ಇವತ್ತು ನಮ್ಮ ಮಾವ (ಜಿ.ಟಿ. ನಾರಾಯಣ ರಾವ್ ೧೯೨೬-೨೦೦೮)ಅವರ ಜನ್ಮ ದಿನ. ಅವರು ಇರುತ್ತಿದ್ದರೆ ಅವರಿಗೆ ೮೬ ಪ್ರಾಯವಾಗುತ್ತಿತ್ತು. ೨೦೦೬ನೇ ಇಸವಿಯಲ್ಲಿ ಸುಕನ್ಯಾ ಪ್ರಭಾಕರ್ ಅವರು ಕೇಳಿದ ಪ್ರ ಶ್ನೆಗಳಿಗೆ ಅವರಿತ್ತ ಉತ್ತರವನ್ನಿಲ್ಲಿ ಹಾಕಿದ್ದೇನೆ.
ಡಾ.ಸುಕನ್ಯಾಪ್ರಭಾಕರ್ ಅವರು ಎತ್ತಿರುವ ಪ್ರಶ್ನೆಗಳಿಗೆ ವಿವರಣೆ
೧. ಸಂಗೀತ ವಿಮರ್ಶಾಕ್ಷೇತ್ರವನ್ನು ಆಯ್ದುಕೊಂಡ ಉದ್ದೇಶ?
ನಾನೊಬ್ಬ ಸಂಗೀತ ರಸಿಕ, ಎಂದೂ ವಿಮರ್ಶಕನಲ್ಲ. ಅಧ್ಯಯನಲಭ್ಯ ಶಾಸ್ತ್ರಜ್ಞಾನ ಇರುವಾತ ಮಾತ್ರ ವಿಮರ್ಶಕನಾಗಬಲ್ಲ, ನನಗೆ ಅದು ಇಲ್ಲ. ಆದರೆ ಹುಟ್ಟಿನಿಂದಲೇ (೧೯೨೬) ಸಂಗೀತಶ್ರವಣಾನುಭವ ಸಮೃದ್ಧವಾಗಿದೆ. ನಡೆದುಬಂದಿರುವ ಹಾದಿಯನ್ನು ವರ್ತಮಾನದ (೨೦೦೬) ಅನುಕೂಲ ಮಂಚಿಕೆಯಿಂದ ಸಿಂಹಾವಲೋಕಿಸಿದಾಗ “ಸಂಗೀತವೆನ್ನುಸಿರು, ಸಾಹಿತ್ಯವೆನ್ನೊಡಲು, ವಿಜ್ಞಾನವೆನ್ನಶನ” ಎಂಬ ಸರಳ ಸೂತ್ರ ನನ್ನ ಬದುಕನ್ನು ನಿಯಂತ್ರಿಸುತ್ತಿದೆಯೆಂದು ಅನ್ನಿಸುತ್ತದೆ. ಗಣಿತವಿದ್ಯಾರ್ಥಿಯಾಗಿರುವ ನಾನು ತೀರ ಸಹಜವಾಗಿ ನನ್ನದೇ ವಿಮರ್ಶಾಮಾನಕಗಳನ್ನು ಕೇಳ್ಮೆಯ ಅನುಭವದಿಂದ ರೂಪಿಸಿಕೊಂಡಿದ್ದೇನೆ.
೧೯೬೫ರ ಸುಮಾರಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಛೇರಿ: ಆರ್.ಕೆ.ಶ್ರೀಕಂಠನ್, ಲಾಲ್ಗುಡಿ ಜಿ.ಜಯರಾಮನ್ ಮತ್ತು ಉಮಯಾಳ್ಪುರಮ್ ಕೆ.ಶಿವರಾಮನ್. ಶ್ರೀಕಂಠನ್-ಕಛೇರಿಯನ್ನು ಅದೇ ಮೊದಲ ಬಾರಿಗೆ ಆಲಿಸಿದ ನಾನು ಅದು ಹಿಂದೆ ಮದ್ರಾಸಿನಲ್ಲಿ ಕೇಳಿದ್ದ ಜಿಎನ್ಬಿ-ಚೌಡಯ್ಯ-ಮಣಿ ಬೈಠಕ್ಕಿನ ಮಟ್ಟದಲ್ಲೇ ಇತ್ತೆಂದು ತುಂಬ ಖುಷಿಪಟ್ಟೆ, ಅಭಿಮಾನ ತಳೆದೆ ಕೂಡ. ಆದರೆ ಮುಂಚೂಣಿ ದೈನಿಕವೊಂದರಲ್ಲಿ ಮರುವಾರ ಪ್ರಕಟವಾದ ಅಧಿಕೃತ ವಿಮರ್ಶೆ ತೀರ ಅವಹೇಳನಕಾರಿಯಾಗಿತ್ತು ಮಾತ್ರವಲ್ಲ, ಶ್ರೀಕಂಠನ್ ಹಾಡದಿದ್ದ ರಾಗ ಕೃತಿಗಳನ್ನು ಕೂಡ ಅದರಲ್ಲಿ ಪ್ರಸ್ತಾವಿಸಲಾಗಿತ್ತು! ಈ ವಿಮರ್ಶಕ ಪೂರ್ವಗ್ರಹಪೀಡಿತ ಮತ್ತು ಕಛೇರಿಗೆ ಹಾಜರಾಗದೆ ವಿಮರ್ಶೆ ಹೊಸೆದಿದ್ದಾನೆಂಬುದು ಸ್ಪಷ್ಟವಾಯಿತು. ಅದನ್ನು ನಯವಾಗಿ ನಿರಾಕರಿಸಿ ನನ್ನ ಭಾವನೆಯನ್ನು ಸ್ಪಷ್ಟವಾಗಿ ಬರೆದು ಅದೇ ಪತ್ರಿಕೆಗೆ ಕಳಿಸಿದೆ. ಅದು ಪ್ರಕಟವಾದಾಗ ನನಗೆ ಅನಿರೀಕ್ಷಿತವಾಗಿ ಮತ್ತು ಅಯಾಚಿತವಾಗಿ `ವಿಮರ್ಶಕ’ ಪಟ್ಟ ದೊರೆಯಿತು!
