ಮೊದಲ ಭಾಗ
ಈ ಬಾರಿ ಯೂಥ್ ಹಾಸ್ಟೆಲ್ ಕರ್ನಾಟಕ ಘಟಕ ಆಯೋಜಿಸಿರುವ ರಾಜ್ಯಮಟ್ಟದ ಪಶ್ಚಿಮಘಟ್ಟದ ಚಾರಣವನ್ನು ಮುನ್ನಡೆಸುವ ಹೊಣೆಗಾರಿಕೆ ಗಂಗೋತ್ರಿ ಘಟಕ ಮೈಸೂರು ವಹಿಸಿಕೊಂಡಿತ್ತು. ಒಂದು – ಎರಡು ದಿನಗಳ ಚಾರಣಕ್ಕೆ ಹೋಗಿ ಗೊತ್ತೇ ಹೊರತು ಐದು ದಿನಗಳ ಈ ಚಾರಣ ನನಗೆ ಹೊಸತು. ೩ ತಿಂಗಳ ಮೊದಲೇ ಈ ಚಾರಣ ಕೈಗೊಳ್ಳಬೇಕು ಎಂಬ ಕನಸು ಕಂಡಿದ್ದೆ. ಅದು ನೆರವೇರಿಯೇಬಿಟ್ಟಿತು. ಚಾರಣ ಹವ್ಯಾಸ ಒಮ್ಮೆ ನಮಗೆ ಅಂಟಿಕೊಂಡಿತೆಂದರೆ ಮತ್ತೆ ಎಷ್ಟು ಒದರಿದರೂ ಬಿಡುವ ಪೈಕಿ ಅಲ್ಲ!
ಒಟ್ಟು ಐದು ತಂಡ (ದಶಂಬರ ೨೦೧೪ ೭- ೧೫) ಒಂದೊಂದು ತಂಡದಲ್ಲಿ ೪೦ ಜನರಿಗೆ ಅವಕಾಶ. ಪ್ರಕೃತಿಯನ್ನು ಅರಿಯುವ, ಮಲೆನಾಡಿನ ಜನಜೀವನ ತಿಳಿಯುವ, ಅರಣ್ಯದ ಸೊಬಗು ಪರಿಚಯಿಸುವ ಕಾರ್ಯಕ್ರಮವೇ ಈ ಪಶ್ಚಿಮಘಟ್ಟದ ಚಾರಣದ ಉದ್ದೇಶ. ನಗರಜೀವನದ ಗಡಿಬಿಡಿ, ಗದ್ದಲದಿಂದ ಒಂದಷ್ಟು ದಿನ ದೂರವಿದ್ದು ಅಪ್ಪಟ ಗ್ರಾಮಜೀವನದ ಅನುಭವ ಸವಿಯುವ ಅಮೂಲ್ಯ ಅವಕಾಶ.
ಶೀಗೇಕೇರಿಯತ್ತ ದೂರದೃಷ್ಟಿ
ದಶಂಬರ ೮ನೇ ತಾರೀಕಿನಂದು ರಾತ್ರೆ ೧೦.೩೦ಕ್ಕೆ ಮೈಸೂರಿನಿಂದ ಹುಬ್ಬಳ್ಳಿ ಧಾರವಾಡ ರೈಲಿನಲ್ಲಿ ನಾವು ಪ್ರಯಾಣಿಸಿದೆವು. ತಾರೀಕು ೯-೧೨-೨೦೧೪ ಬೆಳಗ್ಗೆ ೮ ಗಂಟೆಗೆ ಹುಬ್ಬಳ್ಳಿಯಲ್ಲಿ ರೈಲಿಳಿದು ಹತ್ತಿರದಲ್ಲೇ ಇದ್ದ ಕಾಮತ್ ಖಾನಾವಳಿಯಲ್ಲಿ ತಿಂಡಿ ತಿಂದು ಒಂದು ಕಿಮೀ ದೂರ ನಡೆದು ಬಸ್ ನಿಲ್ದಾಣ ತಲಪಿದೆವು. ೯.೧೫ಕ್ಕೆ ಯಲ್ಲಾಪುರಕ್ಕೆ ಹೋಗುವ ಬಸ್ ಹತ್ತಿದೆವು. ೧೦.೪೫ಕ್ಕೆ ಯಲ್ಲಾಪುರದಲ್ಲಿಳಿದೆವು. ಅಲ್ಲಿಂದ ಬಾರೆ, ಶೀಗೇಕೇರಿಗೆ ಹೋಗುವ ಬಸ್ಸಿಗೆ ಹತ್ತಿದೆವು. ೧೧.೧೫ಕ್ಕೆ ಹೊರಟು ಬಾರೆ ತಿರುವಿನಲ್ಲಿಳಿದೆವು. ಬಸ್ ಬಾರೆ ಊರಿಗೆ ಹೋಗಿ ತಿರುಗಿ ಬಂತು. ಮತ್ತೆ ಅದೇ ಬಸ್ ಹತ್ತಿ ೧೨.೪೫ಕ್ಕೆ ಶೀಗೇಕೇರಿ ಊರು ತಲಪಿದೆವು.
ಅಲ್ಲಿ ನಾರಾಯಣ ಭಟ್ಟರು ನಮ್ಮನ್ನು ಸ್ವಾಗತಿಸಿ, ತಂಪು ಕಷಾಯ- ತಂಬ್ಳಿ ಕೊಟ್ಟರು. ಅಲ್ಲಿಂದ ಸುಮಾರು ೩ಕಿಮೀ ನಡೆದು ಶೀಗೇಕೇರಿ ಶಾಲೆ ತಲಪಿದೆವು. ದಶಂಬರ ೯ರಿಂದ ೧೩ರ ತನಕ ಒಟ್ಟು ಐದು ದಿನಗಳ ಚಾರಣದಲ್ಲಿ ನಾವು ಮೊದಲು ಉತ್ತರಕನ್ನಡದ ಯಲ್ಲಾಪುರ ಜಿಲ್ಲೆಯ ಶೀಗೇಕೇರಿ ಕ್ಯಾಂಪಿಗೆ ಮಧ್ಯಾಹ್ನ ತಲಪಿಕೊಂಡೆವು. ಮೈಸೂರು, ಬೆಂಗಳೂರು, ಮಹಾರಾಷ್ಟ್ರ, ಕೇರಳ, ಸಾಗರ ಇತ್ಯಾದಿ ಊರುಗಳಿಂದ ಬಂದು ಸೇರಿದ ನಾವು ಒಟ್ಟು ೩೭ ಮಂದಿ ಇದ್ದೆವು. ಅಲ್ಲಿ ಅನ್ನ, ಸಾರು, ಸಾಂಬಾರು, ಪಲ್ಯ, ಹಪ್ಪಳ, ಕೇಸರಿಭಾತ್ ಭರ್ಜರಿ ಊಟ ಮಾಡಿ ವಿಶ್ರಾಂತಿ.
