ಲಕ್ಷ್ಮಿ ಸಾಮಾನ್ಯವಾಗಿ ಎಲ್ಲಿ ವಾಸವಾಗಿರುತ್ತಾಳೆ? ದೇವತೆ (ದೇವರು) ಸರ್ವಾಂತರ್ಯಾಮಿ. ಎಲ್ಲೆಲ್ಲೂ ನೆಲೆಸಿರುತ್ತಾಳೆ (ನೆ) ಎಂದೆಲ್ಲ ನಾವು ಬಾಲ್ಯಕಾಲದಲ್ಲಿ ಹಿರಿಯರಿಂದ, ಕಥೆಯಿಂದ ಕೇಳಿ ಓದಿ ತಿಳಿದಿದ್ದೆವು. ಹಾಗೆಯೇ ಧನಲಕ್ಷ್ಮಿ ಯಾವಾಗ ಎಲ್ಲಿ ನೆಲೆಸಿರುತ್ತಾಳೆ ಎಂಬ ಜಿಜ್ಞಾಸೆ ನನ್ನನ್ನು ಕಾಡಿತು. ಈ ವಿಷಯ ನನ್ನ ಮಸ್ತಕಕ್ಕೆ ಬರಲು ಕಾರಣಕರ್ತೆ ನಮ್ಮ ಬಲಗೈ ಬಂಟಿ ಸಿದ್ದಮ್ಮ. ಸಂದರ್ಭ: ಮನೆ ಒಳಗೆ ಗೋಡೆಯಲ್ಲಿ ಬಲೆ ಕಟ್ಟಿದ್ದನ್ನು ಒಂದು ದಿನ ತೆಗೆಯಲು ಹೇಳಿದ್ದೆ. ಆಯಿತು ಎಂದವಳು ಪೊರಕೆ ಹಿಡಿದು ನನ್ನ ಬಳಿ ಬಂದು, `ಅವ್ವಾ, ಇವತ್ತು ಯಾವ ವಾರ?’ ಎಂದು ಕೇಳಿದಳು. ಶುಕ್ರವಾರ ಬಲೆ ಗುಡಿಸುವುದಕ್ಕೂ ಏನೊ ಶಾಸ್ತ್ರವಿದೆ ಎಂದು ಅವಳು ಕೇಳಿದ ಕ್ರಮದಿಂದಲೇ ನನಗೆ ಸಂಶಯ ಬಂತು. “ ಇವತ್ತು ಶುಕ್ರವಾರ. ಏನು ಇಂದು ಬಲೆ ಗುಡಿಸಬಾರದೆಂದಿದೆಯೇ ನಿನ್ನ ಶಾಸ್ತ್ರದಲ್ಲಿ?”
“ಹೌದು. ಮಂಗಳವಾರ ಹಾಗೂ ಶುಕ್ರವಾರ ಬಲೆ ತೆಗೆಯಬಾರದು” ಎಂದಳು. ಸದ್ಯ ಮಂಗಳವಾರ ಶುಕ್ರವಾರ ಮನೆ ಕಸ ಗುಡಿಸಿ ಒರೆಸಬಾರದು ಎಂದು ಹೇಳಲಿಲ್ಲವಲ್ಲ ಎಂದು ಮನದಲ್ಲೇ ಸಂತೋಷಿಸಿದೆ. ಪ್ರಕಟವಾಗಿ ನುಡಿಯಲಿಲ್ಲ. (ಮೂಢನಂಬಿಕೆ ತೊರೆಯಲು ಅವಳಿಗೆ ನಾನು ಹಿಂದೆ ಎಷ್ಟೋ ಬಾರಿ ಸಲಹೆ ಮಾಡಿದ್ದೆ. `ನಿಮಗೆ ಎಲ್ಲ ತಮಾಷಿ. ನೀವು ಯಾವುದನ್ನೂ ಮಾಡುವುದಿಲ್ಲ. ದೇವರಿಗೆ ಪೂಜೆ ಸಹ ಮಾಡುವುದಿಲ್ಲ. ಅವನ್ನೆಲ್ಲ ಪಾಲಿಸಬೇಕು’ ಎಂದು ನನಗೇ ಬೋಧನೆ ಮಾಡಿದ್ದಳು.) ನುಡಿದರೆ ಅವಳಿಂದ ನಾನು ಬುದ್ಧಿವಾದ ಕೇಳಬೇಕು. ಪದೇ ಪದೇ ಅವಳು ನನಗೆ ಬುದ್ಧಿ ಹೇಳಿದರೆ ನನ್ನ ಅಹಂನ ಗತಿಯೇನು!
“ಶುಕ್ರವಾರ ಮಂಗಳವಾರ ಬಲೆ ಗುಡಿಸಿದರೆ ಏನಾಗುತ್ತದೆ?”ಕೇಳಿದೆ.
“ಅದು ಮನೆಗೆ ಒಳ್ಳೆಯದಲ್ಲ. ನಮ್ಮ ಹಿರೀಕರು ಹೇಳಿದ್ದಾರೆ. ಆ ದಿನ ಬಲೆ ಗುಡಿಸಿದರೆ ಲಕ್ಷ್ಮಿ ಮನೆಯಿಂದ ಹೊರಟು ಹೋಗುತ್ತಾಳಂತೆ.”
