೩೦-೧೦-೨೦೧೦ರಂದು ಮೈಸೂರು ನಿಲ್ದಾಣದಿಂದ ರಾತ್ರಿ ೯ ಗಂಟೆಗೆ ಮಧುರೆಗೆ ಹೋಗಲು ನಾವು ೧೨ ಮಂದಿ ಸರ್ಕಾರಿ ರಾಜಹಂಸ ಬಸ್ಸೇರಿದಾಗ ಬಾಗಿಲಲ್ಲಿ ಇಬ್ಬರು ನನ್ನನ್ನು ನೂಕುತ್ತ ಇಳಿದರು. ಬಸ್ಸು ಹತ್ತುವ ಜಾಗ ಇಕ್ಕಟ್ಟು. ಒಬ್ಬರಿಗೆ ಮಾತ್ರ ಹೋಗಲು ಜಾಗ ಅಲ್ಲಿ. ನಾನು ಒಳಗೆ ಹತ್ತಿ ಕುಳಿತು ಜಂಭದ ಚೀಲ ನೋಡುತ್ತೇನೆ ಜಿಪ್ ಅರ್ಧ ತೆರೆದಿದೆ. ಅರೆ ಇದು ಯಾರು ಜಿಪ್ ತೆರೆದದ್ದು ಎಂದು ಆಶ್ಚರ್ಯದಿಂದ ಒಳಗೆ ಕೈ ಹಾಕಿದರೆ ನನ್ನ ಸಂಚಾರಿ (ಮೊಬೈಲ್) ಮಾಯ. ಪಕ್ಕದಲ್ಲಿ ಕುಳಿತ ಅಮ್ಮನಿಗೆ ಹೇಳಿ, ಅಮ್ಮನ ಸಂಚಾರಿಯಿಂದ ಕೂಡಲೇ ಮನೆಯಲ್ಲಿದ್ದ ಮಗಳು ಅಕ್ಷರಿಗೆ ನಡೆದ ಸಂಗತಿ ತಿಳಿಸಿ, ಸಿಮ್ ಬ್ಲಾಕ್ ಮಾಡಲು ಹೇಳಿದೆ. ಅದರಲ್ಲಿದ್ದ ಸಿಮ್ ಅವಳದ್ದು (ಚೆನ್ನೈ ಸಿಮ್). ತಮಿಳುನಾಡಿಗೆ ಹೋಗುವುದೆಂದು ರೋಮಿಂಗ್ ದರ ತಪ್ಪಿಸುವ ಸಲುವಾಗಿ ನನಗೆ ಅವಳ ಸಿಮ್ ಕೊಟ್ಟಿದ್ದಳು. ನನ್ನಲ್ಲಿದ್ದ ಮೊಬೈಲಿನಲ್ಲಿ tracker ಇತ್ತು. ಅದಕ್ಕೆ ಬೇರೆ ಯಾವುದೇ ಸಿಮ್ ಹಾಕಿದರೂ ಕೂಡಲೇ ಅನಂತನ ಸಂಚಾರಿಗೆ ಕ್ಷಿಪ್ರ ಸಂದೇಶ ಬರುತ್ತದೆ ಸಿಮ್ ಕಳುವಾಗಿದೆ ಎಚ್ಚರ ಎಂದು ಹಾಗೂ ಯಾವ ಸಿಮ್ ಹಾಕಿದ್ದಾರೋ ಆ ಸಂಖ್ಯೆ ಬರುತ್ತದೆ. ಮೊಬೈಲ್ ನ imie ಸಂಖ್ಯೆಯನ್ನು ತಡೆಗಟ್ಟಲು ಆಗುತ್ತ ನೋಡು ಎಂದು ಹೇಳಿದೆ. ಮುಂದೆ ೩ ದಿನ ನಮ್ಮ ಪ್ರಯಾಣದುದ್ದಕ್ಕೂ ನಾನು ಅಕ್ಷರಿಗೆ ದೂರವಾಣಿಸಲಿಲ್ಲ. ಆ ವಿಷಯದ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಅದೃಷ್ಟ ಇದ್ದರೆ ಸಿಕ್ಕೀತು ಎಂದು ಸುಮ್ಮನಾದೆ.
