Feeds:
Posts
Comments

ಮೊನ್ನೆ ಆಕಾಶವಾಣಿ ಆಲಿಸುತ್ತ ಇದ್ದಾಗ (ಎಚ್. ಆರ್. ರಾಮಕೃಷ್ಣ ಎಂದು ನೆನಪು) ಆಕಾಶಕಾಯದ ಪ್ರಕಾರ ಮಕರ ಸಂಕ್ರಾಂತಿ ನಿಜವಾಗಿಯೂ ಡಿಸೆಂಬರ ೨೧ರಂದು  ಆರಂಭಗೊಳ್ಳುತ್ತದೆ. ಆದರೆ ನಾವು ಆಚರಿಸುವುದು ಮಾತ್ರ ಜನವರಿ ೧೪ರಂದು ಎಂದು ಹೇಳುತ್ತಿದ್ದರು. ಆಗ ನನಗೆ ನಮ್ಮ ಮಾವ ಜಿ.ಟಿ. ನಾರಾಯಣ ರಾವ್ ಅವರು ಬರೆಯುತ್ತಿದ್ದ ಲೇಖನ ನೆನಪಿಗೆ ಬಂತು. ಅವರು ಪ್ರತೀ ವರ್ಷ ತಪ್ಪದೇ ಡಿಸೆಂಬರ ತಿಂಗಳಿನಲ್ಲಿ ‘ಉತ್ತರಾಯಣಾರಂಭ ಎಂದು?’ ಎಂಬ ಒಂದು ಲೇಖನ ಬರೆದು ಪತ್ರಿಕೆಗಳಿಗೆ ರವಾನಿಸುತ್ತಿದ್ದರು. ಜನ ಆಚರಿಸಲಿ ಬಿಡಲಿ ಅವರಂತು ಅವರ ಕರ್ತವ್ಯವನ್ನು ಚಾಚುತಪ್ಪದೆ ಮಾಡುತ್ತಿದ್ದರು. ಅವರಿಗೂ ಗೊತ್ತು ಜನ ಏನೂ ಈ ಲೇಖನ ನೋಡಿ ಮಕರ ಸಂಕ್ರಾಂತಿಯನ್ನು ಡಿಸೆಂಬರದಲ್ಲಿ ಆಚರಿಸುವುದಿಲ್ಲ ಎಂದು. ಜನವರಿ ೧೪ರಂದೇ ಆಚರಿಸುತ್ತಾರೆ ಎಂಬುದೂ ಗೊತ್ತು. ಆದರೂ ಅವರು ಮಾತ್ರ ಒಂದೇ ಒಂದು ವರ್ಷ ಕೂಡ ಲೇಖನ ಬರೆಯದೆ ಕುಳಿತದ್ದಿಲ್ಲ. ಪ್ರತೀಸಲವೂ ಶ್ರದ್ಧೆಯಿಂದ ಹೊಸದಾಗಿಯೇ ಬರೆದು ಪತ್ರಿಕೆಗೆ ಕಳುಹಿಸುತ್ತಿದ್ದರು.  ಎಲ್ಲೋ ಒಂದು ಆಶಾಭಾವ ಅವರಿಗೆ ಕಾಣುತ್ತಿದ್ದಿರಬಹುದು. ಒಬ್ಬರಾದರೂ ಅದನ್ನು ಆಚರಣೆಗೆ ತಂದಾರು ಎಂದು. ಹಾಗೆಂದು ಅವರೇನೂ ಜನರಿಗೆ ಬಲವಂತ ಮಾಡುತ್ತಿರಲಿಲ್ಲ. ಜನವರಿ ೧೪ರಂದು ಯಾರಾದರೂ ದೂರವಾಣಿ ಮಾಡಿಯೋ ಮನೆಗೆ ಬಂದೋ ಸಂಕ್ರಾಂತಿಯ ಶುಭಾಶಯ ಹೇಳಿದರೆ ಆಕಾಶಕಾಯದ ಪ್ರಕಾರ ಸಂಕ್ರಾಂತಿ ಡಿಸೆಂಬರ ೨೧ಕ್ಕೆ ಆಯಿತು. ಇರಲಿ ನಿಮಗು ಶುಭಾಶಯ ಎಂದು ಹೇಳುತ್ತಿದ್ದರು.   ಅವರು ಬರೆದ ಉತ್ತರಾಯಣಾರಂಭ ಎಂದು ಎಂಬ ಪುಟ್ಟ ಲೇಖನವನ್ನಿಲ್ಲಿ ನೋಡಬಹುದು.

Continue Reading »

ಈಶ್ವರಮಾವ ನನ್ನ ಗಂಡನ ಚಿಕ್ಕಪ್ಪ. ಅವರು ಇತ್ತಿಚೆಗೆ ಹಠಾತ್ತನೆ ಪರಲೋಕವಾಸಿಗಳಾದರು.  ಅವರ ಬಗ್ಗೆ ಕೆಲವು ವರ್ಷಗಳ ಹಿಂದೆ ಬರೆದ ಬರಹ ಪ್ರಜಾವಾಣಿಯಲ್ಲಿ ಅಚ್ಚಾಗಿತ್ತು. ಅದನ್ನು ನಿಮ್ಮ ಮುಂದೆ ಇರಿಸಿದ್ದೇನೆ. ಓದಿ ಪ್ರತಿಕ್ರಿಯಿಸಿ.

ನಾನು ಹೇಳಲು ಹೊರಟಿರುವ ವಿಷಯ ಮಹಾಭಾರತದ ಪಾಂಡವರ ಕಥೆ ಅಲ್ಲವೇ ಅಲ್ಲ. ಇದು ಈ ಶತಮಾನದಲ್ಲಿಯೇ ಭೀಮನ ಬದುಕಿನಲ್ಲಿ ನಡೆದ ಘಟನೆ. ದಯವಿಟ್ಟು ಇದನ್ನು ಓದುಗರು ನೆನಪಿನಲ್ಲಿಟ್ಟುಕೊಳ್ಳಬೇಕು. ಗೊಂದಲಕ್ಕೊಳಗಾಗಬಾರದು. ಧರ್ಮರಾಯರಿಗೆ ವಯಸ್ಸು ೭೮. ತೀವ್ರ ಅಸ್ವಸ್ಥತೆಯಾದ ಕಾರಣ ಅವರು ೪೫ ದಿನಗಳ ಕಾಲ ಆಸ್ಪತ್ರೆಯಲ್ಲಿರಲೇಬೇಕಾಯಿತು. ಅವರ ಪತ್ನಿ ಆಸ್ಪತ್ರೆಯಲಿದ್ದು ಧರ್ಮರಾಯರ ಶುಶ್ರೂಷೆ ಮಾಡಿದರು. ಅವರು ಸ್ನಾನ ಊಟಕ್ಕೆ ದಿನಕ್ಕೊಮ್ಮೆ ಮನೆಗೆ ತೆರಳಬೇಕಾಗುತ್ತಿತ್ತು. ಆ ಸಮಯದಲ್ಲಿ ಆಸ್ಪತ್ರೆಯ????ದ್ದು ಧರ್ಮರಾಯರನ್ನು ನೋಡಿಕೊಳ್ಳುವ ಹೊಣೆ ತಮ್ಮ ಭೀಮನಿಗೆ ಒದಗಿತು. ಅಲ್ಲಿಂದ ಅವರು ಪೇಚಿಗೆ ಒಳಗಾಗುವ ಸಂದರ್ಭವೂ ಜಾಸ್ತಿ ಆಯಿತು.