“ಓಹೋ ಹಾಗಾದರೆ ಲಕ್ಷ್ಮಿ ಶುಕ್ರವಾರ ಮಂಗಳವಾರ ಮಾತ್ರ ಜೇಡನ ಬಲೆ ರೂಪದಲ್ಲಿ ಮನೆ ಒಳಗಿರುತ್ತಾಳೆ ಎಂದಾಗಾಯಿತು.”
“ಅದೇನೊ ನನಗೆ ಗೊತ್ತಿಲ್ಲ ಅವ್ವ. ಅದನ್ನು ನೀವೆ ಹೇಳಬೇಕು. ಓದಿರುವವರು ನೀವು. ನಮ್ಮ ಹಿರೀಕರು ಹೇಳಿದ್ದಾರೆ. ಅವರು ಹೇಳಿದ್ದನ್ನು ಪ್ರಶ್ನೆ ಮಾಡಬಾರದು. ಅವರು ನಮ್ಮ ಒಳ್ಳೆಯದಕ್ಕೇ ತಾನೆ ಸಂಪ್ರದಾಯ ಮಾಡಿರುವುದು. ಅವರು ಹೇಳಿದಾಂಗೆ ನಾವು ಮಾಡಿಕೊಂಡು ಬರಬೇಕು. ಈ ಸಂಪ್ರದಾಯ ಇರುವುದು ಇಲ್ಲಿವರೆಗೆ ನನಗೆ ಮರೆತೇ ಹೋಗಿತ್ತು. ಈಗ ಇದು ಏಕೆ ಜ್ಞೆಪ್ತಿಗೆ ಬಂತೆಂದರೆ ಮೊನ್ನೆ ಮಂಗಳವಾರ ಸಾವಿತ್ರವ್ವನ ಮನೆಯಲ್ಲಿ ಒಂದು ದೊಡ್ಡ ಬಲೆ ಕಂಡಿತು. ಅದನ್ನು ತೆಗೆಯಬೇಕೆಂದು ಪೊರಕೆ ಎತ್ತಿದ್ದೆ. ಆಗ ಸಾವಿತ್ರವ್ವ ಓಡಿ ಬಂದು ನನ್ನ ಕೈಯಿಂದ ಪೊರಕೆ ಕಿತ್ತು ಬೇಡ ಬೇಡ ಇವತ್ತು ಅದನ್ನು ತೆಗೆಯಬೇಡ. ಉಅಪಿ಼h ಲಿ಼hಅW಼಼ವಾರ. ಬಲೆ ತೆಗೆದರೆ ಮನೆಗೆ ಒಳ್ಳೆಯದಾಗಲ್ಲ ಅಂದರು. ಸದ್ಯ, ಬಲೆಗೆ ಪೊರಕೆ ತಾಗಿಸಿರಲಿಲ್ಲ. ಅದರಿಂದ ಸರಿ ಹೋಯಿತು. ಇಲ್ಲವಾದರೆ ಅವರ ಮನೆಗೆ ಕೇಡು ಬಗೆದ ಪಾಪ ನನಗೆ ಬರುತ್ತಿತ್ತು. ಹಾಗಾಗಿ ನಿಮಗೆ ಕೇಳಿದ್ದು ಇವತ್ತು ಯಾವ ವಾರ ಎಂದು. ಈಗ ಇಲ್ಲಿ ಬಲೆ ತೆಗೆಯಲೇ ಬೇಡವೆ?” ಅವಳು ಜಾಣತನದಿಂದ ಉತ್ತರಕೊಟ್ಟಳು. ಓದಿದವರು ಇದಕ್ಕೆ ಸರಿಯಾದ ಕಾರಣ ಕೊಟ್ಟು ಹೇಳಲಿ ಎಂದು. ಓದಿದವರಿಗೇನು ಗೊತ್ತು ಇದರ ಮರ್ಮ?
ಅವರಂತೆ ನಾನೂ ಬೇಡ ಅನ್ನಬಹುದೆಂದು ಅವಳ ಊಹೆ. ನನಗೋ ಅಂಥ ಸಂದರ್ಭ ಬಂದರೆ ಮಾಡಿದರೆ ಏನಾಗಬಹುದು ನೋಡಿಯೇ ಬಿಡುವ ಎಂಬ ಭಾವ. “ಬಲೆ ಗುಡಿಸು. ಬಲೆ ಕಂಡಾಗಲೆಲ್ಲ ಇಲ್ಲಿ ಯಾವಾಗ ಬೇಕಾದರೂ ತೆಗೆಯಬಹುದು. ಮಂಗಳವಾರ ಶುಕ್ರವಾರ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ಲಕ್ಷ್ಮಿ ಎಲ್ಲಿ ಹೋಗಲು ಸಾಧ್ಯವಿಲ್ಲ. ಇಲ್ಲೇ ಇದ್ದಾರೆ” ಎಂದೆ ವಿನೋದದಿಂದ.
“ನೀವು ಏನು ಹೇಳುತ್ತಿದ್ದೀರಿ ಎಂದು ಅರ್ಥವಾಗಲಿಲ್ಲ” ಪ್ರಾಮಾಣಿಕವಾಗಿ ನುಡಿದಳು.