ನಮಗೆ ಹೊಸದಾಗಿ ಕಟ್ಟಿದ ಮನೆಯೊಂದರಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಿದ್ದರು. ಯಾರಾದರೂ ಅಧ್ಯಾಪಕರು ಶಾಲೆಗೆ ನೇಮನಗೊಂಡರೆ ಎಂದು ಕಟ್ಟಿಸಿದ್ದಂತೆ. ಅಲ್ಲಿ ನಮಗೆಲ್ಲ ಟೊಪ್ಪಿ, ಟಿಶರ್ಟ್ ಕೊಟ್ಟು ನಮ್ಮ ಹೆಸರು ಭಾವಚಿತ್ರವಿರುವ ಗುರುತಿನ ಚೀಟಿ ಕೊಟ್ಟರು.
ಸೂರ್ಯಕಲ್ಯಾಣಿ ಗುಡ್ಡದತ್ತ ದೌಡು!
ಸಂಜೆ ೩ಕಿಮೀ ದೂರದ ಸೂರ್ಯಕಾಂತಿಗುಡ್ಡಕ್ಕೆ ಹೋಗುವ ಮೂಲಕ ಚಾರಣಕ್ಕೆ ಮುನ್ನುಡಿ ಬರೆದೆವು. ಶೋಲಾ ಕಾಡು. ಗಿಡಮರಗಳು ಎತ್ತರವಿಲ್ಲ. ಕುರುಚಲು ಗಿಡ, ಹುಲ್ಲುಗಳು. ಬೆಟ್ಟದಲ್ಲಿ ಹುಲ್ಲು ಚೆನ್ನಾಗಿ ಬೆಳೆದಿತ್ತು. ಮೊದಲ ಎರಡು ಗುಂಪು ಈ ಮೊದಲೇ ಅಲ್ಲಿ ನಡೆದ ಕಾರಣ ದಾರಿ ನಮಗೆ ಸುಗಮವಾಗಿತ್ತು! ಆರ್ಕಿಡ್ ಸಸ್ಯಗಳನ್ನು ಕಂಡೆವು.
ಆ ಸಂಜೆ ಹುಲ್ಲಿನ ಮೇಲೆ ಸೂರ್ಯನ ಬೆಳಕು ಹರಡಿ ಹುಲ್ಲು ಸುವರ್ಣವರ್ಣದಲ್ಲಿ ಕಾಂತಿ ಬೀರುವುದನ್ನು ನೋಡಿ ತಣಿದೆವು.
ಗುಡ್ಡದ ಮೇಲಿಂದ ಸೂರ್ಯ ಅಸ್ತಂಗತನಾಗುವುದನ್ನು ಕಣ್ಣುತುಂಬಿಸಿಕೊಂಡೆವು. ಜೋಳದ ಕುರುಕಲು, ಚಹಾ ಸೇವನೆಯಾಗಿ ಕೆಳಗೆ ಇಳಿದೆವು.
ಶೀಗೇಕೇರಿ ಶಾಲೆಯ ಏಕೋಪಾಧ್ಯಾಯರು ನಾರಾಯಣ ಭಟ್. ಐದನೇ ತರಗತಿ ವರೆಗೆ ಇದೆ. ಉಪಾಧ್ಯಾಯರು ಬರುವುದೇ ಇಲ್ಲವಂತೆ ಅಲ್ಲಿಗೆ. ಅವರೊಬ್ಬರೇ ಮಕ್ಕಳನ್ನು ಸುಧಾರಿಸಿ ಪಾಟ ಮಾಡಬೇಕು. ಅವರ ಮನೆ ಶಾಲೆ ಸಮೀಪದಲ್ಲಿಯೇ ಇದೆ. ಆ ಊರು ತಲಪಬೇಕಾದರೆ ಬಸ್ಸಿಳಿದು ೩ಕಿಮೀ ನಡೆದೇ ಹೋಗಬೇಕು. ಬೇರೆ ಸಾರಿಗೆ ವ್ಯವಸ್ಥೆ ಇಲ್ಲ. ಹೆಚ್ಚಿನ ಮನೆಯವರು ಬೈಕ್ ಇಟ್ಟುಕೊಂಡಿದ್ದಾರೆ. ಊರವರು ಮನೆಗೆ ವಿದ್ಯುತ್ ಸಮಸ್ಯೆಗೆ ಸೋಲಾರ್ ವ್ಯವಸ್ಥೆ ಮಾಡಿಕೊಂಡಿದ್ದಾರಂತೆ.
ನಾರಾಯಣ ಭಟ್ ದಂಪತಿಗಳು, ಅವರ ಮಗಳು ಸ್ಮಿತಾ, ಅವರ ನೆಂಟರಿಷ್ಟರು ಸೇರಿ ರಾತ್ರೆಗೆ ಅಡುಗೆ ತಯಾರಿಯಲ್ಲಿದ್ದರು. ಒಂದಿಬ್ಬರು ಚಪಾತಿ ಲಟ್ಟಿಸುತ್ತಿದ್ದರು. ಸೌದೆ ಹಾಕಿ ದೊಡ್ಡ ಹಂಚಿನಲ್ಲಿ ಇಬ್ಬರು ಚಪಾತಿ ಬೇಯಿಸುತ್ತಿದ್ದರು. ಒಲೆಯಲ್ಲಿ ಅನ್ನ ಬೇಯುತ್ತಿತ್ತು. ಇನ್ನೊಂದೆಡೆ ರುಬ್ಬುವ ಯಂತ್ರದಲ್ಲಿ ಬೆಳಗಿನ ತಿಂಡಿ ದೋಸೆಗೆ ಹಿಟ್ಟು ತಯಾರಾಗುತ್ತಿತ್ತು. ನಾವು ೩೭ ಮಂದಿ, ಮೈಸೂರಿನ ಗಂಗೋತ್ರಿ ಘಟಕದ ಸೇವಾ ಕಾರ್ಯಕರ್ತರು, ಊರವರು ಎಲ್ಲ ಸೇರಿ ಸುಮಾರು ೫೦ಕ್ಕೂ ಹೆಚ್ಚು ಜನರಿದ್ದರು.
