ನಮ್ಮ ದೇಶ ಎಷ್ಟು ಸುಂದರ. ನಾವೆಷ್ಟು ಭಾಗ್ಯವಂತರು ಎಂದು ಅರಿವಾಗಬೇಕಾದರೆ ಪರದೇಶಕ್ಕೆ ಹೋಗಬೇಕು. ಇಲ್ಲವೇ ಪರದೇಶಕ್ಕೆ ಹೋದವರ ಅನುಭವ ಕೇಳಬೇಕು ಇಲ್ಲವೆ ಅಂಥ ಪುಸ್ತಕ ಓದಬೇಕು. ಆಗ ನಮಗೆ ನಮ್ಮ ದೇಶ ಎಷ್ಟು ಸೊಗಸು, ನಾವೆಷ್ಟು ಸುಖಿಗಳು ಎಂಬುದು ಗೊತ್ತಾಗುತ್ತದೆ.
ಹೇಮನ ಮಗಳು ಪರದೇಶದಲ್ಲಿದ್ದಾಳೆ. ಅವಳನ್ನು ನೋಡುವ ಸಲುವಾಗಿ ಹೇಮ ಪ್ರಥಮ ಬಾರಿ ವಿದೇಶಕ್ಕೆ ಹಾರಿದಳು. ಅಲ್ಲಿ ಹೋಗಿ ಎರಡು ದಿನ ಸುಧಾರಿಸಿಕೊಂಡು ಮಗಳಿಗೆ ಅಮ್ಮನ ಕೈ ಅಡುಗೆಯ ರುಚಿ ತೋರಿಸಲು ಅಡುಗೆ ಮನೆಯ ಪಾರುಪತ್ಯ ವಹಿಸಿಕೊಂಡಳು. ಮಗಳು ಅಳಿಯ ಬೆಳಗ್ಗೆ ೮ ಗಂಟೆಗೆ ಕೆಲಸಕ್ಕೆ ಹೊರಡುತ್ತಾರೆ. ಅವರಿಬ್ಬರೂ ಹೊರಗೆ ಹೋದಮೇಲೆ ಇಲ್ಲಿ ಹೇಮನಿಗೆ ಹೊತ್ತೇ ಹೋಗಲೊಲ್ಲದು. ಮಧ್ಯಾಹ್ನ ೩ಗಂಟೆಗೆ ಮಗಳು ಅಳಿಯನಿಗೆ ರುಚಿಯಾಗಿ ಅಡುಗೆ ಮಾಡೋಣವೆಂದು ಟೊಂಕಕ್ಕೆ ಸೆರಗು ಕಟ್ಟಿ ಅಣಿಯಾದಳು ಹೇಮ. ಪಾಯಸ, ಮಜ್ಜಿಗೆ ಹುಳಿ ಮಾಡುವ ಆಲೋಚನೆ ಅವಳದು. ತೆಂಗಿನಕಾಯಿ ಹೆರೆಯಲು ಕುಳಿತಳು. ಇನ್ನೇನು ಒಂದು ಕಡಿ ಹೆರೆದು ಆಗಬೇಕೊ ಇಲ್ಲವೊ ಮನೆ ಕರೆಗಂಟೆ ಬಾರಿಸಿತು. ಹೋಗಿ ಬಾಗಿಲು ತೆರೆದರೆ ಅಪರಿಚಿತ ಅಮೆರಿಕನ್ನಳೊಬ್ಬಳು ನಿಂತಿದ್ದಾಳೆ.
“ಅದು ಏನು ಸದ್ದು ಕೇಳುವುದು ನಿಮ್ಮಲ್ಲಿಂದ? ಸದ್ದು ಮಾಡಬೇಡಿ ನಮಗೆ ತೊಂದರೆ ಆಗುತ್ತದೆ, ಇತ್ಯಾದಿ” ಆಂಗ್ಲಭಾಷೆಯಲ್ಲಿ ಪಟ ಪಟನೆ ನುಡಿದು ಹೋದಳು.