ಮುಂದೆ ೧೯೬೯ರಲ್ಲಿ ವೃತ್ತಿನಿಮಿತ್ತ (ವಿಜ್ಞಾನ ಸಂಪಾದಕ, ಕನ್ನಡ ವಿಶ್ವಕೋಶ, ಮೈಸೂರು ವಿಶ್ವವಿದ್ಯಾನಿಲಯ) ಮೈಸೂರಿಗೆ ಬಂದು ಇಲ್ಲಿಯ ಒಬ್ಬ ಶಾಶ್ವತ ನಿವಾಸಿಯಾದೆ, ಮತ್ತು ಇಲ್ಲಿಯ ಸಂಗೀತ ಸಭೆಗಳಿಗೆ ಸ್ವಂತಾಸಕ್ತಿಯಿಂದ ಸೇವೆ ಸಲ್ಲಿಸಲು ಕೂಡ ಮುಂದಾದೆ. ೧೯೭೮ರಲ್ಲಿ Star of Mysore ಹೆಸರಿನ ಇಂಗ್ಲಿಷ್ ದೈನಿಕ ಪ್ರಾರಂಭವಾಯಿತು. ಇದರ ಸಂಪಾದಕವರ್ಗದವರು ನನ್ನೂರಾದ ಕೊಡಗಿನವರು. ಅವರ ಪ್ರೀತಿಯ ಒತ್ತಾಯದ ಮೇರೆಗೆ, ಅದೇ ಹಿಂದಿನ ವಾರ ಮೈಸೂರಿನಲ್ಲಿ ನಡೆದ, ಸಂಗೀತ ಕಾರ್ಯಕ್ರಮಗಳ ಬಗ್ಗೆ ಟಿಪ್ಪಣಿಗಳನ್ನು ಬರೆಯಲಾರಂಭಿಸಿದೆ (೧೯೮೦ರ ದಶಕ). ಇತ್ತ ೧೯೭೮ರಲ್ಲಿ ಗಾನಭಾರತೀ (ರಿ) ಸಂಸ್ಥೆಯೂ ರಂಗಪ್ರವೇಶಿಸಿತು. ೧೯೮೦ರಲ್ಲಿ ನನ್ನನ್ನು ಇದರ ಕಾರ್ಯನಿರ್ವಾಹಕ ಸಮಿತಿಯ ಒಬ್ಬ ಸದಸ್ಯನಾಗಿ ಆಯ್ಕೆ ಮಾಡಿದರು. ಆ ಬಳಿಕ ನನ್ನ ಸಂಗೀತಟಿಪ್ಪಣಿಗಳು ಇನ್ನಷ್ಟು ಕ್ರಮಬದ್ಧವಾಗಿ ನಾಡಿನ ಇತರ ಕೆಲವು ಪತ್ರಿಕೆಗಳಲ್ಲಿ ಕೂಡ ಪ್ರಕಟವಾಗಲು ತೊಡಗಿದುವು.
೧೯೯೨ರಿಂದ ಮುಂದಿನ ಆರೇಳು ವರ್ಷ The Hindu ದೈನಿಕಕ್ಕೂ (ಅದರ ಸಂಪಾದಕರ ಕೋರಿಕೆ ಮೇರೆಗೆ) ಬರೆಯುತ್ತಿದ್ದೆ. ಕಲಾನಿಷ್ಠೆ, ಶ್ರವಣಾನುಭವ ಮತ್ತು ಕಲಾವಿದರ ಬಗ್ಗೆ ಗೌರವ ಇವಿಷ್ಟು ಮಾತ್ರ ನನ್ನ ಬರೆಹಗಳ ತಳಪಾಯ. ಆದ್ದರಿಂದ ಈ ಪ್ರಶ್ನೆಗೆ ಉತ್ತರ, “ವಿಮರ್ಶಾಕ್ಷೇತ್ರ ನನ್ನ ಇಚ್ಛಾಪೂರ್ವಕ ಆಯ್ಕೆ ಅಲ್ಲ, ನನ್ನ ಅಸಂಖ್ಯ ಆಸಕ್ತಿಗಳ ಅನುಶೀಲನೆಯಲ್ಲಿ ಅದು ತಂತಾನೇ ಮೈದಳೆದಿದೆ, ಅಷ್ಟೆ. ಕಲಾಭಿವೃದ್ಧಿಗೆ ಅದರಿಂದ ತುಸುವಾದರೂ ಪ್ರಯೋಜನವಾಗಲಿ ಎಂಬುದೊಂದೇ ಉದ್ದೇಶ.”
