ವಿಶಾಲ ಬದರಿ
ಜೋಷಿಮಠದಿಂದ ೨೦-೯-೨೦೧೬ರಂದು ಹೊರಟು ೧೨ಗಂಟೆಗೆ ವಿಶಾಲಬದರಿ ತಲಪಿದೆವು. ಕೇದಾರನಾಥದಿಂದ (ಗೌರಿಕುಂಡ) ಬದರಿನಾಥ ಸುಮಾರು ೨೩೩ ಕಿ.ಮೀ. ದೂರದಲ್ಲಿದೆ. ರಿಷಿಕೇಶದಿಂದ ೩೦೧ ಕಿ.ಮೀ. ದೂರ. ಬದರಿ ಸಮುದ್ರಮಟ್ಟದಿಂದ ೧೦೩೫೦ ಅಡಿ ಎತ್ತರದಲ್ಲಿದೆ.
ಅಲ್ಲಿಯ ದೀಪಕ್ ವಸತಿಗೃಹದಲ್ಲಿ ಲಗೇಜು ಇಟ್ಟು ೧೨.೪೫ಕ್ಕೆ ವಾಪಾಸು ಬಸ್ ಹತ್ತಿ ಮಾನಾದೆಡೆಗೆ ಸಾಗಿದೆವು.
ಭಾರತದ ಕಟ್ಟಕಡೆಯ ಹಳ್ಳಿ ಮಾನಾ
ಈ ಯಾತ್ರೆ ಹೊರಡುವ ಮುನ್ನ, ಮಾನಾ ಹಳ್ಳಿಗೆ ಹೋಗಲಿದೆಯಾ ಎಂದು ಕೇಳಿಕೊಂಡಿದ್ದೆ. ಅದೇನೋ ಈ ಹಳ್ಳಿಯನ್ನು ನೋಡಲೇಬೇಕೆಂದು ಬಹಳ ಕುತೂಹಲವಿತ್ತು. ಆ ಆಸೆ ನೆರವೇರಿತು. ಬದರಿಯಿಂದ ಮಾನಾಗೆ ೪ ಕಿಮೀ ಇದೆ. ಭಾರತದ ಕೊನೆಯ ಹಳ್ಳಿ. ಅಲ್ಲಿಂದ ಮುಂದೆ ಚೀನಾ ಟಿಬೆಟ್ ಸರಹದ್ದು ಪ್ರಾರಂಭವಾಗುತ್ತದೆ. ಆ ಗಡಿಭಾಗದಲ್ಲಿ ಸೇನಾವಾಹನಕ್ಕೆ ಮಾತ್ರ ಪ್ರವೇಶಾವಕಾಶ. ನಾವು ಮಾನಾ ತಲಪುವಾಗ ಗಂಟೆ ಒಂದು ಆಗಿತ್ತು. ಹಳ್ಳಿಯಲ್ಲಿ ಸುತ್ತಿದಾಗ ಮನೆಮುಂದೆ ಕೆಲವರು ಉಣ್ಣೆ ಬೇರ್ಪಡಿಸುತ್ತಿರುವುದು, ಹೆಂಗಸರು ಸ್ವೆಟರ್ ತಯಾರಿಸುತ್ತ ಕೂತಿರುವುದು, ಸ್ವೆಟರ್ ಮಾರಾಟ ಮಾಡುತ್ತ ಇರುವುದು ಕಂಡಿತು. ಮಾನಾ ಹಳ್ಳಿಯಲ್ಲಿ ವರ್ಷದ ಆರು ತಿಂಗಳು ಮಾತ್ರ ಜನವಸತಿ ಇರುತ್ತದೆ. ಚಳಿಗಾಲದಲ್ಲಿ ವಿಪರೀತ ಹಿಮದಿಂದಾಗಿ ಅವರು ತಮ್ಮ ಸಾಕುಪ್ರಾಣಿ, ಜಾನುವಾರುಗಳೊಂದಿಗೆ (ಸಾಕಷ್ಟು ದನಕರುಗಳು ಅಲ್ಲಿ ಇದ್ದುದನ್ನು ಕಂಡೆವು) ಸುರಕ್ಷಿತ ಸ್ಥಳಕ್ಕೆ ವಸತಿ ಬದಲಾಯಿಸುತ್ತಾರೆ. ಅದೆಂತ ಜೀವನ ಅವರದು. ಒಂದು ವರ್ಷವಲ್ಲ, ಜೀವನಪರ್ಯಂತ ಇದೇ ವ್ಯವಸ್ಥೆಯಲ್ಲೇ ಬದುಕಬೇಕು. ಜೀವನೋಪಾಯಕ್ಕಾಗಿ ಕೃಷಿ, ಸ್ವೆಟರು ತಯಾರಿಸುವ, ಹೊಟೇಲು ನಡೆಸುವ ವೃತ್ತಿ ಅವರದು.
ವ್ಯಾಸ ಗುಹೆ, ಗಣೇಶ ಗುಹೆ,
ಮಾನಾದಲ್ಲಿ ವ್ಯಾಸಗುಹೆ, ಗಣೇಶ ಗುಹೆ ನೋಡಿದೆವು. ವ್ಯಾಸರು ಮಹಾಭಾರತ ಕಥೆ ಹೇಳುವಾಗ ಅದನ್ನು ಗಣಪತಿ ಬರೆದುಕೊಳ್ಳುತ್ತಿದ್ದ ಸ್ಥಳವಂತೆ.
ಪ್ರತೀತಿಯಲ್ಲಿರುವ ಕಥೆ: ವೇದವ್ಯಾಸರು ಮಹಾಭಾರತ ಗ್ರಂಥದ ರಚನೆ ಇಲ್ಲಿಯೇ ಕುಳಿತು ಮಾಡಿದರೆಂಬುದು ಪುರಾಣದ ಕಥೆ. ವ್ಯಾಸರು ಕಥೆ ಹೇಳುವುದನ್ನು ಬರೆದುಕೊಳ್ಳಲು ಗಣೇಶನಲ್ಲಿ ಕೇಳಿದಾಗ, ಅದಕ್ಕೆ ಗಣೇಶ ಸಮ್ಮತಿಸಿ ಒಂದು ಷರತ್ತು ವಿಧಿಸುತ್ತಾನೆ. ಮಧ್ಯೆ ಎಲ್ಲೂ ನಿಲ್ಲಿಸದೆ ಎಡೆಬಿಡದೆ ಹೇಳಿದರೆ ಮಾತ್ರ ಬರೆದುಕೊಳ್ಳುತ್ತೇನೆ. ಮಧ್ಯೆ ಹೇಳುವುದನ್ನು ನಿಲ್ಲಿಸಿದರೆ ನಾನೂ ಬರೆದುಕೊಳ್ಳುವುದನ್ನು ನಿಲ್ಲಿಸಿಬಿಡುತ್ತೇನೆ. ಗಣಪತಿಯ ಈ ಷರತ್ತಿಗೆ ವ್ಯಾಸರು ಒಪ್ಪಿ, ಎಲ್ಲೂ ನಿಲ್ಲಿಸದೆ ಕಥೆ ಹೇಳಲು ಪ್ರಾರಂಭಿಸಿ ಅದನ್ನು ಗಣೇಶ ಬರೆದುಕೊಂಡನು. (ವ್ಯಾಸ ಗುಹೆ ಹಾಗೂ ಗಣೇಶ ಗುಹೆ ಇರುವ ಸ್ಥಳ ಎರಡೂ ತುಂಬ ಹತ್ತಿರ ಇಲ್ಲ. ಆದರೂ ಹೇಗೆ ವ್ಯಾಸರು ಹೇಳಿದ ಕಥೆ ಗಣೇಶನಿಗೆ ಕೇಳಿಸಿತೊ ಗೊತ್ತಿಲ್ಲ! ಗಣೇಶನ ಕಿವಿ ತುಂಬ ದೊಡ್ಡದಿರುವುದರಿಂದ ಕಿವಿಯ ಕ್ಷಮತೆ ಹೆಚ್ಚಿದ್ದಿರಬಹುದು ಹಾಗಾಗಿ ಅಷ್ಟು ದೂರದಿಂದ ಹೇಳಿದ್ದೂ ಕೇಳಿಸಿರಬಹುದು ಎಂದು ಭಾವಿಸೋಣ!) ವ್ಯಾಸರು ಮಹಾಭಾರತದ ಕಥೆ ಹೇಳಲು ಗಣೇಶ ಅದನ್ನು ಬರೆದುಕೊಳ್ಳುತ್ತಿರಬೇಕಾದರೆ ಸರಸ್ವತೀನದಿಯ ಭೋರ್ಗರೆತದಿಂದ ಗಣೇಶನಿಗೆ ಸರಿಯಾಗಿ ಕೇಳದೆ ಇದ್ದದ್ದರಿಂದ ವ್ಯಾಸರು ಸಿಟ್ಟುಗೊಂಡು ಸರಸ್ವತಿಗೆ ಗುಪ್ತಗಾಮಿನಿಯಾಗಿ ಹರಿ ಎಂದು ಶಾಪಕೊಟ್ಟರಂತೆ. ಮುಂದೆ ಸರಸ್ವತೀ ಗುಪ್ತಗಾಮಿನಿಯಾಗಿ ಹರಿದಳಂತೆ. ಅಲ್ಲಿ ಅಲಕನಂದನದಿಗೆ ಸರಸ್ವತೀನದಿ ಸೇರಿಕೊಂಡು ಹರಿದು ಸಂಗಮವಾಗುವುದನ್ನು ನೋಡಿದೆವು.
ಇಲ್ಲಿ ವ್ಯಾಸ ಗುಹೆಯಲ್ಲಿ ವ್ಯಾಸರ ಮೂರ್ತಿ ಇದೆ. ಹಾಗೆಯೇ ಗಣೇಶ ಗುಹೆಯಲ್ಲಿ ಗಣೇಶನ ಮೂರ್ತಿ ಇದ್ದು, ಪೂಜೆ ನಡೆಯುತ್ತದೆ.
ಭೀಮಶಿಲೆ, ಭೀಮಪೂಲ್
ಮುಂದೆ ಹೋದಂತೆ ಬೃಹತ್ತಾದ ಭೀಮಶಿಲೆ ಕಾಣುತ್ತದೆ. ಅಲ್ಲಿ ಸರಸ್ವತೀನದಿ ಜೋರಾಗಿ ಹರಿಯುತ್ತ ಜಲಪಾತದಂತೆ ಕಾಣುತ್ತದೆ. ಆ ಮಧ್ಯಾಹ್ನ ಭೀಮಪೂಲಿನಲ್ಲಿ ಕಾಮನಬಿಲ್ಲು ಮೂಡಿ ಸುಂದರವಾಗಿ ಕಾಣುತ್ತಿತ್ತು. ಭೀಮಶಿಲೆ ಬಗ್ಗೆ ಕಥೆ ಹೀಗಿದೆ: ಕುರುಕ್ಷೇತ್ರ ಯುದ್ಧದಲ್ಲಿ ಅಪಾರ ಸಾವುನೋವುಗಳು ಆಗಿತ್ತಷ್ಟೆ. ಪಾಂಡವರು ಪ್ರಾಣಹತ್ಯಾ ದೋಷ ನಿವಾರಣೆಗಾಗಿ ಶಿವನನ್ನು ಅರಸುತ್ತ ಬರುತ್ತಿದ್ದಾಗ, ಸರಸ್ವತೀನದಿಯನ್ನು ದಾಟಬೇಕಾಗಿ ಬರುತ್ತದೆ. ಸರಸ್ವತಿಯ ಮಡಿಲಲ್ಲಿ ಕಾಲು ಊರಲು ಮನಸ್ಸಾಗದೆ, ನದಿ ದಾಟಲು ಭೀಮ ದೊಡ್ಡದಾದ ಬಂಡೆಯನ್ನೊಂದನ್ನು ಸರಸ್ವತೀನದಿಗೆ ಅಡ್ಡಲಾಗಿ ನಿಲ್ಲಿಸಿದನಂತೆ. ಭೀಮನ ಕೈ ಬೆರಳುಗಳ ಗುರುತುಗಳಿವೆ ಎಂದು ಅಲ್ಲಿರುವ ಚಿಕ್ಕ ಸೇತುವೆಯಂತೆ ನಿಂತಿರುವ ಒಂದು ದೊಡ್ಡದಾದ ಬಂಡೆಯನ್ನು ತೋರಿಸುತ್ತಾರೆ. ಅಲ್ಲೇ ಪಕ್ಕದಲ್ಲಿ ಭಾರತದ ಕೊನೆಯ ಚಹಾ ದುಖಾನೆ ಎಂಬ ಫಲಕವಿರುವ ಅಂಗಡಿ ಇದೆ. ಅಲ್ಲಿಗೆ ಹಳ್ಳಿ ಕೊನೆಯಾಗುತ್ತದೆ. ಇಲ್ಲಿ ಸರಸ್ವತಿಯ ಚಿಕ್ಕ ಮಂದಿರವಿದೆ. ಇಲ್ಲಿಂದ ಬಗ್ಗಿ ನೋಡಿದರೆ ನಮಗೆ ರಭಸದಿಂದ ಹರಿಯುತ್ತಿರುವ ಸರಸ್ವತೀನದಿ ಕಾಣುತ್ತದೆ. ಸುತ್ತ ಹಸಿರು ಹೊತ್ತ ಬೆಟ್ಟ ಸಾಲುಗಳು ಬಲು ಸುಂದರವಾಗಿ ಕಾಣುತ್ತದೆ.
ಅದನ್ನು ನೋಡಿ ಅಲ್ಲಿಂದ ನಾವು ಹಾಗೇ ಮುಂದುವರೆದು ವಸುಧಾರಾ ಫಾಲ್ಸ್ ಕಡೆಗೆ ಹೆಜ್ಜೆ ಹಾಕಿದೆವು.
