೆ ನೀಡುವುದು ಉಚಿತವಲ್ಲವೇ? ಹೀಗೆ ಪ್ರತಿಕ್ರಿಯಿಸಿದವಳು ಸಿಂಧೂ. ಅವಳ ಮಾತಿಗೇ ನನ್ನ ಸಹಮತ.
ಅದೇನೇ ಇರಲಿ. ಕಲ್ಪವೃಕ್ಷ ಎಂದೊಡನೆ ನಮಗೆ ತಟ್ಟನೆ ನೆನಪಿಗೆ ಬರುವುದು ತೆಂಗಿನಮರ ಎಂದೇ. ಗೂಗಲಿನಲ್ಲೇ ಏನೇ ಮಾಹಿತಿ ಇರಲಿ. ಆದರೆ ಕಲ್ಪವೃಕ್ಷ ಅಂದರೆ ತೆಂಗಿನಮರವೇ ಸರಿ. ತೆಂಗಿನಮರದಿಂದ ಏನೆಲ ಉಪಯೋಗ ಎಂದು ನೋಡೋಣ:
ತೆಂಗಿನ ಮಡಲಿನಿಂದ ಕಸ ಗುಡಿಸಲು ಪೊರಕೆ, ಉರುವಲಾಗಿ, ಚಪ್ಪರ ಹಾಕಲು, ಸೂಟೆಯಾಗಿ, ಯಾವುದಿಲ್ಲದೆ ಇದ್ದರೂ ಗೊಬ್ಬರವಾಗಿ ಬಳಸುತ್ತೇವೆ. ತೆಂಗು ಎಳೆಯದಾಗಿದ್ದಾಗ ಏಳನೀರು, ಬಲಿತರೆ ತೆಂಗಿನಕಾಯಿ, ಒಣಗಿದರೆ ಕೊಬ್ಬರಿಯಾಗಿ ಉಪಯೋಗ. ತೆಂಗು ಇಲ್ಲದೆ ಅಡುಗೆಗೆ ರುಚಿ ಇಲ್ಲ. ಚಟ್ನಿ, ಸಾಂಬಾರ್, ಮಜ್ಜಿಗೆಹುಳಿ, ಪಾಯಸ ಇತ್ಯಾದಿ ಮಾಡಲು ತೆಂಗು ಅವಶ್ಯಕ. ಕೊಬ್ಬರಿಯಿಂದ ಎಣ್ಣೆ ಸಿಗುತ್ತದೆ. ಮಳೆಗಾಲದಲ್ಲಿ ಹಲಸಿನ ಹಪ್ಪಳ ಸುಟ್ಟು ಅದಕ್ಕೆ ತೆಂಗಿನ ಎಣ್ಣೆ ಸವರಿ ಅದನ್ನು ತಿನ್ನುತ್ತ ಮಳೆ ನೋಡುತ್ತಿದ್ದರೆ ಸಿಗುವ ಆನಂದವನ್ನು ಇಲ್ಲಿ ವರ್ಣಿಸಲು ಅಸಾಧ್ಯ! ತೆಂಗಿನೆಣ್ಣೆಯಲ್ಲಿ ಹಪ್ಪಳ ಹುರಿದರೂ ರುಚಿ ಆಗುತ್ತದೆ. ಇಂಗು ತೆಂಗು ಇದ್ದರೆ ಮಂಗು ಕೂಡ ಅಡುಗೆ ಮಾಡುತ್ತದೆ ಎಂಬ ನಾಣ್ನುಡಿ ಇದೆ.
ತೆಂಗಿನ ಕೊತ್ತಳಿಗೆ ನೀರು ಕಾಯಿಸಲು ಉರುವಲಾಗಿ ಬಳಕೆಯಾಗುತ್ತದೆ. ನಾವು ಚಿಕ್ಕವರಾಗಿದ್ದಾಗ ಕೊತ್ತಳಿಗೆಯೇ ನಮಗೆ ಕ್ರಿಕೆಟ್ ಆಡಲು ಬ್ಯಾಟ್ ಆಗಿ ಉಪಯೋಗಿಯಾಗಿತ್ತು. ತೆಂಗಿನ ಸಿಪ್ಪೆ ಉರುವಲಿಗಾಗಿ, ಚಾಪೆ, ಕಾಲೊರಸು ಇತ್ಯಾದಿ ಉಪಯೋಗ. ಕರಟದಿಂದ ಎಣ್ಣೆ (ಇದು ಚರ್ಮರೋಗಕ್ಕೆ ರಾಮಬಾಣ), ಇದ್ದಿಲು, (ಸಾರು ಅಡಿ ಹಿಡಿಯದೆ ಇರಲು ಸಾರಿನೊಳಗೆ ಕರಟ ಹಾಕುವುದನ್ನು ನೋಡಿದ್ದೇನೆ.), ನೀರೊಲೆಗೆ ಉರುವಲಾಗಿ ಉಪಯೋಗವಾಗುವುದನ್ನು ಕಾಣಬಹುದು. ಇನ್ನು ಒಂದು ತೆಂಗಿನಮರ ಸತ್ತರೆ ಅದರಿಂದ ಪಕಾಸು, ಸೌದೆಯಾಗಿ ಉಪಯೋಗವಿದೆ. ಸಸಿ ನೆಡಲು ಕೂಡ ಬಳಸುವುದನ್ನು ಕಾಣಬಹುದು. ತೆಂಗಿನ ಎಲ್ಲ ತ್ಯಾಜ್ಯಗಳೂ ಉರುವಲಾಗಿ ಬಳಕೆಯಾಗುತ್ತದೆ.