ಸ್ಥಳೀಯ ಮಕ್ಕಳ ಪ್ರತಿಭಾವರಣ
ಸ್ನಾನ ಮಾಡಿ ಶುಚಿಯಾಗಿ ಕೂತೆವು. ಸ್ನಾನಕ್ಕೆ ಹಂಡೆಯಲ್ಲಿ ಬಿಸಿನೀರು ಕಾಯಿಸಿದ್ದರು. ಸಂಜೆ ೭ ಗಂಟೆಗೆ ಬಿಸಿ ಬಿಸಿ ಸೂಪು. ೭.೩೦ಕ್ಕೆ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ದೊಡ್ಡ ಹಾಲಿನಲ್ಲಿ ನಡೆದುವು. ಹಾಡು, ನೃತ್ಯ, ಇತ್ಯಾದಿ. ಮಕ್ಕಳ ಉತ್ಸಾಹ, ಅವರ ಪ್ರತಿಭೆ ನೋಡಿ ನಾವೆಲ್ಲ ಹರುಷಗೊಂಡೆವು. ಗಾಂಧೀ ವೇಷಧಾರಿ ಘನಗಂಭೀರದಿಂದ ಚರಕದೆದುರು ಕೂತು ನೂತದ್ದು, ಬಬ್ರುವಾಹನ- ಅರ್ಜುನ ಮಾತುಕತೆಯ ಸ್ಮಿತಾಳ ಏಕಪಾತ್ರಾಭಿನಯ, ಇತ್ಯಾದಿ ಎಲ್ಲರ ಮೆಚ್ಚುಗೆ ಗಳಿಸಿತು. ಅವಳು ಸಂಕಷ್ಟಿ ವ್ರತದಲ್ಲಿದ್ದಳಂತೆ. ಊಟ ಮಾಡದೆಯೆ ಕಂಚಿನಕಂಠ, ಇನ್ನು ಊಟ ಮಾಡಿ ಮಾತಾಡಿರುತ್ತಿದ್ದರೆ! ನಮ್ಮ ತಂಡದ ಮಾನ ಕಾಪಾಡಿದವಳು ಅಪೂರ್ವ. ಸುಶ್ರಾವ್ಯವಾಗಿ ಎರಡು ಹಾಡು ಹಾಡಿದಳು.
ರಾತ್ರೆ ೯ ಗಂಟೆಗೆ ಭರ್ಜರಿ ಊಟ. ಚಪಾತಿ, ಪಲ್ಯ, ಅನ್ನ ಸಾಂಬಾರು, ಒತ್ತುಶ್ಯಾವಿಗೆ ರಸಾಯನ, ತಂಬ್ಳಿ, ಮಜ್ಜಿಗೆಹುಲ್ಲು ಸಾರು. ಅಬ್ಬ ಹೊಟ್ಟೆಬಿರಿಯ ಊಟ. ಕ್ಯಾಂಪ್ ಫಯರ್ ಎಂದು ಹತ್ತು ಗಂಟೆಗೆ ಸೌದೆ ಉರಿ ಹಾಕಿದರು. ಕೆಲವರು ಮನಸ್ಸಿಲ್ಲದ ಮನಸ್ಸಿನಲ್ಲಿ ಅಲ್ಲಿ ಸುತ್ತ ಸೇರಿದರು. ಅರ್ಧ ಜನ ಬರಲೇ ಇಲ್ಲ. ಸೌದೆ ಉರಿಯುವ ಮೊದಲೇ ಸಭೆ ಬರಖಾಸ್ತು! ದೂರದಿಂದ ಪ್ರಯಾಣ ಮಾಡಿ ಬಂದ ಆಯಾಸದಿಂದಲೋ ಯಾರೂ ಉತ್ಸಾಹಿಗಳಾಗಿರಲಿಲ್ಲ. ತುಪ್ಪ ಬೆರೆಸಿದ ಖರ್ಜೂರ, ಬೀಡ, ಕಷಾಯ ಸರಬರಾಜಾಯಿತು. ನಿದ್ದೆ.
ಬೆಳಗಾಗೆದ್ದು ಪಕ್ಷಿವೀಕ್ಷಣೆ
೧೦.೧೨.೨೦೧೪. ಬೆಳಗ್ಗೆ ಆರು ಗಂಟೆಗೆ ಚಹಾ. ೬.೩೦ ಗಂಟೆಗೆ ಪಕ್ಷಿ ವೀಕ್ಷಣೆಗೆ ಆಸಕ್ತಿ ಇರುವವರು ಒಂದಷ್ಟು ಮಂದಿ ಶಿವಪ್ರಕಾಶ್ ನೇತೃತ್ವದಲ್ಲಿ ಹೊರಟೆವು. ಸುಮಾರು ಪಕ್ಷಿಗಳ ಕೂಗು ಮಾತ್ರ ಕೇಳಿಸಿತು. ಲೋರಿಕೇಟ್, ಪಾಂಡ್ ಹೆರಾನ್, ಗದ್ದೆಗುಮ್ಮ ಇತ್ಯಾದಿ ಒಂದೆರಡು ಮಾತ್ರ ಕಣ್ಣಿಗೆ ಗೋಚರಿಸಿದುವು. ಬೆಳಕು ಅಷ್ಟಾಗಿ ಇರಲಿಲ್ಲ. ಛಾಯಾಚಿತ್ರಕ್ಕೆ ಸಿಗಲಿಲ್ಲ. ಕೆಲವು ಅಸ್ಪಷ್ಟವಾಗಿ ಸಿಕ್ಕವು. ಸೂರ್ಯೋದಯವಾಗುವುದನ್ನು ನೋಡಿದೆವು! ೭.೩೦ಗೆ ವಾಪಾಸಾದೆವು. ಅರ್ಧ ಕಿಮೀ ದೂರವೂ ಹೋಗಿರಲಿಲ್ಲ.
ಬರೋಬ್ಬರಿ ತಿಂಡಿ ಉದ್ದಿನ ದೋಸೆ, ಕುಂಬಳಕಾಯಿ ದೋಸೆಯನ್ನು ಹಂಚಿನಲ್ಲಿ ಬೇಯಿಸುತ್ತಿದ್ದರು. ನಾವು ತಿಂದೆವು. ಡಬ್ಬಕ್ಕೆ ಚಪಾತಿ, ಗಸಿ, ಚಿತ್ರಾನ್ನ ಹಾಕಿಸಿಕೊಂಡೆವು.
ಬೀಳ್ಕೊಡುಗೆ
ತಂಡದ ಛಾಯಾಚಿತ್ರ ತೆಗೆಸಿಕೊಂಡು, ನಮಗೆ ಆದರೋಪಚಾರ ನೀಡಿದ ನಾರಾಯಣ ಭಟ್ ಬಳಗದವರೊಡನೆಯೂ ಚಿತ್ರ ತೆಗೆಸಿಕೊಂಡು ತಿಂಡಿ ತಿಂದಾಗಿ ಹೊಟ್ಟೆ ಭಾರದೊಂದಿಗೆ ಬೆನ್ನ ಚೀಲದ ಭಾರವನ್ನೂ ಹೊತ್ತು ಸಜ್ಜಾದೆವು. ಹಸಿರು ಬಾವುಟ ತೋರಿಸಿ ನಮ್ಮನ್ನು ಬೀಳ್ಕೊಟ್ಟರು.
ಕರಿಕಲ್ಲಿನತ್ತ ಲಕ್ಷ್ಯ
ನಮ್ಮ ತಂಡದ ೩೭ ಮಂದಿಯಲ್ಲದೆ ಸ್ಥಳಿಯರೇ ಆದ ಇಬ್ಬರು ರಾಮಚಂದ್ರರು ನಮಗೆ ಮಾರ್ಗದರ್ಶಕರಾಗಿ ಸೇರಿದರು. ನಿಧಾನವಾಗಿ ಸಾಗಿದೆವು. ಒಬ್ಬ ರಾಮಚಂದ್ರ ಮುಂದಾಳು. ಅವನನ್ನು ದಾಟಿ ಯಾರೂ ಮುಂದೆ ಹೋಗಬಾರದು. ಹಿಂದಾಳು ಇನ್ನೊಬ್ಬ ರಾಮಚಂದ್ರ. ಅವನ ಹಿಂದೆ ಯಾರೂ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅವನದು.