೨. ಸೃಜನಾತ್ಮಕ ಕಲೆಯ ಅಭಿವೃದ್ಧಿಗೆ ವಿಮರ್ಶೆಯ ಅಗತ್ಯ ಎಷ್ಟರ ಮಟ್ಟಿಗಿದೆ?
ನಾವಿಂದು ಪ್ರಚಾರಯುಗದಲ್ಲಿದ್ದೇವೆ. ಅಸಂಖ್ಯ ಮಾಧ್ಯಮಗಳ ಮೂಲಕ ಕಲೆಗೆ ಪ್ರಚಾರ ಮತ್ತು ಪ್ರೋತ್ಸಾಹ ದೊರೆಯುತ್ತಿವೆ. ಜೊತೆಯಲ್ಲೇ ಕಲಾಪ್ರಪಂಚ ಅನೇಕ ಯುವ ಪ್ರತಿಭೆಗಳನ್ನು ತನ್ನತ್ತ ಆಕರ್ಷಿಸುತ್ತಲೂ ಇದೆ. ಇಂಥಲ್ಲಿ ಖಂಡಿತವಾಗಿಯೂ ಸಹೃದಯ ವಿಮರ್ಶೆ (ಅಥವಾ ವರದಿ) ಅವರ, ಮುಖ್ಯವಾಗಿ ಯುವ ಕಲಾವಿದರ, ಪುರೋಭಿವೃದ್ಧಿಗೆ ಸಹಾಯಕವಾಗುತ್ತದೆ. ಇಲ್ಲಿ ವೃಥಾ ಪ್ರಶಂಸೆ ಸಲ್ಲ, ಪೂರ್ವಗ್ರಹಪೀಡಿತ ತಿರಸ್ಕಾರ ಖಾತ್ರಿ ಮಾರಕ. ಎಂದೇ ಸಹೃದಯ ವಿಮರ್ಶೆ ಎಂಬ ಪದ ಬಳಸಿದ್ದೇನೆ.
೩. ವಿಜ್ಞಾನ ಮತ್ತು ಸಂಗೀತ ಪರಸ್ಪರ ಸಂಬಂಧವಿದೆಯೇ?
ಭೌತವಿಶ್ವದ ಜೊತೆ ಮಾನವನ ಕುತೂಹಲಭರಿತ ಮತಿ ಕಾರ್ಯ-ಕಾರಣ ಪಾತಳಿಯಲ್ಲಿ ವೀಕ್ಷಣೆ, ಪ್ರಯೋಗ, ತರ್ಕ ಮುಂತಾದ ಪರಿಕರಗಳ ಸಹಿತ ವ್ಯವಹರಿಸಿದಾಗ ಮಿನುಗುವ ಅರಿವೇ ವಿಜ್ಞಾನ. ಇದು ಮಾನವನಿಗೆ ಭೌತವಿಶ್ವದ ವರ್ತನೆ ಕುರಿತ ನಿಯಮಗಳನ್ನು ತುಸು ತುಸುವೇ ತಿಳಿಯಲು ನೆರವಾಗುತ್ತದೆ. ಪರಿಣಾಮವಾಗಿ ತಂತ್ರವಿದ್ಯೆ (technology) ರೂಪುಗೊಂಡು ನಮ್ಮ ಬದುಕಿಗೆ ಊಹಾತೀತ ಸೌಕರ್ಯಗಳನ್ನು ಒದಗಿಸುತ್ತಿದೆ. ವಿಜ್ಞಾನ ಮತ್ತು ತಂತ್ರವಿದ್ಯೆ ಮೂರ್ತ ಜಗತ್ತಿನೊಂದಿಗಿನ ವ್ಯವಹಾರ, ಬಹುತೇಕ ಇದು ಬುದ್ಧಿಗೆ (ಮಿದುಳು) ಮೀಸಲಾದ ಕ್ಷೇತ್ರ. ಆದರೆ ಮಾನವನಿಗೆ ಭಾವವೂ (ಹೃದಯ) ಇದೆ. ಋಜು ಸಂತೃಪ್ತ ಜೀವನವೊಂದು ಭಾವಬುದ್ಧಿಗಳ ಮಧುರ ಸಂಗಮ. ಎಂದೇ ಭಾವರಹಿತ ಬುದ್ಧಿ ಶುಷ್ಕ, ಬುದ್ಧಿರಹಿತ ಭಾವ ಬಂಜೆ. “ಭಾವವಿಲ್ಲದ ಭಕುತಿ ಕುಹಕ ಯುಕುತಿ” ಎಂಬ ದಾಸವಾಣಿಯನ್ನು ಗಮನಿಸಬೇಕು. ಆದ್ದರಿಂದ ವಿಜ್ಞಾನ-ಕಲೆ ಜೀವನನಾಣ್ಯದ ಎರಡು ಮುಖಗಳು.
೪ ಕಲ್ಪನಾಪ್ರಪಂಚದಲ್ಲಿ ವಾಸ್ತವತೆಯ ಅನ್ವೇಷಣೆ ಸಾಧ್ಯವೇ?