Continue Reading »

ಋಣ

ಬೆಳಗ್ಗೆ ತಿಂಡಿ ಮುಗಿಸಿದ ಬಳಿಕ ಕಾಫಿ ಕುಡಿದುಕೊಂಡು ಆ ದಿನದ ದಿನಪತ್ರಿಕೆ ಓದುವುದು ಮೀನಾಕ್ಷಿಯ ಅಭ್ಯಾಸ. ಹಾಗೆ ಆ ದಿನವೂ ೨ ಕಪ್ ಕಾಫಿ ಮಾಡಿ ಹೊರಗೆ ಬಂದರೆ ಹರೀಶ ಈ ಪರಿಯ ಪರಿವೆಯೇ ಇಲ್ಲದೆ ಕೂತದ್ದು ಕಂಡು, “ಹರಿ ಹರಿ ಏನಾಯಿತು? ಗಾಢಾಲೋಚನೆಯಲಿ ಮುಳುಗಿದ್ದೆಯಲ್ಲ? ಏನೆಂದು ನನಗೂ ಹೇಳು” ಎ೦ದು ಭಿನ್ನವಿಸಿಕೊ೦ಡಳು ಮೀನಾಕ್ಷಿ.
ಹರಿ ಭಾವಸಮಾಧಿಯಿಂದ ಹೊರಬಂದು, “ನಾನು ಒಂದು ನಿರ್ಧಾರಕ್ಕೆ ಬಂದೆ. ಅದು ನಿನಗೂ ಖುಷಿಕೊಡುವ ಸಮಾಚಾರವೇ ಎಂದು ನನ್ನ ಭಾವನೆ” ಹೇಳಿದ ಗಂಭೀರವಾಗಿ.
“ಅಂಥ ಘನ ವಿಷಯ ಯಾವುದದು? ಹೇಳೋಣವಾಗಲಿ ಪ್ರಿಯಾಕಾಂತ. ಅದು ನನಗು ಖುಷಿ ಕೊಡುತ್ತದ ಇಲ್ಲವೆ ಎಂದು ಆಲಿಸಿದಮೇಲೆ ಹೇಳುತ್ತೇನೆ’ ನಾಟಕೀಯವಾಗಿ ಹಾಸ್ಯದಿಂದ ಹೇಳಿದಳು ಮೀನಾಕ್ಷಿ.
“ನಮ್ಮ ಮಕ್ಕಳು ಮದುವೆಯಾಗಿ ಇಲ್ಲೇ ನೆಲೆ ನಿಂತಿದ್ದಾರೆ. ಅವರ ಜವಾಬ್ದಾರಿ ಇನ್ನು ನಮಗೆ ಏನೂ ಇಲ್ಲ. ಅವರ ಪಾಡಿಗೆ ಅವರಿದ್ದಾರೆ. ನಾವು ಇಲ್ಲಿ ಬಂದು ಹೆಚ್ಚು ಕಡಿಮೆ ೩೦ ವರ್ಷ ಕಳೆಯಿತು. ನನಗೂ ಸರ್ಕಾರಿ ಕೆಲಸದಿಂದ ನಿವೃತ್ತಿ ಸಿಕ್ಕಿದೆ. ಇನ್ನು ಮುಂದೆ ನಮ್ಮ ಜೀವನವನ್ನು ನಾವು ಹುಟ್ಟಿದ ಊರಿನಲ್ಲಿ ಕಳೆದರೆ ಹೇಗೆ? ನೀನು ಆಲೋಚಿಸಿ ಹೇಳು. ಸಂತೋಷದಿಂದ ಮನಸ್ಸಿದ್ದು ಒಪ್ಪಿದರೆ ಮಾತ್ರ ಅಲ್ಲಿಗೆ ಹೋಗುವ ನಿರ್ಧಾರ. ಬಲವಂತವಾಗಿ ಏನು ಬೇಡ.”
“ಅದೇನು ಈಗ ಇದ್ದಕ್ಕಿದ್ದ ಹಾಗೆ ಈ ಆಲೋಚನೆ ಬಂದದ್ದು? ಇಷ್ಟು ದಿನ ಒಮ್ಮೆಯೂ ಭಾರತದಲ್ಲಿ ನೆಲೆ ನಿಲ್ಲುವ ಮಾತು ನಿನ್ನಿಂದ ನಾನು ಕೇಳಿತ್ತಿಲ್ಲ. ನಿಜವಾಗಿಯೂ ಇದು ಗಟ್ಟಿ ನಿರ್ಧಾರವಾ? ಅಲ್ಲ ತಮಾಷೆಗೆ ಹೇಳುತ್ತ ಇರುವುದಾ?”
“ಈಗ ಅಲ್ಲ, ಎಷ್ಟೋ ವರ್ಷಗಳಿಂದಲೂ ಭಾರತಕ್ಕೆ ಹೋಗುವ ಚಿಂತನೆ ಮನಸ್ಸಿನಲ್ಲಿ ನಡೆಸಿಕೊಂಡೆ ಇರುತ್ತಿದ್ದೆ. ಹುಟ್ಟಿದೂರು ಕರೆಯುತ್ತ ಇತ್ತು. ಆದರೆ ಹೊರಡುವ ದಿನ ಕೂಡಿ ಬಂದಿರಲಿಲ್ಲ. ಮಕ್ಕಳ ವಿದ್ಯಾಭ್ಯಾಸ, ಅವರ ಮುಂದಿನ ಭವಿಷ್ಯ ಎಲ್ಲ ಆಲೋಚನೆ ಮಾಡಿ ಮುಂದೆ ಹಾಕಿದೆ. ಈಗ ಇನ್ನು ಏನೂ ಅವರ ಯೋಚನೆ ಇಲ್ಲ. ನಮ್ಮ ಮಕ್ಕಳಂತು ಇಲ್ಲಿಯೇ ಇರುವವರು. ಇನ್ನಾದರೂ ನಾವು ನಮ್ಮ ನಾಡಿನಲ್ಲಿ ಉಳಿದ ಜೀವನವನ್ನು ಸಂತೋಷದಿಂದ ಬಾಳೋಣ. ಉದ್ಯೋಗನಿಮಿತ್ತ ಹೊಟ್ಟೆ ಪಾಡಿಗೆ ಇಷ್ಟು ದೂರ ಅನಿವಾರ್ಯವಾಗಿ ಬಂದು ನೆಲೆ ನಿಲ್ಲಬೇಕಾಯಿತು. ಹಾಗೆಂದು ನಾವಿಲ್ಲಿ ಬೇಜಾರದಿಂದ ಏನೂ ಇರಲಿಲ್ಲ. ಸಂತೋಷದಿಂದಲೇ ಲವಲವಿಕೆಯಿಂದಲೇ ಇಷ್ಟು ವರ್ಷ ಜೀವನ ನಡೆಸಿಕೊಂಡು ಬಂದೆವು. ಎಲ್ಲ ಅನುಕೂಲ ನಮಗೆ ಇಲ್ಲಿ ಇತ್ತು. ಇನ್ನು ಮುಂದೆ ನಾವು ಭಾರತದಲ್ಲಿ ವಾಸ ಮಾಡುವುದು ಒಳ್ಳೆಯದೆಂದು ಕಂಡಿತು. ಇದು ತಮಾಷೆಯಿಂದ ಹೇಳಿದ ಮಾತಲ್ಲ. ದೃಢ ನಿರ್ಧಾರದಿಂದಲೇ ಹೇಳಿದ ಮಾತು.”
“ಹರಿ, ಸರಿಯಾದ ಸಮಯಕ್ಕೇ ಯೋಗ್ಯ ನಿರ್ಧಾರಕ್ಕೆ ಬಂದೆ. ನಾನೂ ಕೂಡ ಭಾರತಕ್ಕೆ ಹೋಗಿ ನೆಲೆಸುವುದು ಒಳ್ಳೆಯದೆಂದು ಮನಸ್ಸಿನಲ್ಲಿ ಮಂಥನ ನಡೆಸಿದ್ದೆ. ಆದರೆ ನಿನಗೆ ಹೇಗೆ ಹೇಳುವುದೆಂದು ಸುಮ್ಮನಿದ್ದೆ. ನಿನಗೆ ಮನಸ್ಸಿಲ್ಲದಿದ್ದರೆ ನನ್ನ ಬಲವಂತಕ್ಕೆ ಒಪ್ಪಿದರೂ ಅದರಿಂದ ಏನೂ ಸುಖ ಇಲ್ಲ. ನಮ್ಮ ಮನಸ್ಸು ಏಕಕಾಲದಲ್ಲಿ ಭಾರತಕ್ಕೆ ಹೋಗಿ ನೆಲೆಸುವ ತಯಾರಿಯಲ್ಲಿ ಇತ್ತೆಂಬುದು ಎಂಥ ಕಾಕತಾಳೀಯ ಅಲ್ಲವೆ?  ಒಳ್ಳೆ ಆಲೋಚನೆಯೇ ಇದು. ನಮ್ಮ ಮನೆ ಹೇಗೂ ಶಿವಮೊಗ್ಗದಲ್ಲಿ ಇದೆ. ಮನೆಮಾಡುವ ಕೆಲಸ ಇಲ್ಲ. ಅಲ್ಲೇ ಹೋಗಿ ಇರುವ.  ಮನೆ ಸುತ್ತ ಹೂವಿನ ತೋಟ, ತರಕಾರಿ ಎಲ್ಲ ಮಾಡಬೇಕು. ಅವಕ್ಕೆಲ್ಲ ನಾನೇ ನೀರುಣಿಸಬೇಕು ಎಂಬುದು ನನ್ನ ಕನಸು. ಆ ಮನೆಯಲ್ಲಿ ಬಾಡಿಗೆಗೆ ಇರುವವರಿಗೆ ಈಗಲೇ ಬೇರೆ ಮನೆ ನೋಡಲು ಹೇಳುವ. ಅವರಿಗೆ ದೂರವಾಣಿ ಮಾಡಿ ಬಿಡಿ. ಆದಷ್ಟು ಬೇಗ ಹೋಗುವ ಇಲ್ಲಿಂದ.”
“ತಾಳು ತಾಳು. ಅಷ್ಟು ಅವಸರ ಮಾಡಬೇಡ. ಈಗ ಅವರಿಗೆ ದೂರವಾಣಿ ಮಾಡಿದರೆ ಅವರು ಗಾಬರಿಯಾದಾರು ಅವರಿಗೆ ಈಗ ಅಲ್ಲಿ ರಾತ್ರಿ. ಸುಖ ನಿದ್ದೆಯಲ್ಲಿರುತ್ತಾರೆ. ತಾಳಿದವನು ಬಾಳಿಯಾನು ಎಂದು ಗಾದೆ ಕೇಳಿದ್ದೀಯಲ್ಲ! ನಮಗೆ ಬೇಗ ಹೋಗಲು ಸಾಧ್ಯವಿಲ್ಲ. ಈ ಮನೆ ಮಾರಾಟ ಮಾಡಿ, ಇಲ್ಲಿ ಎಲ್ಲ ವ್ಯವಸ್ಥೆ ಒಂದು ಹದಕ್ಕೆ ಬರಬೇಕಾದರೆ ಇನ್ನು ೬ ತಿಂಗಳಾದರೂ ಬೇಕೇ ಬೇಕು. ಮತ್ತೆಯೇ ನಮಗೆ ಇಲ್ಲಿಂದ ಹೊರಡಲು ಸಾಧ್ಯ. ನಿನ್ನ ಅಭಿಪ್ರಾಯವೂ ಭಾರತಕ್ಕೆ ಹೋಗಿ ನೆಲೆಸುವುದೇ ಆಗಿರುವುದು ನನಗೆ ತುಂಬ ಸಂತೋಷ ತಂದಿದೆ. ಇನ್ನು ತಡ ಮಾಡದೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎನ್ನುತ್ತ ಹರೀಶ ಕಾಫಿ ಕುಡಿದು ಮುಗಿಸಿ ಹರ್ಷಚಿತ್ತದಿಂದಲೇ ಎದ್ದ.

