ಸುಬ್ಬಮ್ಮ ಹಾಗೂ ಅವಳ ಅಣ್ಣ ಬಸಪ್ಪ ೪೦*೨೦ ಅಡಿ ಜಾಗವನ್ನು ಕೊಂಡು ಸಮಭಾಗ ಮಾಡಿ ಶೀಟ್ ಹೊದೆಸಿದ ಮನೆ ಕಟ್ಟಿಸಿಕೊಂಡಿದ್ದರು. ಎರಡೂ ಮನೆಯವರು ಅನ್ಯೋನ್ಯವಾಗಿಯೇ ಇದ್ದರು. ಇತ್ತೀಚೆಗೆ ವೈಮನಸ್ಯ ಹುಟ್ಟಿಕೊಂಡಿತು. ಕಾರಣ ಬಸಪ್ಪ ಅವನ ಮನೆ ಕೆಡವಿ ತಾರಸಿ ಮನೆ ಕಟ್ಟಲು ತೊಡಗಿದ್ದು. ಅದಕ್ಕೆ ಸುಬ್ಬಮ್ಮಳ ತಕರಾರು ಇರಲಿಲ್ಲ. ಇವಳ ಜಾಗವನ್ನು ಒತ್ತುವರಿ ಮಾಡಿ ಪಾಯ ತೆಗೆಯಲು ಮುಂದಾಗಿದ್ದು ನೋಡಿ ಸುಬ್ಬಮ್ಮನ ರಕ್ತದೊತ್ತಡ ಏರಿತು. ಎರಡೂ ಮನೆಗಳು ಒತ್ತುಗೋಡೆಯೊಂದಿಗೆ ಇತ್ತು. ಬಸಪ್ಪ ಮನೆ ಕೆಡವಿದ್ದೇ ಸುಬ್ಬಮ್ಮಳ ಮನೆ ಕುಸಿಯುವ ಅಪಾಯವಿತ್ತು. ಈ ತಲೆಬಿಸಿಯೂ ಸೇರಿ ಅವಳ ನೆಮ್ಮದಿ ಹಾಳಾಯಿತು.
ಒಂದು ಮಧ್ಯಾಹ್ನ ಸುಬ್ಬಮ್ಮ ಹಾಗೂ ಅವಳ ಮಗ ಸೂರ್ಯ ಆದಿಶೇಷನ ಮನೆ ಬಾಗಿಲಿಗೆ ಬಂದರು. ಆದಿಶೇಷ ಆಗತಾನೆ ಕಚೇರಿಯಿಂದ ಮನೆಗೆ ಊಟಕ್ಕೆ ಬಂದಿದ್ದ. ಆದಿಶೇಷ ಮನೆಯೊಳಗೆ ಬರಲು ಪುರುಸೊತ್ತಿಲ್ಲದೆ ಸುಬ್ಬಮ್ಮ ಹಾಗೂ ಸೂರ್ಯ, ‘ಬುದ್ಧಿಯವರೇ, ನಮ್ಮ ಮನೆ ಬೀಳುವ ಹಂತದಲ್ಲಿದೆ. ನಾವು ಎಲ್ಲಿಗೆ ಹೋಗಾಣ? ತಾರಸಿ ಮನೆ ಕಟ್ಟಲು ಒಸಿ ಸಹಾಯ ಮಾಡಿ. ಹೇಂಗಾರು ಸಾಲ ತೀರ್ಸಿತ್ತೀವಿ. ನಿಮ್ಮನ್ನೇ ನಂಬಿದ್ದೇವೆ’’ ಎಂದು ಕಣ್ಣೀರು ಸುರಿಸಿದರು. ಆದಿಶೇಷನದು ಮೊದಲೇ ಹೆಂಗುರುಳು. ಅವರ ಕಣ್ಣೀರು ನೋಡಿದರೆ ಮನಸ್ಸು ಕರಗದೆ ಇದ್ದೀತೆ? ಮರುಕಗೊಂಡು, ಆಯಿತು, ಮನೆ ಕೆಡವಿ ಕಟ್ಟಿಸಿ. ಕೆಲಸ ಸುರು ಮಾಡಿ ಎಂಬ ಖಚಿತ ಭರವಸೆಯನ್ನಿತ್ತ. ತಾಯಿಮಗ ಕಣ್ಣೀರು ಒರೆಸಿಕೊಳ್ಳುತ್ತ ಹೊಸ ಹುರುಪಿನಿಂದ ತೆರಳಿದರು.