ಒಂದಿಲ್ಲದೆ ಇನ್ನೊದಿಲ್ಲ. ಕಲ್ಪನೆ ಮಾನವನಿಗೊಂದು ನಿಸರ್ಗದತ್ತ ವರ. ಆದರೆ ಇದಕ್ಕೆ ಭೌತ ಅಸ್ತುತ್ವವಿಲ್ಲ. ಚಂದ್ರನನ್ನು ನೋಡಿದ ಶಿಶುರಾಮ ತನಗೆ ಅದನ್ನು ತಂದುಕೊಡೆಂದು ತಾಯಿ ಕೌಸಲ್ಯೆಯನ್ನು ಆಗ್ರಹಿಸಿದಾಗ ಅಥವಾ ಸಿಂಹದ ಮರಿ ಎಂದೂ ಕುರಿ ಆಗದೆಂದು ವೀರನೊಬ್ಬ ಗರ್ಜಿಸಿದಾಗ ಆಯಾ ವ್ಯಕ್ತಿಗಳಲ್ಲಿ ಮಿಡಿಯುತ್ತಿದ್ದುದು ಕಲ್ಪನೆ. ಈ ಕಲ್ಪನೆಗಳನ್ನು ವಾಸ್ತವವಾಗಿಸುವಲ್ಲಿ ಮಾನವ ವ್ಯವಸ್ಥಿತವಾಗಿ ಮಾಡಿದ ಪ್ರಯತ್ನಗಳ ಫಲವೇ ೨೦ನೆಯ ಶತಮಾನದಲ್ಲಿ ಮಾನವ ಸಾಧಿಸಿದ ಆಕಾಶಯಾನ(space travel) ಮತ್ತು ತಳಿಸಂಕೇತದ ಆವಿಷ್ಕಾರ(space travel) ). ಹೀಗೆ, ಗುರಿ ಕಾಣಿಸುವುದು ಕಲ್ಪನೆ, ಅಡರೆಡೆಗಿನ ಹಾದಿ ರೂಪಿಸುವುದು ವಾಸ್ತವತೆ. ಗುರಿ ಇರದ ದಾರಿ ವ್ಯರ್ಥ ಅಲೆತ, ದಾರಿ ಇರದ ಗುರಿ ಅಸ್ತಿತ್ವರಹಿತ! ಆದ್ದರಿಂದ ಈ ಪ್ರಶ್ನೆಗೆ ಉತ್ತರ: ಸಾಧ್ಯ, ಅಷ್ಟೇ ಅಲ್ಲ, ಅನಿವಾರ್ಯ ಕೂಡ.
೫. ಇಂದಿನ ಯುವಪೀಳಿಗೆಗೆ ಕಿವಿಮಾತು ಏನು?
ದಾಸರ ಜೊತೆ ದನಿಗೂಡಿಸುತ್ತೇನೆ, “ಮಾನವ ಜನುಮ ದೊಡ್ಡದು, ಇದರ ಹಾನಿ ಮಾಡಿಕೊಳ್ಳಲು ಬ್ಯಾಡಿ ಹುಚ್ಚಪ್ಪಗಳಿರಾ.” ಇಂದು ಯುವಕ ಯುವತಿಯರೆದುರು ಎಣಿಕೆಗೆ ನಿಲುಕದಷ್ಟು ಅವಕಾಶಗಳು ಅಂತೆಯೇ ಆಮಿಷಗಳು ಕೂಡ ತೆರೆದುಕೊಂಡಿವೆ. ಸ್ವಂತ ಆಸಕ್ತಿಯನ್ನು ಅವರು ಕಂಡುಕೊಂಡು ಅದರ ಅನುಶೀಲನೆಯಲ್ಲಿ ಪೂರ್ಣಮಗ್ನರಾಗಬೇಕು. ಅದು ಸಾಹಿತ್ಯ, ಮಾನವಿಕ, ವಿಜ್ಞಾನ, ಕಲೆ ಮುಂತಾದ ಯಾವುದೇ ವಲಯವಾಗಬಹುದು. ಮುಖ್ಯವಾಗಿ ಇದು ಜೀವನನಿರ್ವಹಣೆಯ ಪ್ರಶ್ನೆ. ಇದರೊಂದಿಗೆ ಹವ್ಯಾಸವಾಗಿ ಕಲೆಯಲ್ಲಿಯೂ (ಕಲಾವಿದನಾದರೆ ಸಾಹಿತ್ಯ, ಜನಪ್ರಿಯವಿಜ್ಞಾನ ಇತ್ಯಾದಿಗಳಲ್ಲಿ) ಆತ ಪ್ರೀತಿ ಬೆಳೆಸಿಕೊಳ್ಳಬೇಕು. ಹಲವಾರು ಚಾಣಗಳ ಹೊಡೆತದ ಹೊರತು ಪ್ರತಿಮೆ ಸುಂದರವಾಗದು!
೬. ಸಂಗೀತ ಕಛೇರಿಯಲ್ಲಿ ಕೃತಿ ಆಲಿಸಿದಾಗ ಮೂಡುವ ಭಾವವೇನು?