“ನಮ್ಮ ಅಮ್ಮಾವರ ಹೆಸರು ಲಕ್ಷ್ಮಿ. ಹಾಗಾಗಿ ಲಕ್ಷ್ಮಿ ಮನೆಯಲ್ಲೇ ಇದ್ದಾರೆ ಎಂದದ್ದು.”
“ಓ ನಮ್ಮ ಅಮ್ಮಾವರ ಹೆಸರು ಲಕ್ಷ್ಮವ್ವನ. ನನಗೆ ಇಷ್ಟು ದಿವಸ ಗೊತ್ತೇ ಇರಲಿಲ್ಲ. ಇವತ್ತೇ ಗೊತ್ತಾದದ್ದು” ಎಂದಳು ಸಂಭ್ರಮದಿಂದ. ಇನ್ನು ಎಷ್ಟು ಬೇಕಾದರೂ ಯಾವಾಗ ಬೇಕಾದರೂ ಸಾಲ ಕೇಳಬಹುದು. ಅಮ್ಮಾವರೇ ಲಕ್ಷ್ಮಿಯಾಗಿರುವಾಗ ಎಂದು ಸಂತಸವಾಗಿರಬಹುದು ಅವಳಿಗೆ. ಮನೆಯ ಸಂದುಗೊಂದುಗಳಲ್ಲಿ ಇದ್ದ ಬಲೆಯನ್ನು ಶುಕ್ರವಾರವೇ ಗುಡಿಸಿದಳು.
ಅದಾಗಿ ಎರಡೇ ದಿನದಲ್ಲಿ ನಮ್ಮತ್ತೆ ಬಳಿ ಅವಳು ಅಕ್ಕಿ ತರಲು ದುಡ್ಡು ಕೊಡಿ ಎಂದು ರೂ. ೪೦೦ ವಸೂಲಿಸಿ, ಜಬರದಸ್ತಿನಿಂದ ಕೇಳಿ ಅದು ನನ್ನ ಹಕ್ಕು ಎಂಬಂತೆ ವರ್ತಿಸಿದ್ದಳಂತೆ. ಅದು ಇನ್ನು ತಿರುಗಿ ಬರಲು ಸಾಧ್ಯವಿಲ್ಲ ಬಿಡಿ. ಶುಕ್ರವಾರ ಬಲೆ ತೆಗೆಸಿದ್ದರ ಫಲ ಅಷ್ಟು ಬೇಗ ಫಲಿಸಿತಲ್ಲ. ಲಕ್ಷ್ಮಿ ಕೈ ಬಿಟ್ಟಳಲ್ಲ. ಸಿದ್ದಮ್ಮ ಹೇಳಿದ ಮಾತು ನಿಜವಾಯಿತೆ?! ಬಲೆ ತೆಗೆದದ್ದು ಸಿದ್ದಮ್ಮ. ಹಾಗೆ ಲಕ್ಷ್ಮಿ ಅವಳ ಬಳಿ ಬಂದಾಗೆ ಆಯಿತು! ಎಂದು ನಾನು ಭಾವಿಸಿದ್ದೇನೆ.
ಈಗ ಧನಲಕ್ಷ್ಮಿ ವಿಷಯಕ್ಕೆ ಬರೋಣ. ಹಾಗಾದರೆ ಲಕ್ಷ್ಮಿ ಚಂಚಲ ಸ್ವಭಾವದವಳು ಎಂಬುದು ನಮಗೆ ಇದರಿಂದ ಗೊತ್ತಾದ ಹಾಗಾಯಿತು. ಕೂತಲ್ಲಿ ಕೂರುವುದಿಲ್ಲ. ಚಲಿಸುತ್ತಲೇ ಇರುತ್ತಾಳೆ ಎಂದು ಅವಳಿಗೆ ಬಿರುದು ಇದೆಯಲ್ಲ. ಲಕ್ಷ್ಮಿ ಮಂಗಳವಾರ ಶುಕ್ರವಾರ ಮಾತ್ರ ಏಕೆ ಜೇಡನ ಬಲೆಯಲ್ಲಿ ಹೋಗಿ ಕುಳಿತಿರುತ್ತಾಳೆ? ಬಾಕಿ ದಿವಸ ಅವಳೆಲ್ಲಿ ವಾಸವಾಗಿರುತ್ತಾಳೆ? ಇಂತಿಂಥ ದಿನ ಇಂಥ ಜಾಗದಲ್ಲೇ ವಾಸವಾಗಿರಲು ಅವಳಿಗೆ ಯಾರು ಅಪ್ಪಣೆ ಕೊಡಿಸಿರುವುದು? ಮಂಗಳವಾರ ಶುಕ್ರವಾರ ಮಾತ್ರ ಜೇಡನ ಬಲೆಯಲ್ಲಿ ಲಕ್ಷ್ಮಿ ಇರುತ್ತಾಳೆ ಎಂದು ಸಿದ್ದಮ್ಮನ ಹಿರೀಕರಿಗೆ ಯಾರು ಹೇಳಿದ್ದಾಗಿರಬಹುದು? ಸಾಕ್ಷಾತ್ ಲಕ್ಷ್ಮಿಯೇ ಪ್ರತ್ಯಕ್ಷಳಾಗಿ ಅವರಿಗೆ ತಿಳಿಸಿರಬಹುದೇ? `ಮೂರುಸಂಜೆಯಲ್ಲಿ ಹೊಸ್ತಿಲಲ್ಲಿ ಕುಳಿತಿರಬಾರದು. ಲಕ್ಷ್ಮಿ ಒಳಗೆ ಬರಲು ಸಾಧ್ಯವಾಗದೆ ಹೊರಟು ಹೋಗುತ್ತಾಳೆ’ ಎಂದು ನಮ್ಮ ಹಿರಿಯರು ಮನೆಯ ಹೊಸ್ತಿಲಲ್ಲಿ ನಾವು ಯಾರಾದರೂ ಕುಳಿತದ್ದು ಕಂಡಾಗ ನಮ್ಮ ಬಾಲ್ಯ ಕಾಲದಲ್ಲಿ ಹೇಳುತ್ತಿದ್ದದ್ದು ಈಗ ಜ್ಞಾಪಕಕ್ಕೆ ಬರುತ್ತಿದೆ. ಅವರಿಗೆ ಅದು ಗೊತ್ತಾದ ಬಗೆ ಹೇಗೆ? ಹೊಸ್ತಿಲಲ್ಲಿ ಕುಳಿತಾಗ ಎಡೆಯಲ್ಲಿ ಬೇಕಾದಷ್ಟು ದಾರಿ ಇದ್ದರೂ ಲಕ್ಷ್ಮಿಗೆ ಒಳ ಹೋಗಲು ಆಗದೇ ಇದ್ದರೆ ಅವಳ ಗಾತ್ರ ಎಷ್ಟಿರಬಹುದು? ಒಳ ಬರಲು ಹವಣಿಸಿ ದಾರಿ ಇಲ್ಲದೆ ಹಾಗೇ ಹಿಂದಕ್ಕೆ ಹೋಗಿ ಹೊಸ್ತಿಲಲ್ಲಿ ಯಾರೂ ಇಲ್ಲದ ಮನೆಗೆ ನುಗ್ಗುತ್ತಾಳೆಯೇ?
ಸಂಜೆಯಾದಮೇಲೆ ಮನೆ ಕಸ ಗುಡಿಸಬಾರದು ಲಕ್ಷ್ಮಿ ಹೊರಹೋಗುತ್ತಾಳೆ ಎಂದು ಹಿಂದೆ ಹೇಳುತ್ತಿದ್ದರು. ಅದು ಆಗಿನ ಕಾಲಕ್ಕೆ ಸತ್ಯವಾದ ಮಾತು. ಏಕೆಂದರೆ ಆಗ ಮನೆಗೆ ವಿದ್ಯುತ್ದೀಪ ಇರಲಿಲ್ಲ. ಏನಾದರೂ ಬೆಲೆಬಾಳುವಂಥದ್ದು ಬಿದ್ದಿದ್ದರೆ ರಾತ್ರಿ ಕುರುಡು ಬೆಳಕಿನಲ್ಲಿ ಕಾಣದೆ ಕಸ ಗುಡಿಸಿ ಅದನ್ನು ಬಿಸಾಡುವಂತಾದರೆ ಎಂದು ಆ ಶಾಸ್ತ್ರ ಮಾಡಿದ್ದನ್ನು ಒಪ್ಪಬಹುದು. ಇದು ಈಗಿನ ಕಾಲಕ್ಕೆ ಖಂಡಿತ ಅನ್ವಯವಾಗುವುದಿಲ್ಲ. ಹಾಗಾಗಿ ಅದನ್ನು ದಾರಾಳವಾಗಿ ಬಿಟ್ಟುಬಿಡಬಹುದು. ಆದರೆ ಜೇಡನ ಬಲೆಯ ವಿಷಯ ಹೇಗೆ ಎಂದೇ ನನಗೆ ಅರ್ಥವಾಗುತ್ತಿಲ್ಲ.
ಪುರಂದರದಾಸರು ಲಕ್ಷ್ಮಿಯಮೇಲೆ ಸೊಗಸಾದ ಪದ್ಯ ರಚಿಸಿದ್ದಾರೆ ಅದರಲ್ಲಿ ಕೊನೆಯ ಸಾಲು ನೋಡೋಣ:
ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ
ಸೌಭಾಗ್ಯದ ಲಕ್ಷ್ಮಿ ಬಾರಮ್ಮ
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿರಂಗನ
ಚೊಕ್ಕ ಪುರಂದರವಿಠಲನ ರಾಣಿ
ಇಲ್ಲಿ ಶುಕ್ರವಾರದ ಪೂಜೆಯ ವೇಳೆ ಲಕ್ಷ್ಮಿ ಬರುತ್ತಾಳೆ ಎಂದು ದಾಸರು ಹಾಡಿದ್ದಾರೆ. ಶುಕ್ರವಾರ ಲಕ್ಷ್ಮಿಗೆ ಪೂಜೆ ಮಾಡುವ ಸಲುವಾಗಿ ಬಲೆ ಗುಡಿಸಲು ಸಮಯವಿಲ್ಲವೆಂದು ಆ ಶಾಸ್ತ್ರ ಬಂದಿರಬಹುದೆ? ಹಾಗಾದರೆ ಮಂಗಳವಾರ?