ಸುಬ್ಬಮ್ಮನ ಮನೆ ಕೆಡವಿದ್ದಾಯಿತು. ಇವರ ಜಾಗವನ್ನು ಒತ್ತುವರಿ ಮಾಡಲು ಏನೇನೆಲ್ಲ ಕಸರತ್ತು ನಡೆಸಿದರು ಬಸಪ್ಪನ ಮಕ್ಕಳು. ಸುಬ್ಬಮ್ಮ ಅದಕ್ಕೆ ಬಿಲ್ಕುಲ್ ಅವಕಾಶ ಕೊಡಲಿಲ್ಲ. ನೀವು ನಿಮ್ಮ ಜಾಗ ಎಷ್ಟಿದೆಯೋ ಅಷ್ಟರಲ್ಲಿ ಮಾತ್ರ ಮನೆ ಕಟ್ಟಿ. ನಾವು ನಮ್ಮ ಜಾಗದಲ್ಲಿ ಮಾತ್ರ ಮನೆ ಕಟ್ಟುತ್ತೇವೆ ಎಂದು ಒಳ್ಳೆಯ ಮಾತಿನಲ್ಲಿ ಸುಬ್ಬಮ್ಮ ಹೇಳಿದಳು. ಅದಕ್ಕೆ ಬಸಪ್ಪನ ಮಕ್ಕಳ ತಕರಾರು. ಅದಕ್ಕಾಗಿ ಪ್ರತೀದಿನ ಮಾತು, ಜಗಳ ಹೊಡೆದಾಟ ನಡೆದಿತ್ತು. ಪರಸ್ಪರ ನಿಂದಿಸುವ ಬರದಲ್ಲಿ ಅಣ್ಣನ ಹೆಂಡತಿ ನಾಗಮ್ಮ ಕೋಪದಿಂದ ಸುಬ್ಬಮ್ಮನಿಗೆ ‘ನಿನ್ನ ಮಗನ್ನ ತಿನ್ನ’ ಎಂಬ ಪದಪುಂಜವನ್ನುದುರಿಸಿದಳು. ಅದು ಕೇಳಿದ್ದೇ ಸುಬ್ಬಮ್ಮ ಕೆಂಡಾಮಂಡಲ ಕೋಪಗೊಂಡು ‘ನಿನ್ನ ಬಾಯಿಗೆ ಮಣ್ಣು ಹಾಕ, ಚೆಂದಾಕಿರುವ ಇದ್ದೊಬ್ಬ ಮಗನಿಗೇ ಶಾಪ ಹಾಕುತ್ತೀಯಲ್ಲ, ನಿನಗೆ ಮನಸ್ಸಾದರೂ ಹೇಗೆ ಬಂತು? ನನಗೆ ಏನು ಬೇಕಾದರೂ ಅನ್ನು. ಅವನು ಇನ್ನೂ ಬಾಳಿ ಬದುಕಬೇಕಾದವನು. ಅವನಿಗೇ ಕೇಡು ಬಯಸುತ್ತೀಯಲ್ಲ’ ಎಂದು ದುಃಖಗೊಂಡು ನುಡಿದಳು. ಮತ್ತು ಅವಳಾಡಿದ ಮಾತಿಗೆ ಬಹುವಾಗಿ ನೊಂದಳು ಬೆಂದಳು. ನನಗೆ ಏನು ಬೇಕಾದರೂ ಹೇಳಲಿ. ನನ್ನ ಮಗನಿಗೆ ಏಕೆ ಹೀಗೆ ಹೇಳಬೇಕಿತ್ತು? ಅವನು ಮೂಗನಂಥ ಮಗ. ಯಾರಿಗೂ ತೊಂದರೆ ಕೊಡುವವನಲ್ಲ ಎಂಬುದು ಅವಳ ಹತಾಶ ನುಡಿ. ಆ ಪರಿಣಾಮ ಈಗ ಎರಡೂ ಮನೆಯವರಿಗೆ ಪರಸ್ಪರ ಮಾತಿಲ್ಲದ ಪರಿಸ್ಥಿತಿಗೆ ಬಂತು. ಅನ್ಯೋನ್ಯವಾಗಿದ್ದ ಎರಡು ಕುಟುಂಬದಲ್ಲಿ ಬಿರುಕು ಮೂಡಲು ಒಂದೇ ಒಂದು ಮಾತು ಕಾರಣವಾಯಿತು. ಅದಕ್ಕೆ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂಬ ಗಾದೆ ಹುಟ್ಟಿದ್ದು.