ವಸುಧಾರಾ ಫಾಲ್ಸ್
ಮಾನಾದಿಂದ ಸುಮಾರು ೫ ಕಿಮೀ ನಡೆದರೆ ವಸುಧಾರಾ ಫಾಲ್ಸ್ ಸಿಗುತ್ತದೆ. ಬಿರುಸಾಗಿ ನಡೆಯಲು ಸಾಧ್ಯವಾದವರು ಮಾತ್ರ ಇಲ್ಲಿಗೆ ಬರತಕ್ಕದ್ದು ಎಂದು ವಿಠಲರಾಜು ಕಟ್ಟುನಿಟ್ಟಾಗಿ ಹಿಂದಿನ ದಿನವೇ ಹೇಳಿದ್ದರು. ಸವಿತಾ, ಶಶಿಕಲಾ, ರಂಗಪ್ರಸಾದ, ಲತಾ, ರುಕ್ಮಿಣಿಮಾಲಾ, ಪೂರ್ಣಿಮಾ, ಸರೋಜ, ಶೋಭಾ, ವಿಠಲರಾಜು ಒಂಬತ್ತು ಮಂದಿ ಮಾತ್ರ ಭೀಮಪೂಲಿನಿಂದ ಮುಂದೆ ಹೆಜ್ಜೆ ಹಾಕಿದೆವು. ಬಾಕಿದ್ದವರೆಲ್ಲ ಮಾನಾ ಹಳ್ಳಿಯಲ್ಲೆ ಉಳಿದರು. ಅವರು ಹಳ್ಳಿ ಸುತ್ತಿ ವಿಸ್ತಾರವಾಗಿ ನೋಡಿ ಖುಷಿಪಟ್ಟರಂತೆ.
ನಾವು ನಡೆದೆವು ನಡೆದೆವು. ನಡೆದಷ್ಟೂ ಮುಗಿಯುವುದೇ ಇಲ್ಲ. ದೂರದಲ್ಲಿ ಒಮ್ಮೆ ಫಾಲ್ಸ್ ಕಂಡು ಓಹೋ ಇನ್ನು ದೂರವಿಲ್ಲ, ಕಾಣುತ್ತಲ್ಲ ಜಲಪಾತ ಅಂತ ಖುಷಿಯಿಂದ ಹೆಜ್ಜೆ ಹಾಕುತ್ತಿದ್ದೆವು. ಆದರೆ ಮುಂದೆ ಸಾಗಿದಂತೆಲ್ಲ ಜಲಪಾತ ಮಾಯ. ಎಷ್ಟೋ ದೂರವಿದೆ ಅದು. ನಡೆಯುವ ದಾರಿಯನ್ನು ಅಲ್ಲೇ ಲಭ್ಯವಿದ್ದ ಕಲ್ಲು ಹಾಕಿ ದಾರಿ ಚೆನ್ನಾಗಿ ಮಾಡಿದ್ದಾರೆ. ಕಲ್ಲುಗಳಿಗೆ ಅಲ್ಲಿ ಬರವಿಲ್ಲ. ದಾರಿ ಬದಿ ವಿಧವಿಧ ಹೂಗಳು ಕಾಣಿಸಿತು. ಬಂಡೆಗಲ್ಲುಗಳಲ್ಲಿ ಬಣ್ಣಬಣ್ಣದ ಪಾಚಿಯಂತೆ ಕಾಣುವ ಸಸ್ಯ. ಬೇರೆ ಬೇರೆ ಬಣ್ಣದ ಬಂಡೆಗಲ್ಲುಗಳು ಇದ್ದುವು. ದಾರಿಯುದ್ದಕ್ಕೂ ಕೆಳಗೆ ಅಲಕನಂದ ನದಿ ಹರಿಯುವುದು ಕಾಣುತ್ತದೆ. ಸುತ್ತಲೂ ಪರ್ವತಗಳಿದ್ದು, ಕುರುಚಲು ಸಸ್ಯಗಳಿವೆ. ದೊಡ್ಡ ಮರಗಳಿಲ್ಲ. ಬೆಟ್ಟಗಳು ಹಿಮದಿಂದ ಕೂಡಿ ಸುಂದರವಾಗಿ ಕಾಣುತ್ತಿತ್ತು.
ಜಲಪಾತ ನೋಡಿ ಹಿಂದಿರುಗುತ್ತಿದ್ದವರನ್ನೆಲ್ಲ ಕೇಳುತ್ತಿದ್ದೆವು. ಇನ್ನು ಎಷ್ಟು ದೂರ ಇದೆಯೆಂದು. ಕೆಲವರು, ಇನ್ನು ಸ್ವಲ್ಪ ಅಷ್ಟೆ ಎಂದರೆ, ಇನ್ನು ಕೆಲವರು ನೀವೀಗ ಅರ್ಧ ದಾರಿ ಬಂದಿರಷ್ಟೆ. ಇನ್ನೂ ಸುಮಾರು ದೂರ ಹೋಗಬೇಕು ಅಂತ ಹೇಳುತ್ತಿದ್ದರು. ವಯಸ್ಸಾದ ಹೆಂಗಸರು ಫಾಲ್ಸ್ ನೋಡಿ ವಾಪಾಸು ಬರುತ್ತಿದ್ದದ್ದು ಮುಂದೆ ನೋಡಿ ನಡೆಯಲು ಸ್ಫೂರ್ತಿ ಬಂತು. ಈ ಕಲ್ಲು ದಾರಿಯಲ್ಲಿ ಬರಿಕಾಲಿನಲ್ಲಿ ನಡೆಯುತ್ತಿದ್ದ ಅವರನ್ನು ನೋಡಿ ಅಬ್ಬ ಇವರ ಸಾಹಸವೇ ಎನಿಸಿತು! ಅವರು ರಾಜಸ್ಥಾನದಿಂದ ಬಂದದ್ದಂತೆ. ಅಲ್ಲಿ ದಿನಾ ಸಾಕಷ್ಟು ದೂರದಿಂದ ನೀರು ಹೊತ್ತು ನಡೆದು ಅವರಿಗೆ ಅಭ್ಯಾಸವಿರಬಹುದು ಎಂದು ಭಾವಿಸಿಕೊಂಡೆ. ಮುಂದೆ ನಡೆದಂತೆ ಆಯಾಸವಾಗಿ, ಉಸಿರಾಟ ಕಷ್ಟವೆನಿಸುತ್ತಿತ್ತು. ಆದರೂ ಮುಂದೆ ಗುರಿ ಇರುವುದರಿಂದ ಅಲ್ಲಿ ಹೋಗಿ ತಲಪಲೇಬೇಕೆಂಬ ಅದಮ್ಯ ಉತ್ಸಾಹ ಬರಿಸಿಕೊಳ್ಳುತ್ತ ಮುಂದಕ್ಕೆ ಕಾಲು ಎತ್ತಿ ಹಾಕುತ್ತಿದ್ದೆವು. ಇದನ್ನು ಆಗಾಗ ಆಘ್ರಾಣಿಸಿ ಉಸಿರಾಟ ಸುಲಭವಾಗುತ್ತದೆ ಎಂದು ವಾಪಾಸು ಬರುತ್ತಿದ್ದ ಹೆಂಗಸೊಬ್ಬಳು ನನಗೆ ಕರ್ಪೂರ ಕೊಟ್ಟಳು. ಉಸ್ ಎಂದು ಕಷ್ಟವಾಗುವಾಗ ಆಗಾಗ ಅದನ್ನು ಮೂಸುತ್ತ ನಡೆದೆ. ಅಲ್ಲಿರುವ ಒಂದು ಸಸ್ಯವನ್ನು ಮೂಸಿದರೂ ಉಸಿರಾಟ ಸರಾಗವಾಗಿ ಆಗುತ್ತದೆ ಎಂದು ವಿಠಲರಾಜು ಆ ಸಸ್ಯ ತೋರಿಸಿದರು. ವಿಶಿಷ್ಟ ಪರಿಮಳವಿತ್ತದು. ಸಮುದ್ರಮಟ್ಟದಿಂದ ವಸುಧಾರಾ ಫಾಲ್ಸ್ ೧೩೦೦೦ ಅಡಿ ಮೇಲಿದೆ.
ಮೊದಮೊದಲು ಉತ್ಸಾಹ ಜಾಸ್ತಿಯಾಗಿದ್ದು, ಪ್ರಕೃತಿ ಸೌಂದರ್ಯವನ್ನು ನೋಡುತ್ತಲೇ, ಒಂದು ಹೂ ಕಂಡರೂ ಅದನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸುತ್ತ, ಬಂಡೆಕಲ್ಲು ಕಂಡರೂ ಆಹಾ ಎಷ್ಟು ಚಂದ ಇದೆ ಇದು ಎಂದು ಪೂರ್ಣಿಮಳಿಗೆ ತೋರಿಸುತ್ತ ಸಾಗುತ್ತಿದ್ದೆ. ಮುಂದೆ ಸಾಗುತ್ತಿದ್ದಂತೆ ಕ್ಯಾಮರಾ ಚೀಲದೊಳಗೆ ಸೇರಿತು. ಫೋಟೋ ತೆಗೆಯುವುದೂ ಬೇಡ, ಒಮ್ಮೆ ಅಲ್ಲಿ ತಲಪಿದರೆ ಸಾಕು ಅನಿಸಲು ತೊಡಗಿತು. ಒಮ್ಮೆ ಬೆಟ್ಟ ಹತ್ತಿದರೆ ಮತ್ತೆ ಇಳಿಯಬೇಕು. ಹತ್ತಿ ಉಸ್ ಎಂದು ನಿಂತು ಸುಧಾರಿಸಿ ಮುಂದೆ ನಡೆಯುತ್ತಿದ್ದೆವು. ಹೀಗೆ ಕಠಿಣವಾದ ದಾರಿ. ಪೂರ್ಣಿಮಾ ನಿಮ್ಮ ಹೆಸರನ್ನು ಪೂರ್ತಿ ಹೇಳಲೂ ಆಗದಷ್ಟು ಸುಸ್ತು. ಹಾಗೆ ಪೂರ್ಣಿ ಎನ್ನುತ್ತೇನೆ ಎಂದು ಆ ಸುಸ್ತಿನಲ್ಲೂ ತಮಾಷೆ ಮಾಡುತ್ತಿದ್ದೆ. ಹಾಗೆಯೇ ಹೇಳಿ. ಮನೆಯಲ್ಲಿ ಎಲ್ಲರೂ ನನ್ನನ್ನು ಹಾಗೆಯೇ ಕರೆಯುವುದು ಎಂದು ಅವರೂ ಉಸ್ ಎಂದು ಉಸಿರು ಬಿಡುತ್ತ ಸಮ್ಮತಿಸಿದರು!
ಊಟ ಮಾಡದೆ ನಾವು ಚಾರಣ ಹೊರಟದ್ದು. ಹೊಟ್ಟೆಯೂ ಹಸಿಯಲು ತೊಡಗಿ ಸುಸ್ತು ಹೆಚ್ಚಾಯಿತು. ಚೀಲದಲ್ಲಿ ನಾಲ್ಕು ಸೇಬು, ಬಾದಾಮಿ ಇತ್ತು. ಒಂದು ಸೇಬು, ನಾಲ್ಕಾರು ಬಾದಾಮಿ ತಿಂದದ್ದೇ ದೇಹ ಚೈತನ್ಯ ಪಡೆಯಿತು. ಮುಂದೆ ನಡೆಯಲು ಶಕ್ತಿ ನೀಡಿತು. ನನ್ನೊಡನೆ ಇದ್ದವರಿಗೆಲ್ಲ ಸೇಬು, ಬಾದಾಮಿ ಕೊಟ್ಟೆ. ಹಸಿವು ಆದರೆ ದೇಹದಲ್ಲಿ ತ್ರಾಣವೇ ಇರುವುದಿಲ್ಲ, ಹಸಿವೆಂದರೆ ಹೇಗಿರುತ್ತದೆ ಎಂಬುದು ಅಲ್ಲಿ ಮನವರಿಕೆಯಾಯಿತು. ಅಂತೂ ನಾಲ್ಕು ಗಂಟೆಗೆ ವಸುಧಾರಾ ಫಾಲ್ಸ್ ಬಳಿ ತಲಪಿಯೇ ಬಿಟ್ಟೆವು. ನಾಲ್ಕು ಮಂದಿ ೩.೩೦ಕ್ಕೇ ತಲಪಿದರು. ಶೋಭಾ ಮುಕ್ಕಾಲು ದಾರಿ ಕ್ರಮಿಸಿದವರು ಕಡೇ ಘಳಿಗೆಯಲ್ಲಿ ಹಿಂದಕ್ಕೇ ವಾಪಾಸಾದರು. ವಾಪಾಸು ಹೋಗಲು ತುಂಬ ತಡವಾದೀತು, ತನ್ನಿಂದ ಇತರರಿಗೆ ತೊಂದರೆಯಾಗುವುದು ಬೇಡ ಎಂದು ಅವರು ಹಿಂದೆ ಹೋಗುವ ತೀರ್ಮಾನ ಮಾಡಿದ್ದಂತೆ.