ನಾನೇನು ಸದ್ದು ಮಾಡಿದೆ ಇಲ್ಲಿ? ನಮ್ಮ ಮನೆಯಲ್ಲಿ ನಾನಿದ್ದೇನೆ. ಇವಳಿಗೇನಾಗಿದೆ? ಅವಳು ಬೇರೆ ಏನು ಹೇಳಿದ್ದು ಎಂಬುದೇ ತಲೆ ಬುಡ ಅರ್ಥವಾಗಲಿಲ್ಲ ಹೇಮಳಿಗೆ. ಪುನಃ ಅರ್ಧ ಉಳಿದ ಕಾಯಿ ಹೆರೆಯಲು ತೊಡಗಿದಳು. ಇನ್ನೇನು ಕಾಯಿ ಹೆರೆದು ಮುಗಿಯಬೇಕೆನ್ನುವಾಗ ಪುನಃ ಕರೆಗಂಟೆ ಸದ್ದು. ನೋಡಿದರೆ ಅದೇ ಹೆಂಗಸು ನಿಂತಿದ್ದಳು. ಅವಳು ಮುಖ ಸಿಂಡರಿಸಿಕೊಂಡು, “ನಿಮಗೆ ಸದ್ದು ಮಾಡಬೇಡಿ ಎಂದು ನಾನಾಗ ಹೇಳಿದ್ದಲ್ಲವೆ? ನಮಗೆ ಬಹಳ ತೊಂದರೆ ಆಗುತ್ತದೆ. ಅಷ್ಟು ಸದ್ದು ಕೇಳುವಂತೆ ನೀವು ಏನು ಮಾಡುತ್ತಿರುವುದು? ಇನ್ನು ಕೇಳದಿದ್ದರೆ ಪೊಲಿಸರಿಗೆ ದೂರು ಕೊಡಬೇಕಾಗುತ್ತದೆ” ಎಂದು ನುಡಿದು ಹೋದಳು.
ನಾನು ಕಾಯಿ ಹೆರೆಯುತ್ತಿದ್ದೆ ಎಂದು ಅವಳಿಗೆ ಹೇಳುವುದು ಹೇಗೆ? ಹೇಳಿದರೆ ಅರ್ಥವಾಗಬೇಕಲ್ಲ. ಹಾಗಾಗಿ ಮಾತಾಡದೆ ಸುಮ್ಮನೆ ನಿಂತಿದ್ದೆ. ಅಲ್ಲ ನಾನೇನು ಮಾಡಿದೆ ಎಂದು ಹೀಗೆ ದಬಾಯಿಸುತ್ತಿದ್ದಾಳೆ ಇವಳು? ಕಾಯಿ ಹೆರೆದದ್ದು ಅಷ್ಟೆ. ಅದೂ ನನ್ನ ಮನೆಯಲ್ಲಿ ನಾನು ಏನಾದರೂ ಮಾಡುತ್ತೇನೆ. ಇವಳು ಯಾರು ಕೇಳಲು? ಅಲ್ಲ ಪೊಲಿಸರಿಗೆ ದೂರು ಕೊಡುತ್ತೇನೆ ಎಂದು ಹೆದರಿಸುತ್ತಾಳೆ. ಕೊಡಲಿ. ನೋಡುವ ನಾನೂ ಹೇಳುತ್ತೇನೆ ಅವರಿಗೆ. ನಾನೇನು ಮಾಡಲಿಲ್ಲ. ಕಾಯಿ ಹೆರೆದದ್ದು ನನ್ನ ಮನೆಯಲ್ಲೇ ಹೊರತು ಅವರ ಮನೆಯಲ್ಲಿ ಅಲ್ಲ ಎಂದು. ಅವಳಿಗೆ ಹೇಗೆ ತೊಂದರೆ ಆಯಿತು ಇದರಿಂದ? ಎಂದು ಹೇಮ ಮನದಲ್ಲೇ ಎಷ್ಟು ಯೋಚಿಸಿದರೂ ಅಮೇರಿಕನ್ನಳು ಹಾಗೇಕೆ ಅಂದಳು ಎಂದು ಅರ್ಥವಾಗಲೇ ಇಲ್ಲ. ಮಗಳು ಸಂಜೆ ಮನೆಗೆ ಬಂದಾಗ ನಡೆದ ವಿಷಯ ತಿಳಿಸಿದಳು.
“ಅಯ್ಯೊ ಅಮ್ಮ! ನಿನಗೆ ಹೇಳಲು ಮರೆತಿದ್ದೆ. ಎಷ್ಟೆಷ್ಟೊ ಹೊತ್ತಿಗೆ ಕಾಯಿ ಹೆರೆಯಬೇಡ. ಕೆಳಗಿನ ಮನೆಯವರಿಗೆ ಶಬ್ದವಾಗುತ್ತದೆ. ಅವರು ಬಂದು ಒಮ್ಮೆ ಹೇಳಿದಾಗ ನಾವು ಕೇಳದಿದ್ದರೆ ಪೊಲೀಸರಿಗೆ ದೂರು ಕೊಡುತ್ತಾರೆ. ಮತ್ತೆ ಅದು ವಿಕೋಪಕ್ಕೆ ಹೋಗುತ್ತದೆ. ನಾವು ಎಷ್ಟೊ ದಂಡ ಕಟ್ಟಬೇಕಾಗುತ್ತದೆ. ನೀನೇನು ಮಾಡಿದರೂ ಬೆಳಗ್ಗೆ ಇಷ್ಟು ಗಂಟೆಯೊಳಗೆ ಶಬ್ದವಾಗುವಂಥ ಕೆಲಸ ಮಾಡಿ ಮುಗಿಸಬೇಕು. ಅದರನಂತರ ನೀನೇನು ಮಾಡಲು ಹೋಗಬೇಡ. ದೂರದರ್ಶನ ವೀಕ್ಷಿಸುತ್ತ ಕುಳಿತುಕೊ” ಎಂದು ಮಗಳು ಹೇಳಿದಳು.