ಅಣ್ಣ, ತಂಗಿ ಇಬ್ಬರ ಮನೆಯ ಕೆಲಸ ಭರದಿಂದ ಸಾಗಿತು. ಆದಿಶೇಷ ಮಾತು ಕೊಟ್ಟಂತೆ ಮನೆ ಕಟ್ಟುವ ಹಂತ ಹಂತದಲ್ಲಿ ಬೇಕಾದ ಹಣ ಸಹಾಯ ಮಾಡಿದ. ಅದು ರೂ. ೫ ಲಕ್ಷದಷ್ಟು ವಿಸ್ತರಿಸಿತು. ಮನೆ ಒಂದನೇ ಅಂತಸ್ತು ಮುಗಿಯಿತು. ಅದರಲ್ಲಿ ಒಂದು ಕೋಣೆ, ಹಜಾರ, ಅಡುಗೆಮನೆ, ಕಕ್ಕಸು, ಸ್ನಾನದ ಮನೆ ಎಲ್ಲ ಅನುಕೂಲಗಳೂ ಸೇರಿದ್ದುವು. ಇಷ್ಟಕ್ಕೆ ಸುಬ್ಬಮ್ಮ ಸುಮ್ಮನಿದ್ದರೆ ಒಳ್ಳೆಯದಿತ್ತು. ಅಚ್ಚುಕಟ್ಟಾಗಿ ಸಂಸಾರ ನಿಭಾಯಿಸಿಕೊಂಡು ಹೋಗಬಹುದಿತ್ತು. ಮನೆ ಇಲ್ಲದಾಗ ಮನೆ ಬೇಕೆಂಬಾಸೆ, ಶೀಟ್ ಮನೆ ಕೆಡವಿ ತಾರಸಿ ಮನೆ ಕಟ್ಟಬೇಕೆಂಬಾಸೆ, ಆ ಮನೆ ಕಟ್ಟಿದಾಗ ಅದಕ್ಕೆ ಮಹಡಿ ಕಟ್ಟಿಸಬೇಕೆಂಬಾಸೆ ಹೀಗೆ ಮನುಜನ ಆಸೆಯೆಂಬ ಸರಪಣಿ ಮುಂದುವರಿಯುತ್ತಲೇ ಇರುತ್ತದೆ. ಆಸೆಗೆ ಎಲ್ಲೆ ಇಲ್ಲ. ಇದಕ್ಕೆ ಸುಬ್ಬಮ್ಮಳೂ ಹೊರತಲ್ಲ. ಮಹಡಿ ಕಟ್ಟಲು ಮುಂದಾದಳು! ಅದಕ್ಕೆ ಸೊಸೆಯ ಚಿನ್ನಾಭರಣ ಮಾರಿದಳು. ಬೇರೆಯವರ ಹತ್ತಿರ ಸಾಲ ಮಾಡಿದಳು. ಸೊಸೆಯೇ ಮುಂದೆ ಬಂದು ತನ್ನಲ್ಲಿದ್ದ ಚಿನ್ನವನ್ನು ಸ್ವ ಇಚ್ಛೆಯಿಂದ ಕೊಟ್ಟು ಇಷ್ಟಾದರೂ ಸಹಾಯವಾಗಲಿ ಎಂದು ಉದಾರತೆ ಮೆರೆದಳು. ಅಂತೂ ಸುಮಾರು ೭ ಲಕ್ಷಕ್ಕೆ ಮನೆ ಕಟ್ಟಿ ಮುಗಿಸಿ ಪ್ರವೇಶ ಸಮಾರಂಭವನ್ನೂ ಮಾಡಿದಳು. ಬಸಪ್ಪನ ಮನೆಯೂ ಅವಳದಕ್ಕಿಂತ ಮೊದಲೇ ಆಗಿತ್ತು. ಅವರು ಇವಳನ್ನು ಮನೆಗೆ ಕರೆಯಲಿಲ್ಲ, ಇವಳು ಅವರನ್ನು ತನ್ನ ಮನೆಗೆ ಕರೆಯಲಿಲ್ಲ. ಅಲ್ಲಿಗೆ ದ್ವೇಷ ಮುಂದುವರಿಯಿತು.
