ಸಂಗೀತದಲ್ಲಿ ಸಾಧನೆ ಮಾಡಿದ ಯುವ ಜನರೊಬ್ಬರಿಗೆ ಜಿ.ಟಿ. ನಾರಾಯಣ ರಾವ್ ಹೆಸರಿನಲ್ಲಿ ಪ್ರತೀವರ್ಷ ಮಾಧುರೀ ತಾತಾಚಾರಿಯವರು ಪ್ರಶಸ್ತಿ ನೀಡುತ್ತ ಬರುತ್ತಿದ್ದಾರೆ. ಮೃದಂಗ ವಿದ್ವಾನ್ ಎ. ರಾಧೇಶ್ ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆ ಕಾರ್ಯಕ್ರಮ ೨೦೧೨ ಎಪ್ರಿಲ್ ೧೫ರಂದು ಮೈಸೂರಿನ ಗೋಕುಲದಲ್ಲಿರುವ ಆಳ್ವಾರ್ ಕಲಾಭವನದಲ್ಲಿ ನಡೆದಿತ್ತು. ಆ ದಿನ ಅಕ್ಷರಿ ಅವಳಜ್ಜನ ನೆನಪುಗಳ ಬಗ್ಗೆ ೫ ನಿಮಷ ಮಾತಾಡಿದ ಪೂರ್ಣ ಪಾಟ ಇಲ್ಲಿದೆ.
ಅಜ್ಜನೊಡನೆ ನಾನು ಕಳೆದ ೨೦ ವರ್ಷಗಳು ಇನ್ನೂ ನಿನ್ನೆ ಮೊನ್ನೆ ಕಳೆದಂತೆ ಅನಿಸುತ್ತದೆ. ಈಗಲೂ ಅಜ್ಜ ನಮ್ಮೊಡನೆ ಇಲ್ಲ ಎಂಬ ಭಾವನೆ ಬರದೆ ನಮ್ಮೊಡನೆ ಸದಾ ಇದ್ದಾರೆ ಎಂದೇ ಅನಿಸುತ್ತಿದೆ. ಅಜ್ಜನೊಡನೆ ನಾನು ಕಳೆದ ಕ್ಷಣಗಳು ಅಮೂಲ್ಯ ಹಾಗೂ ಮಧುರವಾದುದು ಮತ್ತು ಎಂದೂ ಮರೆಯಲಾರದಂತದ್ದು. ಅಜ್ಜನನ್ನು ನಾನು ಏಕವಚನದಿಂದಲೇ ಕರೆಯುತ್ತಿದ್ದೆ. ಅದನ್ನು ಕೇಳಿದ ನಮ್ಮ ನೆಂಟರೊಬ್ಬರು ತರಾಟೆಗೆ ತೆಗುಕೊಂಡಿದ್ದಾಗ, `ನೀನು ನನ್ನನ್ನುಏಕವಚನದಲ್ಲೆ ಕರೆ. ನನಗೆ ಬಲು ಸಂತೋಷವಾಗುತ್ತದೆ ಮತ್ತು ಅದರಿಂದ ನಮ್ಮ ಭಾಂದವ್ಯ ವೃದ್ಧಿಸುತ್ತದೆ’ ಎಂದು ಹೇಳಿದ್ದರು. ಚಿಕ್ಕವಳಾಗಿದ್ದಾಗ ನಾನು ಬೆಳಗ್ಗೆ ಬೇಗ ಏಳದಿದ್ದರೆ ಅಜ್ಜ ಮಹಡಿ ಹತ್ತಿ ಬಂದು, ಮಗೂ ಹುಷಾರಿಲ್ಲವೆ? ಎಂದು ಕಾಳಜಿ ವ್ಯಕ್ತ ಪಡಿಸಿ ಕೇಳುತ್ತಿದ್ದರು. ಬೆಳಗಿನ ಸಕ್ಕರೆ ನಿದ್ದೆ ಹಾಳಾಯಿತೆಂದು ನಾನಾಗ ರೇಗುತ್ತಿದ್ದೆ. ಮುನಿಸಿಕೊಂಡು ಕೂತಾಗ `ಅಕೊ ಬಂತು ನಗೆ ಅಕೊ ಬಂತು ನಗೆ’ ಎಂದು ಅಜ್ಜ ರಾಗವಾಗಿ ಹಾಡಿ ನನ್ನನ್ನು ನಗಿಸಿದ್ದರು. ಶಾಲಾ ದಿನಗಳಲ್ಲಿ ಭಾಷಣ, ಚರ್ಚಾಕೂಟ, ಪ್ರಬಂಧ ಇತ್ಯಾದಿ ಯಾವುದೇ ಸ್ಪರ್ಧೆಗಳಿಗೆ ಅಜ್ಜನೇ ನನಗೆ ಮಾರ್ಗದರ್ಶಿಯಾಗಿದ್ದರು. ಅಜ್ಜ ಬರೆದುಕೊಡು ಎಂದು ನಾನಂದರೆ `ನೀನೇ ಬರೆಯಬೇಕು. ಸ್ಪೂನ್ ಫೀಡಿಂಗ್ ಒಳ್ಳೆಯದಲ್ಲ. ನಾನು ಬರೆದುಕೊಡಬಹುದು. ಆದರೆ ಅದರಿಂದ ನೀನು ಬೆಳೆಯುವುದಿಲ್ಲ. ನಿನಗೆ ಅನಿಸಿದ್ದನ್ನು ಬರೆ. ತಿದ್ದಿಕೊಡುವೆ’ ಎನ್ನುತ್ತ ನನ್ನ ಎಲ್ಲಾ ಚಟುವಟಿಕೆಗಳಿಗೆ ಅಜ್ಜ ಸದಾ ಪ್ರೋತ್ಸಾಹ ನೀಡಿದ್ದರು. ಅಜ್ಜನ ಹುಟ್ಟುಹಬ್ಬದ ದಿನ ಅಜ್ಜನಿಗೆ ಶುಭಾಶಯ ಹೇಳಿದಾಗ ಉಡುಗೊರೆ ಕೊಡು ಎನ್ನುತ್ತಿದ್ದರು. ಆಗ ನಾನು ಪೆನ್ನು ಅಥವಾ ಗೋಂದು ಕೊಟ್ಟರೆ ಅಜ್ಜ ಅದೆಷ್ಟು ಸಂಭ್ರಮಿಸುತ್ತಿದ್ದರು ಎಂಬುದು ಈಗಲೂ ಕಣ್ಣೆದುರು ಬರುತ್ತದೆ. ನನ್ನ ಹುಟ್ಟುಹಬ್ಬಕ್ಕೆ ತಪ್ಪದೇ ಶಾಲೆಯ ವಿಳಾಸಕ್ಕೆ ಒಂದು ಕಾರ್ಡು ಬರುತ್ತಿತ್ತು. ಅದರಲ್ಲಿ ಚುಟುಕವಿರುತ್ತಿತ್ತು. ಉದಾಹರಣೆಗೆ
ಹದಿಮೂರು ವರುಷಗಳ ಹಿಂದಿನೀ ದಿನದಂದು
ಮಧುರ ಕನಸೊಂದು ನನಸಾಯ್ತು: ಅಕ್ಷರಿ ಜನನ
ಮೊದಲ ನೋಟದಿ ಕಂಡ ಮುಗ್ಧ ನಗುವಿಂದರಳಿ
ಮುದ ಬೀರುತಿದೆ ಜಗಕೆ ಸೊಗಮಕ್ಕೆ ಅತ್ರಿಸೂನು