ದಟ್ಟ ಕಾಡು. ಕಾಡಿನ ದಾರಿಯಲ್ಲಿ ಸುಮಾರು ೫೦ಡಿಗ್ರಿ ಇಳಿಜಾರು. ಸಾಮರ್ಥ್ಯ ಇರುವವರು ಮುಂದೆ ಮುಂದೆ ಹೋದರು. ನಡಿಗೆ ಸಾಧಾರಣಮಟ್ಟಕ್ಕೆ ಇರುವವರು ಸ್ವಾಭಾವಿಕವಾಗಿ ಹಿಂದೆ ಉಳಿದರು. ಎಲ್ಲರ ಹಿಂದೆ ನಾನು ಹೋಗಬೇಕಾಗಿ ಬಂತು. ತಂಡದ ಸದಸ್ಯರು ಅದರಲ್ಲೂ ಹೆಂಗಸರು ಹಿಂದುಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನಿತಿದ್ದರು ನನಗೆ. ನಾನೂ ಖುಷಿಯಿಂದಲೇ ಈ ಹೊಣೆಯನ್ನು ಹೊತ್ತುಕೊಂಡೆ. ಇಳಿಯಲು ಆಗದವರಿಗೆ ಒಬ್ಬರಿಗೊಬ್ಬರು ಕೈ ಕೊಟ್ಟು ಸಹಾಯ ಮಾಡುತ್ತ ಸಾಗಿದೆವು.
ಶೀಗೇಕೇರಿಯಿಂದ ಕರಿಕಲ್ಲಿಗೆ ಸುಮಾರು ೨೨ ಕಿಮೀ ದೂರ ಕಾಡು, ನಾಡು ಕ್ರಮಿಸಬೇಕಿತ್ತು. ದಾರಿಯುದ್ದಕ್ಕೂ ಕುರುಚಲು ಕಾಡಿನಿಂದ ಹಿಡಿದು ಹಸುರಿನಿಂದ ಕೂಡಿದ ಬೆಟ್ಟಗಳು, ನಡು ನಡುವೆ ಪುಟ್ಟ ಗ್ರಾಮಗಳು, ಗದ್ದೆಗಳು, ತೋಟಗಳು. ಅಲ್ಲಲ್ಲಿ ಸಿಗುವ ಮನೆಯವರ ಉಪಚಾರ ಎಲ್ಲವನ್ನೂ ನೋಡುತ್ತ ಅನುಭವಿಸುತ್ತ ಖುಷಿಯಿಂದಲೇ ಹಾದಿ ಸವೆಸಿದೆವು.
ಮಧ್ಯಾಹ್ನ ೧೨.೩೦ಕ್ಕೆ ನೀರು ಹರಿಯುವ ತೊರೆ ಬಳಿ ತಲಪಿದೆವು. ನಾವು ಒಂದಷ್ಟು ಜನ ತಲಪಿದಾಗ ತಂಡದ ಬಹುತೇಕ ಸದಸ್ಯರು ಊಟ ಮುಗಿಸಿದ್ದರು. ನಾವು ಬುತ್ತಿ ಬಿಚ್ಚಿದೆವು. ಚಿತ್ರಾನ್ನ ಹಳಸಿತ್ತು. ಅದು ನೀರಲ್ಲಿರುವ ಜಲಚರಗಳ ಪಾಲಿಗಾಯಿತು. ಚಪಾತಿ ದೋಸೆ ಇತ್ತು ಅವನ್ನೆ ತಿಂದು ನೀರು ಕುಡಿದು ಸುಧಾರಿಸಿದೆವು.
೧.೩೦ ಗಂಟೆಗೆ ಅಲ್ಲಿಂದ ಹೊರಟೆವು. ಸುಮಾರು ಆರೇಳು ಕಿಮೀ ದೂರ ನಡೆದು ಮಹಾಬಲೇಶ್ವರ ಹೆಗಡೆ ಮನೆ ತಲಪಿದೆವು. ಅಲ್ಲಿ ಚಹಾ, ಮಜ್ಜಿಗೆ ಕುಡಿಯುವವರು ಕುಡಿದರು. ಅಲ್ಲಿ ತುಸು ವಿರಾಮ. ಅಲ್ಲಿಂದ ಸುಮಾರು ೯ಕಿಮೀ ದೂರ ಟಾಟಾ ಮೊಬೈಲು ಜೀಪಿನಲ್ಲಿ ಕ್ರಮಿಸಿದೆವು. ಅಷ್ಟು ದೂರವನ್ನು ರಸ್ತೆಯಲ್ಲೆ ಹೋಗಬೇಕಿತ್ತು. ಬೇಡ್ತಿ ನದಿ ದಾಟಲು ರಾತ್ರೆಯಾಗುತ್ತದೆ ಎಂದು ಜೀಪ್ ವ್ಯವಸ್ಥೆ ಮಾಡಿದ್ದರು. ೧೯- ೨೦ ಜನರ ಹಾಗೆ ೨ ಸಲ ಜೀಪು ನಮ್ಮನ್ನು ಹೊತ್ತು ಸಾಗಿಸಿತು. ಅಲ್ಲಿಂದ ರಸ್ತೆಯಲ್ಲೆ ೩ಕಿಮೀ ದೂರ ನಡೆದು ಗಂಗಾವತಿ (ಬೇಡ್ತಿ) ನದಿ ತಲಪಿದೆವು.
ಕರಿಕಲ್ಲು ನಾರಾಯಣ ಹೆಗಡೆಯವರಲ್ಲಿ ವಾಸ್ತವ್ಯ. ಅವರ ಮನೆಗೆ ಹೋಗಬೇಕಾದರೆ ಗಂಗಾವಳಿ (ಬೇಡ್ತಿ) ನದಿ ದಾಟಬೇಕಿತ್ತು. ನೀರಿನ ಹರಿವು ಸೊಂಟದವರೆಗೆ ಇತ್ತು. ಶೂಗಳ ಹಾರವನ್ನು ಕೊರಳಿಗೆ ಹಾಕಿ (ಹೂಹಾರ ಯಾರೂ ಹಾಕದಿದ್ದರೂ ಶೂ ಹಾರ ಹಾಕಿಕೊಂಡು ತೃಪ್ತಿ ಹೊಂದಿದೆವು!), ಜೀವರಕ್ಷಕ ಉಡುಪು ಧರಿಸಿ ಹಗ್ಗ ಹಿಡಿದು ನದಿ ದಾಟಿದೆವು. ರಾಣಿ, ಸತೀಶ್, ನಾರಾಯಣ ಹೆಗಡೆ ನದಿ ದಾಟಿಸಲು ಸಹಾಯಹಸ್ತ ಚಾಚಿದ್ದರು. ನದಿ ದಾಟುವ ಕ್ಷಣವದು ಬಲು ಸೋಜಿಗವೆನಿಸಿತ್ತು. ಸಂಜೆ ೬.೩೦ ಗಂಟೆಗೆ ನಾವು ಗಮ್ಯಸ್ಥಾನ ತಲಪಿದ್ದೆವು.