ಇನ್ನಾದರೂ ನೆಮ್ಮದಿಯಿಂದ ಹೊಸಮನೆಯಲ್ಲಿ ಜೀವನ ಸಾಗಿಸಬಹುದು ಎಂಬ ಕನಸು ಕಂಡಳು ಸುಬ್ಬಮ್ಮ. ಆದರೆ ಈ ಕನಸು ನನಸಾಗಲಿಲ್ಲ. ಶಿಥಿಲಗೊಂಡ ಮನೆ ಕೆಡವಿ ತಾರಸಿ ಮನೆಕಟ್ಟಲು ಸರಕಾರ ಸ್ವಲ್ಪ ಧನಸಹಾಯ ಮಾಡುತ್ತದೆ. ಆ ಮೊತ್ತ ಸುಬ್ಬಮ್ಮಳಿಗೆ ಸಿಕ್ಕಿತು. ಅದನ್ನು ಸಾಲದವರಿಗೆ ಕೊಟ್ಟು ಹಾಯಾಗಿರಬಹುದು ಎಂದು ಅವಳು ಭಾವಿಸಿದ್ದರೆ ಆ ನೆಮ್ಮದಿ ಅವಳಿಗೆ ನೀಡಲು ಸೊಸೆ ಸಿದ್ಧವಿರಲಿಲ್ಲ. ತನ್ನ ಚಿನ್ನ ವಾಪಾಸು ತೆಗೆಸಿಕೊಡು ಎಂಬ ಬೇಡಿಕೆ ಇಟ್ಟಳು. ಒಪ್ಪದೆ ಇದ್ದದ್ದಕ್ಕೆ ಮನೆಯಲ್ಲಿ ಏನೂ ಕೆಲಸ ಮಾಡದೆ ಮುಸುಕು ಹೊದ್ದು ಮಲಗಿ ಪ್ರತಿರೋಧ ತೋರಿದಳು. ಅದಕ್ಕೂ ಗಂಡ ಅತ್ತೆ ಬಗ್ಗದಿದ್ದಾಗ ಕೊನೇ ಅಸ್ತ್ರವಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾದಳು. ಇದಕ್ಕೆ ಹೆದರಿದ ಸುಬ್ಬಮ್ಮ, ಕಂಡವರ ಮನೆ ಹೆಣ್ಣುಮಗಳು ಹೆಚ್ಚುಕಮ್ಮಿ ಆದರೆ ಮತ್ತೆ ಮಾತು ಕೇಳಬೇಕು ಎಂದು ಚಿನ್ನ ತೆಗೆಸಿಕೊಡಲು ಒಪ್ಪಿದಳು. ಅವಳಿತ್ತ ಚಿನ್ನವನ್ನು ಮಾರಿದ ಅಂಗಡಿಯವನಿಂದಲೇ ಕೊಂಡು ಸೊಸೆ ಕೈಗೆ ಒಪ್ಪಿಸಿದಳು. ಅಂಗಡಿಯವನೂ ಆ ಚಿನ್ನದ ಆಭರಣಗಳನ್ನು ಕರಗಿಸದೆ ಹಾಗೆಯೇ ಇಟ್ಟಿದ್ದ. ಅವಳದೇ ಆಭರಣ ಆದಕಾರಣ ಹೆಚ್ಚುಕಮ್ಮಿ ಆಗಿದೆ ಎಂದು ಸೊಸೆ ದೂರುವಂತಿಲ್ಲ. ಹಾಗಾಗಿ ಸುಬ್ಬಮ್ಮಳಿಗೆ ಉಪಕಾರವಾಯಿತು. ಸಾಲ ತೀರಿಸಲು ಈಗ ಮಹಡಿ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾಳೆ. ಸುಬ್ಬಮ್ಮ ಹಾಗೂ ಸೂರ್ಯ ಹೊಟ್ಟೆಬಟ್ಟೆ ಕಟ್ಟಿ ಸಾಲ ತೀರಿಸಲು ಅಣಿಯಾಗಿದ್ದಾರೆ.