“ಅಲ್ಲ ಇದು ಯಾವ ಸೀಮೆಯ ಜೀವನ? ನಮ್ಮ ಮನೆಯಲ್ಲಿ ನಾವು ಕಾಯಿ ಹೆರೆದರೆ ಇವರಿಗೇನು ಬರುತ್ತದೆ ರೋಗ? ನಮಗೆ ಬೇಕಾದಂತೆ ಇರಲು ಸಾಧ್ಯವಾಗದೆ ಇದ್ದರೆ ಅದೆಂಥ ಬದುಕು? ಇಲ್ಲಿ ಹೇಗೆ ಇದ್ದೀಯೊ ನೀನು? ನಾನಿಲ್ಲಿ ಹೆಚ್ಚು ದಿನ ಹೀಗೆ ಇರಲು ಸಾಧ್ಯವಿಲ್ಲ. ಒಂದು ದಿನದ ಅನುಭವವೇ ಸಾಕಪ್ಪ ಸಾಕು. ಇದೇ ನಮ್ಮ ದೇಶದಲ್ಲಾದರೆ ಮನೆಯಲ್ಲಿ ಕಾಯಿ ಹೆರೆಯಬಹುದು, ಬೊಬ್ಬೆ ಹೊಡೆಯಬಹುದು, ಜೋರಾಗಿ ನಗಬಹುದು, ಕುಣಿದು ಕುಪ್ಪಳಿಸಬಹುದು, ಏನು ಬೇಕಾದರೂ ಮಾಡಬಹುದು. ಕೇಳುವವರಾರು. ಬಾಂಬ್ ಬೇಕಾದರೂ ಹಾಕಬಹುದು! ಅಕ್ಕಪಕ್ಕದ ಮನೆಯಲ್ಲೂ ಅಷ್ಟೆ ಏನೇ ಶಬ್ದ ಮಾಡಿದರೂ ನಾವು ಅದನ್ನು ಸಹಿಸಿಕೊಳ್ಳುತ್ತೇವೆ ಹೊರತು ನೀವು ಶಬ್ದ ಮಾಡಬೇಡಿ ಎನ್ನಲು ಹೋಗುವುದಿಲ್ಲ. ನಾವು ಎಲ್ಲಿ ಏನು ಮಾಡಲೂ ಸರ್ವ ಸ್ವತಂತ್ರರು. ನಾವೆಷ್ಟು ಭಾಗ್ಯಶಾಲಿಗಳಲ್ಲವೆ?
“ಹೌದಮ್ಮ, ಅದನ್ನು ಒಪ್ಪುತ್ತೇನೆ. ಆದರೆ ಏನು ಮಾಡುವುದು? ಇಲ್ಲಿ ನಮಗೆ ಹೇಗೆ ಬೇಕೊ ಹಾಗೆ ಇರುವಂತಿಲ್ಲ. ನಾವು ಕೆಲವು ಚೌಕಟ್ಟನ್ನು ಮೀರಿ ನಡೆಯುವಂತಿಲ್ಲ. ಇಲ್ಲಿ ಮಕ್ಕಳಿಗೆ ಹೊಡೆಯುವಂತಿಲ್ಲ. ಅದು ಅಪರಾಧ. ಹಾಗೆಲ್ಲ ಕೆಲವು ನಿಯಮಗಳಿವೆ. ಇಲ್ಲಿ ಇದ್ದ ಮೇಲೆ ಆ ನಿಯಮಗಳನ್ನೆಲ್ಲ ಮೀರದಂತೆ ನಡೆದುಕೊಳ್ಳುವುದೇ ಜಾಣತನ.”