೨ನೇ ತಾರೀಕು ಬೆಳಗ್ಗೆ ೪.೩೦ ಗಂಟೆಗೆ ರಾಮೇಶ್ವರ ದೇವಾಲಯದಲ್ಲಿ ಸ್ಫಟಿಕಲಿಂಗದ ಅಭಿಷೇಕದ ದರ್ಶನಕ್ಕೆ ಸರತಿ ಸಾಲಿನಲ್ಲಿ ಕಾದಿದ್ದಾಗ, `ನೀನೇನಾದರೂ ಮೊಬೈಲ್ ಸಿಕ್ಕಲು ದೇವರಲ್ಲಿ ಪ್ರಾರ್ಥನೆ ಮಾಡಿದ್ದೀಯ? ನಿನ್ನ ಮೊಬೈಲ್ ಸಿಕ್ಕಿದೆ’ ಎಂದ. `ಅಕ್ಷರಿಯಿಂದ ಕ್ಷಿಪ್ರ ಸಂದೇಶ ಬಂದಿದೆ’ ಎಂದ ಅಣ್ಣ. ನಿಜ ಹೇಳುತ್ತೀದ್ದೀಯ ಎಂದೆ ಬೆರಗಿನಿಂದ. `ಹೌದು. ನಿನ್ನೆ ರಾತ್ರಿಯೇ ೨ ಸಂದೇಶ ಕಳುಹಿಸಿದ್ದಾಳೆ. ನಾನು ನೋಡಿದ್ದು ಇವತ್ತು’ ಎಂದು ಹೇಳಿದ.
೩ನೇ ತಾರೀಕು ಬೆಳಗ್ಗೆ ೭.೪೫ಕ್ಕೆ ಮೈಸೂರು ತಲಪಿ ಮನೆಗೆ ಬಂದಾಗ ಅಕ್ಷರಿ ಸವಿವರವಾಗಿ ಮೊಬೈಲ್ ಸಿಕ್ಕಿದ ಕತೆಯನ್ನು ವಿವರಿಸಿದಳು. ವಿವರ ಹೀಗಿದೆ: ಅಕ್ಷರಿ ೧ನೇ ತಾರೀಕು ಬೆಳಗ್ಗೆ ಮೊಬೈಲ್ ಕೊಂಡ ಅಂಗಡಿ (ಮೈಸೂರಿನ ಧನ್ವಂತರಿ ರಸ್ತೆಯ ಆವಿಷ್ಕಾರ್)ಗೆ ದೂರವಾಣಿಸಿದಾಗ ಅವರಿಂದ `ಇಲ್ಲಿಗೆ ಬನ್ನಿ, ನೋಡುವ’ ಎಂಬ ಭರವಸೆ ಸಿಕ್ಕಿತು. ಅಕ್ಷರಿ ಮಧ್ಯಾಹ್ನ ಅಂಗಡಿಗೆ ಹೋದಳು. ( ಅಜ್ಜಿಗೆ ಪಾಟಕ್ಕೆ ಹೋಗುತ್ತೇನೆ ಎಂದು ಸುಳ್ಳು ಹೇಳಿ. ಇಲ್ಲಾಂದರೆ ಅಜ್ಜಿ ಹೋಗಲು ಬಿಡುವುದಿಲ್ಲ!) ಮೊಬೈಲ್ ಕದ್ದವನು ಅದಾಗಲೇ ಎರಡು ಸಿಮ್ ಬದಲಾಯಿಸಿದ್ದ. ಆ ಸಂಖ್ಯೆಗೆ ದೂರವಾಣಿಸಿದಾಗ (ಆ ಸಂಖ್ಯೆ ಅನಂತನ ಸಂಚಾರಿಗೆ ಬರುತ್ತದೆ ಎಂಬುದು ನೆನಪಿರಲಿ)ಅವರು ಏನೇನೋ ಹೇಳಲು, ಅಂಗಡಿಗೆ ತಂದು ಕೊಟ್ಟರೆ ಸರಿ, ಇಲ್ಲಾಂದರೆ ಆರಕ್ಷಕರಿಗೆ ದೂರು ಕೊಡುತ್ತೇವೆ ಎಂದು ಹೆದರಿಸಿದಾಗ ದಾರಿಗೆ ಬಂದರು. ನೀವೇ ಇಂತಲ್ಲಿಗೆ ಬನ್ನಿ ಎಂದು ಎರಡು ಸಲ ಸ್ಥಳ ಬದಲಾಯಿಸಿ ಸತಾಯಿಸಿದಾಗ, ಪುನಃ ಹೆದರಿಸಿದಾಗ ಕೊನೆಗೆ ತಿಲಕನಗರಕ್ಕೆ ಬನ್ನಿ ಎಂದು ಹೇಳಿದರು. ಅಂಗಡಿಯ ಮಾಲೀಕರು ಅವರ ಇಬ್ಬರು ಕೆಲಸಗಾರರನ್ನು ಕಳುಹಿಸಿಕೊಟ್ಟರು. ಅಲ್ಲಿ ಕಳ್ಳ ೨೫ ಜನರನ್ನು ಸೇರಿಸಿದ್ದ. ಎಲ್ಲ ಮುಸ್ಲಿಮರು. ನಿಮ್ಮದೇ ಮೊಬೈಲ್ ಎಂಬುದಕ್ಕೆ ಗ್ಯಾರಂಟಿಯೇನು ಹಾಗೇ ಹೀಗೆ ಎಂದು ಸತಾಯಿಸಲು ಹೊರಟಾಗ, ಇವರಿಗೆ ದಿಕ್ಕು ತೋಚದೆ ಮಾಲೀಕರಿಗೆ ದೂರವಾಣಿಸಿದರು. ಅವರು ಜೋರಾಗಿ ಹೆದರಿಸಿದರು. ಅದಕ್ಕೂ ಬಗ್ಗದಿದ್ದರೆ ಪೋಲೀಸರಿಗೆ ಸುದ್ದಿ ಮುಟ್ಟಿಸಿ ಎಂದಾಗ ಮೊಬೈಲ್ ಕೊಟ್ಟರಂತೆ. ಅಂಗಡಿ ಮಾಲೀಕರಿಗೆ ಹಾಗೂ ಕೆಲಸಗಾರರಿಗೆ ಅಕ್ಷರಿ ೩ ನಾಲ್ಕು ಸಲ ಕೃತಜ್ಞತೆ ಹೇಳಿ ದಿಗ್ವಿಜಯದಿಂದ ಮೊಬೈಲ್ ಮನೆಗೆ ತಂದಳು.
ಆವಿಷ್ಕಾರದ ಮಾಲೀಕರು, ಕೆಲಸಗಾರರ ಸಂಪೂರ್ಣ ಸಹಕಾರದಿಂದ ಹಾಗೂ ಅಕ್ಷರಿಯ ಸಾಹಸದಿಂದ ಕಳವಾದ ಸಂಚಾರಿ ಏನೂ ಖರ್ಚಿಲ್ಲದೆ ಕವಚ ಸಮೇತ ವಾಪಾಸ್ ನನ್ನ ಕೈಸೇರಿತು. ಸಿಮ್ ಮಾತ್ರ ಕಾಣೆಯಾಗಿತ್ತು. ಒಮ್ಮೊಮ್ಮೆ ಅದೃಷ್ಟ ನಮಗೊಲಿಯುತ್ತದೆ.
ಕಲಿಯಬೇಕಾದ ಪಾಟ: ಹೊಸ ಮೊಬೈಲ್ ತೆಗೆಯುವಾಗ mobile tracker ಇರುವಂಥ ಮೊಬೈಲನ್ನೇ ತೆಗೆಯಬೇಕು.
ಜಂಬದಚೀಲದ ಹೊರಭಾಗದ ಜಿಪ್ಪಿನಲ್ಲಿ ಯಾವತ್ತೂ ಸಂಚಾರಿಯನ್ನು ಇಡದಿರಿ. ಬಸ್ ಹತ್ತುವಾಗ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಲಿ!
ನೀವೇ ಅದೃಷ್ಟವಂತರು ಬಿಡಿ…ನನ್ನ ಸೋನಿ ಎರಿಕ್ ಸನ್ (ದುಬಾರಿ ಮಾಡಲ್ಲು) ಬಹಳ ಪ್ರಯತ್ನ ಪಟ್ರೂ ಸಿಗ್ಲಿಲ್ಲ,,,ಅದರ ಕಳುವಿನ ಕಂಪ್ಲೇಂಟ್ ಕೊಡೋಕೆ ಹೋಗಿದ್ರೆ,,ಅಲ್ಲಿ ಎಸ್ಸೈ ನನ್ನ ತಮ್ಮನ ಹತ್ರ ನೋಕಿಯಾ ಮ್ಯೂಸಿಕ್ ಎಕ್ಸ್ಪ್ರೆಸ್ ಮೇಲೆ ಕಣ್ಣು ಹಾಕೋದೇ…ನಿಮ್ಮ ಫೋನು ನನ್ನ ಫೋನ್ ಜೊತೆ (ಅವ್ರದ್ದು ಸೆಕೆಂಡ್ ಹ್ಯಾಂಡ್ ಮಾಮೂಲಿ ನೋಕಿಯಾ ..೧೫೦೦-೨೦೦೦ ರೂಪಾಯಿಂದು) ..ಎಕ್ಸ್ ಚೇಂಜ್ ಮಾಡಿಕೊಂಡ್ರೆ ನಾನೂ ಪ್ರಯತ್ನ ಮಾಡಬಹುದಪ್ಪಾ ಅನ್ನೋದೇ,,,,ಹಹಹ…
ಕರ್ನಾಟಕ No.1 ಭ್ರಷ್ಟ ರಾಜ್ಯವೆನಸಿಕೊಂಡದ್ದರಲ್ಲಿ ಅನುಮಾನ ಉಳಿದಿಲ್ಲ.