ಹೀಗಿರಲಾಗಿ ಬಸಪ್ಪನ ಹೆಂಡತಿ ನಾಗಮ್ಮಳ ಆರೋಗ್ಯ ಹದಗೆಟ್ಟಿತು. ಶಸ್ತ್ರಚಿಕಿತ್ಸೆಯಾಗಲೇಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಳು. ಸುಬ್ಬಮ್ಮಳ ಮಗ ಸೂರ್ಯ ಒಂದು ಆಸ್ಪತ್ರೆಯಲ್ಲಿ ಕೆಲಸದಲ್ಲಿರುವುದು. ಅದೇ ಆಸ್ಪತ್ರೆಗೆ ನಾಗಮ್ಮಳನ್ನು ದಾಖಲು ಮಾಡಿದರು. ಅಲ್ಲಿ ಬಸಪ್ಪನ ಮಕ್ಕಳು ಸೂರ್ಯನ ಬಳಿ ಹೋಗಿ ಸಹಾಯ ಯಾಚಿಸಿದರು. ಅವರು ಹಿಂದೆ ಮಾಡಿದ ತಪ್ಪಿಗೆ ಸೂರ್ಯ ದ್ವೇಷ ಸಾಧಿಸದೆ ಅವರಿಗೆ ಸಹಾಯಹಸ್ತ ಚಾಚಿದ. ಆ ಖಾಯಿಲೆಗೆ ಚಿಕಿತ್ಸೆ ಕೊಡುವ ಸಂಬಂಧಪಟ್ಟ ವೈದ್ಯರನ್ನು ಭೇಟಿಯಾಗಲು ಹೇಳಿದ. ಆಸ್ಪತ್ರೆಯಲ್ಲಿ ನಾಗಮ್ಮಳಿಗೆ ಬೇಕಾದ ಸಹಾಯ ಒದಗಿಸಿದ. ನಾಗಮ್ಮ ಆಸ್ಪತ್ರೆಯಲ್ಲಿದ್ದ ಒಂದು ವಾರವೂ ತಪ್ಪದೆ ಪ್ರತೀದಿನ ಬಂದು ಕ್ಷೇಮ ವಿಚಾರಿಸಿ ಬೇಕಾದ ಸಹಾಯ ಮಾಡಿದ್ದ.
ನಾಗಮ್ಮ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಸೂರ್ಯನಲ್ಲಿ, ‘ನಿನ್ನ ಅಮ್ಮನನ್ನು ಇಲ್ಲಿಗೆ ಕರೆದುಕೊಂಡು ಬಾ. ಅವಳ ಜೊತೆ ಮಾತಾಡಬೇಕು, ಅವಳನ್ನು ಒಮ್ಮೆ ಕಣ್ಣುತುಂಬ ನೋಡಬೇಕು. ಅವಳ ಜೊತೆ ಮಾತಾಡಿದಮೇಲೆ ನಾನು ಸತ್ತರೂ ಪರವಾಗಿಲ್ಲ’ ಎಂದು ವಿನಂತಿಸಿದಳು. ಸೂರ್ಯ ಅಮ್ಮನನ್ನು ಕರೆದುಕೊಂಡು ಬರುತ್ತೇನೆ ಎಂದು ಭರವಸೆ ಇತ್ತಮೇಲೆಯೇ ಅವಳು ಸಮಾಧಾನ ಹೊಂದಿ ಆ ದಿನ ನಿದ್ರಿಸಿದ್ದು.