“ಏನೊ. ನೀನು ಏನೇ ಹೇಳು ಮಗಳೆ. ಇಲ್ಲಿಗಿಂತ ನಮ್ಮ ಭಾರತವೇ ಎಷ್ಟೋ ಪಾಲು ಮೇಲು. ಈ ದೇಶ ಶ್ರೀಮಂತ ದೇಶ ಇರಬಹುದು. ಆದರೆ ಹೃದಯ ಶ್ರೀಮಂತಿಕೆ ಮಾತ್ರ ಭಾರತೀಯರಿಗೆ ಹೆಚ್ಚು. ಒಂದು ಉದಾಹರಣೆಯೇ ತಕೊ. ಕತ್ರಿನಾ ಚಂಡಮಾರುತ ಅಪ್ಪಳಿಸಿ ಎರಡು ದಿನವಾದ ಮೇಲೆ ಅಧ್ಯಕ್ಷ ಬುಶ್ಗೆ ಇದರ ಭೀಕರತೆಯ ಅರಿವಾಯಿತಂತೆ. ಆಗ ಕೊಲೆ ಸುಲಿಗೆ ಅತ್ಯಾಚಾರ ಮೇರೆ ಮೀರಿತು. ಯಾಹೂ ನ್ಯೂಸ್ನಲ್ಲಿ ಮಿ.ಸ್ಕಾಟ್ ಬರೆಯುತ್ತಾರೆ: `ಪ್ರವಾಸಕ್ಕೋಸ್ಕರ ನಾನು ಹೆಂಡತಿ ಮಗಳೊಂದಿಗೆ ನ್ಯೂ ಅರ್ಲಿಯನ್ಸ್ಗೆ ಹೋಗಿದ್ದೆ. ನಾನಿಳಿದುಕೊಂಡ ವಸತಿಗೃಹ ನೀರಿನಿಂದ ಸುತ್ತುವರಿಯತೊಡಗಿದಾಗ ನಾವೆಲ್ಲ ಅದರ ಮೇಲಿನಮಹಡಿಗೆ ಹೋದೆವು. ಅಲ್ಲಿ ಹೆಂಗಸರು ಬಂದು ಸೇರಿದ್ದರು. ಸಹಾಯಕ್ಕಾಗಿ ಬಂದ ಪೊಲಿಸರಲ್ಲಿ ಅವರು ನೆರವು ಕೋರಿದರು. ಆಗ ಪೊಲಿಸರು `ನಿಮ್ಮ ಟಿ ಶರ್ಟ್ ಬಿಚ್ಚಿ ನಿಂತರೆ ನಾವು ಸಹಾಯ ಮಾಡುತ್ತೇವೆ’ ಎಂದರು ವಿಕೃತ ಪೊಲಿಸರು. ಮಹಿಳೆಯರು ನಿರಾಕರಿಸಿದಾಗ `ಹಾಗಿದ್ದರೆ ನಿಮ್ಮ ಹಣೆಯಲ್ಲಿ ಬರೆದಂತಾಗಲಿ’ ಎಂದು ಅಲ್ಲಿಂದ ಅವರು ನೌಕೆಯನ್ನೇರಿ ಸಹಾಯ ಮಾಡದೆ ನಿರ್ಗಮಿಸಿದರು.’
“ನ್ಯೂ ಅರ್ಲಿಯನ್ಸ್ನ ಜನಸಂಖ್ಯೆ ೪,೮೪,೫೭೪. ಅಮೆರಿಕೆಯ ಸೈನ್ಯ ನ್ಯೂ ಅರ್ಲಿಯನ್ಸ್ ತಲಪಲು ತೆಗೆದುಕೊಂಡ ಅವಧಿ ೪೮ ಘಂಟೆಗಳು. ಅಲ್ಲಿ ಕೊಲೆ ಸುಲಿಗೆ ಅತ್ಯಾಚಾರ ಲೆಕ್ಕವಿಲ್ಲದಷ್ಟು ನಡೆದಿವೆ. ಅಮೇರಿಕಾ ಜಗತ್ತಿನ ಅತಿ ಮುಂದುವರಿದ ದೇಶ. ಅದೇ ಭಾರತದಲ್ಲಿ (ಮುಂಬೈನಲ್ಲಿ) ಚಂಡಮಾರುತ ಸಂಭವಿಸಿದಾಗ ಭಾರತೀಯ ಭೂಸೇನೆ ಹಾಗೂ ಜಲಸೇನೆ ಮುಂಬಯಿಯನ್ನು ತಲಪಲು ತೆಗೆದುಕೊಂಡ ಕಾಲ ೧೨ ಗಂಟೆ. ಮುಂಬೈಯಲ್ಲಿ ಕೊಲೆ ಸುಲಿಗೆ ಅತ್ಯಾಚಾರದಂಥ ಘಟನೆ ನಡೆಯಲಿಲ್ಲ. ಮುಂಬಯಿಯ ಜನಸಂಖ್ಯೆ ೧,೬೨,೨೨೫೦೦. ೪೮ ಗಂಟೆಗಳಲ್ಲಿ ಮುಂಬಯಿಯ ಜನಜೀವನ ತನ್ನ ಕಾಲಮೇಲೆ ತಾನು ನಿಂತು ಅಂಗಡಿ ಮುಂಗಟ್ಟು ಎಂದಿನಂತೆ ತೆರೆದಿದ್ದುವು. ಭಾರತ ಮೂರನೇ ದರ್ಜೆಯ ದೇಶವೆಂದು ಪರಿಗಣಿಸಿದೆ. ಆದರೆ ಆ ದೇಶಕ್ಕೂ ನಮ್ಮ ದೇಶಕ್ಕೂ ಎಷ್ಟು ವ್ಯತ್ಯಾಸ ಗಮನಿಸು. ಈ ಸುದ್ದಿ ಒಂದು ಪತ್ರಿಕೆಯಲ್ಲಿ ಬಂದಿತ್ತು.” ಹೇಮನ ವಾದ ವೈಖರಿಗೆ ಬೆರಗಾಗಿ ಮಗಳು ಸುಮ್ಮನೆ ಗೋಣಾಡಿಸಿದಳು.