ನೀವು ನಿಜವಾಗಿಯೂ ಅದೃಷ್ಟವಂತರು. ನಾನು ಎರಡು ಬಾರಿ ಸಂಚಾರಿಗಳನ್ನು ಕಳೆದುಕೊಂಡವ. ದೂರು ಕೊಡಲೂ ನೂರು ರೂ ಕೊಡಬೇಕಾಯಿತು :-(.
ಮೇಡಮ್,
ನಿಮ್ಮ ಸಂಚಾರಿಗೆ ನಿಮ್ಮ ಜೊತೆ ಇನ್ನೂ ನಂಟಿದೆ ಅದಕ್ಕೆ ಸಿಕ್ಕಿದೆ. ನಿಮ್ಮ ಕಳುವು ಮತ್ತು ಸಿಕ್ಕ ಕತೆ ಚೆನ್ನಾಗಿದೆ. ನಿಮ್ಮ ಲೇಖನವನ್ನು ಓದಿದ ಮೇಲೆ ನಾವು ಕೂಡ ಜಾಗೃತರಾಗಿರಬೇಕು..
ಅನುಭವ ಕಥನ ಎಲ್ಲರಿಗೂ ಉಪಯುಕ್ತ ಮಾಹಿತಿ ನೀಡಿತು. ಪುನಃ ಇಂಥ ಅನುಭವ ನಿನಗಾಗದಂತೆ ಜಾಗರೂಕಳಾಗಿರುತ್ತೀ ಎಂದು ನಂಬುತ್ತೇನೆ. ಬಲು ಹಿಂದೆ ನನ್ನ ತಂದೆಯವರು ಇದೇ ರೀತಿ ಜೇಬುಗಳ್ಳರಿಂದ ನಮ್ಮ ಜೇಬನ್ನು ರಕ್ಷಿಸಿಕೊಳ್ಳುವುದು ಹೇಗೆಂದು ನಮಗೆಲ್ಲ ುಪದೇಶ ಮಾಡಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಕಿಸೆಗಳ್ಳನ ಕೈಚಳಕಕ್ಕೆ ಬಲಿಯಾಗಿದ್ದರು.
mobile tracked! great.
ಓ!!ಈ ಘಟನೆಯನ್ನು ಅನಂತಣ್ಣ ಮೊನ್ನೆ ಭಾಗಮಂಡಲದಲ್ಲಿ ರಸವತ್ತಾಗಿ ಹೇಳಿದ್ದ,ಆದರೆ ಈ tracker ಅಂತ ಒಂದಿರುತ್ತದೆ ಅಂತ ಅವನು ಹೇಳಿದ್ದು ನನಗೆ ತಿಳಿಯದೆ ಎಲ್ಲೋ track
ತಪ್ಪಿದಂತೆನಿಸಿ ಗೊಂದಲ ಆಗಿತ್ತು,ಅಷ್ಟರಲ್ಲಿ ಊಟಕ್ಕೆ ಕರೆಬಂದು ವಿಷಯದ trackಏ ಬದಲಾಗಿತ್ತು,ಈಗ ಇದನ್ನು ಓದಿ ಸರೀ ಅರ್ಥಾಯಿತು!
GREAT. ಆದರೆ ನನ್ನಿಂದಿದೆಲ್ಲಾ ಆಗಲ್ಲಪ್ಪಾ. ಅಂಗಾಗಿ ನಾ ಮೊಬೈಲೇ ತಗಳಲ್ಲ 🙂
ಮೊಬೈಲ್ ವರ್ಜನ
ಮೊಬೈಲ್ ವರ್ಜನರಿಗೆ ಜಯವಾಗಲಿ!
ರೋಚಕ ಅನುಭವ .. mobile tracker ಮತ್ತು ಅಕ್ಷರಿಯ ಸಾಹಸ ಮೆಚ್ಹ ಬೇಕು. ಆದರೆ ಈ mobile tracker ಏನು ? ಇದನ್ನು ಉಪಯೋಗಿಸುವುದು ಹೇಗೆ?
[…] ಮಾಲಾ ಲಹರಿ […]
[…] ಮಾಲಾ ಲಹರಿ […]