ನಾರಾಯಣ ಹೆಗಡೆಯವರ ಮನೆ ತಲಪಿ ಅಲ್ಲಿ ಚಹಾ, ಉಪ್ಪಿಟ್ಟು ಸೇವನೆ. ತೋಟದಲ್ಲಿ ಹಂಡೆಯಲ್ಲಿ ಬಿಸಿನೀರು ಕಾಯಿಸಿದ್ದರು. ಅಲ್ಲಿಂದ ನೀರು ಹೊತ್ತು ತಂದು ಬಿಸಿನೀರು ಸ್ನಾನ ಮಾಡಿ ಕೂತೆವು. ೭ ಗಂಟೆಗೆ ಟೊಮೆಟೊ ಸೂಪು ಕುಡಿದೆವು. ಮನೆಯ ಹೆಂಗಸರೊಂದಿಗೆ ಅಡುಗೆಮನೆಯಲ್ಲಿ ಮಾತಾಡುತ್ತ ಅವರ ಫೋಟೋ ಕ್ಲಿಕ್ಕಿಸಿದೆವು.
ಗೂಟಿ ಬಾರಿಸುತ್ತ (ಚೆಂಡೆಯಂತಹ ವಾದ್ಯ ಪರಿಕರ) ಅಲ್ಲಿಯ ಸ್ಥಳೀಯರು ಹಾಡಿದರು. ಅದನ್ನು ನೋಡುತ್ತ ಕೂತೆವು. ಚಪಾತಿ ಪಲ್ಯ, ಅನ್ನ ತಂಬ್ಳಿ, ಸಾರು, ಸಾಂಬಾರು, ಕಾಯಿ ಹೋಳಿಗೆ ಊಟ ಹೊಟ್ಟೆ ಸೇರಿತು. ಊಟವಾಗಿ ಬೆಂಕಿ ಸುತ್ತ ಕೂತೆವು. ಹಾಡು, ತಮಾಷೆ ಮಾತು, ಇತ್ಯಾದಿಯಾಗಿ ಕಷಾಯ ವಿತರಣೆ. ನಿದ್ರೆ.
ಮುದದಿಂದ ಮೋತಿಗುಡ್ಡದತ್ತ
೧೧-೧೨-೨೦೧೪ ಬೆಳಗ್ಗೆ ೬ಗಂಟೆಗೆ ಎದ್ದು ಚಹಾ, ಏಳೂವರೆ ಗಂಟೆಗೆ ಇಡ್ಲಿ ಸಾಂಬಾರು, ಚಟ್ನಿ. ಬುತ್ತಿಗೆ ಚಪಾತಿ ಪಲ್ಯ ಹಾಕಿಸಿಕೊಂಡು ಮೋತಿಗುಡ್ಡಕ್ಕೆ ಹೊರಡಲು ಅಣಿಯಾದೆವು. ೮.೩೦ಗೆ ತಂಡದ ಫೋಟೊ ತೆಗೆಸಿಕೊಂಡು ನಾರಾಯಣ ಹೆಗಡೆ ಮತ್ತು ಮನೆಯವರಿಗೆ ಧನ್ಯವಾದ ಅರ್ಪಿಸಿ ಮುಂದುವರಿದೆವು. ಗಂಟೆ ೯ ಕಳೆದಿತ್ತು. ಭಾರತಿಯವರು ನೇರ ಯಾಣ ಶಿಬಿರಕ್ಕೆ ಹೋಗುವೆನೆಂದು ಹೇಳಿದ್ದವರು ಮನಸ್ಸು ಬದಲಾಯಿಸಿ ನಮ್ಮೊಡನೆ ಹೊರಟರು. ಭಾರತಿ ಹಾಗೂ ಹೇಮಾಮಾಲಾ ಅವರ ಹಿಂದೆ ನಾನು. ನನ್ನ ಹಿಂದೆ ವೇಲಾಯುಧನ್ ಹಾಗೂ ರಾಮಚಂದ್ರ. ಬಾಕಿಯವರೆಲ್ಲ ನಮ್ಮ ಕಣ್ಣಿಗೆ ಕಾಣಿಸದಷ್ಟು ಮುಂದೆ.
ಕರಿಕಲ್ಲಿನಿಂದ ಮೋತಿಗುಡ್ಡದೆಡೆಗೆ ಸಾಗುವ ದಾರಿ ರಸ್ತೆ, ಮುಂದೆ ಹೋದಂತೆ ಕಾಡು. ಕೆಲವೆಡೆ ದಟ್ಟಕಾಡು, ಅಲ್ಲಲ್ಲಿ ಕುರುಚಲು ಸಸ್ಯ. ಮಧ್ಯೆ ನೀರ ತೊರೆ, ಸಾಗಿದಂತೆ ಅಡಿಕೆ ಬಾಳೆ ತೋಟ, ಭತ್ತದ ಗದ್ದೆ. ಅಲ್ಲಲ್ಲಿ ಒಂಟಿ ಮನೆ. ಮನೆಗಳಲ್ಲಿ ಜನಸಂಖ್ಯೆ ವಿರಳ. ಅವರ ಮನೆಯಲ್ಲಿ ಸ್ವಲ್ಪ ಹೊತ್ತು ವಿರಮಿಸಿ, ಮಜ್ಜಿಗೆ, ನೀರು ಬೆಲ್ಲ ಕುಡಿಯುವವರು ಕುಡಿದು ನಾಲ್ಕು ಮಾತಾಡಿ ಮುಂದೆ ಸಾಗಿದೆವು.
ಕಾಡೊಳಗೆ ನಡೆಯುತ್ತ ಸಾಗಿದಂತೆ ನನ್ನ ಶೂ ಸೋಲ್ ಅರ್ಧ ಸೋಲೊಪ್ಪುವಂತೆ ಕಂಡಿತು. ಅದಕ್ಕೆ ಹೇಮಮಾಲಾ ಕೊಟ್ಟ ರಬ್ಬರ್ ಬ್ಯಾಂಡ್ ಬಿಗಿದು ಮುಂದೆ ಸಾಗಿದೆ. ಸೋಲಿನಿಂದ ತಾತ್ಕಾಲಿಕವಾಗಿ ಪಾರಾದೆ!