ಉತ್ಕೃಷ್ಟ ಕಛೇರಿಯ ಪ್ರಮುಖ ಧಾತುಗಳು ಐದು: ಮಾಧುರ್ಯ, ಮನೋಧರ್ಮ, ಶಾಸ್ತ್ರೀಯತೆ, ಅದ್ರುತಗತಿ, ಮತ್ತು ಉಲ್ಲಾಸ. ಸಂಗೀತದತ್ತ ರಸಿಕನ ಲಕ್ಷ್ಯವನ್ನು ಸೆಳೆಯುವ ಗುಣವೇ ಮಾಧುರ್ಯ. ಇದಕ್ಕೆ ಸದಾ ಹೊಸತನ್ನು ಮನೋಧರ್ಮ ಪೂಸುತ್ತದೆ. ಶಾಸ್ತ್ರೀಯತೆ ಕಛೇರಿಗೆ ಭದ್ರ ಅಡಿಪಾಯವನ್ನು ಒದಗಿಸುತ್ತದೆ. ಅದ್ರುತಗತಿ ಎಂದರೆ ಅವಸರವಿರದ ನಡೆಯ ಕಾರಣವಾಗಿ ಕಛೇರಿಗೆ ಸ್ವಾಸ್ಥ್ಯ ಪ್ರಾಪ್ತವಾಗುವುದು. ಉಲ್ಲಾಸದ ಲಕ್ಷಣ, ಪುರಂದರದಾಸರ ನುಡಿಗಳಲ್ಲಿ, “ಕಳೆಮುಖವಿರಬೇಕು.” ಈ ಪಂಚಧಾತುಗಳ ಮಧುರಪಾಕದಲ್ಲಿ ತನ್ಮಯನಾಗಿರುವಾಗ ಒಬ್ಬ ರಸಿಕನಾಗಿ ನನ್ನ ಮನಸ್ಸು ನಾಲ್ಕು ಉನ್ನತೋನ್ನತ ಮಜಲುಗಳನ್ನು ಏರಿ ಮುಂದೆ ವಿಹರಿಸುತ್ತಿರುವುದು: ಮನೋರಂಜನೆ (ಮಾಧುರ್ಯದ ಕಾರಣವಾಗಿ), ಉತ್ತಾರಣೆ (ರಾಗವೈಭವ ಮತ್ತು ಸೃಜನಶೀಲತೆ), ಪ್ರತಿಮಾದರ್ಶನ (ಸಾಹಿತ್ಯವನ್ನು ಅರಿತು ಅದ್ರುತಗತಿಯಲ್ಲಿ ಪಾಡಿದಾಗ ಮೂಡುವ ಸ್ಥಿತಿ) ಮತ್ತು ಆಧ್ಯಾತ್ಮಿಕ ಸ್ತರದ ಅನಂತ ವಿಸ್ತಾರದಲ್ಲಿ ಸ್ವಚ್ಛಂದ ಯಾನ (ಕಲಾವಿದ ಸೂಸುವ ಉಲ್ಲಾಸದ ಕಾರಣವಾಗಿ ಈ ವಿಹಾರ ಸಾಧ್ಯವಾಗುತ್ತದೆ). ಉದಾಹರಣೆಗೆ ಜೀವಂತ ಕಛೇರಿಯಲ್ಲಿ ಎಂಎಸ್ “ಭಾವಯಾಮಿ ರಘುರಾಮಂ” ಹಾಡುತ್ತಿದ್ದಾಗ ಅಥವಾ ದ್ವಾರಂ “ಸಾಮಜ ವರಗಮನ” ನುಡಿಸುತ್ತಿದ್ದಾಗ ನಾನು ಇವೆಲ್ಲ ಮಜಲುಗಳನ್ನೂ ದಾಟಿದ ಅನುಭವ ನನಗಾಗಿದೆ. ಇಂದೂ ಅಂಥ ಭಾವೋತ್ಕರ್ಷೆ ಆಗುವುದುಂಟು.
೭.ಯಾರು ಹಿತವರು ನಿನಗೆ — ಸಂಗೀತ, ಸಾಹಿತ್ಯ ಅಥವಾ ವಿಜ್ಞಾನ?
ಒಂದನೆಯ ಪ್ರಶ್ನೆಗೆ ನೀಡಿರುವ ವಿವರಣೆಯಲ್ಲಿ ಉತ್ತರವಿದೆ: ಉಸಿರೋ, ಒಡಲೋ, ಉಣಿಸೋ? ಎಲ್ಲವೂ ಪರಸ್ಪರ ಪೂರಕವಾಗಿರಬೇಕು. ಇವು ಅನುಕ್ರಮವಾಗಿ ಅಮೂರ್ತ ಭಾವವನ್ನು ಪೋಷಿಸಿ ಅದಕ್ಕೆ ಮೂರ್ತ ದೇಹವಿತ್ತು ಚಿಂತನೆಯನ್ನು ಪ್ರೇರಿಸುತ್ತವೆ.
೮. `ಶ್ರೀಮನ್ನಾರಾಯಣ’ನ ಸಾಧನೆಯಲ್ಲಿ `ಲಕ್ಷ್ಮೀದೇವಿ’ಯ ಪಾತ್ರ?
ಆಕಾಶಯಾನದ(space travel) ಪರಿಭಾಷೆಯಲ್ಲಿ ನಾನು ಗಗನನೌಕೆ (space ship), ನನ್ನ ಮಡದಿ (ಹೆಸರು ಲಕ್ಷ್ಮಿ) ಅದರ ಉಡಾವಣ ತಡಿ ( launching pad).