“ನನಗಂತೂ ಇಲ್ಲಿ ಕೈಕಟ್ಟಿ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ. ನಿಮಗೇ ಸರಿ ಇಂಥ ಜೀವನ. ಇರಲಿ ನಾನೇನು ಇಲ್ಲೇ ಇರಲು ಬಂದವಳಲ್ಲವಲ್ಲ. ಸ್ವಲ್ಪ ದಿನವಿದ್ದು ನಮ್ಮದೇಶಕ್ಕೆ ಹೋಗುವವಳು ತಾನೆ. ಭಾರತೀಯರು ಸಹನಾಶೀಲರು. ಹಾಗಾಗಿ ಸಹಿಸಿಕೊಳ್ಳುವುದು. `ಸಹನೆಯೆ ವಜ್ರಕವಚ ಮಂಕುತಿಮ್ಮ’ ಅಲ್ಲವೆ?” ಎಂದು ಹೇಮ ಸ್ವದೇಶಕ್ಕೆ ಹೊರಡುವ ತಯಾರಿಯಲ್ಲಿ ತೊಡಗಿದಳು.
******
ಮಗ ಸೊಸೆ ಮೊಮ್ಮಕ್ಕಳ ಬಲವಂತಕ್ಕೆ ಶಿವ ಪಾರ್ವತಿ ಅಮೇರಿಕೆಗೆ ಹೋದರು. ಹೋಗಿ ಒಂದು ವಾರ ಏನೂ ಗೊತ್ತಾಗಲಿಲ್ಲ. ಮಜವಾಗಿಯೇ ಇದ್ದರು. ಮಗ ಸೊಸೆ ಮೊಮ್ಮಕ್ಕಳೊಡನೆ ಅಲ್ಲಿ ಇಲ್ಲಿ ಓಡಾಟ ಎಂದು ದಿನ ಸರಿಯಿತು. ಅನಂತರ ಬಂತು ಶಿವನಿಗೆ ಸಂಕಟ. ಪಾರ್ವತಿ ಬಹುಬೇಗ ಅಲ್ಲಿಗೆ ಹೊಂದಿಕೊಂಡಳು. ಶಿವನಿಗೆ ಮನೆಯಲ್ಲಿ ಹೊತ್ತೇ ಹೋಗಲಿಲ್ಲ. ಮನೆಯಲ್ಲಿ ಸುಮ್ಮನೆ ಕುಳಿತು ಗೊತ್ತೇ ಇಲ್ಲ. ಹೊರಗೆ ಹೋಗುವಂತಿಲ್ಲ. ಆದರೂ ಶಿವ ಕೇಳಲೇ ಇಲ್ಲ. ಪ್ರತೀದಿನ ಹೊರಗೆ ಹೋಗುತ್ತಿದ್ದ. ಶಿವ ಹೊರಗೆ ಹೊರಟಕೂಡಲೆ ಇಲ್ಲಿ ಸೊಸೆಗೆ ಮನೆಯಲ್ಲಿ ಕುಳಿತಲ್ಲಿ ಕೂರಲಾಗುತ್ತಿರಲಿಲ್ಲ. ಮಾವ ಎಲ್ಲಿ ಕಾಣೆಯಾಗಿಬಿಡುತ್ತಾರೊ? ಎಲ್ಲೆಲ್ಲಿ ರಸ್ತೆ ದಾಟುತ್ತಾರೊ? ನಡೆಯಬಾರದ ಸ್ಥಳದಲ್ಲಿ ನಡೆದು ಏನು ಪಚೀತಿಗೆ ಈಡಾಗುತ್ತಾರೊ? ಅವರು ತಪ್ಪಿ ನಡೆದು ಎಲ್ಲಿ ದಂಡ ತೆರಬೇಕಾಗುತ್ತದೊ ಎಂಬ ಆತಂಕ ಸೊಸೆಗೆ. ಅಂತೂ ಏನು ಆಗದೆ ಮಾವ ಮನೆಗೆ ಬಂದರೆಂದರೆ ಅಷ್ಟು ಹೊತ್ತು ಉಸಿರು ಕಟ್ಟಿ ಕೂತಿದ್ದವಳು ನೆಮ್ಮದಿಯಿಂದ ಉಸ್ಸಪ್ಪ ಎಂದು ನಿರಾಳಳಾಗುತ್ತಿದ್ದಳು. ಇಲ್ಲಿ ಎಲ್ಲೂ ನಡೆದು ಹೋಗಬಾರದು ಎಂದು ಸೊಸೆ ಕಟ್ಟಪ್ಪಣೆ ಮಾಡಿದಳು ಮಾವನಿಗೆ. ಎಲ್ಲಿಗೆ ಹೋಗಬೇಕು ಹೇಳಿ ನಾನು ಕಾರಲ್ಲಿ ಕರೆದುಕೊಂಡು ಹೋಗುತ್ತೇನೆ ಎಂಬುದು ಅವಳ ಮನವಿ. ಈ ಏರ್ಪಾಡು ಶಿವನಿಗೆ ಸರಿ ಬರಲಿಲ್ಲ. ಸೊಸೆ ಹೇಳಿದಾಗೆ ಕೇಳಬೇಕೆಂದರೆ ಹೇಗಾಗುತ್ತದೆ. ಹೆಂಡತಿ ಹೇಳಿದ್ದನ್ನೇ ಇಷ್ಟು ವರ್ಷ ಕೇಳದ ನಾನು ಇನ್ನು ನಿನ್ನೆ ಮೊನ್ನೆ ಬಂದ ಸೊಸೆ ಹೇಳಿದ್ದನ್ನು ಕೇಳುವುದು ಹೇಗೆ? ನನ್ನ ಮರ್ಜಿ ನನಗೆ. ನನಗೆ ಬೇಕಾದಂತೆ ಇರಲು ಆಗದಿದ್ದರೆ ಇಲ್ಲಿದ್ದು ಏನು ಮಾಡಬೇಕು ಎಂಬುದು ಅವನ ವಾದ. ಹೇಗೂ ಇಷ್ಟು ದೂರ ಬಂದಾಗಿದೆ. ಮಗ ಸೊಸೆ ಖರ್ಚು ಮಾಡಿ ಕರೆಸಿಕೊಂಡಿದ್ದಾರೆ. ಇನ್ನು ಕೆಲವು ದಿನ ಹೀಗೆ ಇರುವುದು ಎಂಬ ರಾಜಿ ಮನಸ್ಸು ಶಿವನಿಗೆ ಇಲ್ಲ. ಹೆಂಡತಿಗೂ ಒಂದು ಮನಸ್ಸು ಇದೆ. ಅವಳ ಅಭಿಪ್ರಾಯ ಕೇಳಬೇಕು ಎಂಬುದು ಗೊತ್ತೇ ಇಲ್ಲ ಶಿವನಿಗೆ. ಮದುವೆಯಾದ ಲಾಗಾಯ್ತಿನಿಂದ ತಾನು ಹೇಳಿದ್ದೇ ನಡೆಯಬೇಕು. ಹೆಂಡತಿಯ ಅಭಿಪ್ರಾಯಕ್ಕೆ ಬೆಲೆ ಕಡಿಮೆ. ತನ್ನ ಕಷ್ಟ ಮಾತ್ರ ಪರಿಹಾರವಾಗಬೇಕು ಬೇರೆಯವರದು ಹೇಗೊ ಗೊತ್ತಿಲ್ಲ. ಅಷ್ಟೆಲ್ಲ ತೊಂದರೆ ತೆಗೆದುಕೊಂಡು ಯೋಚಿಸುವಷ್ಟು ವಿಶಾಲ ಮನಸ್ಸು ಇಲ್ಲವೊ ಹಾಗೆ ಯೋಚಿಸಲು ಆಗುತ್ತದೆ ಎಂದು ಗೊತ್ತೇ ಇಲ್ಲವೋ, ಅಲ್ಲ ಅದಕ್ಕೆಲ್ಲ ತಲೆ ಖರ್ಚು ಮಾಡಲು ವೇಳೆ ಇಲ್ಲವೇ? ಗೊತ್ತಿಲ್ಲ. ಅಂಥ ಕ್ಷುಲ್ಲಕ (ಶಿವನ ಅರಿವಿನಲ್ಲಿ) ವಿಚಾರಗಳಿಗೆಲ್ಲ ತಲೆಕೆಡಿಸುವ ಜಾಯಮಾನದವನಲ್ಲ ಶಿವ. ಅದು ಅರಿವಾಗುವಂಥ ಮನುಷ್ಯನೂ ಅಲ್ಲ. ಹೆಂಡತಿಗೆ ಅಲ್ಲಿ ಇನ್ನೂ ಸ್ವಲ್ಪದಿನ ಇರಬೇಕೆಂದು ಮನಸ್ಸು ಇತ್ತೊ ಇಲ್ಲವೊ ಎಂದು ಕೇಳಲು ಹೋಗಲಿಲ್ಲ. ಪಾರ್ವತಿಯಂತೂ ಗಂಡನನ್ನು ಬಿಟ್ಟಿರಲು ಒಪ್ಪದ ಅಪ್ಪಟ ಸಾಧ್ವಿ ಮಹಿಳೆ. ತಾನಿಲ್ಲಿದ್ದು ಗಂಡ ಭಾರತಕ್ಕೆ ಹೋದರೆ ಅಲ್ಲಿ ಗಂಡನಿಗೆ ತೊಂದರೆಯಾದರೆ ಎಂದು ಆಗಲೇ ಚಿಂತಿಸಿ ಕೊರಗುವ ಸಾಧುಸ್ವಭಾವ. ಅವರ ಸೇವೆ ಮಾಡುವವರಾರು? ಗಂಡ ಎಷ್ಟೇ ತನ್ನ ಮಾತು ಕೇಳದಿದ್ದರೂ ಮನಸ್ಸಿಗೆ ಎಷ್ಟೇ ನೋವಾದರೂ ಅದನ್ನು ತೋರ್ಪಡಿಸದೆ ಅದರ ಹತ್ತರಷ್ಟು ಪ್ರೀತಿಯಿಂದ ಗಂಡನ ಕಾಳಜಿ ವಹಿಸುವ ಹೆಂಗಸು ಪಾರ್ವತಿ.