ಕಾಲೇಜು ದಿನಗಳಲ್ಲಿ ಒಮ್ಮೆ ಅಮ್ಮ ಊರಲ್ಲಿಲ್ಲದ ದಿನ ನಾನು ಉಮೇದಿನಿಂದ ಅಜ್ಜಿಯ ಸಹಾಯ ತೆಗೆದುಕೊಳ್ಳದೆ ಅಡುಗೆ ಮಾಡಲು ಹೊರಟಿದ್ದೆ. ಸಾಂಬಾರ್ ಸೀದು ಹೋಗಿತ್ತು. ಅಜ್ಜ ಅದರ ಬಗ್ಗೆ ಏನೊಂದೂ ಹೇಳದೆ ಸಾಂಬಾರ್ ಬಹಳ ಅದ್ಭುತವಾಗಿದೆ ಎಂದು ಹೊಗಳುತ್ತ ಊಟ ಮಾಡಿದ್ದರು. ನಾವು ಯಾವುದೇ ಸಮಾರಂಭಕ್ಕೆ ಹೋಗಲಿ, ಅಲ್ಲಿ ಊಟವಾದನಂತರ ಅಜ್ಜ ಯಾರು ಇವತ್ತು ಅಡುಗೆ ಮಾಡಿದ್ದು ಎಂದು ವಿಚಾರಿಸಿ ತಿಳಿದು ಅವರನ್ನು ಕಂಡು ಅಡುಗೆ ಬಹಳ ರುಚಿಯಾಗಿತ್ತು ಎಂದು ಹೇಳಲು ಮರೆಯುತ್ತಿರಲಿಲ್ಲ.
ಅಜ್ಜನೊಡನೆ ಸಂಗಿತ ಕಾರ್ಯಕ್ರಮಗಳಿಗೆ ನಾನು ಕೆಲವೊಮ್ಮೆ ಹೋಗುತ್ತಿದ್ದೆ. ನಡೆದು ಹೋಗುವುದಾದರೆ ದಾರಿಯುದ್ದಕ್ಕೂ ಕಥೆ ಹೇಳುತ್ತ ಹೋಗಬೇಕು ಎಂದು ನಾನು ಅಜ್ಜನಿಗೆ ಮೊದಲೇ ಷರತ್ತು ವಿಧಿಸುತ್ತಿದ್ದೆ. ಹಾಗೆ ಅಜ್ಜ ನನ್ನಾಜ್ಞೆಯನ್ನು ಒಪ್ಪಿ ಅನೇಕ ಕಥೆ ಹೇಳುತ್ತಿದ್ದರು. ಸಂಗೀತ ಕಲಿಯಲು ನಾನು ಪ್ರಾರಂಭಿಸಿದಮೇಲೆ ಕಛೇರಿಗಳಲ್ಲಿ ಸಂಗೀತ ಆಲಿಸುತ್ತ ಕುಳಿತಿರುವಾಗ `ಇದು ಯಾವ ರಾಗ ಹೇಳು ಎಂದು ಪ್ರಶ್ನಿಸುತ್ತ, ಸರಿ ಹೇಳಿದರೆ ಭೇಷ್ ಎಂದು ಪ್ರೋತ್ಸಾಹಿಸುತ್ತ, ತಪ್ಪು ಹೇಳಿದಾಗ ಇಂಥ ರಾಗ ಇದು ಎಂದು ಹೇಳುತ್ತ ನನ್ನ ಸಂಗೀತ ಜ್ಞಾನವನ್ನು ವೃದ್ಧಿಸಿದ್ದರು. ಸಂಗೀತ ಕೇಳಿ ಮನೆಗೆ ಬಂದು ಊಟ ಮಾಡಿದ ಕೂಡಲೇ ಗಣಕದ ಎದುರು ಕುಳಿತು ಅಂದಿನ ಸಂಗೀತದ ವಿಮರ್ಶೆಯನ್ನು ತಡ ರಾತ್ರಿಯಾದರೂ ಸರಿ ಬರೆದು ಮುಗಿಸಿ ಮಾರನೇ ದಿನ ಬೆಳಗ್ಗೆಯೇ ಅದನ್ನು ಮಿಂಚಂಚೆ ಕಳುಹಿಸಲು ನಮಗೆ ಹೇಳುತ್ತಿದ್ದರು. ನಾವು ಕಳುಹಿಸುವಲ್ಲಿವರೆಗೂ ಕೇಳುತ್ತಲೇ ಇರುತ್ತಿದ್ದರು. ಅದನ್ನು ಕಳುಹಿಸಿದಮೇಲೇಯೇ ಅವರು