ಮಹಾಭಾರತದ ಅನುಶಾಸನ ಪರ್ವದ ೧೧ನೇ ಅಧ್ಯಾಯದಲ್ಲಿ ಲಕ್ಷ್ಮಿಯ ಬಗ್ಗೆ ಉಲ್ಲೇಖವಿದೆ. ಯುಧಿಷ್ಠಿರ ಭೀಷ್ಮನಲ್ಲಿ ಕೇಳುತ್ತಾನೆ. ಎಂಥ ಪುರುಷನಲ್ಲಿ ಅಥವಾ ಸ್ತ್ರೀಯಲ್ಲಿ ಪದ್ಮಾಲಯಳಾದ ಮತ್ತು ಪದ್ಮಹಸ್ತೆಯಾದ ಲಕ್ಷ್ಮಿ ಶಾಶ್ವತವಾಗಿ ನೆಲೆಸುತ್ತಾಳೆ?
ಅದಕ್ಕೆ ಭೀಷ್ಮ ಹೇಳುತ್ತಾನೆ: ಶ್ರೀಕೃಷ್ಣನ ಪತ್ನಿ ರುಕ್ಮಿಣಿ ಹಿಂದೆ ಶ್ರೀಕೃಷ್ಣನ ಸಮ್ಮುಖದಲ್ಲಿ ಸಾಕ್ಷಾತ್ ಲಕ್ಷ್ಮಿಯಲ್ಲಿ ಈ ಪ್ರಶ್ನೆಯನ್ನು ಕೇಳಿದಾಗ ಅವಳು ಹೀಗೆ ಉತ್ತರಿಸುತ್ತಾಳೆ: ಸಾಭಾಗ್ಯಶಾಲಿಯಲ್ಲಿಯೂ, ಧೈರ್ಯದಿಂದ ಚೆನ್ನಾಗಿ ಮಾತಾಡುವವರಲ್ಲಿಯೂ ಕಾರ್ಯಕುಶಲನಲ್ಲಿಯೂ, ಕಾರ್ಯದಲ್ಲಿಯೇ ಯಾವಾಗಲೂ ನಿರತನಾಗಿರುವವನ ಲ್ಲಿಯೂ, ಕ್ರೋಧರಹಿತನಲ್ಲಿಯೂ, ದೇವರಾಧನತತ್ಪರನಲ್ಲಿಯೂ, ಮಾಡಿದ ಉಪಕಾರವನ್ನು ಸ್ಮರಿಸುವವನ ಲ್ಲಿಯೂ, ಜಿತೇಂದ್ರಿಯನಲ್ಲಿಯೂ, ಅಧಿಕ ಸತ್ವಗುಣವಿರುವವನಲ್ಲಿಯೂ ನಾನು ನಿತ್ಯವೂ ವಾಸಿಸುತ್ತೇನೆ.
ಸತ್ಯವನ್ನೇ ಹೇಳುವ ಸೌಭಾಗ್ಯವತಿಯರಾದ, ಸದ್ಗುಣಸಂಪನ್ನೆಯರಾದ, ಮಂಗಳಕರವಾದ ಶೀಲಸ್ವಭಾವಗಳುಳ್ಳ, ವಸ್ತ್ರಾಭರಣಗಳಿಂದ ವಿಭೂಷಿತೆಯರಾದ ಪತಿವ್ರತೆಯರಲ್ಲಿ ನಾನು ವಾಸಮಾಡುತ್ತೇನೆ. ಮಾಡಿದ ಉಪಕಾರ ಸ್ಮರಿಸದೇ ಇರುವವನಲ್ಲಿಯೂ, ದುರಾಚಾರನಲ್ಲಿಯೂ, ಕ್ರೂರನಲ್ಲಿಯೂ, ಕಳ್ಳನಲ್ಲಿಯೂ ನಾನು ವಾಸ ಮಾಡುವುದಿಲ್ಲ.
ಯಾವ ಮನೆಯಲ್ಲಿ ಪ್ರತಿನಿತ್ಯವೂ ಅಗ್ನಿಹೋತ್ರ ಮಾಡುವರೋ, ಗೋವುಗಳನ್ನೂ- ಬ್ರಾಹ್ಮಣರನ್ನೂ -ದೇವತೆ ಗಳನ್ನೂ ಅರ್ಚನೆ ಮಾಡುವರೋ, ಸಮಯಗಳಲ್ಲಿ ದೇವತೆಗಳಿಗೆ ಪುಷ್ಪಾಂಜಲಿ ಸಮರ್ಪಿಸುವರೋ ಅಂಥವರ ಮನೆಯಲ್ಲಿಯೂ ನಾನು ನಿತ್ಯ ವಾಸ ಮಾಡುತ್ತೇನೆ. ಯಾವಾಗಲೂ ಅಧ್ಯಯನ-ಅಧ್ಯಾಪನಗಳಲ್ಲಿಯೇ ತೊಡಗಿರುವ ಬ್ರಾಹ್ಮಣರಲ್ಲಿಯೂ, ಸದಾ ಸ್ವಧರ್ಮ ಪರಾಯಣನಾಗಿರುವ ಕ್ಷತ್ರಿಯನಲ್ಲಿಯೂ, ಕೃಷಿ-ವಾಣಿಜ್ಯಾದಿಗಳಲ್ಲಿಯೇ ನಿರತನಾಗಿರುವ ವೈಶ್ಯನಲ್ಲಿಯೂ, ಸದಾ ಶುಶ್ರೂಷೆಯಲ್ಲಿಯೇ ನಿರತನಾಗಿರುವ ಶೂದ್ರನಲ್ಲಿಯೂ ನಾನು ಯಾವಾಗಲೂ ವಾಸ ಮಾಡುತ್ತೇನೆ.