*********

ಹರೀಶನ ಅಪ್ಪ ಅಮ್ಮರದು ಬಡತನದ ಬಾಳು. ಆದರೂ ಸಂತೃಪ್ತಿಯ ಜೀವನ ನಡೆಸಿದವರು. ಅವರಿಗೆ ೫ ಜನ ಮಕ್ಕಳು. ಹರೀಶನೇ ಹಿರಿಯವನು. ಎಲ್ಲ ಮಕ್ಕಳು ಕಲಿಯುವುದರಲ್ಲಿ ಬಹಳ ಚುರುಕು. ಹರೀಶ ಎಸ್.ಎಸ್.ಎಲ್.ಸಿ. ಮುಗಿಸಿ ಪಿ.ಯು.ಸಿ ಯಲ್ಲಿ ಒಳ್ಳೆ ಅಂಕ ತೆಗೆದು ಜಿಲ್ಲೆಗೇ ಪ್ರಥಮ ಬಂದ. ಮುಂದೆ ಅವನಿಗೆ ಇಂಜಿನಿಯರಿಂಗ್ ಓದಬೇಕೆಂದು ಆಸೆ. ಆದರೆ ಅವನ ತಂದೆಗೆ ಮಗನನ್ನು ಮುಂದೆ ಓದಿಸುವ ಚೈತನ್ಯ ಇಲ್ಲ. ಮಗ ಕೆಲಸಕ್ಕೆ ಸೇರಲಿ ಎಂಬುದು ಅಪ್ಪನ ಬಯಕೆ. ಇನ್ನೂ ೪ ಜನ ಮಕ್ಕಳು ಓದುತ್ತ ಇದ್ದರಲ್ಲ. ಅತ್ಲಾಗಿ ಹರೀಶನಿಗೆ ಈಗಲೇ ಕೆಲಸಕ್ಕೆ ಸೇರಲು ಮನಸ್ಸಿಲ್ಲ. ಮುಂದೆ ಓದುವ ಛಲ. ಹೈಸ್ಕೂಲಿನ ನರಹರಿ ಮಾಸ್ತರರಿಗೆ ಈ ವಿಷಯ ಎಲ್ಲ ಹೇಳಿದ. ಆಗ ಅವರು, “ಹರೀಶ ಎಷ್ಟು ಕಷ್ಟ ಆದರೂ ನೀನು ಮುಂದೆ ಓದಲೇ ಬೇಕು. ನಿನ್ನ ಇಷ್ಟದ ಇಂಜಿನಿಯರಿಂಗ್ ಓದು. ದುಡ್ಡು ನಾನು ಕೊಡುತ್ತೇನೆ. ಎಷ್ಟು ಕಷ್ಟ ಆದರೂ ಸೈ ಪ್ರತೀ ತಿಂಗಳು ರೂ. ೧೦೦/-ಎಂ. ಒ ಮಾಡುತ್ತೇನೆ. ನೀನು ಅಲ್ಲಿ ವಾರಾನ್ನ ನೋಡಿಕೊ. ನನ್ನ ಸ್ನೇಹಿತನಿಗೆ ಹೇಳಿ ನಿನಗೆ ವಾಸಕ್ಕೆ ಒಂದು ಕೋಣೆ ಉಚಿತವಾಗಿ ಕೊಡುವ ವ್ಯವಸ್ಥೆ ಮಾಡುತ್ತೇನೆ. ದುಡ್ಡು ಕೊಡಲು ಈಗ ನನ್ನ ಬಳಿ ಇಲ್ಲ.  ಈ ಉಂಗುರ ಕೊಡುತ್ತೇನೆ. ಇದನ್ನು ಮಾರಿ ಬಂದ ದುಡ್ಡಲ್ಲಿ  ಜಾಗರೂಕತೆಯಿಂದ ಮಿತವಾಗಿ ಅವಶ್ಯ ಇರುವುದಕ್ಕೆ ಮಾತ್ರ ಉಪಯೋಗಿಸು” ಎಂದು ಆಶೀರ್ವಾದ ಮಾಡಿ ಹಿಂದೆ ಮುಂದೆ ನೋಡದೆ ಅವರ ಮದುವೆಯಲ್ಲಿ ಹೆಂಡತಿಯ ಅಪ್ಪ ಕೊಟ್ಟ ಒಂದೇ ಒಂದು ಚಿನ್ನದ ಉಂಗುರವನ್ನು ಕೈ ಬೆರಳಿಂದ ತೆಗದು ಕೊಟ್ಟೇಬಿಟ್ಟರು ಮಾಸ್ತರರು. ಆಮೇಲೆ ಪ್ರತೀ ತಿಂಗಳು ಹರೀಶನ ಇಂಜಿನಿಯರಿಂಗ್ ವಿದ್ಯಾಭ್ಯಾಸ ಕೊನೆಗೊಳ್ಳುವವರೆಗೂ ರೂ. ೧೦೦ ಕಳುಹಿಸಿಕೊಡುವುದನ್ನು ಮಾತ್ರ ತಪ್ಪಿಸಿರಲಿಲ್ಲ.  ನರಹರಿಯೇನು ಅಂಥ ಶ್ರೀಮಂತ ಅಲ್ಲ. ಆದರೆ ಗುಣದಲ್ಲಿ ಮಾತ್ರ
ಬಲುದೊಡ್ಡ ಸಿರಿವಂತ. ಹೊಟ್ಟೆ ಬಟ್ಟೆ ಕಟ್ಟಿ ಹರೀಶನಿಗೆ ಪೈಸೆ ಕಳುಹಿಸುತ್ತಿದ್ದದ್ದು ಅವರು. ಅದಕ್ಕಾಗಿ ಅವರು ಸಂಜೆ ೫-೬ ಮಕ್ಕಳಿಗೆ ಮನೆಪಾಟ ಮಾಡಬೇಕಾಯಿತು.  ನರಹರಿಯ ಹೆಂಡತಿ ಗಂಡನ ಈ ಪರೋಪಕಾರಕ್ಕೆ ಪೂರ್ಣ ಬೆಂಬಲ ಕೊಟ್ಟ ಧೀ ಮಹಿಳೆ.

******
ಹರೀಶ ಇಂಜಿನಿಯರಿಂಗ್ ಪಾಸು ಮಾಡಿ ಒಳ್ಳೆ ಕೆಲಸವೂ ಸಿಕ್ಕಿ ಕ್ರಮೇಣ ಮದುವೆಯಾಗಿ ಅಮೆರಿಕಕ್ಕೆ ಹಾರಿದ. ಅಲ್ಲಿ ೩೦ ವರ್ಷ ಸರ್ಕಾರಿ ಕೆಲಸದಲ್ಲಿ ಇದ್ದು, ಕನ್ನಡ ಸಂಘ ಕಟ್ಟಿ ಕನ್ನಡದ ಕೆಲಸದಲ್ಲಿ ಗಣನೀಯ ಸೇವೆ ಸಲ್ಲಿಸಿದ. ಅವನ ಮನೆಗೆ ಕನ್ನಡದವರು ಯಾರೇ ಬರಲಿ ಅವರಿಗೆ ಹೋಗುವಾಗ ಒಂದು ಕನ್ನಡ ಪುಸ್ತಕ ಕೊಟ್ಟೇ ಕಳುಹಿಸುತ್ತಿದ್ದದ್ದು ಹರೀಶ ದಂಪತಿಗಳ ಸಂಪ್ರದಾಯ. ಅಷ್ಟಾದರೂ ಜನ  ಕನ್ನಡ ಓದಲಿ. ಅಭಿಮಾನ ಬೆಳೆಸಲಿ ಎನ್ನುವ ಕಳಕಳಿ ಅವರದು.

*******

ಈಗ ನಮ್ಮ ಸಮಾಜದಲ್ಲಿ ಯಾರೇ ಅಮೆರಿಕಕ್ಕೆ ಅಥವಾ ಹೊರ(ಪರ)ದೇಶಕ್ಕೆ ಹೋಗಲಿ ಮತ್ತೆ ತಾಯಿನಾಡಿಗೆ ಅವರು ಹಿಂದಿರುಗಿದ್ದಾಗಲೀ, ಹಿಂದಿರುಗುವ ಮನಸ್ಸು ಮಾಡಿದ್ದಾಗಲೀ ಕೆಲವೇ ಕೆಲವು ಮಂದಿ ಅಷ್ಟೆ. ಅಲ್ಲಿ ಹೋದರೆ ಮತ್ತೆ ಇಲ್ಲಿ ಬರಲು ಯಾರಿಗೂ ಮನಸ್ಸಿಲ್ಲ. ಮಕ್ಕಳಂತೂ ಬರಲು ಒಪ್ಪುವುದೇ ಇಲ್ಲ. ಅವರಿಗೆ ಇಲ್ಲಿ ಎಲ್ಲ ಕೊಳಕೇ ಕಾಣುವುದು. ಹೆಚ್ಚಿನ ಮಕ್ಕಳಿಗೆ ನಮ್ಮ ಮಾತೃಭಾಷೆ ಮಾತಾಡಲು ಬರುವುದಿಲ್ಲ. ತಾಯಿ ತಂದೆ  ಮನೆಯಲ್ಲಿ ಮಕ್ಕಳ ಬಳಿ ಕನ್ನಡದಲ್ಲಿ ಮಾತಾಡಿದರೆ ತಾನೆ ಅವರಿಗೆ ಭಾಷೆ ಬರಲು ಸಾಧ್ಯ. ಇಂಗ್ಲಿಷ್‌ನಲ್ಲೆ ಮಾತಾಡುವುದು. ನಮ್ಮ ಭಾಷೆ ಬಗ್ಗೆ ಅಭಿಮಾನ ಇದ್ದವರು ಮಾತ್ರ ಮಕ್ಕಳ ಬಳಿ ಕನ್ನಡ ಮಾತಾಡುತ್ತಾರೆ.  ಅಮ್ಮ ಅಪ್ಪ ಕನ್ನಡ ಮಾತಾಡುವವರಾದರೂ ಅವರು ಪರಸ್ಪರ ಮಾತಾಡುವುದು ಇಂಗ್ಲಿಷಿನಲ್ಲಿ. ಕನ್ನಡದಲ್ಲಿ ಮಾತಾಡಿದರೆ ಎಲ್ಲಿ ತಮ್ಮ ಘನತೆಗೆ ಕುಂದು ಬರುತ್ತದೊ ಎಂಬ ಕೀಳರಿಮೆ ಇರಬೇಕು. ಮಕ್ಕಳು ಅಮೇರಿಕದಿಂದ ರಜೆಯಲ್ಲಿ ಅಜ್ಜನ ಮನೆಗೆ ಬಂದರೆ ಅಜ್ಜಿ ಅಜ್ಜ ಅವರನ್ನು ಪಿಳಿ ಪಿಳಿ ಕಣ್ಣುಬಿಟ್ಟು ನೋಡಬೇಕಷ್ಟೆ. ಮೊಮ್ಮಕ್ಕಳಿಗೆ  ಮಾತಾಡಲು  ಕನ್ನಡ ಬರುವುದಿಲ್ಲ ಅಜ್ಜಿ ಅಜ್ಜರಿಗೆ ಇಂಗ್ಲಿಷ್ ಬರುವುದಿಲ್ಲ. ಅದಕ್ಕೆ ಒಂದು ಕಡೆ ಅಜ್ಜಿ ಬೇಜಾರಾಗಿ ಮಗನಿಗೆ ಹೇಳಿದ್ದರಂತೆ. ಮಕ್ಕಳನ್ನು ಕರೆತರಬೇಕೆಂದೇನೂ ಇಲ್ಲ. ಅವರ ಫೋಟೊ ತೋರಿಸು ಸಾಕು. ಹೇಗೂ ಮಾತಾಡಲು ಆಗುವುದಿಲ್ಲ ಎಂದು. ಎಂಥ ಅವಸ್ಥೆ! ಲೋಕದಲ್ಲಿ ಹಾಗಿರುವವರೆ ಹೆಚ್ಚು ಇರುವುದು.

ಇದೆಲ್ಲ ಉದಾಹರಣೆ ನೋಡುವಾಗ ಅಮೇರಿಕದ ಮನೆ ಮಾರಿ ಸಾಮಾನು ಸರಂಜಾಮು ಸಹಿತ ಹರೀಶ ಮೀನಾಕ್ಷಿ ಭಾರತಕ್ಕೆ ಬಂದು ನೆಲೆಸಿದ್ದು ಬಹಳ ಸಂತೋಷದ ವಿಚಾರ. ಆಶ್ಚರ್ಯ ಕೂಡ. ಏಕೆಂದರೆ ನಿಜವಾಗಿ ಅವರು ಅಲ್ಲೇ ಆರಾಮವಾಗಿ ಇರಬಹುದಿತ್ತು. ಆದರೆ ಅವರಿಗೆ ನಮ್ಮ ದೇಶ, ನಮ್ಮ ಜನ, ನಮ್ಮ ಸಂಸ್ಕೃತಿ ಬಗ್ಗೆ ಪ್ರೀತಿ ಇತ್ತು. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂಬ ವಾಕ್ಯದಲ್ಲಿ ಅದರ ಶಕ್ತಿ ಅಡಗಿದೆ. ಅದನ್ನು  ನಾವು ತಿಳಿದುಕೊಳ್ಳಬೇಕು.