ವಸುಧಾರಾ ಫಾಲ್ಸ್ ಬಲು ಎತ್ತರದ ಬೆಟ್ಟದಿಂದ ಕೆಳಗೆ ಅಲೆಅಲೆಯಾಗಿ ಧುಮುಕುತ್ತದೆ. ಓಹ್ ಎಂಥ ಸೌಂದರ್ಯವದು. ಮೇಲೆ ನಿಂತಿದ್ದ ನಮ್ಮ ಮುಖದತ್ತ ನೀರಿನ ಅಲೆಗಳು ಗಾಳಿಯಲ್ಲಿ ಸೋಕಿದಾಗ ಆಹಾ ಇಲ್ಲಿ ಬಂದದ್ದೂ ಸಾರ್ಥಕವೆನಿಸುವಂಥ ಭಾವ ಆ ಕ್ಷಣ ಮೂಡುತ್ತದೆ. ಅಲ್ಲಿ ನಮ್ಮ ಮುಖಕ್ಕೆ ನೀರು ಸೋಕದೆ ಇದ್ದರೆ ನಾವು ಏನೋ ಪಾಪ ಮಾಡಿದ್ದೇವೆಂದು ಪ್ರತೀತಿಯಲ್ಲಿದೆಯಂತೆ! ನಮ್ಮೆಲ್ಲರ ಮುಖಕ್ಕೂ ನೀರಹನಿ ಪನ್ನೀರಿನಂತೆ ಸೋಕಿತ್ತು. ಇದರಿಂದ ಸದ್ಯ ನಾವ್ಯಾರೂ ಯಾವ ಪಾಪವೂ ಮಾಡಿಲ್ಲವೆಂಬುದು ಖಾತ್ರಿಯಾಯಿತು!
ಅಷ್ಟವಸುಗಳು ಮೂವತ್ತು ಸಾವಿರ ವರ್ಷ ಇಲ್ಲಿ ತಪಸ್ಸು ಮಾಡಿದ್ದರಂತೆ. ಅಬ್ಬ ಅವರು ತಪಸ್ಸಿಗೆ ಕೂರಲು ಕಂಡುಹಿಡಿದ ಸ್ಥಳ ಎಂತದ್ದು ಮಾರಾಯ್ತಿ, ಮಾರಾಯ್ರೆ!
ಅಲ್ಲಿ ಭಾವಚಿತ್ರ ತೆಗೆಸಿಕೊಂಡೆವು. ನಾವು ಕೆಳಗೆ ನೀರಿನ ಬಳಿ ಇಳಿಯಲಿಲ್ಲ. ಇಳಿದರೆ ವಾಪಾಸು ಹೋಗಲು ತಡವಾಗುತ್ತದೆ. ೫ಕಿಮೀ ಹಿಂದಕ್ಕೆ ನಡೆಯಬೇಕಲ್ಲ. ಕತ್ತಲೆ ಆದರೆ ಇಲ್ಲಿ ನಡೆಯುವುದು ಕಷ್ಟ ಎಂದು ನಾವು ಕೇವಲ ಇಪ್ಪತೈದು ನಿಮಿಷ ಅಲ್ಲಿದ್ದು ೪.೨೫ಕ್ಕೆ ಹಿಂದಕ್ಕೆ ವಾಪಾಸು ನಡೆಯಲು ತೀರ್ಮಾನಿಸಿದೆವು.
ನಡೆದು ಬರುತ್ತಿರುವಾಗ ಹಿಮತುಂಬಿದ ಬೆಟ್ಟ ಬಲು ಸೊಗಸಾಗಿ ಕಾಣುತ್ತಿತ್ತು. ಪೂರ್ಣಿಮಾ ಹಾಗೂ ನಾನು ಅದನ್ನು ನೋಡುತ್ತಲೇ ಓಹೋ ಹಿಮಾಲಯ ಆಹಾ ಹಿಮಾಲಯ ಎಂದು ಹಾಡುಕಟ್ಟಿ ಹಾಡುತ್ತ ನಡೆದೆವು. ಹೋದಾಗ ಇದ್ದ ಸುಸ್ತು ಮಾಯವಾಗಿತ್ತು! ಬರುತ್ತ, ಕೆಳ ಭಾಗದಲ್ಲಿ ಸೇನೆಯ ಇಬ್ಬರು ತರುಣರು ಕಾವಲು ಕಾಯುತ್ತಿರುವುದನ್ನು ಕಂಡೆವು. ಚಳಿಮಳೆಗೂ ನಿರಂತರ ಕೆಲಸ ಮಾಡಬೇಕು ಅವರು. ಆ ನಿರ್ಜನ ಪ್ರದೇಶದಲ್ಲಿ ಅಷ್ಟು ದೂರದಲ್ಲಿ ಇಬ್ಬರೇ ನಿಂತು ಸದಾ ಕಟ್ಟೆಚ್ಚರದಲ್ಲಿದ್ದು ಕರ್ತವ್ಯ ನಿರ್ವಹಿಸುತ್ತಾರಲ್ಲ, ಅವರನ್ನು ನೋಡುವಾಗ ಗೌರವ ಭಾವ ಮೂಡಿ ಮನಸ್ಸು ಆದ್ರವಾಗುತ್ತದೆ. ಅವರ ಈ ಕಾರ್ಯದಿಂದ ತಾನೆ ಇಲ್ಲಿ ನಾವೆಲ್ಲಾ ನೆಮ್ಮದಿಯಿಂದ ಜೀವಿಸುತ್ತಿದ್ದೇವೆ ಎಂಬುದು ನಮ್ಮ ನೆನಪಿನಲ್ಲಿ ಸದಾ ಇರಬೇಕು. (ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ಮಾಡಿದಾಗ ಇಬ್ಬರು ನಿಂತದ್ದು ಕಾಣುತ್ತದೆ)
ನಾವು ವಾಪಾಸು ಬರುತ್ತಿರಬೇಕಾದರೆ ಕೆಲವು ಮಂದಿ ಜಲಪಾತದೆಡೆಗೆ ಹೋಗುತ್ತಿದ್ದರು. ನಾವು ಅವರಿಗೆ ಸ್ಪಷ್ಟವಾಗಿ ಹೇಳಿದೆವು. ಈಗ ಹೋಗಬೇಡಿ. ಕತ್ತಲಾಗುತ್ತದೆ. ನೀವು ಅಲ್ಲಿಗೆ ತಲಪುವಾಗಲೇ ಕತ್ತಲಾದೀತು. ತುಂಬ ನಡೆಯಬೇಕು. ಮತ್ತೆ ಹಿಂದೆ ಬರುವುದು ಕಷ್ಟ. ಆದರೆ ಅವರು ನಮ್ಮ ಮಾತಿಗೆ ಕಿವಿಗೊಡದೆ ಮುಂದೆ ಹೋದರು. ಹೇಗೆ ಹಿಂದೆ ಬಂದರೋ? ಕೆಲವರಂತೂ ಚಳಿ ತಡೆಯಲು ಸ್ವೆಟರ್ ಇಲ್ಲದೆ ಹೋಗುತ್ತಿದ್ದರು. ಒಬ್ಬಳಂತೂ ತೋಳಿಲ್ಲದ ಅಂಗಿ ಧರಿಸಿದ್ದಳು. ಚಳಿ ಮೆಲ್ಲಮೆಲ್ಲನೆ ಆವರಿಸಿಕೊಳ್ಳಲು ಹವಣಿಸುತ್ತಿತ್ತು. ಸುತ್ತಲೂ ಬೆಟ್ಟದಿಂದಾವರಿಸಿದ ಕಾರಣ ಸಂಜೆ ಐದು ಗಂಟೆಯಾಗುವಾಗಲೇ ಸೂರ್ಯ ಕಾಣಿಸುವುದಿಲ್ಲ. ಕತ್ತಲು ಬೇಗ ಆಗುತ್ತದೆ. ಎಷ್ಟು ದೂರ ನಡೆಯಬೇಕೆಂಬ ತಿಳಿವಳಿಕೆ ಇಲ್ಲದೆ ಹೋಗುತ್ತಿದ್ದರು. ವಸುಧಾರಾ ಫಾಲ್ಸ್ ಕಡೆಗೆ ಹೋಗಲು ಪ್ರಶಸ್ತ ಕಾಲ ಬೆಳಗ್ಗೆ ಬೇಗ ಹೊರಟು ಹೋಗಬೇಕು. ಆಗ ಆರಾಮವಾಗಿ ನಡೆಯುತ್ತ, ಅಲ್ಲಿ ಜಲಪಾತವನ್ನು ಮನದಣಿಯೆ ನೋಡಿ ಆನಂದಿಸಿ ವಾಪಾಸು ಬರಬಹುದು.
ಸಂಜೆ ೬.೪೫ಕ್ಕೆ ನಾವು ಮಾನ ತಲಪಿದೆವು. ತಲಪಿ ವ್ಯಾಸಗುಹೆ, ಗಣಪತಿ ಮಂದಿರ ಎಲ್ಲ ನೋಡಿದೆವು. ಓಹ್ ೧.೩೦ರಿಂದ ೬.೪೫ರವರೆಗೆ ಉಳಿದವರು ನಮ್ಮನ್ನು ಕಾಯುತ್ತ ಅಲ್ಲೇ ಇದ್ದರು. ಬಸ್ಸಿನಲ್ಲಿ ಕುಳಿತು ಹರಟುತ್ತಿದ್ದರು. ಅವರ ಈ ತಾಳ್ಮೆಗೆ ನಮೋನಮಃ. ಅವರು ಹಳ್ಳಿಇಡೀ ತಿರುಗಿ, ಅಲ್ಲಿ ಸಿಕ್ಕುವ ಮೊಮೋ ಎಂಬ ತಿಂಡಿ, ಕುರುಕಲು ತಿಂಡಿ, ಜ್ಯೂಸ್ ಎಲ್ಲ ರುಚಿ ನೋಡಿದರಂತೆ.
ಬದರಿನಾರಾಯಣನ ದರ್ಶನ
ಬಸ್ ಹತ್ತಿ ನಾವು ಬದರಿಗೆ ಬಂದೆವು. ಕೋಣೆಗೆ ಹೋಗಿ ಮುಖ ತೊಳೆದು ಬದರಿನಾರಾಯಣ ದೇವಾಲಯಕ್ಕೆ ಬಂದೆವು. ನಮ್ಮ ವಸತಿಗೃಹದಿಂದ ನಾಲ್ಕುಮಾರು ದೂರದಲ್ಲಿ ದೇವಾಲಯವಿದ್ದುದು. ತುಂಬ ಜನ ಇದ್ದರು. ಒಳಗೆ ಆಗ ಪ್ರವೇಶವಿರಲಿಲ್ಲ. ಹೊರಗಿನಿಂದಲೇ ದೇವರ ದರ್ಶನ ಮಾಡಿದೆವು.
ಅನಂತಮಠ
ಬದರಿಯಲ್ಲಿ ಉಡುಪಿ ಪೇಜಾವರದ ಅನಂತಮಠ ಇದೆ. ಅಲ್ಲಿ ಊಟ ಮಾಡುವ ಬಹಳ ಚೆನ್ನಾಗಿರುತ್ತದಂತೆ ಎಂದು ಸರೋಜ ಹೇಳಿದ್ದರು. ಸರೋಜ ಅವರಿಗೆ ಗೊತ್ತಿದ್ದವರಿಗೆ ದೂರವಾಣಿ ಮಾಡಿ ಮಧ್ಯಾಹ್ನವೇ ಕೇಳಿದ್ದರು. ಬನ್ನಿ ಎಂದು ಅಲ್ಲಿಂದ ಆಹ್ವಾನ ಬಂದಿತ್ತಂತೆ. ಆದರೆ ಊಟವಿಲ್ಲ. ಇವತ್ತು ತಿಂಡಿ ಎಂದಿದ್ದರಂತೆ. ನಾವೂ ಖುಷಿಯಿಂದಲೇ ಅವರ ಈ ಮಾತಿಗೆ ಸಮ್ಮತಿ ಇತ್ತಿದ್ದೆವು. ಸರೋಜರಿಗೂ ಅನಂತಮಠ ಇರುವುದು ಎಲ್ಲಿ ಎಂದು ಗೊತ್ತಿಲ್ಲ. ಕೇಳಿಕೊಂಡು ನಡೆದೆವು. ಅನಂತಮಠ ತಲಪಲು ಸ್ವಲ್ಪ ಹೆಚ್ಚೇ ದೂರ ನಡೆಯಬೇಕಾಯಿತು. ದೇವಾಲಯದಿಂದ ಸುಮಾರು ಒಂದು ಕಿಮೀ ದೂರ ಇರಬಹುದು. ಆಗ ಕೆಲವರ ತಾಳ್ಮೆ ತಪ್ಪಲು ಸುರುವಾಯಿತು. ಆ ಪರಿಣಾಮ ನಿಷ್ಟುರವಾಗಿ ಮಾತಾಡಿದರು. ಬೇಕಿತ್ತ ಈ ಉಸಾಬಾರಿ ನನಗೆ ಎಂದು ಸರೋಜ ನಮ್ಮಲ್ಲಿ ಹೇಳಿಕೊಂಡರು. ಆಗ ನಾವು, ‘ಇದೂ ಒಂದು ಅನುಭವ ತಾನೆ. ನಮಗೆ ಅನಂತಮಠ ನೋಡಿದ ಹಾಗೂ ಆಯಿತು. ಇಂಥ ಮಾತಿಗೆಲ್ಲ ನೀವೇನು ತಲೆಕೆಡಿಸಿಕೊಳ್ಳಬೇಡಿ’ ಎಂದು ನಾವು ಕೆಲವರು ಸಂತೈಸಿದೆವು. ಮನುಜನ ತಾಳ್ಮೆ ಪರೀಕ್ಷಿಸುವ ಕಾಲವದು. ಇಂಥ ಒಳ್ಳೆಯ ಯಾತ್ರೆ ಮಾಡಿದರೂ, ಊಟಕ್ಕೆ ಸ್ವಲ್ಪ ತಡವಾದರೂ ಅದನ್ನು ಸಹಿಸುವ ತಾಳ್ಮೆ ಸ್ವಲ್ಪವೂ ಬರುವುದಿಲ್ಲವಲ್ಲ? ಎಂಥ ವಿಪರ್ಯಾಸವಿದು. ಎಂದು ಮನದಲ್ಲೇ ಮಂಥನ ನಡೆಸಿದೆ. ಕೆಲವರಿಗೆ ಹೊಟ್ಟೆ ಹಸಿದರೆ ಬಲುಬೇಗ ಸಿಟ್ಟು ಬರುತ್ತದಂತೆ. ಹಾಗಿದೆ ನಮ್ಮ ಹೊಟ್ಟೆಪಾಡು!