ನಾಗಮ್ಮ ಆಸ್ಪತ್ರೆಗೆ ದಾಖಲಾದದ್ದು, ಅವಳು ಸುಬ್ಬಮ್ಮಳೊಡನೆ ಮಾತಾಡಲು ಇಚ್ಛೆಪಟ್ಟದ್ದು, ಅವಳಿಗೆ ನಾಡಿದ್ದು ಶಸ್ತ್ರಚಿಕಿತ್ಸೆ ಇತ್ಯಾದಿ ನಡೆದ ಸಂಗತಿಯನ್ನು ಸೂರ್ಯ ಮನೆಯಲ್ಲಿ ಸುಬ್ಬಮ್ಮಳಿಗೆ ಹೇಳಿದ. ನಾನು ಅವಳ ಮುಖ ನೋಡಲ್ಲ. ‘ನಿನ್ನ ಮಗನ್ನ ತಿನ್ನ’ ಎಂದು ಶಾಪ ಹಾಕಿದವಳನ್ನು ನಾನು ನೋಡಬೇಕೆ? ಅದು ಈ ಜನ್ಮದಲ್ಲಿ ಸಾಧ್ಯವೇ ಇಲ್ಲ. ನೀನು ಮೂಖ ಬಸವನಂಗೆ ಒಪ್ಪಿದ್ದು ಏಕೆ? ಅವರು ಅಷ್ಟೊಂದು ಜಗಳಾಡಿದ್ದು ಎಲ್ಲ ಮರೆತು ಹೋಯಿತೆ? ನೀನು ಹೋಗಿ ಹೋಗಿ ಅವರಿಗೆ ಸಹಾಯ ಮಾಡಿದ್ದೀಯಲ್ಲ. ನಿನ್ನ ಬುದ್ಧಿಗೆ ಏನನ್ನಬೇಕು? ಹೋಗು ಹೋಗು ನಾನಂತೂ ಬರಲ್ಲ. ನನ್ನ ಕರೆಯಲೇಬೇಡ. ಅವರನ್ನು ಕಂಡರೆ ನನ್ನ ಹೊಟ್ಟೆ ಉರಿಯುತ್ತದೆ.
ಹಾಗಲ್ಲವ್ವ. ಅವಳು ಕೋಪದ ಬರದಲ್ಲಿ ಬಾಯಿತಪ್ಪಿ ಏನೋ ಹೇಳಿದ್ದಕ್ಕೆ ನೀನು ಮುನಿಸಿಕೊಂಡರೆ ಹೇಗೆ? ಅವಳೀಗ ಖಾಯಿಲೆ ಬಿದ್ದಿದ್ದಾಳೆ. ನಿನ್ನ ನೋಡಬೇಕೆಂದು ಆಸೆ ಪಟ್ಟಿದ್ದಾಳೆ. ಒಮ್ಮೆ ಬಂದು ಮುಖ ತೋರಿಸು ಸಾಕು. ಮಾತಾಡದಿದ್ದರೂ ಪರವಾಗಿಲ್ಲ. ನೀನು ತಿಳಿದವಳು ಹೀಗೆ ಹಠ ಮಾಡುತ್ತೀಯಲ್ಲ? ಅವಳೀಗ ಹಿಂದೆ ಆಡಿದ ಮಾತಿಗೆ ಪಶ್ಚಾತ್ತಾಪ ಪಟ್ಟಿದ್ದಾಳೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟರೆ ಅದು ತೊಳೆದು ಹೋಗುತ್ತೆ ಎಂದು ದೊಡ್ಡವರು ಹೇಳಿಲ್ವೆ? ಬಾ ಅವ್ವ. ಎಂದು ಗೋಗರೆದ.
ನೀನು ಏನು ಹೇಳಿದರೂ ನಾನು ಮಾತ್ರ ಅವಳನ್ನು ನೋಡಲ್ಲ. ಚೆಂದಾಕಿರುವ ನಿನಗೆ ಸಾವು ಬರಲಿ ಎಂದು ಶಾಪ ಹಾಕಿ ನಮಗೆ ಕೇಡು ಬಗೆದವಳನ್ನು ನಾನು ಎಂದಿಗೂ ಕ್ಷಮಿಸಲ್ಲ. ನೀನು ಏನು ಬೇಕಾದರೂ ಮಾಡು. ಅವರ ಮನೆ ಬಾಗಿಲಿಗೆ ಹೋಗು. ನಾನು ಮಾತ್ರ ಬರುವುದಿಲ್ಲ ಎಂದು ನಿಷ್ಠುರದಿಂದ ಖಡಾಖಂಡಿತವಾಗಿ ನುಡಿದಳು. ಅಮ್ಮನನ್ನು ಇನ್ನು ಒಪ್ಪಿಸಲು ಸಾಧ್ಯವಿಲ್ಲ. ಅಮ್ಮ ಬರಲ್ಲ ಎಂದು ನಾಗಮ್ಮಳಿಗೆ ಹೇಗೆ ಹೇಳಲಿ? ಎಂದು ಸೂರ್ಯ ಅಸಹಾಯಕತೆಯಿಂದ ಖಿನ್ನಮನಸ್ಕನಾದ.