*******

ಶಿವಮೊಗ್ಗದಲ್ಲಿ ಹರೀಶ ದಂಪತಿ ಅವರ ಮನೆಯಲ್ಲಿ ತಳ ಊರಿದರು. ಅವರೊಂದಿಗೆ ಹೆಚ್ಚು ಬಂದ ಸಾಮಾನು ಎಂದರೆ ಪುಸ್ತಕಗಳ ರಾಶಿ ಮಾತ್ರ!   ಅಲ್ಲಿ ಬಾಡಿಗೆಗೆ ಇದ್ದವರು ಇವರು ಹೇಳಿದ ಕೂಡಲೆ ತಕರಾರು ಮಾಡದೆ ಬೇರೆ ಮನೆ ಮಾಡಿ ಹೋದರು.  ಹರೀಶ ದಂಪತಿ ಬಂದ ಕೆಲವೇ ತಿಂಗಳಿನಲ್ಲಿ ಶಿವಮೊಗ್ಗದಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತ ಅಲ್ಲಿಯ ಮಂದಿಗೆ ಅಚ್ಚುಮೆಚ್ಚಾದರು. ಯಾರೂ ಹೇಳಲಾರರು ಇವರು ಇಷ್ಟು ಸಮಯ ಅಮೇರಿಕದಲ್ಲಿ ಇದ್ದು ಬಂದವರು ಎಂದು. ಯಾವ ಜಂಭವೂ ಇಲ್ಲದೆ ಸುತ್ತ ಮುತ್ತ ಇರುವವರ ಪರಿಚಯ ಮಾಡಿಕೊಂಡು ಅವರನ್ನು ಮನೆಗೆ ಕರೆಸಿ ಕನ್ನಡ ಪುಸ್ತಕ ಕೊಟ್ಟು ಹೀಗೆ ಬಂದುಗೊಂಡು ಇರಿ ಎಂದು ಹೇಳಿ ವಿಶ್ವಾಸ ತೋರಿಸಿದರು. ನೆರೆಕರೆಯವರು ಹರೀಶ ದಂಪತಿಗಳನ್ನು ಅಷ್ಟೇ ವಿಶ್ವಾಸದಿಂದ ಕಂಡರು. ಶಿವಮೊಗ್ಗದಲ್ಲಿ ಸಂಗೀತ ಸಾಹಿತ್ಯ, ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಬಂದರು.

ಹರೀಶನ ಅಮ್ಮ ತೀರಿಹೋಗಿ ೫ ವರ್ಷವೇ ಕಳೆದಿತ್ತು. ಅಪ್ಪ ತಮ್ಮನ ಮನೆಯಲ್ಲಿ ಮಲಗಿದಲ್ಲೆ ಇದ್ದರು. ಅಲ್ಲಿಂದ ಅಪ್ಪನನ್ನು ಕರೆದುಕೊಂಡು ಬಂದು ೬ ತಿಂಗಳು ಎಡೆಬಿಡದೆ ಅವರ ಸೇವೆ ಮಾಡಿದ. ಮಗನ ಸೇವೆಯಿಂದ ಅಪ್ಪ ನೆಮ್ಮದಿಯೊಂದಿಗೇ ತೀರಿಹೋದರು. ಅಮೆರಿಕಾದಿಂದ ಬಂದು ಕೆಲವು ತಿಂಗಳಾದಮೇಲೆ ಹರೀಶನಿಗೆ ಓದಲು ಸಹಾಯ ಮಾಡಿದ ನರಹರಿಯ ವಿಷಯ ಯಾರೋ ಹೇಳಿದರು. ಅವರು ಬೆಂಗಳೂರಿನಲ್ಲಿ ಇದ್ದಾರೆ. ಅವರ ಹೆಂಡತಿ ತೀರಿ ಹೋಗಿದ್ದಾರೆ. ಹಾಗಾಗಿ ನರಹರಿ ಒಬ್ಬನೆ ಇರುವುದು ಎಂದು ಗೊತ್ತಾಗಿ ಹರೀಶ ಮೀನಾಕ್ಷಿ  ಒಂದು ಕಾರು ಮಾಡಿಕೊಂಡು ಬೆಂಗಳೂರಿಗೆ ನರಹರಿ ಮನೆಗೆ ಹೋದರು.

ಮನೆಯಲ್ಲಿ ನರಹರಿ ಒಬ್ಬರೆ ಇದ್ದರು. ಅವರನ್ನು ನೋಡಿಕೊಳ್ಳಲು ಒಬ್ಬ ಆಳು. ಇವರು ಹೋದಾಗ ಆ ಆಳು ನರಹರಿಗೆ ತಿಂಡಿ ತಿನ್ನಿಸುತ್ತ ಇದ್ದ. ಬೇಗ ಬೇಗ ತಿನ್ನು ಎಂದು ಬಾಯಿಗೆ ತುರುಕಿಗೊಂಡಿದ್ದ. ಪೆಟ್ಟು ಬೇರೆ ಕೊಟ್ಟದ್ದು  ಕಂಡಿತು. ಪ್ರೀತಿಯ ನರಹರಿ ಮಾಸ್ತರರ ಸ್ಥಿತಿ ಕಂಡು ಹರೀಶನಿಗೆ ಆಘಾತ. ನಾನು ಎಂಥ ಕೃತಘ್ನ. ಭಾರತಕ್ಕೆ ಬಂದಕೂಡಲೆ ನರಹರಿ ಮಾಸ್ತರರನ್ನು ನೋಡಲು ಹೋಗಲಿಲ್ಲವಲ್ಲ ಎಂದು ಮಮ್ಮಲ ಮರುಗಿದ.  ನರಹರಿಯ ಹೆಂಡತಿ ತೀರಿ ಹೋಗಿ ಆಗಲೇ ೪ ವರ್ಷ ಕಳೆದಿತ್ತು. ಮಕ್ಕಳು  ವಿದೇಶದಲ್ಲಿ ಇದ್ದಾರಂತೆ. ಇಲ್ಲಿ ಅಪ್ಪನನ್ನು ನೋಡಿಕೊಳ್ಳಲು ಆಳನ್ನು ನೇಮಿಸಿದ್ದಾರೆ. ಇತ್ತೀಚಗೆ ನರಹರಿ ಬಿದ್ದು ಸೊಂಟದ ಮೂಳೆ ಮುರಿದು ಈಗಷ್ಟೆ ಚೇತರಿಸುತ್ತ ಇದ್ದಾರೆ. ಅವರ ಅವಸ್ಥೆ ನೋಡಿ ಹರೀಶನಿಗೆ ತಡಯಲಾರದೆ, ‘ಮಾಸ್ತರರೆ ನೀವು ನಮ್ಮ ಜೊತೆ ಶಿವಮೊಗ್ಗಕ್ಕೆ ನಮ್ಮ ಮನೆಗೆ ಬನ್ನಿ. ಇಲ್ಲಿ ಬೇಡ’ ಎಂದ.  ಮೀನಾಕ್ಷಿಯೂ ಒತ್ತಾಯ ಮಾಡಿದಳು.

“ನಿಮಗೇಕೆ ಕಷ್ಟ. ಈ ಶರೀರ ಇವತ್ತೊ ನಾಳೆಯೊ ಬಿದ್ದು ಹೋಗುವಂತದ್ದು. ಈಗಾಗಲೇ ಗೆದ್ದಲು ಹಿಡಿದಿದೆ ಈ ಮರಕ್ಕೆ. ಅದಕ್ಕೆ ಏಕೆ ಸುಮ್ಮನೆ ಆರೈಕೆ? ಹೀಗೆ ಇರುತ್ತೇನೆ.” ಹೇಳಿದ ನರಹರಿ ದಾಕ್ಷಿಣ್ಯದಿಂದ.
“ಬೇರೆ ಮಾತೇ ಬೇಡ. ನೀವು ನಮ್ಮ ಜೊತೆ ಈಗಲೇ ಬರಲೇ ಬೇಕು” ಒತ್ತಾಯದಿಂದ ಹೇಳಿದ ಹರೀಶ.

ಹರೀಶನ ಬಲವಂತದ ಪ್ರೀತಿಯ ಕರೆಗೆ ನರಹರಿ ಒಪ್ಪಲೇ ಬೇಕಾಯಿತು. ನರಹರಿಯ ಮನೆಯನ್ನು ಹರೀಶನ ಗೆಳೆಯ ನೋಡಿಕೊಳ್ಳುವಂತೆ ವ್ಯವಸ್ಥೆ ಮಾಡಿದ. ಆ ಆಳಿಗೆ ಸಂಬಳ ಕೊಟ್ಟು ಕಳುಹಿಸಿದ. ನರಹರಿಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು  ಆ ದಿನವೇ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದರು.