ಅನಂತಮಠಕ್ಕೆ ಹೋದೆವು. ಅಲ್ಲಿ ಕೂಡಲೇ ನಮ್ಮನ್ನು ಊಟದ ಕೋಣೆಗೆ ಕರೆದುಕೊಂಡು ಹೋಗಿ ಒಗ್ಗರಣೆ ಹಾಕಿದ ದಪ್ಪಅವಲಕ್ಕಿ ಕೊಟ್ಟರು. ಹೊಟ್ಟೆ ತುಂಬ ತಿಂದೆವು. ಹಸಿದ ಹೊಟ್ಟೆಗೆ ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಮಠಕ್ಕೆ ಯತಾನುಶಕ್ತಿ ಕಾಣಿಕೆ ಸಲ್ಲಿಸಿ, ಸರೋಜರಿಗೆ ಕೃತಜ್ಞತೆ ಸಲ್ಲಿಸಿದೆವು. ಈ ಮೊದಲು ಕೋಪಗೊಂಡು ಮಾತಾಡಿದವರೂ ಕ್ಷಮೆ ಕೇಳಿ ದೊಡ್ಡವರೆನಿಸಿಕೊಂಡದ್ದು ನೋಡಿ ನನಗಂತೂ ತುಂಬ ಖುಷಿ ಆಯಿತು. ಸರೋಜರೂ ನಿರಾಳರಾದರು. ನಾವು ನಡೆಯುತ್ತ ವಸತಿಗೃಹಕ್ಕೆ ಬಂದೆವು.
ಕೋಣೆಯಲ್ಲಿ ನಾನು, ಸವಿತಾ, ಲತಾ ಇದ್ದುದು. ಹೊರಗೆ ಅಷ್ಟು ಚಳಿ ಎನಿಸಿರಲಿಲ್ಲ. ತಲೆಗೆ ಟೋಪಿ ಹಾಕಲು ಮರೆತು ಸುತ್ತಿದ್ದೆ. ಆದರೂ ಚಳಿ ಆಗಿರಲಿಲ್ಲ. ಆದರೆ ಕೋಣೆಯೊಳಗೆ ಕಿಟಕಿಗಳೆಲ್ಲ ಹಾಕಿಯೇ ಇದ್ದರೂ ತಣ್ಣಗೆ ಕೊರೆಯುತ್ತಿತ್ತು. ಹಾಸಿಗೆ ತಣ್ಣಗಾಗಿತ್ತು. ಅದರಲ್ಲೇ ಮಲಗಿ ನಿದ್ರಿಸಿದೆವು.
ಉದರಪೋಷಣೆ
ಬೆಳಗ್ಗೆ (೨೧-೯-೧೬) ಆರು ಗಂಟೆಗೆ ಎದ್ದು ಬಿಸಿನೀರು ಪಡೆದು ಸ್ನಾನ ಮಾಡಿದೆವು. ಒಂದು ಬಾಲ್ದಿಗೆ ರೂ.೩೦. ಲತಾ ಅವರೇ ಕೊಟ್ಟರು. ಎದ್ದು ಸ್ನಾನವಾಗಿ ಸುಮ್ಮನೆ ಕೂತೆವು. ಇನ್ನು ಕೂತು ಕಾಲ ಕಳೆಯುವ ಬದಲು ದೇವಾಲಯಕ್ಕೆ ಹೋಗಬಹುದು. ಎಲ್ಲರೂ ಹೊರಟಿದ್ದಾರ ನೋಡಿ ಬರುತ್ತೇನೆಂದು ಎದ್ದು ಹೊರಗೆ ಬಂದು ನೋಡಿದರೆ ಕೆಲವರ ಕೋಣೆಗಳೆಲ್ಲ ಬೀಗ ಹಾಕಿವೆ. ನಮಗೆ ಹೇಳದೆಯೇ ದೇವಾಲಯಕ್ಕೆ ಹೋಗಿದ್ದರು. ಹೇಳಬೇಕಿತ್ತು ಅವರು ಎನಿಸಿ ಒಂದುಕ್ಷಣ ಬೇಸರವೆನಿಸಿತು. ನಮ್ಮದೇ ತಪ್ಪು. ಹೊರಟು ಕೂಡ ಕೋಣೆಯಲ್ಲೇ ಕೂತದ್ದು ನಮ್ಮದೇ ತಪ್ಪು ತಾನೆ ಎಂದು ಮರುಕ್ಷಣವೇ ಬೇಸರ ನೀಗಿಸಿಕೊಂಡೆ. ನಾವು ಮೂವರು ೮ ಗಂಟೆಗೆ ಹೊರಟು ದೇವಾಲಯದ ಹತ್ತಿರವಿರುವ ಖಾನಾವಳಿಯಲ್ಲಿ ದೋಸೆ, ಪೂರಿ ತಿಂದೆವು. ದೋಸೆ ಅಷ್ಟು ಚೆನ್ನಾಗಿರಲಿಲ್ಲ. ಈರುಳ್ಳಿ ದೋಸೆ ಎಂದರೆ ದೋಸೆ ಮೇಲೆ ಸ್ವಲ್ಪ ನೀರುಳ್ಳಿ ಚೂರು ಹಾಕಿ ಕೊಡುತ್ತಾರೆ. ಚಟ್ನಿ ಬಾಯಿಗೆ ಹಾಕಲೇ ಸಾಧ್ಯವಿರಲಿಲ್ಲ. ನಮ್ಮ ಊರಿನ ತಿಂಡಿ ತಿಂದದ್ದು ನಮ್ಮ ತಪ್ಪು. ಅಲ್ಲೆಲ್ಲ ದೋಸೆ ತಿನ್ನಬಾರದು. ಚಪಾತಿ, ಪೂರಿಯನ್ನೇ ತಿನ್ನಬೇಕು. ಅದೇ ತುಂಬ ಚೆನ್ನಾಗಿರುತ್ತದೆ.
ಬಾಗಿಲನು ತೆರೆದು ದರುಶನ ತೋರೋ ಬದರಿನಾರಾಯಣನೆ
ದೇವಾಲಯಕ್ಕೆ ಹೋದೆವು. ಒಳಗೆ ಹೋಗಲು ನೋಡಿದರೆ ಒಂದು ಮೈಲಿ ಉದ್ದದ ಸರತಿ ಸಾಲು. ನಾವೂ ಸರತಿ ಸಾಲಿನಲ್ಲಿ ಸೇರಿಕೊಂಡೆವು. ೯ಗಂಟೆಗೆ ಸರತಿಯಲ್ಲಿ ನಿಂತು ಹತ್ತು ಘಂಟೆಗೆ ದೇವರ ದರ್ಶನ ಮಾಡಿದೆವು. ಗರ್ಭಗೃಹದಲ್ಲಿ ಕಪ್ಪುಸಾಲಿಗ್ರಾಮ ಶಿಲೆಯ ಧ್ಯಾನಮುದ್ರೆಯಲ್ಲಿರುವ ಚತುರ್ಭುಜಗಳಿರುವ ನಾರಾಯಣನ ವಿಗ್ರಹವಿದೆ. ಎರಡು ಕೈಗಳು ಧ್ಯಾನಮುದ್ರೆಯಲ್ಲೂ, ಮತ್ತೆರಡು ಕೈಗಳಲ್ಲಿ ಶಂಖಚಕ್ರಗಳಿವೆ. ನಾರಾಯಣದ ಬಲಭಾಗದಲ್ಲಿ ಕುಬೇರ, ಗಣೇಶ ಮತ್ತು ಗರುಡ ಮೂರ್ತಿಗಳಿವೆ. ಎಡಭಾಗದಲ್ಲಿ ಲಕ್ಷ್ಮೀ ಚಾಮರ ಬೀಸುತ್ತ ನಿಂತ ಮೂರ್ತಿ ಇದೆ. ಒಂದು ನಿಮಿಷ ದೇವರನ್ನು ನೋಡಲೂ ಬಿಡದಂತೆ ಮುಂದೆ ಹೋಗಿ ಎಂದು ನೂಕುತ್ತಾರೆ. ಆದರೂ ಕಣ್ಣುತುಂಬ ಮೂರ್ತಿ ನೋಡಿಯೇ ನಾವು ಅಲ್ಲಿಂದ ತೆರಳಿದ್ದು.
ಲತಾ ಅವರು ದೇವಾಲಯದ ಎದುರು ನಿಂತು ನಮ್ಮ ಮೂವರ ಪೋಟೋ ಪೋಟೋಗ್ರಾಫರರ ಕ್ಯಾಮರಾದಿಂದ ರೂ. ೧೦೦ ಕೊಟ್ಟು ಕ್ಲಿಕ್ಕಿಸಿಕೊಂಡರು. ಇಂಥ ವೃತ್ತಿ ಅಲ್ಲಿ ಅವರ ಹೊಟ್ಟೆಪಾಡು. ತುಂಬ ಜನ ಹೆಗಲಲ್ಲಿ ಕ್ಯಾಮರಾ ಹಾಕಿಕೊಂಡು ಭಕ್ತರ ಗಮನ ಸೆಳೆದು ಕ್ಲಿಕ್ಕಿಸಲೆ ಎಂದು ಕೇಳಿಕೊಳ್ಳುತ್ತಿದ್ದರು. ಹೆಚ್ಚಿನ ಮಂದಿಯೂ ಭೇಟಿ ಸ್ಮರಣೀಯವಾಗಿರಲಿ ಎಂದೋ ಏನೋ ಚಿತ್ರ ತೆಗೆಸಿಕೊಳ್ಳುತ್ತಿದ್ದರು. ದೇವರ ದರ್ಶನಮಾಡಿ ಬಂದ ಬಳಿಕ ಭಾವಚಿತ್ರ ಕೊಡುತ್ತಿದ್ದರು.
ತಪ್ತಕುಂಡದಲ್ಲಿ ಬಿಸಿನೀರು ಹೊಂಡವಿದೆ. ನಾವು ಕೆಲವರು ಅಲ್ಲಿ ಸ್ನಾನ ಮಾಡಲಿಲ್ಲ. ಕೆಲವರು ಬೆಳಗ್ಗೆಯೇ ಹೋಗಿ ಸ್ನಾನ ಮಾಡಿ ದೇವಾಲಯಕ್ಕೆ ಹೋಗಿ ಬಂದರು.
ಬದರಿ ಬಗ್ಗೆ ವಿವರಣೆ :
ಬದರಿನಾಥ ಭಾರತದ ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿನ ಒಂದು ಪುಟ್ಟ ಪಟ್ಟಣ. ಹಿಂದೂ ಧರ್ಮೀಯರಿಗೆ ಅತಿ ಪಾವನವೆಂದು ಪರಿಗಣಿಸಲ್ಪಡುವ ಕ್ಷೇತ್ರಗಳಲ್ಲಿ ಬದರಿನಾಥ ಅತಿ ಪ್ರಮುಖವಾದುದು. ಚಾರ್ಧಾಮ್ (ಚತುರ್ಧಾಮ)ಗಳಲ್ಲಿ ಬದರಿನಾಥವು ಸಹ ಒಂದು. ಸಮುದ್ರ ಮಟ್ಟದಿಂದ ಸರಾಸರಿ ೩೧೨೪ ಮೀ. ಎತ್ತರವಿರುವ ಬದರಿನಾಥವು ಗಡ್ವಾಲ್ ಹಿಮಾಲಯದಲ್ಲಿ ಅಲಕನಂದಾ ನದಿಯ ದಂಡೆಯ ಮೇಲೆ ನರ ಮತ್ತು ನಾರಾಯಣ ಪರ್ವತಗಳ ನಡುವೆ ಸ್ಥಾಪಿತವಾಗಿದೆ.