೯. ಅತ್ರಿಗಳ ಜೊತೆ ಒಡನಾಟವೆಂತು?
ನಮ್ಮ ಮಗ (ಮಕ್ಕಳು) ಕನಿಷ್ಠ ಹಾಜರಾತಿಯಲ್ಲಾದರೂ ಮೊದಲನೆಯ ಸಾಲಿನಲ್ಲಿರಲೆಂಬ ಎಂಬ ಉದ್ದೇಶದಿಂದ (ನನಗೆ ವಿದ್ಯಾರ್ಥಿ ಜೀವನದಲ್ಲಿ ಕೇವಲ ಹೆಸರಿನ ಕಾರಣವಾಗಿ ಈ ಭಾಗ್ಯ ದೊರೆತಿರಲಿಲ್ಲ) ಅವರಿಗೆ ಅಶೋಕ, ಆನಂದ ಮತ್ತು ಅನಂತ ಎಂದು ಹೆಸರಿಟ್ಟೆವು. ಮಡಿಕೇರಿಯಲ್ಲಿ ಸ್ವಂತ ಮನೆ ಒಕ್ಕಲಾದಾಗ, ೧೯೫೬, ಅದನ್ನು `ಅಶೋಕನಿವಾಸ’ವೆಂದು ಹೆಸರಿಸಿದೆವು. ಆಗ ಅವನೊಬ್ಬನೇ ಮಗನಿದ್ದುದು. ಮುಂದೆ ಮೈಸೂರಿನಲ್ಲಿ ಹೊಸ ಮನೆ ಸೇರಿದಾಗ (೧೯೭೧) ಮೂರು ಮಕ್ಕಳ ಹೆಸರುಗಳನ್ನೂ ಧ್ವನಿಸುವ ಸಂಯುಕ್ತ ಪದ ಹುಡುಕಲು ಅಶೋಕನಿಗೆ ಹೇಳಿದೆ. ಅವನ ಸೂಚನೆ ಮಾರ್ಮಿಕವಾಗಿತ್ತು: ಆಂಗ್ಲದಲ್ಲಿ Athree, ಕನ್ನಡದಲ್ಲಿ ಅತ್ರಿ. ಮಗಂದಿರೊಂದಿಗೆ ಒಡನಾಟ: ನೇರ ನುಡಿ, ನೇರ ನಡೆ, ಮತ್ತು ನೇರ ಬಗೆ; ಅವರ ಭವಿಷ್ಯ ನಿರ್ಮಾಪಕರು ಅವರೇ ವಿನಾ ತಂದೆ ತಾಯಿಯರಾದ ನಾವಲ್ಲ; ಅವರ ಆಶೋತ್ತರಗಳ ಪೂರೈಕೆಗೆ ನೆರವಾಗಬೇಕಾದದ್ದು ನಮ್ಮ ಪ್ರೀತಿಯ ಕರ್ತವ್ಯವೆಂದು ಅರಿತು ತದನುಸಾರ ವರ್ತನೆ; ಅವರಿಂದ ಯಾವುದೇ ಆರ್ಥಿಕ ನೆರವಿನ ನಿರೀಕ್ಷೆ ಇಲ್ಲ; ಪ್ರತಿಯೊಬ್ಬನೂ ಸ್ವಂತ ವೃತ್ತಿ ಅವಲಂಬಿಸಿ ಅದರಲ್ಲಿ ಪ್ರೀತಿ-ನೀತಿ ಸಹಿತ ಸಾಮಾಜಿಕ ಹಿತಸಾಧನೆಗೆ ಬದ್ಧನಾಗಿ ಕ್ರಿಯಾಶೀಲನಾಗಿರಬೇಕೆಂಬುದನ್ನು ನಮ್ಮ ನಡವಳಿಕೆಯಿಂದ ಅವರಲ್ಲಿ ಪ್ರೇರಿಸುವ ಪ್ರಯತ್ನ.
೧೦. ಎಲ್ಲ ಸಾಧನೆಗಳ ಸಾಧ್ಯತೆಯ ಗುಟ್ಟೇನು?