ಶಿವಮೊಗ್ಗದಲ್ಲಿ ನರಹರಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹರೀಶನೇ ವಹಿಸಿಕೊಂಡ. ಆಯುರ್ವೇದ ಮದ್ದು ಮಾಡಿಸಿದ. ಇದರಿಂದ ನರಹರಿ ಮನೆಯಲ್ಲಿ ಓಡಾಡುವಂತಾಯಿತು. ಹಿಂದೆ ನರಹರಿ ಮಾಡಿದ ಸಹಾಯವನ್ನು ನೆನೆಸಿ ಈಗ ಹರೀಶ ಅವರ ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಅವರಿಗೆ ಸಿಕ್ಕುವಂತೆ ಮಾಡಿ  ಕೃತಾರ್ತನಾದ. ಹರೀಶನಿಗೆ ಋಣಮುಕ್ತನಾಗಲು ಒಂದು ಅವಕಾಶ ಸಿಕ್ಕಿತು ಎಂದು ಸಂತೋಷ ಪಟ್ಟ.

ಋಣವ ತೀರಿಸಬೇಕು, ಋಣವ ತೀರಿಸಬೇಕು
ಋಣವ ತೀರಿಸುತ ಜಗದಾದಿಸತ್ತವನು
ಇನದಿ ಕಾಣುತ್ತದರೊಳ್ ಒಂದುಗೂಡಲುಬೇಕು
ಮನೆಯೊಳಗೆ ಮಠ ನಿನಗೆ- ಮಂಕುತಿಮ್ಮ

ಹರೀಶ ಮೀನಾಕ್ಷಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ಒಂದು ದೊಡ್ಡ ಮನೆ ಕ್ರಯಕ್ಕೆ  ಪಡೆದು ಹರೀಶನ ಗಮನಕ್ಕೆ ಬಂದ ಯಾವ ಯಾವ ವೃದ್ಧರಿಗೆ ಆಶ್ರಯ ಇಲ್ಲವೊ ಅವರೆಲ್ಲರನ್ನು ಇಲ್ಲಿ ಕರೆದುಕೊಂಡು ಬಂದು ಅವರ ಯೋಗಕ್ಷೇಮ ನೋಡಿಕೊಳ್ಳುವುದೆಂದು ಒಂದು ನಿರ್ಧಾರಕ್ಕೆ ಬಂದರು. ಹಿಂದೆ ಹರೀಶನಿಗೆ ಉಪಕಾರ ಮಾಡಿದವರ  ಪಟ್ಟಿ ದೊಡ್ಡದಿತ್ತು. ಅವರನ್ನೆಲ್ಲ ಭೇಟಿ ಮಾಡಿದ. ಅವರಲ್ಲಿ ಇನ್ನಿಬ್ರು ದಂಪತಿಗಳು ಭಾರೀ ಕಷ್ಟದಲ್ಲಿ ಇದ್ದರು. ಒಬ್ಬರಿಗೆ ಮಕ್ಕಳಿಲ್ಲ, ಮತ್ತೊಬ್ಬರಿಗೆ ಮಕ್ಕಳು ಇದ್ದರೂ ತಂದೆ ತಾಯಿಯನ್ನು ನೋಡಿಕೊಳ್ಳುತ್ತಿರಲಿಲ್ಲ. ಅವರನ್ನು  ಒಪ್ಪಿಸಿ ಶಿವಮೊಗ್ಗಕ್ಕೆ ಕರೆದುಕೊಂಡು ಬಂದು ಅಲ್ಲಿ ಅವರಿಗೆ ಬೇಕಾದ ಎಲ್ಲ ಸೌಕರ್ಯ ಮಾಡಿಕೊಟ್ಟ. ಸೇವಾಮನೋಭಾವದ ಒಬ್ಬ ಹೆಂಗಸನ್ನು ಅಲ್ಲಿ ನೇಮಿಸಿದ. ಮೀನಾಕ್ಷಿ ಹರೀಶ ತಪ್ಪದೆ ದಿನಕ್ಕೊಮ್ಮೆ ಅಲ್ಲಿಗೆ ಹೋಗಿ ಅವರೆಲ್ಲರನ್ನು  ಮಾತಾಡಿಸಿ ಕಷ್ಟ ಸುಖ ವಿಚಾರಿಸಿ ಅವರ ಬೇಡಿಕೆಗಳನ್ನು ಪೂರೈಸಿ ಬರುತ್ತಿದ್ದರು. ಹಿರಿಯರೆಲ್ಲ ಅಲ್ಲಿ ನೆಮ್ಮದಿಯಿಂದ ಉಳಿದ ಜೀವನವನ್ನು ಬಾಳಲು ಅವಕಾಶ ಮಾಡಿಕೊಟ್ಟರು ಹರೀಶ ದಂಪತಿಗಳು. ಯಾರಿಗೆ ಯಾರ ಋಣವೋ!

ಋಣದ ಜಾಲವನಂತ, ಕರುಮಚಕ್ರವನಂತ
ಜನುಮಜನುಮದ ಕಥೆಯ ತಂತುಗಳನಂತ
ಅನವರತ ನೂತನವಿದೆನಿಪ ವಿಶ್ವದ ತಂತ್ರ
ಬಿನದ ಪರಬೊಮ್ಮಂಗೆ _ ಮಂಕುತಿಮ್ಮ