ಅಲಕನಂದಾ ನದಿಯಲ್ಲಿ ಮುಳುಗಿದ್ದ ಮೂರ್ತಿಯನ್ನು ಆದಿ ಶಂಕರರು ತಪ್ತ ಕುಂಡದ ಬಳಿಯ ಗುಹೆಯಲ್ಲಿ ಪ್ರತಿಷ್ಠಾಪಿಸಿ ಮೂರ್ತಿಗೆ ನಿಯಮಿತ ಪೂಜಾವ್ಯವಸ್ಥೆಗಳನ್ನು ಮಾಡಿದರು. ಮುಂದೆ ೧೬ನೆಯ ಶತಮಾನದಲ್ಲಿ ಗಡ್ವಾಲ್ನ ಅರಸನು ಈಗ ನಾವು ಕಾಣುವ ದೇವಾಲಯವನ್ನು ನಿರ್ಮಿಸಿ ಬದರಿನಾರಾಯಣ ಮೂರ್ತಿಯನ್ನು ಅಲ್ಲಿ ಪುನಃ ಪ್ರತಿಷ್ಠಾಪಿಸಿದನು. ಈ ಮಂದಿರವು ಹಲವು ಸಲ ಪುನರುಜ್ಜೀವಗೊಳಿಸಲ್ಪಟ್ಟಿದೆ. ತೀವ್ರಹಿಮಪಾತ ಮತ್ತು ಭೂಕಂಪಗಳಂಥ ನೈಸರ್ಗಿಕ ಪ್ರಕೋಪಗಳಿಂದ ದೇವಾಲಯದ ಕಟ್ಟಡ ಸಾಕಷ್ಟು ಬಾರಿ ಹಾನಿಯುಂಟಾಗಿದೆ. ಮಂದಿರದ ಮುಖ್ಯ ಆರಾಧ್ಯ ಮೂರ್ತಿಯು ಶ್ರೀಮನ್ನಾರಾಯಣನದಾಗಿದ್ದು ಈ ಮೂರ್ತಿಯು ಕಪ್ಪು ಸಾಲಿಗ್ರಾಮ ಶಿಲೆಯಿಂದ ಮಾಡಲ್ಪಟ್ಟಿದ್ದು ಸುಮಾರು ಒಂದು ಮೀ. ಎತ್ತರವಾಗಿದೆ. ಇಲ್ಲಿಯ ನಾರಾಯಣ ಮೂರ್ತಿಯು ಧ್ಯಾನನಿರತ ಭಂಗಿಯಲ್ಲಿದೆ. ಸುಮಾರು ೫೦ ಅಡಿ ಎತ್ತರವಾಗಿರುವ ದೇವಾಲಯವು ಚಿನ್ನದ ವಿಮಾನ ಮತ್ತು ಚಾವಣಿಗಳನ್ನು ಹೊಂದಿದೆ. ದೇವಾಲಯದಲ್ಲಿ ಬದರಿನಾರಾಯಣನ ಮೂರ್ತಿಯ ಜೊತೆಗೆ ನರ ಮತ್ತು ನಾರಾಯಣ, ನರಸಿಂಹ, ಲಕ್ಷ್ಮಿ, ಉದ್ಧವ, ಗರುಡ, ಕುಬೇರ, ನಾರದ ಮತ್ತು ನವದುರ್ಗೆಯರ ಮೂರ್ತಿಗಳು ಸಹ ಸ್ಥಾಪಿಸಲ್ಪಟ್ಟಿದ್ದು ಪೂಜಿಸಲ್ಪಡುತ್ತಿವೆ.
ಸಂಸ್ಕೃತದಲ್ಲಿ ಬದರಿ ಅಥವಾ ಬದ್ರಿ ಎಂದರೆ ಎಲಚಿ ಕಾಯಿ (ಬೋರೆ ಕಾಯಿ) ಎಂದರ್ಥವಿದೆ. ಕೆಲವು ಪೌರಾಣಿಕ ಉಲ್ಲೇಖಗಳಲ್ಲಿ ಹೇಳಿರುವಂತೆ ಒಂದು ಕಾಲದಲ್ಲಿ ಇಲ್ಲಿ ಬೋರೆಕಾಯಿಗಳು ಅತ್ಯಂತ ಹೆಚ್ಚಾಗಿ ಬೆಳೆಯುತ್ತಿತ್ತಂತೆ. ಹಾಗಾಗಿ ಇಲ್ಲಿಗೆ ಬದರಿ ಅಥವಾ ಬದ್ರಿ ಎಂಬ ಹೆಸರು ಬಂದಿತೆನ್ನಲಾಗಿದೆ.
ಬದರಿನಾಥ ಕ್ಷೇತ್ರವು ವರ್ಷದಲ್ಲಿ ಆರು ತಿಂಗಳ ಕಾಲ ಮಾತ್ರವೇ ತೆರೆದಿರುತ್ತದೆ. ಉಳಿದ ಸಮಯ ಇದು ಪೂರ್ಣವಾಗಿ ಹಿಮದಲ್ಲಿ ಮುಚ್ಚಿಹೋಗಿರುತ್ತದೆ. ಸಾಮಾನ್ಯವಾಗಿ ಜೂನ್ನಿಂದ ಸೆಪ್ಟೆಂಬರ್ ವರೆಗೆ ಬದರಿನಾಥ ಕ್ಷೇತ್ರವನ್ನು ದರ್ಶಿಸಲು ಉತ್ತಮ ಕಾಲ. ಬದರಿನಾಥ ಕ್ಷೇತ್ರವು ಮುಚ್ಚಿರುವ ಕಾಲದಲ್ಲಿ ಬದರಿನಾಥನ ಉತ್ಸವ ಮೂರ್ತಿಯನ್ನು ಜ್ಯೋತಿರ್ಮಠ(ಜೋಷಿಮಠ)ಕ್ಕೆ ಕರೆತಂದು ಪೂಜಿಸಲಾಗುತ್ತದೆ. ಬದರಿನಾಥ ದೇವಾಲಯವು ಮುಚ್ಚಿರುವ ಸಮಯದಲ್ಲಿ ನಾರದ ಮಹರ್ಷಿಯು ಪ್ರತಿದಿನ ಬದರಿನಾರಾಯಣನಿಗೆ ಪೂಜೆ ಸಲ್ಲಿಸುವನೆಂದು ನಂಬಿಕೆ. ಕೃಪೆ: ವೀಕಿಪೀಡಿಯಾ
ಉತ್ತರಾಖಂಡದಲ್ಲಿ ಎಲ್ಲಿ ನೋಡಿದರೂ ಶಿವ ದೇವಾಲಯವನ್ನೇ ಕಾಣುತ್ತೇವೆ. ಆದರೆ ಬದರಿಯಲ್ಲಿ ಮಾತ್ರ ನಾರಾಯಣ ಹೇಗೆ ಬಂದ ಎಂಬುದಕ್ಕೆ ಒಂದು ಕಥೆ ಇದೆ. ಬದರಿಯನ್ನು ನೋಡಿದ ನಾರಾಯಣನಿಗೆ ಅಲ್ಲೇ ವಾಸ್ತವ್ಯ ಹೂಡಬೇಕೆಂಬ ಅಪೇಕ್ಷೆ ಆಗುತ್ತದೆ. ಆದರೆ ಅಲ್ಲಿ ಶಿವಪಾರ್ವತಿಯರು ಅದಾಗಲೇ ನೆಲೆನಿಂತಿದ್ದರು. ಅದಕ್ಕೆ ನಾರಾಯಣ ಒಂದು ಉಪಾಯ ಮಾಡಿದ. ವೇಷ ಮರೆಸಿ ಸಣ್ಣ ಬಾಲಕನಂತೆ ಮಾರ್ಪಾಡಾಗಿ ಶಿವ ಪಾರ್ವತಿಯರೆದುರು ಅಳುತ್ತ ನಿಂತ. ಅಳುತ್ತಲಿದ್ದ ಬಾಲಕನನ್ನು ನೋಡಿ ಪಾರ್ವತಿ ಕನಿಕರಗೊಂಡು ಎತ್ತಿಕೊಳ್ಳಲು ಹೋದಾಗ ಶಿವ ತಡೆದ. ಎತ್ತಿಕೊಳ್ಳಬೇಡ ಅವನು ಸಾಮಾನ್ಯ ಬಾಲಕನಲ್ಲ. ಆದರೂ ಪಾರ್ವತಿ ಅವನನ್ನು ಎತ್ತಿಕೊಂಡೇಬಿಟ್ಟಳು. ಆ ಬಾಲಕನಾಗಿದ್ದ ನಾರಾಯಣ ವಿಶಾಲವಾಗಿ ಎತ್ತರೆತ್ತರ ಬೆಳೆದು ಅಲ್ಲೇ ನೆಲೆನಿಂತನಂತೆ. ಅದಕ್ಕೆ ಅಲ್ಲಿಗೆ ವಿಶಾಲಬದರಿ ಎಂಬ ಹೆಸರು ಬಂತಂತೆ.
ಬದರಿಯಿಂದ ನಿರ್ಗಮನ
ನಮ್ಮೆಲ್ಲರ ಒಂದು ದಿನದ ವಸತಿ ಶುಲ್ಕ ರೂ ೨೦೦೦ ಪಾವತಿಸಿದರು. ಕೋಣೆಗೆ ಬಂದು ಗಂಟುಮೂಟೆ ಕಟ್ಟಿ ೧೧ ಗಂಟೆಗೆ ಬಸ್ ಹತ್ತಿದೆವು. ಅಲ್ಲಿಗೆ ನಮ್ಮ ಚಾರ್ಧಾಮ ಯಾತ್ರೆಗೆ ತೆರೆಬಿತ್ತು. ಮೈಕೈ ಎಲ್ಲ ನೋವು. ಏನಾದರೂ ಮಾತ್ರೆ ಇದ್ದರೆ ಕೊಡಿ ಎಂದು ಮಂಗಾರಾಮ ನನ್ನಲ್ಲಿ ಕೇಳಿದರು. ಸಾಮಾನ್ಯ ಎಲ್ಲ ತರಹದ ರೋಗಕ್ಕೆ ತಕ್ಕ ಮಾತ್ರೆಗಳನ್ನು ಸವಿತಾ ತಂದಿದ್ದಳು. ಅವಳು ನೋವು ನಿವಾರಕ ಮಾತ್ರೆ ಕೊಟ್ಟಳು ಮಂಗಾರಾಮನಿಗೆ. ಪಾಪ ಹತ್ತು ದಿನಗಳಿಂದ ಒಂದೇ ಸಮ ಅಂಥ ದಾರಿಯಲ್ಲಿ ಬಸ್ ಚಾಲನೆ ಮಾಡಿ ಸಾಕಾಗಿರಬಹುದು ಎಂದು ನನಗನಿಸಿ, ಬೀಡಿ ಸೇದುತ್ತಾರೆಂದು ಅವರಮೇಲಿದ್ದ ಕೋಪವೂ ಕರಗಿತು!
ಬದರಿಯಿಂದ ಹರಿದ್ವಾರದೆಡೆಗೆ ಸಾಗುವ ರಸ್ತೆ ಕಿರಿದಾಗಿದ್ದು, ಅಲ್ಲಲ್ಲಿ ಬೆಟ್ಟ ಕುಸಿದು, ಬಂಡೆಗಳು ರಸ್ತೆಪಕ್ಕ ಬಿದ್ದದ್ದು ಕಾಣಿಸಿತು. ಅಲ್ಲಲ್ಲಿ ಲ್ಯಾಂಡ್ ಸ್ಲೈಡ್ ಅಂಡ್ ರಾಕ್ ಫಾಲ್ ಝೋನ್ ಎಂಬ ಫಲಕ ಹಾಕಿದ್ದು ನೋಡಿದೆವು. ವಾಟರ್ ಫಾಲ್ಸ್ ನೋಡಿದ್ದೆವು. ಆದರೆ ರಾಕ್ ಫಾಲ್ಸ್ ನಮಗೆ ಹೊಸದು! ಅದನ್ನು ನೋಡುವ ಸಂದರ್ಭ ಬರದೇ ಇದ್ದದ್ದು ನಮ್ಮ ಪುಣ್ಯವೇ ಸರಿ. ಬಸ್ ಚಲಿಸುವಾಗ ಕಿಟಕಿ ಹೊರಗೆ ನೋಡಲೇಬಾರದು. ಕೆಲವೆಡೆ ರಸ್ತೆ ಎಷ್ಟು ಕಿರಿದಾಗಿರುತ್ತದೆ ಅಂದರೆ ಬಸ್ ಕೂದಲೆಳೆಯ ಅಂತರದಲ್ಲಿ ರಸ್ತೆ ದಾಟುತ್ತದೋ ಅನಿಸುತ್ತದೆ. ಕೆಳಗೆ ನದಿ ಪ್ರಪಾತ. ರಸ್ತೆ ಜರಿದು ಅಷ್ಟು ಕಿರಿದಾಗಿರುತ್ತದೆ. ನೋಡಿದರೆ ಎದೆ ಝಲ್ಲೆನಿಸುತ್ತದೆ. ಒಂದೆಡೆ ರಸ್ತೆಬದಿಯಲ್ಲಿ ಒಂದು ಕಾರು ನಜ್ಜುಗುಜ್ಜಾಗಿ ನಿಂತಿರುವುದು ಕಾಣಿಸಿತು. ಕಾರು ಚಲಿಸುತ್ತಿರುವಾಗ ರಾಕ್ ಫಾಲ್ಸ್ ಆಗಿ ಕಾರಿನಮೇಲೆ ಬಿದ್ದು ಕಾರು ಹುಡಿ ಆದದ್ದಂತೆ. ಗಂಡಹೆಂಡತಿ ಎರಡು ಮಕ್ಕಳು ಇದ್ದರಂತೆ ಕಾರಿನಲ್ಲಿ. ನಾಲ್ಕು ಮಂದಿಯ ಜೀವವೂ ಅಲ್ಲೆ ಹೋಗಿತ್ತಂತೆ. ಈ ಸುದ್ದಿ ಮಂಗಾರಾಮ ಹೇಳಿದ್ದು. ಆ ಕಾರು ನೋಡಿದಾಗ ಅಬ್ಬ, ಒಮ್ಮೆ ಇಂಥ ರಸ್ತೆಯಿಂದ ಪಾರಾಗಿ ಹೋಗಿ ಸರಿಯಾಗಿರುವ ರಸ್ತೆ, ಊರು ತಲಪಿದರೆ ಸಾಕಪ್ಪ ಎಂದು ಮನಸ್ಸು ಭಯಗೊಂಡು ಜಪಗೈಯಲು ತೊಡಗುತ್ತದೆ.
ಸೇನಾ ವಾಹನ ಸಿಕ್ಕಿದಾಗಲೆಲ್ಲ ನಾವು ಜೈ ಜವಾನ್ ಎಂದು ದೊಡ್ಡದಾಗಿ ನುಡಿದು ಸೆಲ್ಯೂಟ್ ಹೊಡೆಯುತ್ತಿದ್ದೆವು. ಅವರೂ ನಮಗೆ ಕೈ ಮಾಡಿ ಆ ಗೌರವವನ್ನು ಸ್ವೀಕರಿಸುತ್ತಿದ್ದರು. ಇಂಥ ಸ್ಥಳದಲ್ಲಿ ಅವರ ಸೇವೆ ಅನುಪಮವಾದುದೇ ಸರಿ.