ನಾರಾಯಣನ ಹೊರತಾಗಿ ನಾನು ಯಾರಲ್ಲಿಯೂ ಶರೀರಯುಕ್ತಳಾಗಿ ನೆಲೆಸುವುದಿಲ್ಲ. ಇದೇ ರೂಪದಿಂದಲೇ ನಾನು ಇನ್ನಾವ ಸ್ಥಳದಲ್ಲಿಯೂ ಇರಲು ಸಾಧ್ಯವಿಲ್ಲ.
ಇಲ್ಲಿ ಎಲ್ಲಿಯೂ ಜೇಡನ ಬಲೆಯಲ್ಲಿರುವುದಾಗಿ ಹೇಳಲ್ಪಡುವುದಿಲ್ಲ. ಬಹುಶಃ ನಾವೇ ಅದನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ರೂಪದಲ್ಲಿ ಎಲ್ಲಿ ಇರುತ್ತಾಳೊ ನಮಗಂತೂ ಗೊತ್ತಾಗಲು ಸಾಧ್ಯವಿಲ್ಲ ಎಂಬುದು ತಿಳಿದ ಹಾಗಾಯಿತು.
******
ಪುರಾಣನಾಮ ಚೂಡಾಮಣಿಯಲ್ಲಿ ಲಕ್ಷ್ಮಿಯ ಬಗ್ಗೆ ಹೀಗಿದೆ: ಶಕ್ತಿತ್ರಯದಲ್ಲಿ ಒಬ್ಬಳು. ವಿಷ್ಣುವಿನ ಹೆಂಡತಿ. ವಿಷ್ಣು ಲೋಕವನ್ನು ಮೋಹಗೊಳಿಸುವುದಕ್ಕಾಗಿ ಜಗತ್ತನ್ನು ಎರಡು ಭಾಗವಾಗಿ ವಿಂಗಡಿಸಿದ. ಬ್ರಾಹ್ಮಣರೂ, ವೇದಗಳೂ, ಲಕ್ಷ್ಮಿಯೂ ಒಂದು ಭಾಗ. ವೇದಬಾಹ್ಯರು, ಅಲಕ್ಷ್ಮಿ, ಅಧರ್ಮಗಳು ಒಂದು ಭಾಗ. ಮೊದಲು ಅಲಕ್ಷ್ಮಿಯನ್ನು ಸೃಷ್ಟಿ ಮಾಡಿದ ಕಾರಣ ಆಕೆಗೆ ಜ್ಯೇಷ್ಠಾ ಎಂದು ಹೆಸರು. ದೇವದಾನವರು ಅಮೃತಕ್ಕಾಗಿ ಕ್ಷೀರಸಾಗರ ಮಥನ ಮಾಡಿದಾಗ ಮೊದಲು ತೀವ್ರವಾದ ವಿಷ ಜನಿಸಿತು. ಒಡನೆಯೇ ಜೇಷ್ಠಾದೇವಿ ಜನಿಸಿದಳು. ಬಳಿಕ ಲಕ್ಷ್ಮಿ ಪಾಲ್ಗಡಲಿಂದ ಹೊರಬಂದಳು.
ಜನಪ್ರಿಯ ಭಾಗವತದಲ್ಲಿ ಲಕ್ಷ್ಮಿಯ ಮದುವೆ ಬಗ್ಗೆ ಹೀಗೆ ಉಲ್ಲೇಖವಿದೆ (ಸಾರಾಂಶ ಮಾತ್ರ): ಸಮುದ್ರಮಥನದಲ್ಲಿ ಹಲವಾರು ವಸ್ತುಗಳು ಉದ್ಭವಿಸಿದುವು. ಜಲಮಧ್ಯದಿಂದ ಲಕ್ಷ್ಮೀದೇವಿ ಎದ್ದು ಬಂದಳು. ಎಲ್ಲರೂ ಬೆರಗಿನಿಂದ ನೋಡುತ್ತಿರಲು, ಅವಳು ಕೈಯಲ್ಲಿ ಪುಷ್ಪಮಾಲಿಕೆ ಹಿಡಿದು ಸುತ್ತಲೂ ನೋಡಿದಳು. ತನ್ನ ಪತಿಯಾಗಲು ಯೋಗ್ಯತೆ ಇರಬಹುದಾದವನು ಯಾರೆಂದು ದೃಷ್ಟಿ ಹಾಯಿಸಿದಳು. ಶಿವನೇ ಮೊದಲಾದ ಕೆಲವರು ಮಹಾತಪಸ್ವಿಗಾಳಾಗಿದ್ದರೂ ಕ್ರೋಧ ಜಯಿಸಿರಲಿಲ್ಲ. ಬೃಹಸ್ಪತಿ ಬುದ್ಧಿಶಾಲಿಯಾಗಿದ್ದರೂ ಸ್ವಲಾಭದ ಆಸೆ ಬಿಡಲಿಲ್ಲ. ಬ್ರಹ್ಮ ಸರ್ವವಿಧದಲ್ಲು ಮಹಾಮಹಿಮನಾಗಿದ್ದರೂ ಕಾಮಾದಿಗಳನ್ನು ಜಯಿಸಿಲ್ಲ. ಇಂದ್ರ ಸಕಲ ಭೋಗಭಾಗ್ಯ ಪಡೆದಿದ್ದರೂ ಅವುಗಳೊಂದೂ ಅವರಲ್ಲಿ ಶಾಶ್ವತವಾಗಿ ನಿಲ್ಲುವಂತಿಲ್ಲ. ಯಮ ಧರ್ಮಮೂರ್ತಿಗಳಾಗಿದ್ದರೂ ದಯೆ, ಅನುಕಂಪಗಳಿಂದ ಕೂಡಿಲ್ಲ. ಆದುದರಿಂದ ಈ ಸಮೂಹದಲ್ಲಿ ತನಗೆ ಪತಿಯಾಗಬಲ್ಲವನಾರು? ಸರ್ವವೂ ತಾನಾಗಿ ತನ್ನಿಷ್ಟಮಾತ್ರದಿಂದ ಸಕಲವನ್ನೂ ನಡೆಯಿಸಬಲ್ಲವನಾದ ಶ್ರೀಮನ್ನಾರಾಯಣ ಮಾತ್ರ ಪರಿಪೂರ್ಣನು. ಆತನು ಎಂದಿಗೂ ಯಾರನ್ನೂ, ಯಾವುದಕ್ಕೂ ಆಶ್ರಯಿಸಬೇಕಾಗಿಲ್ಲ. ಮಾತ್ರವಲ್ಲ, ಇಲ್ಲಿ ಸೇರಿದವರೆಲ್ಲ ತನ್ನನ್ನು ಪಡೆಯಲು ಆಸಕ್ತರಾಗಿ ಕಾಣುತ್ತಿರುವಾಗ ಆತನೊಬ್ಬನೇ ತನ್ನಲ್ಲಿ ಅಭಿಲಾಷೆ ತೋರಿಸದವನು. ಕಾರಣ, ತಾನು ಸೇರಿ ಆತನಿಗೆ ಆಗಬೇಕಾದುದೇನೂ ಇಲ್ಲ. ಬದಲಾಗಿ ಅವನನ್ನು ಸೇರಿದರೆ ತಾನೇ ಕೃತಾರ್ಥಳಾಗುವೆನು ಎಂದು ಭಾವಿಸಿದ ಲಕ್ಷ್ಮೀದೇವಿ ಮೆಲ್ಲನೆ ಸಾಗಿ ಶ್ರೀಮನ್ನಾರಾಯಣನ ಮುಂದೆ ಸಾಗಿ ಅವನಿಗೆ ಮಾಲೆ ಹಾಕಿದಳು. (ಸರಿ ಇದನ್ನು ನಾನು ನಂಬುತ್ತೇನೆ. ಏಕೆಂದರೆ ಅದಕ್ಕೆ ಸಾಕ್ಷಿಯಾಗಿ ನಮ್ಮತ್ತೆ ಹೆಸರು ಲಕ್ಷ್ಮೀದೇವಿ, ಮಾವನ ಹೆಸರು ನಾರಾಯಣ! ಮದುವೆ ದಿನ ಮಾಲೆ ಹಾಕುವುದೂ ಮೊದಲು ಹೆಂಗಸರೇ ತಾನೇ! )
ಸತ್ಯ ಧರ್ಮ ನ್ಯಾಯ ಇದ್ದ ಕಡೆ ಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಪ್ರತೀತಿ ಇದೆ. ಹಾಗಾದರೆ ಅನ್ಯಾಯ ಮೋಸ ವಂಚನೆ ಎಸಗುವ ಪಾಪಿಗಳ ಬಳಿ ಲಕ್ಷ್ಮಿ ಇರುವುದಿಲ್ಲವೆ? ಇರುತ್ತಾಳೆ. ಬಹುಶಃ ಆ ಪಾಪಿಗಳು ಅವಳನ್ನು ಕೈ ಕಾಲು ಕಟ್ಟಿ ಕೂಡಿ ಹಾಕಿರುತ್ತಾರೊ ಏನೊ ಎಂಬುದು ನನಗೆ ಬಂದ ಸಂಶಯ.