ಮುಂದೆ ತೊರೆ ಬಳಿ ಎಲ್ಲರೂ ಊಟವಾಗಿ ವಿಶ್ರಾಂತಿಗೈದಿದ್ದರು. ನಾವು ೧೨ ಗಂಟೆಗೆ ಬುತ್ತಿ ಬಿಚ್ಚಿದೆವು. ಊಟವಾಗಿ ಸ್ವಲ್ಪ ಹೊತ್ತು ವಿರಮಿಸಿ ಸಾಗಿದೆವು. ಅರ್ಧ ಪರ್ಲಾಂಗು ದೂರದಲ್ಲಿ ಮಹಾಬಲೇಶ್ವರ ಹೆಗಡೆ ಮನೆ. ಅಲ್ಲಿ ಮಧ್ಯಾಹ್ನದ ಪೂಜೆ ಆಗುತ್ತಿತ್ತು. ನಾವು ಅಲ್ಲಿ ಕುಳಿತು ಮನೆಯವರೊಂದಿಗೆ ಮಾತಾಡಿ ಮುಂದೆ ಹೊರಡಲನುವಾದೆವು. ಇನ್ನೂ ತುಂಬ ದೂರ ನಡೆಯಬೇಕಲ್ಲ, ಆಗುತ್ತ ನಿಮಗೆ? ಕಷ್ಟ ಕಷ್ಟ ಎಂಬ ಅವರ ಸಹಾನುಭೂತಿ ಮಾತು ಕೇಳುತ್ತ ಮುಂದುವರಿದೆವು. ಅವರ ತೋಟದೊಳಗೆಯೇ ಸಾಗಿದೆವು. ಮಂಗಗಳ ಉಪಟಳ ಜೋರಿರಬೇಕು. ಬಾಳೆಗೊನೆಗಳಿಗೆ ಗೋಣಿಚೀಲ ಮುಚ್ಚಿರುವುದು ಕಾಣಿಸಿತು. ಮುಂದೆ ಬಾಳೆಕಾಯಿಗಳಿಲ್ಲದ ಬೋಳು ಗೊನೆ. ಕಪಿರಾಯ ಒಂದೂ ಬಿಡದೆ ಖಾಲಿ ಮಾಡಿದ್ದ! ಬಾಳೆಮೋತೆಯನ್ನು ಮಾತ್ರ ಉಳಿಸಿದ್ದ!
ತೋಟದ ದಾರಿ ಮುಕ್ತಾಯವಾದಂತೆ ಕಾಡು ದಾರಿ. ಕಾಡೊಳಗೆ ಒಬ್ಬನೇ ಹಿಂದೆ ಉಳಿದು ದಾರಿ ತಪ್ಪೀತೆಂಬ ಭಯವೇ ಆಗದಂತೆ ಅಲ್ಲಲ್ಲಿ ಮರ, ಬಂಡೆಗಳಮೇಲೆ ಬಾಣದ ಗುರುತನ್ನು ಆಯೋಜಕರು ಮಾಡಿದ್ದರು. ಅಷ್ಟು ಸುವ್ಯವಸ್ಥೆಯ ಹಿಂದೆ ಆಯೋಜಕರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಬಾಣದ ಗುರುತು ನೋಡುತ್ತ ಮುಂದೆ ಸಾಗಿದರಾಯಿತು. ಎಲ್ಲೆಲ್ಲಿ ನೋಡಲಿ ಬಾಣದ ಗುರುತನ್ನೇ ಕಾಣುವೆ ಎಂಬ ಹಾಡು ಗುನುಗುತ್ತ ಉತ್ಸಾಹದಿಂದ ಸಾಗಿದೆವು.
ಮಾಮೂಲು ನನ್ನ ನಡಿಗೆಯ ವೇಗದಿಂದ ಮೂರುಪಟ್ಟು ನಿಧಾನಗತಿಯಲ್ಲಿ ಸಾಗಿದ್ದರಿಂದ ನನಗೆ ಲಾಭವೇ ಆಗಿದೆ. ಪರಿಸರ, ಪ್ರಕೃತಿ, ಜನರ ಭಾವನೆಗಳನ್ನು ಅರಿಯಲು ಇದರಿಂದ ಸಹಾಯವಾಯಿತು. ಅದಕ್ಕಾಗಿ ಹೇಮಮಾಲಾ ಹಾಗೂ ಭಾರತಿಯವರಿಗೆ ಧನ್ಯವಾದ. ಒಮ್ಮೆ ಏರುದಾರಿ ಬಂದರೆ ಮುಂದೆ ಇಳಿಜಾರು , ಸಮತಟ್ಟು ದಾರಿ ಹೀಗೆಯೇ ಮುಂದುವರಿಕೆ. ಕಾಡುದಾರಿಯಲ್ಲಿ ನಮ್ಮ ಹೆಣಭಾರದ (ಹೆಣ ಭಾರವೇ? ಎಂದು ಹೊತ್ತು ಅನುಭವವಿಲ್ಲ! ಕೇವಲ ಕಲ್ಪನೆ ಅಷ್ಟೆ!) ಚೀಲ ಹೊತ್ತು ನಡೆಯುವ ಅನುಭವ ನಿಜಕ್ಕೂ ಖುಷಿ ಕೊಟ್ಟಿದೆ. ಚೀಲದ ಭಾರವನ್ನು ಸ್ವಲ್ಪ ಹಗುರಗೊಳಿಸಬಹುದಿತ್ತು ಎಂಬ ಅನುಭವವೂ ಆಗಿದೆ! ಇಂಥ ಚಾರಣಕ್ಕೆ ಕನಿಷ್ಟ ಸಾಮಾನು ತರುವುದು ಕ್ಷೇಮಕರ.
ಕಾಡುಹೂಗಳು ಮನಕ್ಕೆ ಮುದವನ್ನಿತ್ತವು. ಇರುವೆಗಳ ಸೈನ್ಯ ಸಾಕಷ್ಟು ಕಂಡೆವು. ದೈತ್ಯ ಮರಗಳು, ಪೊದೆಯಂಥ ಸಸ್ಯಗಳು ದಾಟಿ ಮುಂದುವರಿದೆವು.
ಮಳೆಹನಿ ಬೀಳಲು ಸುರುವಾಯಿತು. ಹಾಗೆ ಎಲ್ಲರೂ ಒಂದು ಗುಡಿಸಲಿನಲ್ಲಿ ಕೂತೆವು. ಅದರ ಬಳಿ ಬೈಹುಲ್ಲು ಕಣ ಇತ್ತು. ಅದರದೆದುರು ಬೆರ್ಚಪ್ಪನನ್ನು ನಿಲ್ಲಿಸಿದ್ದರು. ಬೆರ್ಚಪ್ಪ ಚೆನ್ನಾಗಿತ್ತು!
ದಾರಿ ಮಧ್ಯೆ ಅನಂತನಾಯಕರ ಮನೆಯಲ್ಲಿ ಎಳನೀರು ಕುಡಿದೆವು. ಆಗ ಮರಹತ್ತಿ ಎಳನೀರು ಕೊಯಿದು ಕೊಟ್ಟಿದ್ದರು. ಅವರು ಬೆನ್ನ ಹಿಂದೆ ಮಚ್ಚನ್ನು ಸಿಕ್ಕಿಸಿದ ವಿಧಾನ ಮೆಚ್ಚುಗೆಯಾಗಿ ಫೋಟೊ ಕ್ಲಿಕ್ಕಿಸಿದೆ!
ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದರು. ಅದನ್ನು ಹಗ್ಗದಲ್ಲಿ ಇಳಿಸುತ್ತಿದ್ದರು.
ಕಾಡುದಾರಿಯಲ್ಲಿ ನಮಗೆ ಕೋತಿ ಬಿಟ್ಟರೆ ಬೇರೆ ಯಾವ ಪ್ರಾಣಿಯೂ ದರ್ಶನವೀಯಲಿಲ್ಲ. ಹೌದು! ಇಷ್ಟೊಂದು ಮಂದಿ ಕಾಡುದಾರಿಯಲ್ಲಿ ಹರಟೆ ಹೊಡೆಯುತ್ತ ಗದ್ದಲ ಮಾಡುತ್ತ ನಡೆಯುತ್ತಿದ್ದರೆ ಯಾವ ಪ್ರಾಣಿ ಎದುರು ಇದ್ದೀತು? ಪಕ್ಷಿಗಳ ದನಿ ಮಾತ್ರ ಕೇಳಿಸುತ್ತಿತ್ತು. ಮೋತಿಗುಡ್ಡದ ಹತ್ತಿರ ತಲಪಿದಾಗ ಮಾತ್ರ ದೈತ್ಯ ಗಾತ್ರದ ಮಂಗಟ್ಟೆ ಹಕ್ಕಿ ಬಾನಿನಲ್ಲಿ ಹಾರುತ್ತ ಸಾಗಿದ ಅಪೂರ್ವ ದೃಶ್ಯ ನೋಡಿ ಪಾವನಗೊಂಡೆವು. ಎಂಥ ಚಂದ ಅದರ ರೆಕ್ಕೆ. ಒಂದುಕ್ಷಣ ನಮಗೆ ದರ್ಶನ ನೀಡಿ ಮಾಯವಾಯಿತು! ಸುಮಾರು ೧೬ಕಿಮೀ ದೂರ ನಾವು ನಡೆದು ಮೋತಿಗುಡ್ಡ ತಲಪಿದೆವು.
ಸೂರ್ಯನ ನಿರ್ಗಮನ- ಭಾಸ್ಕರನ ಸ್ವಾಗತ!
ಮೋತಿಗುಡ್ಡದಲ್ಲಿ ಭಾಸ್ಕರ ಹೆಗಡೆಯವರ ಮನೆ ತಲಪುವಾಗ ಸಂಜೆ ಸೂರ್ಯ ಅಸ್ತಮಿಸಲು ತಯಾರಿಯಲ್ಲಿದ್ದ. ಆ ಸೂರ್ಯ ಅಸ್ತಮಿಸಿದರೂ ಈ ಭಾಸ್ಕರ ಬೆಳಕು ತೋರಿ ನಮಗೆ ಆತಿಥ್ಯ ನೀಡಿದ್ದರು! ಚಹಾ, ಅವಲಕ್ಕಿಯನ್ನಿತ್ತು ಸ್ವಾಗತಿಸಿದರು.
ಟೊಮೆಟೊ ಸೂಪು ಕುಡಿದು ಸ್ನಾನಾದಿ ಮುಗಿಸಿ ಕೂತೆವು. ರಾತ್ರಿ ಮನೆ ಎದುರು ಚಪ್ಪರದಲ್ಲಿ ಹೊಸತೋಟ ಮಂಜುನಾಥ ಭಾಗವತರಿಂದ ಸತ್ಯ ಮತ್ತು ಅಹಿಂಸೆ ಎಂಬ ವಿಚಾರಭರಿತ ಭಾಷಣ ಕೇಳುವ ಸುಯೋಗ ದೊರೆತಿತ್ತು. ನೀವೆಲ್ಲ ಚಾರಣ ಕೈಗೊಂಡದ್ದು ಬಲು ಖುಷಿ ನೀಡಿತು. ಎಂದು ಪ್ರಶಂಸಿದರು. ಬದುಕಿನ ಬಗ್ಗೆ, ಗಾಂಧೀಜಿ ತತ್ತ್ವದ ಬಗ್ಗೆ, ಪ್ರಚಲಿತ ವಿದ್ಯಾಮಾನದ ಬಗ್ಗೆ ಸೊಗಸಾಗಿ ಮಾತಾಡಿದರು. ಒಂದೆರಡು ಪ್ರಸಂಗಗಳ ಯಕ್ಷಗಾನ ಹಾಡುಗಳನ್ನೂ ಹಾಡಿದರು.
(ಭಾಗವತರು ಮೋತಿಗುಡ್ಡದಲ್ಲಿ ಶಾಲೆಬಳಿ ಇರುವ ಅರಳೀಮರದ ಕೆಳಗೆ ಒಂದು ಸಣ್ಣ ಮನೆಯಲ್ಲಿ ಒಬ್ಬರೇ ವಾಸವಾಗಿದ್ದಾರೆ. ಸುಮಾರು ೭೦ರಮೇಲೆ ವಯಸ್ಸು. ಬೆಳಗ್ಗೆ ೪.೩೦ಗೇ ಏಳುತ್ತಾರಂತೆ.) ನಮ್ಮ ತಂಡದಲ್ಲಿ ಕೇರಳ, ಮಹಾರಾಷ್ಟ್ರದಿಂದ ಬಂದ ಹದಿನೈದು ಮಂದಿಗೆ ಕನ್ನಡ ಅರ್ಥವಾಗದ ಕಾರಣ ಮಂಜುನಾಥ ಭಾಗವತರ ಭಾಷಣದ ಸಾರಾಂಶವನ್ನು ಆಂಗ್ಲದಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ಹೇಮಮಾಲಾ ಹೇಳಿದರು. ಅವರ ನೆನಪು, ಭಾಷೆಯ ಹಿಡಿತ ಸೊಗಸಾಗಿತ್ತು ಹಾಗೂ ಅವರ ಪ್ರತಿಭೆಯನ್ನು ತೋರಿಸಿತು.
ಪಾದಸೇವೆ!
ಹೆಚ್ಚಿನ ಮಂದಿಯ ಪಾದಗಳಲ್ಲೂ ಶೂ ಕಚ್ಚಿ ಬೊಬ್ಬೆಳೆದ್ದಿದ್ದುವು. ಎಲ್ಲರೂ ಮುಲಾಮು ತಿಕ್ಕಿ ಪ್ಲಾಸ್ಟರ್ ಹಾಕಿ ಅಲಂಕಾರ ಮಾಡಿಕೊಳ್ಳುತ್ತಿದ್ದರು. ನನ್ನ ಪಾದಗಳಿಗೇನೂ ಆಗಲಿಲ್ಲ. ಆದರೆ ಶೂಗಳ ಆರೋಗ್ಯ ಮಾತ್ರ ಹದಗೆಟ್ಟಿತ್ತು. ಸೋಲ್ ಎರಡೂ ಆಚೆ ಬಂದಿತ್ತು. ಮಂಡ್ಯದ ಶಂಕರ ಅವರು ಫೆವಿಕ್ವಿಕ್ ಕೊಟ್ಟರು. ಅದನ್ನು ಹಾಕಿ ಸೋಲ್ ಅಂಟಿಸಿ ಇಟ್ಟೆ. ನಾಳೆಗೆ ಸರಿಯಾದೀತು ಎಂದು ನೆಮ್ಮದಿಯಾಗಿ ನಿದ್ದೆ ಮಾಡಬಹುದು ಎಂದು ಭಾವಿಸಿದೆ.