**
ನನ್ನ ಮಗನಿಗೆ ಶಾಪ ಹಾಕಿದವಳು ಈಗ ಆಸ್ಪತ್ರೆಯಲ್ಲಿ ಮಲಗಿದ್ದಾಳೆ. ಈಗ ಅವಳು ನನ್ನನ್ನು ನೋಡಬೇಕೆಂದು ಸೂರ್ಯನ ಬಳಿ ಹೇಳಿ ಕಳುಹಿಸಿದ್ದಾಳೆ. ನಮಗೆ ಕೆಟ್ಟದ್ದು ಬಯಸಿದವಳನ್ನು ನಾನೇಕೆ ನೋಡಲು ಹೋಗಲಿ? ನಾನು ಬರಲ್ಲ ಅಂತ ಅವಳಿಗೆ ಹೇಳು ಎಂದು ಮಗನಿಗೆ ಹೇಳಿದೆ. ನೀವೇ ಹೇಳಿ ನಾನು ಮಾಡಿದ್ದೇ ಸರಿ ಅಲ್ವ ಅವ್ವ? ಈ ಸುದ್ದಿಯನ್ನು ಆದಿಶೇಷನ ಪತ್ನಿ ವೈದೇಹಿಗೆ ಕೇಳಿದಳು ಸುಬ್ಬಮ್ಮ.
ನೋಡು ಸುಬ್ಬಮ್ಮ, ಒಂದು ಗಾದೆ ಮಾತಿದೆ. ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂದು. ಅದಕ್ಕೆ ನಾವು ಮಾತು ಆಡುವಾಗ ಬಲು ಎಚ್ಚರದಿಂದ ಆಡಬೇಕು. ಏನೋ ಸಿಟ್ಟಿನ ಬರದಲ್ಲಿ ಅವಳು ಮಾತಾಡಿದ್ದಾಳೆ. ಮುತ್ತು ಒಡೆದಿದೆ. ಆದರೆ ಅದಕ್ಕೆ ಅವಳೀಗ ಪಶ್ಚಾತ್ತಾಪ ಪಟ್ಟಿದ್ದಾಳಲ್ಲ. ಎಲ್ಲ ಪಾಪ ಕಾರ್ಯಕ್ಕೂ ಪಶ್ಚಾತ್ತಾಪವೇ ಮದ್ದು ಎಂದು ನಿನಗೂ ಗೊತ್ತಿದೆಯಲ್ಲ. ಈಗ ನಿನ್ನ ನೋಡಬೇಕೆಂದು ಹೇಳಿ ಕಳುಹಿಸಿದ್ದಾಳಲ್ಲ. ಹಾಗಾಗಿ ಅವಳು ಪಶ್ಚಾತ್ತಾಪ ಪಟ್ಟಿದ್ದಾಳೆಂದೇ ಅರ್ಥ. ಅವಳನ್ನು ನೀನು ನೋಡಲೇಬೇಕು. ಅವಳು ಹೇಳಿದ್ದು ಅಕ್ಷಮ್ಯ ತಪ್ಪೇ ಆದರೂ ಈಗ ಅವಳನ್ನು ದೊಡ್ಡಮನಸ್ಸು ಮಾಡಿ ಕ್ಷಮಿಸಿಬಿಡು. ಅವಳು ಮಾಡಿದ ತಪ್ಪು ಅವಳಿಗೆ ಅರಿವಾಗಿದೆ. ಈಗ ಅದಕ್ಕಾಗಿ ನೋವು ತಿನ್ನುತ್ತಿದ್ದಾಳೆ. ಉದಾರ ಮನಸ್ಸು ಮಾಡಿ ಅವಳನ್ನು ಒಮ್ಮೆ ನೋಡಿಬಿಡು. ‘ನಾಯಿ ಬೊಗಳಿದರೆ ದೇವಲೋಕ ಹಾಳಾದೀತೆ?’ ಎಂದು ಆಗಾಗ ನೀನೇ ಗಾದೆ ಮಾತು ಹೇಳುತ್ತಿರುತ್ತೀಯಲ್ಲ. ಅಷ್ಟೆಲ್ಲ ತಿಳಿದ ನೀನೇ ಈಗ ಹೀಗೆ ಕೋಪಿಸಿಕೊಂಡರೆ ಸರಿಯಾಗಲ್ಲ ಅಲ್ವೆ? ಹಾಗಾಗಿ ಹಳೆಯದೆಲ್ಲವನ್ನೂ ಮರೆತು ಹೋಗಿ ಅವಳ ಎದುರು ನಿಲ್ಲು. ಅವಳ ಮನಸ್ಸು ನಿರಾಳವಾಗುತ್ತದೆ. ಜೊತೆಗೆ ನಿನ್ನ ಮನಸ್ಸು ಕೂಡ ನೆಮ್ಮದಿ ಹೊಂದುತ್ತದೆ. ನೀನು ಈಗ ಹೋಗದಿದ್ದರೆ ಜೀವನಪೂರ್ತಿ ಅವಳು ಹೇಳಿದ ಮಾತು ‘ನಿನ್ನ ಮಗನ್ನ ತಿನ್ನ’ ಎಂಬುದು ನಿನ್ನ ಮನದಲ್ಲೇ ಉಳಿದು ನಿನಗೆ ಆಗಾಗ ಹಿಂಸೆಯನ್ನು ಕೊಡುತ್ತಿರುತ್ತದೆ. ಅದರಿಂದ ನೀನು ಕೊರಗುತ್ತಿರುತ್ತಿ. ಅಲ್ಲಿ ಹೋಗಿ ಅವಳಲ್ಲಿ ಮಾತಾಡಿದರೆ ಹಿಂದಿನ ಕಹಿ ಮರೆತು ಇಬ್ಬರ ಮನಸ್ಸು ಶುದ್ಧವಾಗಿ ನೆಮ್ಮದಿ ಲಭಿಸುತ್ತದೆ. ನಿನ್ನ ಮಗನದು ನೋಡು ಎಷ್ಟು ದೊಡ್ಡ ಮನಸ್ಸು. ಅವನ ತಾಯಿಯಾಗಿ ನೀನು ಹೀಗಿದ್ದರೆ ಅವನಿಗೆ ಎಷ್ಟು ನೋವು ಅಲ್ವೆ? ಯೋಚನೆ ಮಾಡು. ನನ್ನ ಅಭಿಪ್ರಾಯ ಇದು. ಮತ್ತೆ ನಿನ್ನ ಇಷ್ಟದಂತೆ ಮಾಡು. ವೈದೇಹಿ ನಯವಾಗಿ ಅವಳಿಗೆ ನೋವಾಗದಂತೆ ಹೇಳಿದಳು.
ಹೌದವ್ವ, ಸೂರ್ಯನೂ ಹೀಂಗೇ ಹೇಳಿದ್ದ. ನಾವು ಕೈಲಾದರೆ ಒಬ್ಬರಿಗೆ ಉಪಕಾರ ಮಾಡಬೇಕೇ ಹೊರತು ನೋವು ಕೊಡಬಾರದು. ದ್ವೇಷ ಸಾಧಿಸಿ ಏನು ಫಲ? ಎಂದಿದ್ದ ಅವ್ವ. ಅವನಿಗೆ ಇರುವ ಬುದ್ಧಿ ನನಗಿಲ್ಲದೆ ಹೋಯಿತಲ್ಲ. ನನ್ನ ಬುದ್ಧಿಗಿಷ್ಟು ಮಣ್ಣುಹಾಕ. ಇವತ್ತೇ ಸಂಜೆ ಆಸ್ಪತ್ರೆಗೆ ಹೋಗಿ ನಾಗಮ್ಮಳನ್ನು ನೋಡಿ ಮಾತಾಡಿ ಬರುತ್ತೇನೆ. ಆಪರೇಶನ್ ಚೆನ್ನಾಗಿ ಆಗಿ ಮನೆಗೆ ಬಾ ಅನ್ನುತ್ತೇನೆ. ಅವಳು ಹೇಳಿದ ಮಾತನ್ನು ಮರೆಯುತ್ತೇನೆ ಎಂದು ನುಡಿದು ಗೆಲುವಿನಿಂದ ಮನೆಗೆ ಧಾವಿಸಿದಳು.
ವಿಕ್ರಮ ವಿಶೇಷಾಂಕ ೨೦೧೫
ನಿಮ್ಮ ಟಿಪ್ಪಣಿ ಬರೆಯಿರಿ