ಸಮಾಧಾನವಾಗುತ್ತಿದ್ದುದು. ಒಡನೆಯೇ ಪತ್ರಿಕಾ ಕಚೇರಿಗೆ ದೂರವಾಣಿ ಮಾಡಿ ಕಳುಹಿಸಿದೆ ಎಂದು ಹೇಳುತ್ತಿದ್ದರು. ಏನೇ ಕೆಲಸ ಮಾಡಿದರೂ ಅದು ಆಗಿದೆಯಾ ಇಲ್ಲವೇ ಎಂದು ಜವಾಬು ಉತ್ತರ ಸಂಬಂಧಿಸಿದವರಿಗೆ ಕೂಡಲೆ ಕೊಡಬೇಕು ಎಂದು ನಮಗೆ ಕಲಿಸಿದ್ದರು. ನೆಂಟರು ಯಾರೇ ಮನೆಗೆ ಬಂದಿದ್ದರೂ ಆ ದಿನ ಸಂಗೀತ ಕಚೇರಿ ಎಲ್ಲಾದರೂ ಇದ್ದರೆ ಅಜ್ಜ ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ನೆಂಟರಿಗೆ ನೀವು ಬರುವುದಾದರೆ ಬನ್ನಿ ಸಂಗೀತಕ್ಕೆ. ಎನ್ನುತ್ತಿದ್ದರು. ಅವರೂ ಒಪ್ಪಿದರೆ `ಸಂಜೆ ೫ ಗಂಟೆಗೆ ಸರಿಯಾಗಿ ಹೊರಡಬೇಕು ಎಂಬ ಆಜ್ಞೆ ವಿಧಿಸುತ್ತಿದ್ದರು! ಚಳಿ ಇರಲಿ, ಮಳೆ ಇರಲಿ, ಹವಾಮಾನ ಏರುಪೇರಾಗಲಿ, ಸಂಗೀತ ಕಛೇರಿ ನಡೆಯುವ ಜಾಗ ಎಷ್ಟೇ ದೂರದಲ್ಲಿರಲಿ ಹಾಗೆಂದು ಅಜ್ಜ ಸಂಗೀತ ಕೇಳಲು ಹೋಗುವುದನ್ನು ತಪ್ಪಿಸುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಿರುತ್ತಿದ್ದರು.
ಹಾಗೆಂದೇ ಅಜ್ಜ ಬರೆದದ್ದು
ಸಂಗೀತವೆನ್ನುಸಿರು ಸಾಹಿತ್ಯವೆನ್ನೊಡಲು
ವಿಜ್ಞಾನವೆನ್ನಶನ ಅಧ್ಯಾತ್ಮದೆಡೆಗಮನ
ನಿರಪೇಕ್ಷ ನಿಸ್ವಾರ್ಥ ನಿರ್ಮೋಹ ಸೇವೆ ಗುರಿ
ಅಜ್ಞಾನತಮ ನಿವಾರಣೆ ಧ್ಯೇಯ ಅತ್ರಿಸೂನು
ಪರಿಶುದ್ಧ ಗಾಯನಕೆ ಶರಣಾಗು ನೀಬೆಳೆವೆ
ಪರಿಪರಿಯ ಆಮಿಷಕೆ ಮರುಳಾಗು ನೀನಳಿವೆ
ಗುರಿಯಿರಲಿ ನಕ್ಷತ್ರ, ನಡೆಯಿರಲಿ ತಿರೆ ಮೇಲೆ
ತೆರೆಯುವರು ಕದ ವಾಣಿ- ಲಕ್ಷ್ಮಿಯರು ಅತ್ರಿಸೂನು.




