೮.೩೦ ಗಂಟೆಗೆ ಊಟ. ಚಪಾತಿ, ಪಲ್ಯ, ಅನ್ನ ಸಾರು, ಸಾಂಬಾರು, ತಂಬ್ಳಿ, ಪಾಯಸ. ಊಟವಾಗಿ ಮನೆ ಎದುರು ಚಪ್ಪರದಲ್ಲಿ ಎಲ್ಲ ಸೇರಬೇಕೆಂಬ ಅಪ್ಪಣೆಯಾಯಿತು. ಯಾರಿಗೂ ಅಂಥ ಉತ್ಸಾಹ ಇರಲಿಲ್ಲ. ಈಗ ಉತ್ಸಾಹ ಇಲ್ಲ. ಒಮ್ಮೆ ಇಲ್ಲಿ ಸೇರಿದರೆ ಮತ್ತೆ ಸಮಯ ಸರಿದದ್ದೇ ಗೊತ್ತಾಗಲ್ಲ ಎಂದು ಫತೇಖಾನ್(ಗಂಗೋತ್ರಿ ಘಟಕದ ಕಾರ್ಯಕರ್ತರು) ಹೇಳಿದರು. ಅವರಂದಂತೆಯೇ ಆಯಿತು. ಪುಂಖಾನುಪುಂಖವಾಗಿ ಹಾಡು, ಜೋಕು ಒಬ್ಬರಲ್ಲ ಒಬ್ಬರು ಹೇಳುತ್ತಲೇ ಇದ್ದರು. ನಮ್ಮ ತಂಡದಲ್ಲಿ ಎಲ್ಲರಿಗಿಂತ ಚಿಕ್ಕವರಾದ (ಅಂದರೆ ವಿದ್ಯಾರ್ಥಿಗಳು) ಅಪೂರ್ವ, ವಿಭಾ ಶಾಸ್ತ್ರೀಯ, ಜನಪದ ಗೀತೆ ಹಾಡಿ ‘ಒನ್ಸ್ ಮೋರ್’ ಎಂಬ ಚಪ್ಪಾಳೆಗಿಟ್ಟಿಸಿದರು. ಮಹಾರಾಷ್ಟ್ರದ ನಾಸಿಕದವರಿಗೆ ದೇಶಾಭಿಮಾನ ಬಹಳ. ಅವರು ಶಿವಾಜಿಗೆ ಸಂಬಂಧಿಸಿದ ಹಾಡುಗಳನ್ನೆ ಹಾಡಿದರು. ಫತೇಖಾನ್ಸೊಗಸಾಗಿ ಭಾವಗೀತೆ ಹಾಡಿದರು. ಕೇಳುತ್ತ ಇದ್ದಂತೆ ಸಮಯ ೧೦.೩೦ ಗಂಟೆ ಆದದ್ದು ಗೊತ್ತೇ ಆಗಲಿಲ್ಲ. ಅರೆ ಇಷ್ಟು ಬೇಗ ಸಮಯವಾಯಿತೆ ಎಂಬ ಭಾವ ಎಲ್ಲರ ಮೊಗದಲ್ಲೂ! ಅಲ್ಲಿಗೆ ಸಭಾಕೂಟ ಮುಕ್ತಾಯಗೊಳಿಸಿದರು. ಕಷಾಯ ಕುಡಿಯುವವರು ಲೋಟ ತಂದು ಸಾಲಾಗಿ ಹಾಕಿಸಿಕೊಂಡರು.
ಬಿಡದು ಈ ಗೊರಕೆಯ ಮಾಯೆ!
ನಿದ್ದೆ ಬಲು ಬೇಗ ಬಂದೀತೆಂದರೆ ಬಿಡದೀ ಗೊರಕೆಯ ಮಾಯೆ! ಗೊರಕೆಯ ವಿಧವಿಧ ಝೇಂಕಾರ ನಿದ್ದೆಗೆ ಅಡ್ಡಿಯೇ! ಹೊರಗೆ ಚಪ್ಪರದಡಿಯಲ್ಲಿ ಮಲಗಿದವರಿಂದ ಹಿಡಿದು ಒಳಗೆ ಮಲಗಿದವರ ವರೆಗೆ ಒಂದು ಕಡೆ ನಿಲ್ಲುವಾಗ ಇನ್ನೊಂದು ಕಡೆಯಿಂದ ಸುರು! ಈ ಗೊರಕೆಯ ವಿಚಾರವೇ ಸೋಜಿಗ. ನಾವು ಗೊರಕೆ ಹೊಡೆಯುತ್ತೇವೆ ಎಂಬ ಅರಿವು ನಮಗೆ ಇರುವುದಿಲ್ಲ. ಇನ್ನೊಬ್ಬರು ತಿಳಿಸಿದರಷ್ಟೇ ಗೊತ್ತಾಗುವುದು. ಗೊರಕೆ ಹೊಡೆಯುವವರಿಗೆ ನೀವು ‘ಏನು ಗೊರಕೆ ನಿಮ್ಮದು’ ಎಂದರೆ ಇಲ್ಲಪ್ಪ ನಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ಹೇಳುತ್ತಾರೆ!
ಮುಂದುವರಿಯುವುದು
ಚೆನ್ನಾಗಿದೆ. ಹಿಂದೆ ನನ್ನ ಚಪ್ಪಲಿಯ ತಳ ಕಿತ್ತು ಹೋದಾಗ ಕಾಡು ಬಳ್ಳಿಯನ್ನೇ ಬಿಗಿದು ಸುಧಾರಿಸಿದ್ದು ನೆನಪಾಯ್ತು. ಹೊಸ್ತೋಟದವರ ಮಾತಿನ ಮಾದರಿ (ತುಣುಕು, ಇಡಿಯಲ್ಲ) ವಿಡಿಯೋ ಕೊಟ್ಟಿದ್ದರೆ ಒಳ್ಳೇದಿತ್ತು. ಮುಂದಿನ ಭಾಗ ಕಾದಿದ್ದೇನೆ.
ಅಂತೂ ಗುರುಟಿ ವೀಡಿಯೋ ಹಾಕಿರುವೆ. http://www.youtube.com/watch?v=UV_1pnCnS8o
Hottekicchu avuthu!! Enage entha ashcharya endare bharathadalli ashtu jana iddaru prakruthi ashte joragide!! Rotti noduvaaga aase aidu!! Chance marayare ningaladdu!! Lekhana layakiddu. Innondari aanu bandipagge hoykeeu enagude saha
thubha channagi vivaranne nididiri, nane hogi banda anubhavayyithu, dhanyavadagalu……