ಹಾಗಾಗಿ ಸದ್ಯಕ್ಕೆ ತೆಂಗಿನಮರವೇ ನಮಗೆ ಕಲ್ಪವೃಕ್ಷವಾಗಿರಲಿ. ಬೇರೆ ಮರ ಏನಿದ್ದರೂ ಅದು ಆಫ್ರಿಕನ್ನರಿಗೆ ಮೀಸಲಾಗಿರಲಿ. ಕಲ್ಪವೃಕ್ಷದಿಂದ ಏನೆಲ್ಲ ಉಪಯೋಗಗಳನ್ನು (ಇನ್ನೂ ಹಲವು ಉಪಯೋಗಗಳು ಇರಬಹುದು. ನನ್ನ ಗಮನಕ್ಕೆ ಬಂದ, ನೆನಪಿಗೆ ಬಂದದ್ದನ್ನು ಇಲ್ಲಿ ದಾಖಲಿಸಿದ್ದೇನಷ್ಟೆ.) ನಾವು ಪಡೆಯುತ್ತೇವೆ ಎಂದು ನೆನಪು ಮಾಡಲು ಅವಕಾಶ ಒದಗಿಸಿದ ಗೋವಿಂದರಾಯರಿಗೆ ವಂದನೆಗಳು.
ಪ್ತತಿಯೊಬ್ಬರಿಗೂ ಅವರದೇ ಆದ ನಿಲುವು ತಳೆಯಲು ಇರುವ ಸ್ವಾತಂತ್ರ್ಯವನ್ನು ಗೌರವಿಸುತ್ತೇನೆ.
ಆದರೂ ರಾಜಾಸ್ಥಾನದಲ್ಲಿ ಪೂಜಿಸುತ್ತಿರುವ ಕಲ್ಪವೃಕ್ಷ: http://upload.wikimedia.org/wikipedia/commons/a/a6/Kalpvriksha.jpg
ಉತ್ತರಾಂಚಲದ ಜೋಷಿಮಠದಲ್ಲಿ ಅಶ್ವತ್ಥ ಮರವನ್ನು ಅಲ್ಲಿನವರು ಕಲ್ಪವೃಕ್ಷ ಎಂದು ಪೂಜಿಸುತ್ತಾರಂತೆ. ದ ಕ್ಷಿಣ ಭಾರತದ ಕರಾಔಳಿಯವರಿಗೆ ತೆಂಗಿನ ಮರವೇ ಕಲ್ಪವೃಕ್ಷ. ಪುರಾತನ ದೇವಾಲಯಗಳಲ್ಲಿ ಇರುವ ಕೆತ್ತನೆಗಳನ್ನು ಆಧರಿಸಿ ಮತ್ತು ಪುರಾಣಗಳಲ್ಲಿ ಇರುವ ವರ್ಣಬೆಗಳನ್ನು ಆಧರಿಸಿ ಮಾಡಿದ ಸಂಶೋಧನೆಗಳು ಒದಗಿಸಿರುವುದು ನಾನು ಹೆಸರಿಸಿದ ವೃಕ್ಷ. ಭಾರತದಲ್ಲಿ ಅನೇಕ ಕಡೆ ಇದು ಇಂದೂ ಇದೆ. ಇರುವೆಡೆಗಳಲ್ಲಿ ಅದನ್ನು ಕಲ್ಪವೃಕ್ಷವೆಂದೇ ಜನ ಪೂಜಿಸುತ್ತಾರೆ.
ಎ.ಪಿ. ಚಂದ್ರಶೇಖರ ಹೇಳಿದ ತೆಂಗಿನ ಕಣ್ಣು ಇಲ್ಲಿ ಸ್ಮರಿಸಬಹುದು. ಮತ್ತು ಈಚೆಗೆ ನಡೆದ ಗೆಡ್ಡೆ ತರಕಾರಿಗಳ ಮೇಳದಲ್ಲಿ ಅವನು ಪ್ರಚಾರಕ್ಕೆ ಬಿಟ್ಟಿರುವ ತೆಂಗಿನ ಗೆಡ್ಡೇ (?) ನಗರೀಕರಣದ ಅಲೆಯಲ್ಲಿ ತೆಂಗಿನ ತೋಪುಗಳು ನೆಲಸಮವಾಗುವಾಗಲಾದರೂ ತತ್ಕಾಲೀನ ಆಹಾರಮೌಲ್ಯ ಏರಿಸಿಕೊಳ್ಳುವುದನ್ನು ಎಲ್ಲರೂ ಅವಶ್ಯ ಯೋಚಿಸಬಹುದು.
Good