ರಸ್ತೆ ಕೆಲಸ ಮಾಡುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳನ್ನು ಜೊತೆಯಲ್ಲೆ ಕರೆದುಕೊಂಡು ಅಲ್ಲೇ ಕೂರಿಸಿಕೊಂಡು, ಬೆನ್ನಮೇಲೆ ಹೊತ್ತು ಕೆಲಸ ಮಾಡುವ ದೃಶ್ಯ ನೋಡಿದೆವು.
ವಿಷ್ಣುಪ್ರಯಾಗ
ದಾರಿಯಲ್ಲಿ ಮಧ್ಯಾಹ್ನ ಒಂದು ಗಂಟೆಗೆ ವಿಷ್ಣುಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ಧವಳಗಂಗಾನದಿ ಸೇರುವ ಸ್ಥಳವದು. ನದಿ ಸಂಗಮವಾಗುವ ಸ್ಥಳ ನೋಡುವುದೇ ಸೊಗಸು. ಒಂದು ನದಿಯ ನೀರಿಗಿಂತ ಇನ್ನೊಂದು ನದಿಯ ನೀರಿನ ಬಣ್ಣದಲ್ಲಿ ವ್ಯತ್ಯಾಸ ಸ್ಪಷ್ಟವಾಗಿ ಕಾಣುತ್ತದೆ. ಎಲ್ಲರೂ ನದಿಯಲ್ಲಿ ಇಳಿದು ತಲೆಗೆ ನೀರು ಚಿಮುಕಿಸಿಕೊಂಡು ಪಾವನರಾದರು. ನಾನು ನದಿಗಿಳಿಯದೆ ತೂಗುಸೇತುವೆಯಲ್ಲಿ ಅಡ್ಡಾಡಿದೆ.
ವೃದ್ಧಬದರಿ
ವಿಷ್ಣುಪ್ರಯಾಗದಿಂದ ಮುಂದೆ ಸಾಗಿ ದಾರಿಯಲ್ಲಿ ವೃದ್ಧಬದರಿ ನೋಡಿದೆವು. ಇದು ಪಂಚಬದರಿಯಲ್ಲಿ ಎರಡನೆಯದು. (ಮಹಾವಿಷ್ಣುವನ್ನು ಕುರಿತಾದ ಹಿಮಾಲಯದ ಐದು ಕ್ಷೇತ್ರಗಳು ಪಂಚ ಬದರಿ ಎನಿಸಿಕೊಳ್ಳುತ್ತವೆ. ಇವುಗಳಲ್ಲಿ ಬದರಿನಾಥ ಕ್ಷೇತ್ರವು ಸಹ ಸೇರಿದೆ. ವಿಶಾಲ ಬದರಿ : ಬದರಿನಾಥ ಕ್ಷೇತ್ರ, ಯೋಗ ಬದರಿ : ಪಾಂಡುಕೇಶ್ವರದಲ್ಲಿರುವ ಈ ದೇವಾಲಯದಲ್ಲಿ ಸಹ ಬದರಿನಾಥನು ಧ್ಯಾನಮುದ್ರೆಯಲ್ಲಿರುವನು. ಐತಿಹ್ಯಗಳ ಪ್ರಕಾರ ಪಾಂಡು ಮಹಾರಾಜನು ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದನು. ಭವಿಷ್ಯ ಬದರಿ : ಜ್ಯೋತಿರ್ಮಠ ( ಜೋಷಿಮಠ)ದಿಂದ ೧೭ ಕಿ.ಮೀ. ದೂರದಲ್ಲಿದೆ. ಪುರಾಣ ಕಥೆಗಳ ಪ್ರಕಾರ ಮುಂದೊಂದು ದಿನ ಬದರಿನಾಥ ಕ್ಷೇತ್ರವು ಭೂಮಿಯಿಂದ ಮರೆಯಾದಾಗ ಬದರಿನಾಥನು ಇಲ್ಲಿ ನೆಲೆನಿಂತು ದರ್ಶನ ಕೊಡುವನು ಎಂಬುದು ಪ್ರತೀತಿ. ಆದ್ದರಿಂದಲೇ ಇದಕ್ಕೆ ಭವಿಷ್ಯ ಬದರಿ ಎಂಬ ಹೆಸರು. ವೃದ್ಧ ಬದರಿ : ಜ್ಯೋತಿರ್ಮಠದಿಂದ ೭ ಕಿ.ಮೀ. ದೂರದಲ್ಲಿ ಆನಿಮಠದಲ್ಲಿದೆ. ಕಥನಗಳ ಪ್ರಕಾರ ಬದರಿನಾಥನ ಮೂಲ ಪೂಜಾಸ್ಥಾನವು ಇದೇ ಆಗಿದ್ದಿತು. ಆದಿ ಬದರಿ : ಕರ್ಣಪ್ರಯಾಗದಿಂದ ೧೭ ಕಿ.ಮೀ. ದೂರದಲ್ಲಿದೆ. ೧೬ ಸಣ್ಣ ಮಂದಿರಗಳುಳ್ಳ ಇಲ್ಲಿನ ದೇವಾಲಯ ಸಂಕೀರ್ಣದಲ್ಲಿ ಮಹಾವಿಷ್ಣುವಿನ ೩ ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ ಪೂಜೆಗೊಳ್ಳುತ್ತಿದೆ.) ಪಂಚಬದರಿಗಳಲ್ಲಿ ನಾವು ಎರರು ಸ್ಥಳಕ್ಕೆ ಮಾತ್ರ ಭೇಟಿ ಇತ್ತುದು.
ಕೆಳಗೆ ಮೆಟ್ಟಲಿಳಿದು ಹೋಗಬೇಕು. ಊರೊಳಗೆ ಈ ದೇವಾಲಯವಿದೆ. ಪುಟ್ಟದಾದ ಮಂದಿರ. ಹಳ್ಳಿಯೊಳಗೆ ಕೆಲವಾರು ಮನೆಗಳಿವೆ. ಮನೆಯ ಸುತ್ತ ಸಾಕಷ್ಟು ತರಕಾರಿ ಕೃಷಿ ನಡೆಸಿದ್ದನ್ನು ನೋಡಿದೆವು. ನಮ್ಮಲ್ಲಿರುವಂತದ್ದೇ ಕೆಸುವಿನ ಗಿಡ ನೋಡಿ ಚಕಿತಳಾದೆ. ಕೆಸುವಿನೆಲೆಯಿಂದ ಏನು ಮಾಡುತ್ತಾರೆ ಎಂದು ಕೇಳಲು ಮರೆಯಿತು ಆ ಸಂದರ್ಭದಲ್ಲಿ. ಮುಂದೆ ಪುನಃ ಮೇಲೆ ಮೆಟ್ಟಲು ಹತ್ತುವ ಬದಲು ಕೆಳಗೇ ಇಳಿದೆವು. ಅಲ್ಲಿಗೆ ಬಸ್ ಬಂತು. ನಾವು ಇಳಿದು ಸ್ವಲ್ಪ ಹೊತ್ತಾದಮೇಲೆ ಬಸ್ ಬಂದದ್ದು. ಪೋನ್ ಹೋಗುತ್ತಿರಲಿಲ್ಲ. ಏನು ಮಾಡುವುದಪ್ಪ, ಕೆಳಗೆ ಬರಲು ಹೇಳಿದ್ದೆ ಎಂದು ವಿಠಲರಾಜು ಹೇಳಿಕೊಂಡಾಗ ಬಸ್ ಬರುವುದು ಕಾಣಿಸಿತು. ಬಸ್ಸಿನ ಒಂದು ಚಕ್ರ ಪಂಕ್ಚರ್ ಆಗಿತ್ತಂತೆ. ಇಷ್ಟು ದಿನದಲ್ಲಿ ಇದು ಮೂರನೇ ಸಲ ಚಕ್ರ ಪಂಕ್ಚರ್ ಆದದ್ದು. ಎರಡು ಸಲವೂ ನಾವು ಹೀಗೆ ಯಾವುದಾದರೊಂದು ಸ್ಥಳ ನೋಡಲು ಇಳಿದಾಗಲೇ ಆಗಿದ್ದು. ಹಾಗಾಗಿ ಕಾಯಬೇಕಾದ ಪ್ರಸಂಗ ಬಂದಿರಲಿಲ್ಲ.
ಇಂದ್ರಲೋಕ
ವೃದ್ಧಬದರಿ ನೋಡಿ ಮುಂದೆ ಹೋದಾಗ ಪೀಪಲ್ ಕೋಟಿಯಲ್ಲಿ ಇಂದ್ರಲೋಕ ಹೊಟೇಲಿಗೆ ಊಟಕ್ಕೆ ಹೋದೆವು. ಒಂದು ಊಟಕ್ಕೆ ರೂ.೯೦. ಸೊಗಸಾದ ಊಟ. ಹೆಸರೇನೋ ಇಂದ್ರಲೋಕ. ಆದರೆ ಹೆಸರಿಗೆ ತಕ್ಕಂತೆ ಪಾಯಿಖಾನೆ ಇರಲಿಲ್ಲ. ಒಳಗೆ ಹೋಗಲು ಸಾಧ್ಯವಿಲ್ಲ ಹಾಗಿತ್ತು ಎಂದು ಶೋಭಾ ಹೇಳಿದರು. ನಾವು ಊಟ ಮಾಡಿ ಬಸ್ಸಿನ ಬಳಿ ಬಂದಾಗ ಗಾಳಿ ಹೋದ ಚಕ್ರವನ್ನು ರಿಪೇರಿ ಮಾಡಿಸಿ ತಯಾರಾಗಿದ್ದರು ಸೋನು ಹಾಗೂ ಮಂಗಾರಾಮ.
ನಂದಪ್ರಯಾಗ
ಊಟವಾಗಿ ಮುಂದುವರಿದು ನಂದಪ್ರಯಾಗಕ್ಕೆ ಹೋದೆವು. ಅಲಕನಂದಾ ನದಿಯೊಂದಿಗೆ ನಂದಾಕಿನಿ ನದಿ ಸಂಗಮವಾಗುವ ಸ್ಥಳವದು.
ಕರ್ಣಪ್ರಯಾಗ
ಕರ್ಣಪ್ರಯಾಗ ದೂರದಿಂದಲೇ ನೋಡಿ ಮುಂದುವರಿದೆವು. ಸಣ್ಣಗೆ ಮಳೆ ಬರುತ್ತಲಿದ್ದದ್ದರಿಂದ ಕೆಳಗೆ ಇಳಿಯಲಿಲ್ಲ. ಕರ್ಣನ ದೇವಾಲಯವಿದೆಯಂತೆ ಅಲ್ಲಿ. ಅಲಕನಂದಾ ನದಿಯೊಂದಿಗೆ ಕರ್ಣಪಿಂದಾರ ನದಿ ಸಂಗಮವಾಗುತ್ತದೆ.
ಮುಸ್ಸಂಜೆವೇಳೆಯಲಿ ನಗರಾಸು ಸೇರಿದಾಗ
ಸಂಜೆ ಆರೂವರೆ ಗಂಟೆ ಆದಾಗ ಮಂಗಾರಾಮ ಬಸ್ ಚಾಲನೆ ನಿಲ್ಲಿಸಿಬಿಟ್ಟರು. ನಗರಾಸು ಎಂಬ ಊರಿನಲ್ಲಿ ನಾಗಸಾನಿ ವಸತಿಗೃಹದ ಎದುರು ಬಸ್ನಿಂದ ಇಳಿದೆವು. ಅಲ್ಲಿಯ ಕೋಣೆಯಲ್ಲಿ ನಮ್ಮ ಲಗೇಜು ಇಳಿಸಿ ಕಾಲು ಚಾಚಿದೆವು. ಒಂದು ಕೋಣೆಯಲ್ಲಿ ನಾವು ನಾಲ್ಕು ಮಂದಿ. ಸರೋಜ, ಪೂರ್ಣಿಮಾ, ಸವಿತಾ, ನಾನು. ತಣ್ಣಗೆ ನೀರಿನಲ್ಲಿ ಸ್ನಾನ ಮಾಡಿ ಸುಧಾರಿಸಿಕೊಂಡೆವು. ಮಧ್ಯಾಹ್ನದ ಊಟ ತಡವಾಗಿ ಮಾಡಿದ್ದರಿಂದ ರಾತ್ರಿಯ ಊಟ ಸ್ವಲ್ಪವೇ ಸಾಕು ಎಂದು ನಾವು ಕೆಲವು ಮಂದಿ ತೀರ್ಮಾನಿಸಿ ಕೆಳಗೆ ಯಾವ ಹೊಟೇಲು ಇವೆ ಎಂದು ನೋಡಲು ಹೊರಟೆವು. ಮುಂದೆ ಗುರುದ್ವಾರ ಇದೆ. ಅಲ್ಲಿ ಊಟ ಇದೆ ಎಂಬ ಮಾಹಿತಿ ನಮ್ಮ ಹೊಟೇಲಿನವರು ಕೊಟ್ಟರು. ನಮ್ಮ ವಸತಿಗೃಹದ ಎದುರು ಭಾಗದಲ್ಲೇ ಇರುವ ಗುರುದ್ವಾರಕ್ಕೆ ಹೋದೆವು.
ಗುರುದ್ವಾರದಲ್ಲಿ ನಮಗೆ ಬರೆ ಕಾಸಿದರು!