   ಮಡಿಕೇರಿಗೆ ಹೋಗುವ ಸಲುವಾಗಿ ಬೆಳಗ್ಗೆ ೬ ಗಂಟೆ ಬಸ್ಸಿಗೆ ಹತ್ತಿದೆವು. ಕೂರಲು ಸ್ಥಳ ಇರಲಿಲ್ಲ. ಹತ್ತಿದ ಕೂಡಲೇ ನಿರ್ವಾಹಕ ಹಿಂದೆ ಹೋಗಿ ಹಿಂದೆ ಹೋಗಿ ಎಂದದ್ದರಿಂದ ವಿದೇಯತೆಯಿಂದ ಸೀದಾ ಹಿಂದೆ ಹೋದೆವು. ನಾನು ಹಾಗೂ ಇನ್ನೊಬ್ಬ ಮಹಿಳೆ ಮಾತಾಡುತ್ತ ನಿಂತಿದ್ದೆವು. ಆಗ ನನ್ನ ಗಮನ `ಮಹಿಳೆಯರಿಗೆ’ ಎಂಬ ಫಲಕದ ಕಡೆ ಹೊರಳಿತು. ಕೂಡಲೆ ಕೆಳಗೆ ನೋಡಿದೆ. ಅಲ್ಲಿ ೪-೫ ಮಂದಿ ಪುರುಷಸಿಂಹರು ರಾರಾಜಿಸಿದ್ದಾರೆ! ಮಹಿಳೆಯರಿಗೆ ಎಂದು ಮುಂದಿನ ಸಾಲಿನಲ್ಲಿ ೧೦-೧೨ ಆಸನಗಳನ್ನು ಮೀಸಲಿರಿಸಿದ್ದಾರೆ. ಹೆಂಗಸರು ಮಗುವನ್ನು ಬೇಕಾದರು ಎತ್ತಿಕೊಂಡು ಬರಲಿ ಅವರೇನು ಆ ಸ್ಥಳ ಬಿಟ್ಟುಕೊಡುವುದಿಲ್ಲ. ನನ್ನ ಜೊತೆ ನಿಂತಿದ್ದ ಮಹಿಳೆಗೆ ಆ ಫಲಕ ತೋರಿಸಿ `ಅದನ್ನು ಮೊದಲು ಅಳಿಸಿ ಹಾಕಬೇಕು. ಸುಮ್ಮನೆ ಬರಹದಲ್ಲಿ ಏಕೆ ಬೇಕು? ನಮಗೇನು ಮೀಸಲಾತಿ ಬೇಡ. ನಿಲ್ಲಲು ಏನೂ ಕಷ್ಟವಲ್ಲ. ಕಾನೂನು ಪಾಲಿಸದಿದ್ದರೆ ಅದೇಕೆ ಬೇಕು? ಅಂದೆ. ಅದಕ್ಕೆ ಅವಳು, `ಹೌದು. ತಮಿಳುನಾಡಿನಲ್ಲಿ ಮಾತ್ರ ಸರಿಯಾಗಿ ಪಾಲಿಸುತ್ತಾರೆ. ಗಂಡಸರು ಆ ಸೀಟಿನಲ್ಲಿ ಕೂರುವುದೇ ಇಲ್ಲ. ಕೂತರೂ ಹೆಂಗಸರು ಹತ್ತಿದಾಗ ಎದ್ದು ಸೀಟು ಬಿಟ್ಟುಕೊಡುತ್ತಾರೆ’ ಎಂದರು. ಇದನ್ನು ಕೇಳಿಸಿಕೊಂಡ ಒಬ್ಬ ಮಹನೀಯರು, `ಹೋಗಿ ಮಸಿ ಬಳಿಯಿರಿ. ನೀವು ಇಲ್ಲಿ ನಿಂತು ಹೇಳಿದರೆ ಏನು ಪ್ರಯೋಜನ ಇಲ್ಲ, ಮುಂದೆ ಹೋಗಿ ಸ್ಥಳ ಬಿಟ್ಟುಕೊಡಿ ಎಂದು ಹೇಳಿ. ಅದು ನಿಮ್ಮ ಹಕ್ಕು. ಹಕ್ಕನ್ನೇಕೆ ಬಿಟ್ಟುಕೊಡುತ್ತೀರಿ? ನೀವು ಕೇಳದಿದ್ದರೆ ಯಾರೂ ಎದ್ದು ಸೀಟು ಕೊಡುವುದಿಲ್ಲ. ತಮಿಳು ನಾಡು ಎಂದೇಕೆ ಹೇಳುತ್ತೀರಿ? ಇಲ್ಲಿಯೂ ಮತ್ತೊಬ್ಬ ಜಯಲಿಲಿತ ಆಗಿ ನೀವು ಎಂದರು. ಅದಕ್ಕೆ ಆ ಮಹಿಳೆ, `ಅಷ್ಟು ಕರೇಜ್ ನನ್ನಲ್ಲಿಲ್ಲ’ ಎಂದಳು. ನಾವು ಹೇಳಿದರೆ ಏನೂ ಉಪಯೋಗವಿಲ್ಲ. ಮಹಿಳಾ ಸೀಟಿನಿಂದ ಪುರುಷರನ್ನು ಎಬ್ಬಿಸಿ ಮಹಿಳೆಯರಿಗೆ ಬಿಟ್ಟುಕೊಡಲು ನಿರ್ವಾಹಕ ಹೇಳಬೇಕು. ಅದು ಅವರ ಕರ್ತವ್ಯ ಎಂದೆ.  ಆಗ ಆ ಮಹನೀಯರು ಅಲ್ಲಿಗೆ ಬಂದ ನಿರ್ವಾಹಕನನ್ನು ಕೇಳಿದರು. ಮಹಿಳೆಯರ ಸೀಟಿನಲ್ಲಿ ಪುರುಷರನ್ನು ಕೂರಲುಬಿಟ್ಟಿದ್ದೀರಲ್ಲ ಏಳಲು ಹೇಳಿ ಎಂದು. ಅದಕ್ಕೆ ನಿರ್ವಾಹಕ, `ಏನು ಮಾಡಲಿ ಸ್ವಾಮಿ, ೮೨ ಸೀಟಿಗೆ ೧೦೨ ಜನ ಬರುತ್ತಾರೆ ಹಾಗೆ ಹೀಗೆ ಎಂದು ಗೋಳಾಡಿ ಜಾರಿಕೊಂಡು ಮುಂದೆ ನುಸುಳಿಯೇ ಬಿಟ್ಟರು!   
   ಆ ಮಹನೀಯರ ಮಾತು ಕೇಳಿ ನಾನು ಭಯಂಕರ ಸ್ಫೂರ್ತಿಗೊಂಡು ಹುಣಸೂರಿನಲ್ಲಿ ಖಾಲಿ ಆದ ಸೀಟಿಗೆ ಕೂರದೆ ಆ ಮಹಿಳೆಯನ್ನು ಕೂರಿಸಿ, ಮುಂದೆಹೋಗಿ ಮಹಿಳೆಯರಿಗೆ ಮೀಸಲಾದ ಸೀಟಿಗೆ ಹೋಗಿ, `ಪುರುಷರೇ, ಕನ್ನಡ ಓದಲು ಬರುತ್ತ’ ಎಂದು ಆ ಫಲಕ ತೋರಿಸಿ ಕೇಳಬೇಕು ಎಂದು ಮುಂದೆ ಹೋಗಲು ಹೊರಟೆ. ಮುಂದೆ ಭರ್ತಿ ಗಂಡಸರು ನಿಂತಿದ್ದರು. ನಿರ್ವಾಹಕನಿಗೆ ಹೋಗಲಷ್ಟೇ ಸಾಧ್ಯ. ಹಾಗೂ ಒಂದುವೇಳೆ ನಾನು ನುಗ್ಗುತ್ತ ಪ್ರಯತ್ನಿಸಿದರೆ ನನ್ನ ಸೀರೆ ಎಲ್ಲ ಮುದುಡಿ ಇಸ್ತ್ರಿ ಹೋದರೆ? ಅಲ್ಲ ಸೀರೆ ಹುಡಿ ಆದರೆ ತೊಂದರೆ ಇಲ್ಲ (ನಾನೊಂದು ಮದುವೆಗೆ ಹೊರಟವಳು), ಸೀರೆ ಬಿಚ್ಚಿಯೇ ಹೋದರೆ? (ಅಲ್ಲ ಮಾರಾಯರೆ, ಈ ಸೀರೆ ಕಂಡುಹಿಡಿದ ಪುಣ್ಯಾತ್ಮರು ಯಾರೋ? ನಿಮಗೇನಾದರು ಗೊತ್ತೆ? ವಿದ್ಯುತ್ ಕಂಡು ಹಿಡಿದವರು ಗುರುತ್ವಾಕರ್ಷಣೆ ಕಂಡುಹಿಡಿದವರು ಅವರು ಇವರು ಎಂದು ಬಾಲ್ಯದಲ್ಲಿ ಪಾಠದಲ್ಲಿ ಬರುತ್ತಿತ್ತು. ಆದರೆ ಈ ಸೀರೆ ಕಂಡು ಹಿಡಿದವರು ಯಾರು ಎಂದು ಎಲ್ಲಿಯೂ ಬಂದದ್ದು ನಾನು ಕಾಣಲಿಲ್ಲ. ಧರ್ಮಾವರಂ, ಕಾಂಜೀವರಂ, ಬನಾರಸ್ ಅಂತೆ (ಮತ್ತೆ ನನಗೆ ಹೆಸರು ಗೊತ್ತಿಲ್ಲ. ಗೊತ್ತಿದ್ದರೆ ನೀವೆ ಹೇಳಿಕೊಳ್ಳಿ. ಇತ್ಯಾದಿ.  ಅಷ್ಟುದ್ದದ ಸೀರೆಯನ್ನು ಮೈಗೆ ಸುತ್ತಿಕೊಳ್ಳುವುದಂತೆ ಎಂತ ಕತೆ ಇದು) (ಯಾವುದೊ ವಿಷಯ ಹೇಳುವಾಗ ಅದಕ್ಕೆ ಸಂಬಂಧಪಡದ ಇನ್ನ್ಯಾವುದೊ ವಿಷಯ ಹೇಳುವುದಕ್ಕೆ ರಾಮಾಯಣದಲ್ಲಿ ಪಿಟ್ಕಾಯಣ ಎಂದು ಇದಕ್ಕೆ ಹೇಳುವುದು.)  ಈ ಪಚೀತಿಯೇ ಬೇಡ ಎಂದು ಸುಮ್ಮಗೆ ನಿಂತುಗೊಂಡೆ. ಪಿರಿಯಾಪಟ್ಟಣದಲ್ಲಿ ಕೂರಲು ಜಾಗ ಸಿಕ್ಕಿತು. ಕೂರಲು ಸಿಕ್ಕಿದ ಮೇಲೆ ಮಹಿಳಾ ಸೀಟಿನಲ್ಲಿ ಕೂತ ಪುರುಷರನ್ನು ಏಳಿಸುವ ಪ್ರಮೇಯ ಬರುವುದಿಲ್ಲ ತಾನೆ! ಆದರೂ ಮುಂದೆ ಕೆಲವು ಮಹಿಳೆಯರು (ಮಹಿಳೆಯರಿಗೆ ಎಂಬ ಫಲಕದ ಮುಂದೆಯೇ) ನಿಂತೇ ಇದ್ದದ್ದು ನೋಡಿ ಹೋಗಿ ಹೇಳುವ ಎಂದು ಮನಸ್ಸು ಪಿಸುನುಡಿಯುತ್ತಲೇ ಇತ್ತು. ನನ್ನ ಶರೀರ ಎದ್ದು ಹೊರಡಲೇ ಇಲ್ಲ!  ನನ್ನ ಜೊತೆ ನಿಂತಿದ್ದ ಮಹಿಳೆಯೇನೋ ಕರೇಜ್ ಇಲ್ಲ ಎಂದು ಧೈರ್ಯವಾಗಿಯೇ ಹೇಳಿದರು. ಆದರೆ ನನಗೆ ಧೈರ್ಯ ಇಲ್ಲ ಎಂದು ಒಪ್ಪಿಕೊಳ್ಳಲು ಅಹಂ ಬಿಡಲಿಲ್ಲ. ಹಾಗೆಂದು ಮುನ್ನುಗ್ಗುವ ಛಾತಿ ಇರಲಿಲ್ಲ, ಹಿಂಜರಿಯುವ ಸ್ವಭಾವ. ಮುನ್ನುಗ್ಗಲು ಅಳುಕು ಹಿಂಜರಿಕೆ ನನ್ನಲ್ಲಿದ್ದದ್ದು ಹೌದು. 
    ಆಗ ನನ್ನ ಮನಸ್ಸಿಗೆ ಹೊಳೆದದ್ದು ಕಾನೂನು ಇರುವುದು ಏಕೆ? ಅದು ಮುರಿಯಲೇ ಹೌದು. ಪಾಲಿಸಲು ಅಲ್ಲವೇ ಅಲ್ಲ. ನಿಜವಾಗಿಯೂ ನಮ್ಮಲ್ಲಿ ಎಷ್ಟೊಂದು ಕಾನೂನುಗಳಿವೆ. ಅವನ್ನೆಲ್ಲ ಎಲ್ಲಿ ನಾವು ಪಾಲಿಸುತ್ತೇವೆ? ಉದಾಹರಣೆಗೆ ೧) ಎರಡು ಚಕ್ರ ವಾಹನದಲ್ಲಿ ಹೋಗುವಾಗ ಶಿರಶ್ತ್ರಾಣವನ್ನು ನಾವು ಕೈಯಲ್ಲಿ ಹಿಡಿದುಕೊಂಡು ಹೋಗುತ್ತೇವೆ. ಎದುರು ಎಲ್ಲಿಯಾದರೂ ಸಂಚಾರಿ ಪೋಲೀಸರನ್ನು ಕಂಡರೆ ಅದು ತಲೆಗೆ ಏರುತ್ತದೆ. ೨) ಏಕಮುಖ ಸಂಚಾರವಿರುವ ರಸ್ತೆಗಳಲ್ಲಿ ದ್ವಿಮುಖ ಸಂಚಾರ ಕೈಗೊಳ್ಳುತ್ತೇವೆ. ಪೋಲಿಸರು ಇದ್ದರೆ ಮಾತ್ರ ಕಾನೂನು ಪಾಲಿಸುತ್ತೇವೆ. ೩) ದೀಪಾವಳಿ ಸಮಯದಲ್ಲಿ ಗಣೇಶ ಹಬ್ಬದಲ್ಲಿ ರಾತ್ರಿ ೧೦ರನಂತರ, ಬೆಳಗ್ಗೆ ೬ರವರೆಗೆ ಪಟಾಕಿ ಹೊಡೆಯುವಂತಿಲ್ಲ, ಧ್ವನಿವರ್ಧಕ ಬಳಸುವಂತಿಲ್ಲ ಎಂದಿರುತ್ತದೆ. ರಾತ್ರಿ ೧೧ ಆದರೂ ಅದರ ಧ್ವನಿ ಕೇಳುತ್ತಲೇ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂಬುದು ಬರಹಗಳಲ್ಲಿ ಕಾನೂನಿನಲ್ಲಿ ಮಾತ್ರ. ಅವೆಲ್ಲ ಎಲ್ಲಿ ಪಾಲನೆಯಾಗುತ್ತದೆ? ರಾಜಾರೋಷವಾಗಿ ಧಮ್ ಎಳೆದು ಹೊಗೆ ಹೊರಗೆ ಬಿಡುತ್ತಲೇ ಇರುತ್ತಾರೆ. ಈಗ ಹೇಳಿ ನಮ್ಮ ರಾಜ್ಯದಲ್ಲಿ ಕಾನೂನು ಇರುವುದು ಮುರಿಯಲು ತಾನೆ?  ನೀವೇನಂತೀರಿ? ಪ್ರತಿಕ್ರಿಯೆ ತಿಳಿಸಿ. 
   ಕನ್ನಡಸೇನೆಯವರು ಆಂಗ್ಲ ಫಲಕಗಳಿಗೆ ಟಾರು ಬಳಿದಂತೆ ಇನ್ನು ನಾನು ಬಸ್ಸು ಹತ್ತಿದಕೂಡಲೇ ಮಹಿಳೆಯರಿಗೆ ಎಂಬ ಫಲಕ ನೋಡಿ ಅಂಥ ಸೀಟಿನಲ್ಲಿ ಪುರುಷರು ಕೂತಿದ್ದರೆ ಅವರಿಗೆ ಸೀಟು ಬಿಟ್ಟುಕೊಡಿ ಎಂದು ಕೇಳುವ ಬದಲು ಕೂಡಲೇ ಆ ಬರಹಕ್ಕೆ ಮಸಿ ಬಳಿಯುವ ಕೆಲಸ ಕೈಗೊಂಡರೆ ಹೇಗೆ ಎಂಬ ಭಯಂಕರ ಆಲೋಚನೆ ಬಂದಿದೆ ನನಗೆ. ಬಸ್ ಹತ್ತುವಾಗಲೆಲ್ಲ ಕಡ್ಡಯವಾಗಿ ಮಸಿಯನ್ನು ಕೊಂಡೋಗಬೇಕು. ಮರೆಯುವಂತೆಯೇ ಇಲ್ಲ. ಮಹಿಳೆಯರಿಗಾಗಿ ಎಂದಿರುವಲ್ಲೆಲ್ಲ ಪುರುಷರು ಕೂತಿದ್ದರೆ ಕೂಡಲೇ ಆ ಬರಹಕ್ಕೆ ಅದನ್ನು ಹಚ್ಚಿ ನಿಲ್ಲಬೇಕು. ಏನಂತೀರಿ?