ಧನಲಕ್ಷ್ಮಿ ಕೆಲವು ಮನೆಗಳಲ್ಲಿ ಕಾಲುಮುರಿದು ಬಿದ್ದಿರುತ್ತಾಳಂತೆ. ಅಲ್ಲಿಂದ ಹೊರಹೋಗಲು ಅವಳಿಗೆ ಸಾಧ್ಯವಾಗುವುದಿಲ್ಲವಂತೆ. ಅಲ್ಲಿ ಲಕ್ಷ್ಮಿ ತುಂಬಿ ತುಳುಕುತ್ತಿರುತ್ತದೆ. ಮತ್ತೆ ಕೆಲವು ಮನೆಗಳಲ್ಲಿ ಲಕ್ಷ್ಮಿಯ ಸುಳಿವೇ ಇರುವುದಿಲ್ಲ. ಇದಕ್ಕೆ ಏನು ಕಾರಣ ಇರಬಹುದು? ಇತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡುತ್ತಿವೆ. ಪಿಎಚ್ಡಿ ಮಾಡಲು ಇದಕ್ಕಿಂತ ಒಳ್ಳೆಯ ವಿಷಯ ಬೇರೆ ಇಲ್ಲ. ಯಾರಾದರೂ ಪಿಚ್ಡಿ ಮಾಡಲು ಮುಂದೆ ಬರುವುದಾದರೆ ನಾನು ಈ ವಿಷಯ ಅವರಿಗೇ ಬಿಟ್ಟು ಕೊಟ್ಟು ಸಹಕರಿಸುತ್ತೇನೆ. ಸದಾ ನನ್ನ ಜೊತೆಯೇ ಇದ್ದು ಅದರಿಂದ ಒಳ್ಳೆಯ ಕೆಲಸಗಳನ್ನು ನನ್ನಿಂದ ಮಾಡಿಸು ಎಂದು ಅವಳಲ್ಲಿ ವಿನಮ್ರಳಾಗಿ ಬಿನ್ನವಿಸಿ ಲಕ್ಷ್ಮಿಯ ಬಗ್ಗೆ ಯೋಚಿಸುವುದನ್ನು ನಿಮಗೆ ಬಿಟ್ಟು ವಿರಮಿಸುತ್ತೇನೆ.
೨೦೦೭ ಮಾರ್ಚಿ ಕಸ್ತೂರಿಯಲ್ಲಿ ಪ್ರಕಟಗೊಂಡ ಲೇಖನ
Ha ha ha beligge beligge nimma Lakshmi suprabatha odi,supreetalade:)
ಲಕ್ಷ್ಮಿ ಸಾಮಾನ್ಯವಾಗಿ ಎಲ್ಲಿ ವಾಸವಾಗಿರುತ್ತಾಳೆ? …
ella namma namma nambikegaLa mele nintide alva..:) doDDoru heLiddanna munduvariso kelasagaLu nammadu.. nimma lekhana tumba chennagide..
ಲಕ್ಷ್ಮಿ ಎಲ್ಲೆಲ್ಲಿ ಇರುತ್ತಾಳೆ? – ನಮ್ಮ ಮನೆ ಒಂದನ್ನು ಬಿಟ್ಟು ಸುತ್ತಮುತ್ತಲಿನ ಮತ್ತು ಇತರ ಪರಿಚಯಸ್ಥರ ಮನೆಗಳಲ್ಲಿ ಲಕ್ಷ್ಮಿ ಇದ್ದಾಳೆ ಎಂಬುದು ನನ್ನವಳ ನಂಬಿಕೆ.
haaganta naavu lakshmi baaramma anta haadodannu bidokaagalla..
ನಂಗೂ ಇಂಥ ವಾದಗಳ ಅನುಭವಗಳಾಗಿವೆ.
ನಮ್ಮತ್ತೆ ಇನ್ನೂ ಸ್ವಲ್ಪ ಮುಂದೆ ಹೋಗಿ ಶುಕ್ರವಾರ ಕೆಲಸದ ಹೆಂಗಸಿನ
ಅಥವಾ ಇನ್ಯಾರದೆ ದುಡ್ಡು ಕೊಡಬೇಡ ಅನ್ನೋರು, ಈಗ ಭಾರಿ ಬದಲಾವಣೆ 🙂
ಸ್ವರ್ಣಾ
ನಿಜ ಒಬ್ಬೊಬ್ಬರದೂ ಒಂದೊಂದು ನಿಲುವು. ಕೆಲವರು ಆ ದಿನ ಈ ಕೆಲ್ಸ ಮಾಡಬಾರ್ದು..ಲಕ್ಷ್ಮಿ ಮನೆಯಿಂದ ಹೊರಟು ಹೋಗ್ತಾಳೆ ..ಅಂತೆಲ್ಲಾ ಹೇಳ್ತಿದ್ದುದು ನೆನಪಿದೆ… ಮಂಗಳವಾರ ಕೂದಲು ಕತ್ತರಿಸಿದ್ರೆ ದರಿದ್ರ ಅಂತಾನೂ ಇದೆ.. ಅದೇ ಕಾರಣಕ್ಕೆ ಹಳ್ಳಿಗಳಲ್ಲಿ ಮಂಗಳವಾರ ಕ್ಷೌರಿಕನ ಅಂಗಡಿ ಬಂದ್ ಇರ್ತಿತ್ತು… ಚನ್ನಾಗಿದೆ ಲೇಖನ.
ಪಿಚ್ಡಿ ಮಾಡಲು ಇಚ್ಚೀಸುತ್ತೇನೆ. ನಿಮ್ಮ ಸಹಕ ನೀಡುತ್ತೀರಾ.
ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ ನಿಖಿಲ ರಕ್ಷಕ ನೀನೆ ವಿಶ್ವವ್ಯಾಪಕನೇ ಪ –
ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕು..
ellavu aa daiva niyamitavadagada moodanambikegala goodu sampradhaya estu shobe….????
Uttamavada vichara grahane mattu atyuthamavada baravanige.. 🙂