ನಾವು ಕುತೂಹಲದಿಂದ ಗುರುದ್ವಾರದೊಳಗೆ ಕಾಲಿಟ್ಟೆವು. ಅಲ್ಲಿ ಸುಮಾರು ಮಂದಿ ಸಾಲಾಗಿ ಕೂತು ಊಟ ಮಾಡುತ್ತಿರುವುದು ಕಂಡಿತು. ಮುಂದೆ ಜಗಲಿಯಲ್ಲಿ ಒಬ್ಬರು ಸಿಖ್ಗುರು ಕೂತದ್ದು ಕಂಡು ಅವರನ್ನು ಮಾತಾಡಿಸಿ ಮತ್ತೆ ಊಟಕ್ಕೆ ಹೋಗುವ ಎಂದು ತೀರ್ಮಾನಿಸಿದೆವು. ಅಲ್ಲಿಒಳಗೆ ಹೋಗಬೇಕೆಂದರೆ ಗಂಡಸು ಹೆಂಗಸು ಎಂಬ ಭೇದವಿಲ್ಲದೆ ಎಲ್ಲರೂ ತಲೆಮೇಲೆ ಬಟ್ಟೆ ಹಾಕಿಕೊಳ್ಳಲೇಬೇಕು. ಚೂಡಿದಾರದ ಶಾಲಿದ್ದವರು ತಲೆಗೆ ಸುತ್ತಿಕೊಂಡರು. ಇಲ್ಲದವರು ಅಲ್ಲಿಟ್ಟಿದ್ದ ಮಕಮಲ್ ಬಟ್ಟೆ ತೆಗೆದುಕೊಂಡು ತಲೆಗೆ ಸುತ್ತಿದೆವು. ಸಿಖ್ಗುರು ಬಳಿ ಬಂದು ತಲೆಬಾಗಿ ಕೂತೆವು. ನಮ್ಮನ್ನು ನೋಡಿದ್ದೇ, ‘ಮೊದಲಿಗೆ ಒಬ್ಬರನ್ನು ಕಂಡಾಗುವಾಗ ನಮಸ್ಕಾರ ಎಂದು ಹೇಳುವ ಅಭ್ಯಾಸ ನಿಮಗಿಲ್ಲವೇ? ನಿಮ್ಮ ಊರಿನಲ್ಲಿ ಇಂಥ ಪದ್ಧತಿ ಇಲ್ಲವೆ? ಎಂದು ಬರೆ ಕಾಸಿದರು. ಮೊದಲಿಗೆ ನಮಗೆ ಅವರು ಏನು ಹೇಳುತ್ತಿದ್ದಾರೆಂದೇ ಅರ್ಥವಾಗಿರಲಿಲ್ಲ. ಅರ್ಥವಾದಾಗ ನಮ್ಮ ಮಾವನ (ಜಿ.ಟಿ. ನಾರಾಯಣ ರಾವ್) ನೆನಪು ಬಂತು. ಮೊದಲು ಯಾರನ್ನು ನೋಡಿದರೂ ನಮಸ್ಕಾರ ಎಂದು ಹೇಳಿ ಮಾತಾಡಿಸಬೇಕು ಅಂಥ ಅಭ್ಯಾಸ ಬೆಳೆಸಿಕೊಳ್ಳಲೇಬೇಕು ಎಂದು ನಮ್ಮ ಮಾವ ಪಾಟ ಮಾಡುತ್ತಿದ್ದದ್ದು ಆ ಸಂದರ್ಭದಲ್ಲಿ ಕಣ್ಣಿಗೆ ಕಟ್ಟಿತು! ಆದರೆ ನಾವು ನಮಸ್ಕಾರ ಎಂದು ಬಾಯಿಯಲ್ಲಿ ಹೇಳದೆಯೇ ಇದ್ದರೂ ತಲೆಬಾಗಿ ಅವರೆದುರು ಕೂತಿದ್ದೆವು. ಮತ್ತೆ ನಮ್ಮನ್ನು ಎಲ್ಲಿಂದ ಬಂದದ್ದು ಎಂದೆಲ್ಲ ಕೇಳುತ್ತ ಚೆನ್ನಾಗಿ ಮಾತಾಡಿಸಿದರು.
ಪ್ರಸಾದ ಭೋಜನ
ಅವರೊಡನೆ ಮಾತಾಡಿ ಊಟಕ್ಕೆ ಕೂತೆವು. ಅನ್ನ ಸಾರು, ಚಪಾತಿ, ಗಸಿ. ಚಪಾತಿ ತಟ್ಟೆಗೆ ಬಡಿಸುವುದಿಲ್ಲ. ಚಪಾತಿ ಬಡಿಸುವಾಗ ಎರಡು ಕೈ ಹಿಡಿಯಬೇಕು. ಆಗ ನಮ್ಮ ಕೈಗೆ ಹಾಕುತ್ತಾರೆ. ಅದು ಪ್ರಸಾದವಂತೆ. ಎಲ್ಲವನ್ನೂ ಪದೇಪದೇ ಕೇಳುತ್ತ ಹೊಟ್ಟೆತುಂಬ ಬಡಿಸುತ್ತಾರೆ.
ತಟ್ಟೆ ಲೋಟಗಳನ್ನು ಸಾಬೂನು ನೀರಿನಲ್ಲಿ ತೊಳೆದು ಇಡುತ್ತಿದ್ದುದನ್ನು ಕಂಡೆವು. ವಿಶಾಲವಾದ ಸ್ಥಳದಲ್ಲಿ ದೊಡ್ಡ ದೊಡ್ಡ ಡಬರಿಯಲ್ಲಿ ಅಡುಗೆ ಮಾಡಿಟ್ಟಿರುವುದು ಕಂಡಿತು. ಚಹಾ ಕೂಡ ಇತ್ತು. ಎಲ್ಲವನ್ನೂ ಅವಗಾಹನೆ ಮಾಡಿ ನೋಡಿ ನಮ್ಮ ಕಾಣಿಕೆಯನ್ನು ಹುಂಡಿಗೆ ಹಾಕಿ ಕೋಣೆಗೆ ಬಂದೆವು. ಗುರುದ್ವಾರದಲ್ಲಿ ಕೂಡ ವಸತಿಗೆ ಕೋಣೆಗಳು ಸಿಗುತ್ತವೆ.
ನಗರಾಸು ನಿರ್ಗಮಿಸು
ಬೆಳಗ್ಗೆ (೨೨-೯-೨೦೧೬) ೫.೧೫ಕ್ಕೆ ಎದ್ದು ತಯಾರಾದೆವು. ೬ ಗಂಟೆಯೊಳಗೆ ಹೊರಡಬೇಕೆಂದು ಹೇಳಿದ್ದರು. ಆದರೆ ಹೊರಡುವಾಗ ೬.೫೦ ಆಗಿತ್ತು. ರಾತ್ರಿ ಬಸ್ಸಿನೊಳಗೆ ಲೈಟ್ ಉರಿದು ಬಸ್ ಬ್ಯಾಟರಿ ಚಾರ್ಜು ಕಡಿಮೆಯಾಗಿತ್ತು. ಅದನ್ನು ಮಂಗಾರಾಮ ಮತ್ತು ಸೋನು ಏನೋ ರಿಪೇರಿ ಮಾಡುತ್ತಿದ್ದರು. ಸೋನು ಬಸ್ಸಿನಡಿ ತೂರಿ ರಿಪೇರಿಯಲ್ಲಿ ಮಗ್ನನಾಗಿದ್ದ. ಬಸ್ಸಡಿಯಿಂದ ಹೊರಬಂದಾಗ ಮೈಪೂರ್ತಿ ಮಣ್ಣುಮೆತ್ತಿಕೊಂಡಿದ್ದ. ಕ್ಷಣದಲ್ಲಿ ಸ್ನಾನ ಮಾಡಿ ತಯಾರಾಗಿ ಬಸ್ಸೇರಿದ. ಈ ಮಧ್ಯೆ ನಾವು ಅಲ್ಲಿರುವ ಹೊಟೇಲಿನಲ್ಲಿ ಕಾಫಿ, ಚಹಾ ಕುಡಿದೆವು. ಮಂಗಾರಾಮ ಬೀಡಿ ಪ್ಯಾಕೆಟ್ ಕೊಂಡು ಜೇಬಿಗೆ ಹಾಕಿಕೊಳ್ಳುವುದನ್ನು ಮರೆಯಲಿಲ್ಲ! ಬೀಡಿ ಕಥಮ್ ಹೋಗಯಾ ಎಂದು ನಾನು ತಮಾಷೆಗೆ ಹೇಳಿದೆ. ಆಗ ಜೇಬಿನಿಂದ ಇನ್ನೊಂದು ಕಟ್ಟು ತೆಗೆದು ತೋರಿಸಿದರು! ನಿನ್ನೆ ಗುರುದ್ವಾರ ನೋಡದವರು ಅಲ್ಲಿಗೆ ಹೋಗಿ ನೋಡಿ ಬಂದರು.
ರುದ್ರಪ್ರಯಾಗ
ಅಂತೂ ನಮ್ಮ ಬಸ್ ನಗರಾಸು ಬಿಟ್ಟು ಹೊರಟು ೮ ಗಂಟೆಗೆ ರುದ್ರಪ್ರಯಾಗ ತಲಪಿತು. ರುದ್ರಪ್ರಯಾಗದಲ್ಲಿ ಶಿವನ ದೇವಾಲಯವಿದೆ. ಇಲ್ಲಿ ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮವಾಗುತ್ತದೆ. ಎರಡು ನದಿಗಳು ಕೂಡಿ ಮುಂದೆ ಹರಿಯುವುದನ್ನು ನೋಡುತ್ತ ನಿಂತರೆ ಸಮಯ ಸರಿಯುವುದು ಗೊತ್ತಾಗುವುದಿಲ್ಲ.
ಪುರಾಣದ ಪ್ರಕಾರ, ಶಿವ ರುದ್ರನ ಅವತಾರ ಹೊಂದಿ, ಸಂಗೀತದಲ್ಲಿ ಪರಿಣತಿ ಪಡೆಯಬೇಕೆನ್ನುವ ಅಭಿಲಾಷೆಯಿಂದ ಇಲ್ಲಿ ತಪಸ್ಸು ಮಾಡಿದ್ದನಂತೆ. ಇಲ್ಲಿ ನಾರದ ಮುನಿಗೆ ಆಶೀರ್ವಾದ ಮಾಡಿದ್ದನಂತೆ. ಅದರ ಕುರುಹಾಗಿ ನಾರದ ವಿಗ್ರಹ ಕೂಡ ಇದೆ. ಈ ಸ್ಥಳದ ಹತ್ತಿರದಲ್ಲಿ ಜಗದಂಬಾ ದೇವಾಲಯವನ್ನೂ ಕಾಣಬಹುದು.
ದೇವಾಲಯ ನೋಡಿ ಹೊರಟು ಹತ್ತಿರವಿರುವ ಹೊಟೇಲಿನಲ್ಲಿ ಪರೋಟ, ಚಪಾತಿ ತಿಂದು ೯.೧೫ಕ್ಕೆ ಮುಂದೆ ಹೊರಟೆವು.
ದಾರಿಮಾತಾ ಮಂದಿರ
ಇದು ಬದ್ರಿನಾಥ- ಶ್ರೀನಗರ ಹೆದ್ದಾರಿಯಲ್ಲಿ ಸಾಗುವಾಗ ಅಲಕನಂದಾ ನದಿ ಮಧ್ಯೆ ಕಾಣುತ್ತದೆ. ನದಿ ಮಧ್ಯೆ ಬೃಹತ್ತಾಗಿ ಕಟ್ಟಿದ್ದಾರೆ. ದೇವಾಲಯ ತಲಪಲು ಒಂದುಕೀಮೀ ಮೆಟ್ಟಲಿಳಿದು ಸೇತುವೆಯಲ್ಲಿ ದಾಟಿ ಹೋಗಬೇಕು. ನಾವು ಹತ್ತು ಗಂಟೆಗೆ ದೇವಾಲಯ ತಲಪಿದೆವು. ಸೇತುವೆಯುದ್ದಕ್ಕೂ ಗಂಟೆ ಕಟ್ಟಿದ್ದಾರೆ. ದೇವಾಲಯದ ಸಂದುಗೊಂದುಗಳಲ್ಲೂ ಗಂಟೆಗಳು ನೇತಾಡುತ್ತಿದ್ದುವು. ಬಹುಶಃ ಭಕ್ತರು ಹರಕೆ ಸಲ್ಲಿಸಲು ಗಂಟೆ ಕೊಟ್ಟದ್ದನ್ನೆಲ್ಲ ಕಟ್ಟಿದ್ದಾರೆ ಎನಿಸುತ್ತದೆ. ಇನ್ನು ಗಂಟೆ ಕೊಟ್ಟರೆ ಅಲ್ಲಿ ಕಟ್ಟಲೂ ಸ್ಥಳವಿಲ್ಲ. ಅದಕ್ಕಾಗಿಯೇ ಒಂದು ಕಟ್ಟಡ ನಿರ್ಮಾಣಗೊಂಡರೂ ಅಶ್ಚರ್ಯವಿಲ್ಲ! ನದಿ ಮಧ್ಯೆ ಕಾಳಿಯಮಂದಿರ. ನೋಡಲು ಚೆನ್ನಾಗಿದೆ. ತೂಗು ಸೇತುವೆ ಕೂಡ ಇದೆ. ಉತ್ತರಾಖಂಡದ ಚಾರ್ಧಾಮಗಳ ರಕ್ಷಕಿ ಈ ಕಾಳೀದೇವಿ ಎಂಬುದು ಅಲ್ಲಿಯ ಜನರ ನಂಬಿಕೆ.