ಭಾರತಕ್ಕೆ ತೆರಳಲು ಆದಷ್ಟು ಬೇಗ ಟಿಕೆಟ್ ಮಾಡು ಎಂದು ದಿನಾ ಮಗನಿಗೆ ಹೇಳಿದ್ದೇ ಹೇಳಿ ಆ ರಾಗ ಕೇಳಿದ್ದೇ ಕೇಳಿ ತಡೆಯಲಾರದೆ ಮಗ, `ತಾಳಲಾರೆನೊ ಈ ಪರಿಯ ಕಿರಿಕಿರಿಯನು ಹರಿಯೆ, ಬೇಗ ಎರಡು ಟಿಕೆಟ್ ದಯಪಾಲಿಸೊ ಹರನೇ ಕಾಪಾಡೆಯಾ’ ಎಂದು ಪರಿಪರಿಯಲಿ ಬಿನ್ನವಿಸಿ ಕಷ್ಟಪಟ್ಟು ವಿಮಾನದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ. ಅಲ್ಲಿ ಹೋಗಿ ತಿಂಗಳಾಗುವಾಗ ಅಂತೂ ಇಂತು ಶಿವ ಪಾರ್ವತಿಯರಿಗೆ ಭಾರತಕ್ಕೆ ಮರಳಲು ಟಿಕೆಟ್ ಸಿಕ್ಕಿತು.
ಟಿಕೆಟ್ ಸಿಕ್ಕಿದ್ದೇ ಭಾರತಕ್ಕೆ ಹಾರಿ ಬಂದರು ಇಬ್ಬರೂ. ತಾಯಿ ನಾಡಿನಲ್ಲಿ ವಿಮಾನ ಇಳಿದ ಶಿವ, “ನಮ್ಮ ರಸ್ತೆಯಲ್ಲಿ ದನ ಸಗಣಿ ಹಾಕಬಹುದು, ರಸ್ತೆ ಮಧ್ಯದಲ್ಲೇ ಅದು ಮಲಗಬಹುದು. ನಾಯಿ ಯಾರ ಮನೆ ಮುಂದೆ ಬೇಕಾದರೂ ಮಲಮೂತ್ರ ಮಾಡಬಹುದು! ಜನರಿಗೆ ಅದೂ ಗಂಡಸರಿಗೆ ಎಲ್ಲೇ ಮೂತ್ರ ಬಂದರೂ ಅಲ್ಲೇ ಅದನ್ನು ಹೊರಹಾಕುವಷ್ಟು ಸ್ವತಂತ್ರರವರು! ಎಲ್ಲಿ ಬೇಕೋ ಅಲ್ಲಿ ನಡೆಯಬಹುದು, ರಸ್ತೆ ದಾಟಬಹುದು, ರಸ್ತೆ ಮಧ್ಯೆ ಬೇಕಾದರೂ ನಡೆಯಬಹುದು, ಕಸ ಎಲ್ಲಿ ಬೇಕಾದರೂ ಹಾಕಬಹುದು. ಕಸದ ತೊಟ್ಟಿ ಇದ್ದರೂ ಅದಕ್ಕೇ ಕಸ ಹಾಕಬೇಕೆಂಬ ನಿಯಮವಿಲ್ಲ! ಎಲ್ಲಿ ಬೇಕಂದರಲ್ಲಿ ಉಗುಳುವುದಕ್ಕೂ ನಾವು ಸ್ವತಂತ್ರರು! ಅಲ್ಲಿ ಇವೆಲ್ಲ ಇಲ್ಲದೆ ರಸ್ತೆ ಪರಿಸರ ಚೊಕ್ಕಟವಾಗಿದೆ ನಿಜ. ಇಲ್ಲಿ ಎಷ್ಟೇ ಕಸವಿರಲಿ, ರಸ್ತೆಯ ಮಧ್ಯದಲ್ಲಿ ದನ ಓಡಾಡುತ್ತಿರಲಿ, ಅದರ ಸಗಣಿಯಿರಲಿ ಆದರೂ ನಮ್ಮ ದೇಶವೇ ಅಂದ. ಇಲ್ಲಿರುವ ಸ್ವಾತಂತ್ರ್ಯ ಅಲ್ಲಿ ಇಲ್ಲವೇ ಇಲ್ಲ. ಅಲ್ಲಿ ಹೋದರೇ ಅರಿವಾಗುವುದು ನಮ್ಮ ದೇಶ ಎಷ್ಟು ಸುಂದರ. ನಾವೆಷ್ಟು ಭಾಗ್ಯವಂತರು” ಎಂದು ಉದ್ಗರಿಸಿದ.