ತಾರೀಕು ೩ ಸೆಪ್ಟೆಂಬರ ೨೦೦೯ ಆಂದ್ರಪ್ರದೇಶದ ಮುಖ್ಯಮಂತ್ರಿ ಮಾನ್ಯ ಡಾ. ರಾಜಶೇಖರ ರೆಡ್ಡಿ ಯವರು ದುರಂತ ಮರಣವನ್ನಪ್ಪಿದರು. ಇದು ವೇದನೆಯ ವಿಚಾರವೇ ಸರಿ. ಆದರೆ ಇದಕ್ಕಾಗಿ ಕರ್ನಾಟಕ ರಾಜ್ಯದಾದ್ಯಂತ ಸರ್ಕಾರ ರಜೆ ಘೋಷಿಸುವ ಅಗತ್ಯ ಇತ್ತೆ ಎಂಬುದು ಪ್ರಶ್ನೆ.

ಇದರಿಂದ ಏನು ಸಾಧಿಸಿದ ಹಾಗಾಯಿತು? ಜನ ರಜ ಸಿಕ್ಕಿತು ಎಂದು ಖುಷಿ ಪಟ್ಟಿರಬಹುದು ಅಷ್ಟೆ. ರಜ ಇದೆ ಎಂದು ವಿಹಾರ ಹೋಗಿರಬಹುದು.

ಆ ದಿನ ೧ ನಿಮಿಷ ಮೌನಾಚಾರಣೆ ಮಾಡಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು.

ನನ್ನ ಅಭಿಪ್ರಾಯದ ಪ್ರಕಾರ ಯಾರೇ ಪ್ರಮುಖರು ತೀರಿ ಹೋದರು ಸರ್ಕಾರ ರಜಾ ಘೋಷಿಸಬಾರದು. ಹಿಂದೆ ವಾಜಪೇಯಿ ಸರ್ಕಾರ ಇದ್ದಾಗ ಹೀಗೆ ರಜ ಕೊಡುವ ಪದ್ಧತಿಗೆ ಕಡಿವಾಣ ಹಾಕಿದ್ದರು ಎಂದು ನೆನಪು.

ರಜ ಕೊಡುವುದು ಸರಿಯೆ ತಪ್ಪೆ ಎಂದು ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ.

Older Posts »