ನಾವು ದೇವಾಲಯ ನೋಡಿ ಹತ್ತೂ ಮೂವತೈದಕ್ಕೆ ವಾಪಾಸು ಮೆಟ್ಟಲು ಹತ್ತಿ ಬಸ್ ಹತ್ತಿದೆವು. ಅಲ್ಲಿಂದ ಹೋಗುವ ರಸ್ತೆಯುದ್ದಕೂ ಮಾವು, ಬೇವು, ಕರಿಬೇವಿನ ಮರಗಳು ಕಂಗೊಳಿಸುತ್ತಿದ್ದುವು.
ದೇವಪ್ರಯಾಗ
೧೨.೪೫ಕ್ಕೆ ದೇವಪ್ರಯಾಗ ತಲಪಿದೆವು. ಮಾರ್ಗದಿಂದ ದೇವಾಲಯಕ್ಕೆ ಹೋಗಲು ಸುಮಾರು ನಡೆಯಬೇಕು. ನದಿ ದಾಟಲು ತೂಗು ಸೇತುವೆ ಇದೆ. ಅಲ್ಲಿ ಪೂಜೆ ಮಾಡಿಸಲು, ಕರ್ಮ ಮಾಡಿಸಲು ಪಂಡಿತರು ನಮ್ಮನ್ನು ಮುತ್ತಿಗೆ ಹಾಕಿದರು. ನಾವ್ಯಾರೂ ಅವರ ಮಾತಿಗೆ ಮರುಳಾಗಲಿಲ್ಲ. ನಮ್ಮಲ್ಲಿ ಕೆಲವರು ನದಿಯಲ್ಲಿ ಸ್ನಾನ ಮಾಡಿದರು.
ಉತ್ತರಾಖಂಡದ ಟೆಹ್ರಿ ಗಡ್ವಾಲ್ ಜಿಲ್ಲೆಯಲ್ಲಿರುವ ದೇವಪ್ರಯಾಗ ಹಿಂದೂಗಳ ಪವಿತ್ರ ಕ್ಷೇತ್ರಗಳಲ್ಲೊಂದು. ಸಂಸ್ಕೃತದಲ್ಲಿ ದೇವಪ್ರಯಾಗ ಅಂದರೆ ಪವಿತ್ರ ಸಂಗಮ. ಇಲ್ಲಿ ಅಲಕನಂದಾ ಬದರಿಯಿಂದ ಹರಿದು ಬಂದು ಭಾಗೀರಥಿ ಗೋಮುಖದಿಂದ ಹರಿದು ಬಂದು ಇಲ್ಲಿ ಇವೆರಡೂ ನದಿಗಳು ಸಂಗಮವಾಗುತ್ತವೆ. ಏಳನೇ ಶತಮಾನದಿಂದೀಚೆಗೆ ಈ ಪ್ರದೇಶ ಹಲವು ಹೆಸರುಗಳಿಂದ ಕರೆಸಿಕೊಂಡಿದೆ. ಮುಖ್ಯವಾಗಿ ಬ್ರಹ್ಮಪುರಿ, ಬ್ರಹ್ಮ ತೀರ್ಥ, ಶ್ರೀಖಂಡ ನಗರ ಮತ್ತು ಉತ್ತರಾಖಂಡದ ಜೆಮ್ ಅಂತಲೂ ಕರೆಯಲ್ಪಡುತ್ತಿತ್ತು. ಹಿಂದೂ ಧರ್ಮದ ಋಷಿ ದೇವ ಶರ್ಮಾ ಇಲ್ಲಿ ವಾಸಿಸುತ್ತಿದ್ದುದರಿಂದ ದೇವಪ್ರಯಾಗವೆಂಬ ಹೊಸ ಹೆಸರು ಬಂದು, ಅದೇ ಶಾಶ್ವತವಾಯಿತು.
ಇಲ್ಲಿ ನದಿಯ ದಡದ ಮೇಲೆ ಎತ್ತರದಲ್ಲಿ ರಾಮನ ದೇವಾಲಯವಿದೆ. ಹಿಂದೂಗಳಲ್ಲಿ ಚಾಲ್ತಿಯಲ್ಲಿರುವ ದಂತಕಥೆಗಳ ಪ್ರಕಾರ, ರಾಮ ಮತ್ತು ಆತನ ತಂದೆ ದಶರಥ ಮಹಾರಾಜ ಈ ಪ್ರದೇಶದಲ್ಲಿ ತಪಸ್ಸು ಕೈಗೊಂಡಿದ್ದರು. ಅದನ್ನು ಪುಷ್ಟೀಕರಿಸುವಂತೆ ಒಂದು ಕಟ್ಟೆ ಇದೆ ಅಲ್ಲಿ. ಅದೇ ಕಟ್ಟೆಯಲ್ಲಿ ಕೂತು ತಪಸ್ಸು ಮಾಡಿದ್ದು ಎಂದು ತೋರಿಸುತ್ತಾರೆ. ದೇವಾಲಯ ಬಾಗಿಲು ಹಾಕಿತ್ತು. ಅರ್ಚಕರು ಬಂದು ಬಾಗಿಲು ತೆರೆದರು. ನಾವು ತಟ್ಟೆಗೆ ದಕ್ಷಿಣೆ ದೊಡ್ಡ ನೋಟು ಹಾಕಲಿಲ್ಲವೆಂದು ಅರ್ಚಕರಿಗೆ ಸಿಟ್ಟುಬಂದು ಎಲ್ಲರೂ ಬರುವ ಮೊದಲೇ ಪುನಃ ದೇವಾಲಯದ ಬಾಗಿಲು ಹಾಕಿಬಿಟ್ಟರು.
ಹರಿದ್ವಾರದೆಡೆಗೆ ಗಮನ
ಅಲ್ಲಿಂದ ಬರುತ್ತ ದಾರಿಯಲ್ಲಿ ಸಮೋಸ ತಿಂದೆವು. ಮೇಲೆ ಹತ್ತಿ ರಸ್ತೆಗೆ ಬಂದು ನಿಂಬೆ ಪಾನಕ ಕುಡಿದು ಹತ್ತಿ ಬಂದ ಸುಸ್ತನ್ನು ಪರಿಹರಿಸಿಕೊಂಡೆವು. ೧.೪೫ಕ್ಕೆ ಅಲ್ಲಿಂದ ಹೊರಟೆವು. ದಾರಿಯುದ್ದಕ್ಕೂ ಅಲ್ಲಲ್ಲಿ ಆಕರ್ಷಕ ಸ್ಲೋಗನ್ಗಳ ಫಲಕ ಹಾಕಿದ್ದು ಕಂಡಿತು. ಉದಾಹರಣೆಗೆ:
This is highway not runway
Speed thrills but kills
Life is journey complete it
No race no rally enjoy the nature
Life is precious don‘t waste it
Land slide and rockfall zone
ದಾರಿಯಲ್ಲಿ ಒಂದು ಖಾನಾವಳಿಯಲ್ಲಿ ಊಟಕ್ಕೆ ನಿಲ್ಲಿಸಿದರು. ಅಲ್ಲಿ ಒಂದು ಥಾಲಿಗೆ ರೂ.೧೭೫. ನಾನು ತಂಗಿ ಸವಿತಳೂ ಒಂದು ಥಾಲಿ ತೆಗೆದುಕೊಂಡು ಹಂಚಿ ತಿಂದೆವು. ಅದೇ ಇಬ್ಬರಿಗೂ ಸಾಕಷ್ಟಾಗಿತ್ತು. ಮುಂದೆ ಋಷಿಕೇಶ ಮಾರ್ಗವಾಗಿ ಹರಿದ್ವಾರ ತಲಪುವಾಗ ಸಂಜೆ ಗಂಟೆ ಆರು ಆಗಿತ್ತು.
ರಾಮಭವನದಲ್ಲಿ ವಾಸ್ತವ್ಯ- ಸಾರಥಿ- ಸಹಾಯಕರಿಗೆ ವಿದಾಯ
ಬಸ್ಸಿಳಿದು ನಮ್ಮ ಬ್ಯಾಗ್ ಹೊತ್ತು ರಾಮಭವನಕ್ಕೆ ಬಂದೆವು. ಅಲ್ಲಿ ಮಂಗಾರಾಮ ಹಾಗೂ ಸೋನುಗೆ ಬೀಳ್ಕೊಡುಗೆ ಸಮಾರಂಭ. ಹತ್ತು ದಿನ ಬಹಳ ಚೆನ್ನಾಗಿ ಬಸ್ ಚಾಲನೆ ಮಾಡಿ ಸುರಕ್ಷತೆಯಿಂದ ನಮ್ಮನ್ನು ಇಲ್ಲಿಗೆ ತಲಪಿಸಿದ್ದಕ್ಕೆ ತುಂಬ ಧನ್ಯವಾದಗಳು ಎಂದು ನುಡಿದು ಮಂಗಾರಾಮನಿಗೆ ಉಡುಗೊರೆ ಕೊಟ್ಟರು. ನನ್ನಿಂದ ಏನಾದರೂ ತಪ್ಪಾಗಿದ್ದರೆ, ಬೀಡಿ ಸೇದಿ ತೊಂದರೆ ಕೊಟ್ಟದ್ದಕ್ಕೆ ಕ್ಷಮಿಸಿ ಎಂದು ಮಂಗಾರಾಮ ಪ್ರತಿಯಾಗಿ ನುಡಿದು ಕ್ಷಮೆ ಯಾಚಿಸಿದರು. ಸೋನುಗೆ ಉಡುಗೊರೆ ಕೊಟ್ಟು ಬೀಡಿ ಸೇದುವ ಚಟ ಕಲಿಯಬೇಡ. ಒಳ್ಳೆಯದಾಗಲಿ ಎಂದು ಶುಭಕೋರಿ ಅವರಿಬ್ಬರಿಗೆ ವಿದಾಯ ಹೇಳಿದೆವು. ಅವರೂ ನಮ್ಮನ್ನು ಆತ್ಮೀಯವಾಗಿ ಬೀಳ್ಕೊಂಡು ಹೊರಟರು.
ಉತ್ತರಾಖಂಡ ರಾಜ್ಯವನ್ನು “ದೇವಭೂಮಿ’’ಎಂಬ ಹೆಸರಿನಿಂದ ಕರೆಯುತ್ತಾರೆ. ನಿಜಕ್ಕೂ ಇದರ ಅನುಭವ ಆಯಿತು ನಮಗೆ. ದಾರಿಯಲ್ಲಿ ಎಲ್ಲಿಯೂ ನಮಗೆ ಹೆಂಡದ ಅಂಗಡಿ ಕಾಣಲಿಲ್ಲ. ಮಾಂಸಾಹಾರದ ಹೊಟೇಲೂ ಕಾಣಸಿಗಲಿಲ್ಲ. ಮತ್ತು ಎಲ್ಲೂ ಹೆಂಡ ಕುಡಿದು ಅಸಭ್ಯವಾಗಿ ವರ್ತಿಸುವ, ತೂರಾಡಿಕೊಂಡು ರಸ್ತೆ ಬದಿ ಬಿದ್ದಿರುವವರಾರೂ ಕಾಣಲಿಲ್ಲ. ನಾವು ಹೋದೆಡೆಯಲ್ಲೆಲ್ಲ ನಮಗೆ ನಗುನಗುತ್ತಲೇ ಉಪಚಾರ ಸೇವೆ ಒದಗಿಸಿದ್ದರು. ಎಲ್ಲೂ ಯಾರಿಂದಲೂ ಏನೂ ಅಪಚಾರ ಅಸಮಾಧಾನ ಆಗಿರಲಿಲ್ಲ.
ನಮ್ಮ ನಮ್ಮ ಕೋಣೆ ಸೇರಿ ಸ್ನಾನಾದಿ ಮುಗಿಸಿದೆವು. ಬಟ್ಟೆ ತೊಳೆಯುವವರು ತೊಳೆದು ಹರಗಿದರು. ಸರಸ್ವತಿ ಹಾಗೂ ಶಶಿಕಲಾ ರಾತ್ರೆ ಊಟಕ್ಕೆ ಅನ್ನ ಸಾರು ಮಾಡಿ ಬಡಿಸಿದರು. ತಿಂದು ಹೊಟ್ಟೆದೇವರನ್ನು ತೃಪ್ತಿಪಡಿಸಿ ಮಲಗಿದೆವು.
–ಮುಂದುವರಿಯುವುದು.
ನಮ್ಮ ಬೈಕ್ ಯಾನದಲ್ಲಿ ನನ್ನ ದೇಹಾರೋಗ್ಯ ಬಿಗಡಾಯಿಸಿದ್ದಕ್ಕೆ ನಮ್ಮ ಜೋಡಿಗೆ ಮಾತ್ರ ಭೇಟಿ ಕೊಡಲಾಗದ ಸ್ಥಳ ಬದರಿ – ಈಗ ಸುತ್ತಿ ಬಂದಂತಾಯ್ತು 🙂 (ವಸುಧಾರಾ ಅಬ್ಬಿ ಬರೆಯುತ್ತಿರುವಾಗ ಒಂದೆಡೆ ನಿನ್ನ ಮನಸ್ಸಿನಲ್ಲಿ ವಸುಂಧರಾ (ದೊರೆಸ್ವಾಮಿ?) ಬಂದ ಹಾಗಿದೆ)
೨೦೧೭ರಲ್ಲಿ ಹೋಗಬಹುದು.
ವಸುಂಧರಾ ಕಿತ್ತಾಕಿದೆ 🙂
ಸುಂದರ ಕಥಾನಕ. ನಾನೇ ಮತ್ತೊಮ್ಮೆ ಚಾರ್ಧಾಂ ಯಾತ್ರೆ ಮಾಡಿದಂತೆ ಅನಿಸಿತು. ಧನ್ಯವಾದಗಳು
ಗೋಪಾಲಕೃಷ್ಣ
9448252325
ಓದಿ ಪ್ರತಿಕ್ರಿಯಿಸಿದ್ದಕ್ಕೆ ವಂದನೆಗಳು.