ಮೈಸೂರುಮಿತ್ರ ವಾರ್ಷಿಕ ವಿಶೇಷಾಂಕ ಮೆಚ್ಚುಗೆ ಪಡೆದ ಕತೆ ೪-೫-೨೦೦೮
ಸೊಗಸಾಗಿ ಬ೦ದಿದೆ. ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು, ಇತ್ಯಾದಿ, ನಿರ್ಬ೦ಧ ವಿಧಿಸುವುದು, ಪಾಶ್ಚಾತ್ಯ ದೇಶಗಳ ಜನರಿಗೆ ನಿರ್ಬ೦ಧವೇ ಅಲ್ಲವೇನೋ, ಅದು ಅವರ ಸ೦ಸ್ಕೃತಿಯ ಭಾಗವೇನೋ ( ವಿಲೋಮವಾಗಿ ನಿರ್ಬ೦ಧ ವಿಧಿಸಿದಲ್ಲೇ ಮಾಡಬೇಕು ಎನ್ನುವ ಮುಕ್ತ ಚಿ೦ತನೆ ನಮ್ಮ ಸ೦ಸ್ಕೃತಿ ಅನ್ನಬಹುದಲ್ಲವೇ ?) ಎ೦ಬ ಭ್ರಮೆ ಹುಟ್ಟಿಸಿಬಿಡುತ್ತಾರೆ ಅವರು. ಕ್ರಿಕೆಟಿಗರು ಕ್ರಿಕೆಟ್ ಅ೦ಗಳದಲ್ಲಿ ಉಗುಳುವ ಚ೦ದ ನೋಡಿದರೆ, ಮೂಲಭೂತವಗಿ ಅವರೂ ನಮ್ಮ೦ತೆಯೇ ಮನುಷ್ಯರು ಅ೦ತ ಖಾತ್ರಿ ಆಗುತ್ತದೆ, ಅದೇ ರೀತಿ, ಇತ್ತೀಚೆಗೆ ಕೆಲ ದಿನ ಹಿ೦ದೆ ಇ೦ಗ್ಲೆ೦ಡ್ ನ ಪ್ರತಿಷ್ಟಿತ ಕ್ರಿಕೆಟ್ ಅ೦ಗಣದಲ್ಲಿ ಅಲ್ಲಿನ ಕ್ರಿಕೆಟ್ ಕಲಿಗಳು ಕ್ರೀಡಾ೦ಗಣ ಖಾಲಿಯಾದಾಗ ಮೂತ್ರ ವಿಸರ್ಜಿಸಿ ವಿಜಯೋತ್ಸವ ಆಚರಿಸಿದರು ಎ೦ದು ವರದಿಯಾಗಿತ್ತು. ಕೊಲೆ ದೊ೦ಬಿಯ೦ತೆಯೇ ಇವೂ ಕೂಡಾ ಅಲ್ಲಿ ಊಹಿಸಲಾರದ ವಿಷಯಗಳೇನಲ್ಲ ಅನಿಸುತ್ತದೆ.. ಮರಿಕೆ ಸುಬ್ಬಣ್ಣ
ಗಂಜಿ ಕುಡಿದು ಬದುಕುವಂತಾದರೂ ಸರಿಯೇ. ನಾವು ಹುಟ್ಟಿದ ನೆಲಕ್ಕೆ ಸಮನಾದದ್ದು ಬೇರೆ ಇಲ್ಲ – ಹಾ ಮಾ ನಾ
Doorada betta nunnage!!!!!!!!!