ಮೊದಲು ಯಾವುದೇ ಸವಾಲು ಎದುರಾದಾಗ ಅದರ ಸಾಧನೆ ನನ್ನ ಮನೋದೈಹಿಕ ಮಿತಿಯೊಳಗಿದ್ದು ಅದು ಸಾಮಾಜಿಕವಾಗಿ ಪ್ರಸ್ತುತವೇ ಎಂದು ವಿವೇಚಿಸಿ ಹೌದೆಂದಾದರೆ ಅದಕ್ಕೆ ಜವಾಬು ಹುಡುಕಲು ಕಳಕ್ಕಿಳಿಯುವುದು. ಬಳಿಕ ನೈತಿಕತೆ, ಮಗ್ನತೆ, ಉತ್ಕೃಷ್ಟತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಎಂಬ ಪಂಚಶೀಲಾನುಸಾರ ಮುನ್ನಡೆಯುವುದು. ಇಲ್ಲಿ ಕಾರ್ಯಮಗ್ನತೆ ಒದಗಿಸುವ ಆನಂದವೇ ಋಜು ಪ್ರತಿಫಲ. ಯಶಸ್ಸು ಬಂದರೆ ಸಂತೋಷ, ಇಲ್ಲವಾದರೆ ಎಲ್ಲಿ ಹೇಗೆ ಏಕೆ ತಪ್ಪಾಯಿತೆಂದು ವಿಮರ್ಶಿಸಿ ಯುಕ್ತ ತಿದ್ದುಪಡಿ ಅಳವಡಿಸಿ ಮತ್ತೆ ಮುನ್ನಡೆಯುವುದು. ಸದಾ ಪರಿಕ್ರಮಣಶೀಲನಾಗಿರಬೇಕು, “ಏನಾದರೂ ಮಾಡುತ್ತಿರು ತಮ್ಮಾ!” ಕಾರಣ, ಜಂಗಮಕ್ಕಳಿವಿಲ್ಲ! ವ್ಯಕ್ತಿ ಒಂಟಿಯಾಗಿ ಏನನ್ನೂ ಸಾಧಿಸಲಾರ. ಸಾಮೂಹಿಕ ಪ್ರಯತ್ನದ ಫಲವಾಗಿ ಯಶಸ್ಸೆಂಬ ಅಮೃತ ಲಭಿಸಿದಾಗ ಅದನ್ನು ನಿರ್ಮೋಹದಿಂದ ಅನುಚರರಿಗೆ ಹಂಚುವ ಮೋಹಿನಿಯೂ ಅಪಯಶಸ್ಸೆಂಬ ಹಾಲಾಹಲ ಹೊಮ್ಮಿದಾಗ ಅದನ್ನು ಪ್ರೀತಿಯಿಂದ ಕೊರಳಲ್ಲಿ ಧರಿಸುವ ನೀಲಕಂಠನೂ ವ್ಯಕ್ತಿಯಾಗುವುದೇ ಸಾಧನೆಯ ನಿಜ ಮರ್ಮ.
ಬಿತ್ತುವುದು ಪರಿಶುದ್ಧ ಬೀಜವನು ಫಲವಂತ
ಹಿತ್ತಲಲಿ ನಿನ್ನ ಹೊಣೆ, ಹಿಂತಿರುಗಿ ನೋಡದಿರು
ಚಿತ್ತದಲಿ ಮೂಡೀತಹಂಕಾರ — ಜಗಕೆ ಬಿಡು
ಉತ್ತಮ ಫಲ ನಿಮಿತ್ತ ಮಾತ್ರ ನೀ ಅತ್ರಿಸೂನು
ಜಿ.ಟಿ.ನಾರಾಯಣರಾವ್
೮ ಅತ್ರಿ, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತೀಪುರ, ಮೈಸೂರು ೫೭೦೦೦೯
ದೂರವಾಣಿ ೦೮೨೧ ೨೫೪೩೭೫೯
ದಿನಾಂಕ ೨೬-೨-೨೦೦೬


ಗುರಿ ಇರದ ದಾರಿ ವ್ಯರ್ಥ ಅಲೆತ, ದಾರಿ ಇರದ ಗುರಿ ಅಸ್ತಿತ್ವರಹಿತ! – ಮತ್ತೆ ಮಾವನ ನೆನಪು ಮಾಡಿಕೊಟ್ಟ ನಿನಗೆ ಅಭಿನಂದನೆ. The man who known infinity – ರಾಮಾನುಜನ್ ಜೀವನದ ಬಗ್ಗೆ ಬಂದ ಅತ್ಯುತ್ತಮ ಪುಸ್ತಕ. ಅದರ ಲೇಖಕ ರಾಬರ್ಟ್ ಕ್ನಿಗೆಲ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿದ “ರಾಮಾನುಜನ್ ಬಗ್ಗೆ ಎಷ್ಟು ಪುಸ್ತಕ ಬಂದರೂ ಕಡಿಮೆಯೇ. ಬೇಸರದ ಸಂಗತಿ ಎಂದರೆ ತಮಿಳಿನಲ್ಲಿ ಚಿಕ್ಕ ಪುಸ್ತಕವಷ್ತೇ ಬಂದಿದೆ” ಕನ್ನಡದಲ್ಲಿ ಮಾವ ಬರೆದ “ರಾಮಾನುಜನ್ ಬಾಳಿದರಿಲ್ಲಿ” – ಕನ್ನಡದಲ್ಲಿ ಆ ಬರವನ್ನು ಒಂದಿಷ್ಟು ನೀಗಿಸಿದ ಓಯಸಿಸ್. ಪುಟ ಪುಟಗಳಲ್ಲಿ ರಾಮಾನುಜನ್ ಆವಾಹಿಸಿದ್ದು ಪ್ರಕಟವಾಗುತ್ತದೆ. ಕ್ರನ್ನಡದಲ್ಲಿ ಬೇರೆ ಪುಸ್ತಕ ಬಂದಿದೆಯೇ – ತಿಳಿಯದು. ಇದು ಐನ್ ಸ್ಟೈನ್, ಚಂದ್ರಶೇಖರ್ ಅವರಿಗೂ ಅನ್ವಯವಾಗುತ್ತದೆ. ಇಷ್ಟು ಸಾಕು – ಅವರೆಷ್ಟು ಕೊಟ್ಟಿದ್ದಾರೆ ಅನ್ನುವುದಕ್ಕೆ –
ರಾಧಾಕೃಷ್ಣ
ಜಿಟಿಎನ್ ಜನ್ಮದಿನ ಇವತ್ತು ಎಂದು ನಿಮ್ಮ ಬ್ಲಾಗ್ ಬರಹ ನೋಡಿಯೇ ಗೊತ್ತಾಯಿತು.ಅವರೊಬ್ಬ ಋಷಿ ವಿಜ್ಞಾನಿ.ಮಂಗಳೂರಿನಲ್ಲಿ ೧೯೬೮ ರಿಂದ ಅನೇಕ ಬಾರಿ ಕಂಡಿದ್ದರೂ ನಾನು ಮೈಸೂರಿನಲ್ಲಿ ಇದ್ದ ಅವದ್ಧಿಯಲ್ಲಿ ೨೦೦೭-೦೮ ಅವರ ಆತ್ಮೀಯ ಸಂಪರ್ಕ ನನ್ನ ಬದುಕಿನ ಧನ್ಯತೆಯ ಘಟ್ಟ.ನಮ್ಮ ಮುಕ್ತ ವಿವಿಯ ಘಟಿಕೋತ್ಸವದಲ್ಲಿ ಅವರು ಗೌರವ ಡಾಕ್ಟರೇಟ್ ಪಡೆದ ಸಂಭ್ರಮದ ಕ್ಷಣದ ಸಂತಸ ಮತ್ತು ನಮ್ಮನ್ನು ಅಗಲಿ ಮೈಸೂರಿನ ಸರಸ್ವತಿ ಪುರಂ ನ ಮನೆಯಲ್ಲಿ ಮಲಗಿದ್ದ ನೋವಿನ ಘಳಿಗೆ ಎರಡೂ ಜೊತೆಜೊತೆಯಾಗಿಯೇ ನೆನಪಾಗುತ್ತವೆ.
ಮಾವನ (ಅತ್ರಿಗಳ ಅಪ್ಪನ) ಸ್ಮರಣೆ ಸರಿಯೇ. ಆದರೆ ಇಂದು ಅತ್ತೆಯದೂ (ನಮ್ಮಮ್ಮನದ್ದೂ) ಜನುಮದಿನವೇ ಎನ್ನುವುದು ಸ್ಮರಣೀಯ! ನಮ್ಮಪ್ಪನಿಗೆ ಹುಟ್ಟು ಮತ್ತು ಬಾಲ್ಯದ ನೆಲೆ ತಾಯಿಯ ಕಡೆಯ ಅಜ್ಜನ ಮನೆ – ಮರಿಕೆ. ಅಜ್ಜನಿಲ್ಲದ ಆ ಮನೆಯ ಅಂದಿನ ಯಜಮಾನ – ಸೋದರಮಾವ ಎ.ಪಿ.ಸುಬ್ಬಯ್ಯ (ನಮ್ಮಜ್ಜ). ಮುಂದೆ ಅದೇ ಸೋದರಮಾವನ ಮಗಳೇ (ನಮ್ಮಮ್ಮ) ಹೆಂಡತಿಯಾಗಿ ಒದಗಿದ ಮೇಲೆ ಅದೇ ಮರಿಕೆ (ಹೆಣ್ಣುಕೊಟ್ಟ) ಮಾವನ ಮನೆಯಾಯ್ತು. ದಾಖಲಾತಿಗಳ ಬಗ್ಗೆ ಮೊದಲಿಂದಲೂ ಬಹಳ ಶಿಸ್ತಿನ ಮತ್ತು ಅಚ್ಚುಕಟ್ಟಿನ ಆ ಸೋದರಮಾವ (ನಮ್ಮಜ್ಜ) ಸಹಜವಾಗಿ ತನ್ನ ಹಿರಿ ಮಗಳು (ನಮ್ಮಮ್ಮ) ಲಕ್ಷ್ಮಿಯದ್ದೆಂತೋ ಹಾಗೇ ತನ್ನ ಏಕಮಾತ್ರ ತಂಗಿಯ ಮೊದಲ ಮಗ (ಸೋದರಳಿಯ) ನಾರಾಯಣನ ಜನ್ಮ, ಜಾತಕಗಳನ್ನು ವ್ಯವಸ್ಥಿತವಾಗಿ ದಾಖಲಿಸಿದ್ದರು ಎನ್ನುವುದು ಇಲ್ಲಿ ಉಲ್ಲೇಖನಾರ್ಹವೆಂದು ಭಾವಿಸುತ್ತೇನೆ. ಆ ಪ್ರಕಾರ ಸರಿಯಾಗಿ ನಾಲ್ಕು ವರ್ಷಗಳ ಕಿರಿತನದ, ಇನ್ನೂ ನಮ್ಮೊಡನಿರುವ ಅತ್ತೆಗೂ (ನಮ್ಮಮ್ಮ) ರುಕ್ಮಿಣಿಯದ್ದೆಷ್ಟೋ ನಮ್ಮದೂ ಅಷ್ಟೇ ಜನುಮದಿನದ ಶುಭ ಹಾರೈಕೆಗಳು
ಅಶೋಕವರ್ಧನ
ಚೆನ್ನಾಗಿದೆ. ಜಿ.ಟಿ. ಅಜ್ಜನ ನೆನಪನ್ನು ಹೀಗೇ ನಮ್ಮಲ್ಲಿ ಹಸಿರಾಗಿಡಿ…